Thursday 8 March 2018

ಸ್ವತಂತ್ರ, ಸಮಾನತೆಯ ಮಹಿಳಾ ದಿನಕ್ಕೆ ಚಿಕ್ಕ ಮಾತುಕತೆ ನೀವೇನಂತೀರಾ?

ಇವತ್ತು ಮಾರ್ಚ್ 8 ವಿಶ್ವ ಮಹಿಳಾ ದಿನ. ಇಂದು ಬೆಳಕರ್ದಾಗಿಂದ ವಾಟ್ಸಪ್, ಫೇಸ್ಬುಕ್ ನಲ್ಲಿ ಹಲವಾರು ರೀತಿಯಲ್ಲಿ ಶುಭಾಶಯಗಳು ಮೊಬೈಲ್ ನಲ್ಲಿ ಕಣ್ಮುಂದೆ ಬರುತ್ತಿವೆ. ನಮಗಾಗಿ ಒಂದು ದಿನದ ಆಚರಣೆ ಬೇಕಾ? ಪ್ರತಿ ದಿನವು ನಮ್ಮದೇ. ಮಹಿಳೆಯರಿಲ್ಲದೆ  ಪ್ರಪಂಚವೇ ಬರಡು. ಆಧುನಿಕ ಯುಗದಲ್ಲಿ ಮಹಿಳೆ ಗಂಡಿಗೆ ಸರಿಸಮನಾಗಿ ಬೆಳೆದು ನಿಂತಿದ್ದಾಳೆ. ಕೆಲವು ಕೆಲಸಗಳು ಬರಿ ಗಂಡಿಗಸ್ಟ  ಸೀಮಿತ.  ಹಿಂದಿನ ಕಾಲದಲ್ಲಿ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಹೆಣ್ಣು ಈಗ ತಾನೂ ಹೊರಗೆ ದುಡಿಯಲು ಗಂಡಿಗೆ ಸಮನಾಗಿ ತಾನೂ ಕೂಡ ಸಮರ್ಥಳು ಎಂದು ತೋರಿಸಿಕೊಟ್ಟಿದ್ದಾಳೆ. ಇದು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.. 

ಚಿತ್ರ ಗೂಗಲ್ನಿಂದ 
ಅನಾದಿ ಕಾಲದಿಂದಲೂ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಇದು ಲಿಂಗ ತಾರತಮ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ಆಧುನಿಕ ಯುಗದಲ್ಲೂ ಏನು ಕಮ್ಮಿ ಇಲ್ಲ. ಸಮಾನತೆಯ ಹೆಸರಿನಲ್ಲು ಕೂಡ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಕೌಟುಂಬಿಕವಾಗಿ ಹೇಳಬೇಕಂದ್ರೆ ಕೆಲವೊಮ್ಮೆ ಮನೆಯಿಂದ ಹೊರಗೆ ದುಡಿಯಲು ಹೊರಗೆ ಹೋದರೆ ಅವಳು ಮನೆಯ ಜವಾಬ್ದಾರಿಯನ್ನು ಅಸಡ್ಡೆ ಮಾಡುವಂತಿಲ್ಲ. ಹೊರಗೆ ಕಚೇರಿಗಳಲ್ಲಿ ತನ್ನ ಸಹೋದ್ಯೋಗಿಗಳಲ್ಲಿ ಮತ್ತು ಉನ್ನತ ಹುದ್ದೆಯಲ್ಲಿದ್ದರೆ ಅಲ್ಲಿಯೂ ಕೂಡ ಪುರುಷ ಕೆಲಸಗಾರರು ತನ್ನ ಬಾಸ್ ಹೆಣ್ಣಾದರೆ ಅಕೆಗೆ ಕೊಡುವ ಮರ್ಯಾದೆ ಅಸ್ಟಕ್ಕಸ್ಟೆ ಇರುತ್ತದೆ. ಆದರೆ ಎಲ್ಲರು ಹಾಗೆ ಅಂತಲ್ಲ ಹೆಣ್ಣು ಎಂದರೆ ಗೌರವಿಸುವ,  ಮರುಗುವ ಪುರುಷರು ಕೂಡ ಇದ್ದಾರೆ.

ಮಹಿಳೆಗೆ ಎಲ್ಲ ರೀತಿಯಲ್ಲೂ ಸಮಾನತೆ ಇದ್ದರು ಆಕೆ ಸ್ವತಂತ್ರವಾಗಿ ಯಾವ ಕೆಲಸಗಳನ್ನು ಕೂಡ ಮಾಡಲಾಗದು. ಉದಾಹರಣೆಗೆ ರಾಜಕೀಯದಲ್ಲಿ ಮೀಸಲಾತಿ ಸೀಟುಗಳಲ್ಲಿ ಎಲೆಕ್ಷನ್ನಲ್ಲಿ   ನಿಂತು ಮಹಿಳೆ ಗೆದ್ದಿರುತ್ತಾಳೆ. ಆದರೆ ಅಲ್ಲಿ ಅಧಿಕಾರ ಮಾಡುವುದು ಆಕೆಯ ಪತಿ, ತಂದೆ, ಅಣ್ಣ,ತಮ್ಮ,ಇಲ್ಲವೇ ಆಕೆಯ ಮಕ್ಕಳು ಇದು ಗ್ರಾಮೀಣ ಪ್ರದೇಶದಲ್ಲೇ ಆಗಲಿ ನಗರ ಪ್ರದೇಶದಲ್ಲೇ ಆಗಲಿ ನಡೆಯುವುದೇ ಹೀಗೆ ಅಲ್ಲಿ ಆಕೆ ಪ್ರದರ್ಶನದ ಅಧಿಕಾರಿಣಿ ಎಂಬ ಗೊಂಬೆ ಅಸ್ಟೆ. ಇದನ್ನೆಲ್ಲಾ ನೋಡಿದಾಗ ಸರ್ಕಾರ ಮಹಿಳೆಗಾಗಿ ಏನೇ ಸಮಾನತೆ ಕೊಟ್ರೂ ಅದನ್ನ ಬಳಸಿಕೊಳ್ಳುವಲ್ಲಿ ಮತ್ತೆ ಮತ್ತೆ ಹೆಣ್ಣು ಸೋಲುತ್ತಿದ್ದಾಳೆ. ಇನ್ನು ಸಿನೆಮಾ ರಂಗದಲ್ಲಿಯೂ ಕೂಡ ಲಿಂಗತಾರತಮ್ಯತೆ ಹೆಚ್ಚು ಇದೆ. ಅನೇಕ  ನಟಿಯರು ತಮಗೂ ನಾಯಕರಂತೆ ಸಮಾನ ಸಂಭಾವನೆ ಬೇಕು ಎಂದು ಅನೇಕ ದೃಶ್ಯ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೂ ಕೂಡ ಅಲ್ಲಿ ಸಂಭಾವನೆ ವಿಚಾರದಲ್ಲಿ ಸಮಾನತೆ ಬಂದಿಲ್ಲ. ಇನ್ನು  ಕೂಲಿ ಕಾರ್ಮಿಕರಲ್ಲಿ ಹೆಣ್ಣುಮಕ್ಕಳ ಕೂಲಿಹಣದಲ್ಲಿ  ಮತ್ತು ಗಂಡಸರಿಗೆ ಕೊಡುವ ಕೂಲಿಹಣದಲ್ಲೂ ವ್ಯತ್ಯಾಸವಿದೆ. ಅಲ್ಲಿ ಗಂಡುಕೂಲಿ ಹೆಚ್ಚಿನ ಸಂಭಾವನೆ ಪಡೆಯುತ್ತಾನೆ.  

ಅನೇಕ ಅಸಮಾನತೆಗಳ ನಡುವೆಯೂ ಕೂಡ ಮಹಿಳೆಯರು ಮುಂದೆ ನುಗ್ಗಿ ತಮ್ಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಹೊರಗೆ ದುಡಿದುಕೊಂಡು ಬರುವುದು  ಮಹಿಳೆಯ ಒಂದು ರೀತಿಯ ಸಾಧನೆಯಾದರೆ, ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಹೆಣ್ಣಿನದು ಇನ್ನೊಂದು ರೀತಿಯ ಕರ್ತವ್ಯ ಸಾಧನೆ. ಆಕೆ ತನ್ನ ಸಂಸಾರಕ್ಕಾಗಿ  ಮನೆಯ ನೆಮ್ಮದಿಗಾಗಿ ದುಡಿಯುವ ಸಂಬಳವಿಲ್ಲದ ನೌಕರಿ. ಅದು ಪ್ರೀತಿ, ವಾತ್ಸಲ್ಯ, ಸಹನೆ, ಸಂತಸ, ತ್ಯಾಗ, ಅನುರಾಗ  ತುಂಬಿದ ಕರ್ತವ್ಯ ಅದು. ಅದನ್ನು ಮಾಡು ಎಂದು ಯಾರು ಹೇಳಿಕೊಡಬೇಕಿಲ್ಲ ಅದನ್ನು ಆಕೆ ಗಂಡಿಗಿಂತ ಚೆನ್ನಾಗಿ ನಿಭಾಯಿಸುವಳು. ಹೆಣ್ಣಿನ ಈ ಎಲ್ಲ ಕಾರಣಕ್ಕೆ ಹೆಣ್ಣು ಪ್ರಪಂಚದ ಕಣ್ಣು ಎಂದರೆ ತಪ್ಪಾಗಲಾರದು. ಇವತ್ತು ಮಾರ್ಚ 8 ವಿಶ್ವ ಮಹಿಳೆಯರ ದಿನ, ವಿಶ್ವದ ಮಹಿಳೆಯರಿಗೆಲ್ಲರಿಗೂ ವಿಶ್ವಮಹಿಳಾ ದಿನದ   ಶುಭಾಶಯಗಳು.



Saturday 3 March 2018

ಮಗುವಿನ ಮೊದಲ ತುತ್ತು , ಕೀಲ್ಸ ಎಂಬ ಕೈಲಾಸ.

ಕೀಲ್ಸ ಅನ್ನೋದು ಒಂದು ಸಿಹಿ ಊಟ. ನಮ್ಮೂರಿನ ಕಡೆ ಶಿವರಾತ್ರಿಯ ವಿಶೇಷ ಈ ಕೀಲ್ಸ. ಶಿವರಾತ್ರಿ ಹಬ್ಬವನ್ನ  ಉಪವಾಸದ ಹಬ್ಬ, ನಿದ್ದೆಗೆಡುವ ಹಬ್ಬ ಅಂತಾನೆ ಹೇಳಬಹುದು. ಆದರೆ ಶಿವರಾತ್ರಿ ದಿನ "ಕಿಲ್ಸ ತಿಂದು ಕೈಲಾಸ ಕಾಣು" ಎಂದು ನಮ್ಮ ಹಿರಿಯರು ಹೇಳಿದ ಮಾತು ಈಗ ಕಿವಿಯಲ್ಲಿ ಗುಯ್ಗುಡುತ್ತಿದೆ. ಅದು ಗಾದೆಯೋ ಅಥವಾ ಆ ಸಮಯಕ್ಕೆ ಆ ಕೀಲ್ಸಕ್ಕೆ ಕೊಟ್ಟ ಗೌರವವೋ ನಂಗೆ ಗೊತ್ತಿಲ್ಲ. ಆದರೂ ಈ ಕೀಲ್ಸಕ್ಕೆ ಶಿವರಾತ್ರಿ ದಿನ ರಾಜ ಗೌರವ ಅಂತೂ ಇದೆ. ಉಪವಾಸದ ನಂತರ  ಈ ಕೀಲ್ಸವೇ ದೇವರ ಎಡೆಗೆ (ನೈವೇದ್ಯ) ಮಾಡುವುದು. ಈಗಿನ ಹೊಸ ಹೊಸ ರುಚಿಗಳ ಮಧ್ಯೆಯೂ ಹಬ್ಬದ ದಿನ ನಾವು ಈ ಕೀಲ್ಸವನ್ನು ಮರೆಯುವುದಿಲ್ಲ. ಮಾಡುವ ವಿಧಾನವು ಕೂಡ ಸುಲಭವಾಗಿದೆ. 


ನಮ್ಮ ಅಜ್ಜ ಅಜ್ಜಿಯರ ಕಾಲದಲ್ಲಿ ಮಕ್ಕಳಿಗೆ ಮೊದಲ ತುತ್ತು ಈ ಕೀಲ್ಸ ಆಗಿರುತ್ತಿತ್ತು. ಇದು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಈಗಿನ ಮಕ್ಕಳಿಗೆ ನಾವು "ಆರು ತಿಂಗಳಿಗೆ ಅನ್ನದ ಆಸೆ" ಅಂತ ಅನ್ನ ತಿನ್ನಿಸಲು ಶುರು ಮಾಡ್ತೀವಿ. ಆದ್ರೆ ನಮ್ಮ ಅಜ್ಜ ಅಜ್ಜಿಯರ  ಕಾಲದಲ್ಲಿ  ಈಗ ನಾವು ಉಣ್ಣುವ ಅಕ್ಕಿಯ ಅನ್ನ ಅವರು ತಿನ್ನುತ್ತಿರಲಿಲ್ಲವಂತೆ - ನವಣೆ ಅಕ್ಕಿ ಅನ್ನ ತಿನ್ನುತ್ತಿದ್ದರಂತೆ. ಅದು ತುಂಬಾ ಗಟ್ಟಿ ಆಹಾರ. ಅನ್ನಕ್ಕಿಂತ ಮೊದಲು  ರಾಗಿ ಹಾಲಿನಿಂದ ಮಾಡಿದ ಈ ಕೀಲ್ಸವನ್ನು ಮಕ್ಕಳ ಮೊದಲ ಬೇಯಿಸಿದ ತುತ್ತು ಅಂತ ತಿನ್ನಿಸ್ತಿದ್ರಂತೆ. 

ಮಕ್ಕಳಷ್ಟೇ ಅಲ್ಲ, ಎಲ್ಲಾ ವಯೋಮಾನದವರು  ಕೂಡ ಇಷ್ಟಪಡುವ ಸಿಹಿ ಇದಾಗಿದೆ.  ಹೊಟ್ಟೆಯಲ್ಲಿ ಕಸಿವಿಸಿ ಆಗಿ ಏನೂ ಊಟ ಸೇರುತ್ತಿಲ್ಲ ಎಂದಾಗ ಈ ಕೀಲ್ಸ ತಿಂದರೆ ಹೊಟ್ಟೆ ನಿರಾಳವಾಗುತ್ತದೆ. ಇದು ಮನೆಯಲ್ಲೇ ತಯಾರಿಸುವುದರಿಂದ ಮತ್ತು ಇಲ್ಲಿ ಸಿಹಿಗಾಗಿ ಬೆಲ್ಲ ಹಾಕುವುದರಿಂದ ಸಕ್ಕರೆ ಕಾಯಿಲೆ ಇರುವವರು ಕೂಡ ನಿರಾತಂಕವಾಗಿ ತಿನ್ನಬಹುದು. ಬೇಸಿಗೆಯಲ್ಲಿ ದೇಹದ ಉಷ್ಣ ಹೋಗಿಸಿ ದೇಹವನ್ನು ತಂಪಾಗಿಸಲು ಈ ಕಿಲ್ಸ ಮಾಡಿಕೊಂಡು ತಿನ್ನುವರು. ಈ ಕೀಲ್ಸ ಸಾಮಾನ್ಯವಾಗಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು  ಈ ಭಾಗಗಳಲ್ಲಿ ಹೆಚ್ಚಾಗಿ ಮಾಡುವರು.




ಕೀಲ್ಸ ಮಾಡುವ ವಿಧಾನ :-
  • ಮೊದಲು 2 ಲೋಟ ರಾಗಿಯನ್ನು ತೆಗೆದುಕೊಂಡು ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಸಿಡಬೇಕು.
  • ಎರೆಡು ಲೋಟ ರಾಗಿಗೆ ಒಂದು ವರೆ ಲೋಟ ಬೆಲ್ಲ ಪುಡಿಮಾಡಿ  ಬೆಲ್ಲವನ್ನು ಪಾಕ ಕುದಿಸಬೇಕು.
  • ನೆಂದಿರುವ ರಾಗಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ರಾಗಿ ಹಾಲನ್ನು ಒಂದು ಪಾತ್ರೆಗೆ ಸೋಸಿಕೊಳ್ಳಬೇಕು.
  • ಏಲಕ್ಕಿ ಶುಂಟಿ ಗಳನ್ನೂ ಕುಟ್ಟಿ ಪುಡಿ ಮಾಡಿಟ್ಟು, ಕುದಿಯುತ್ತಿರುವ ಬೆಲ್ಲದ ಪಾಕಕ್ಕೆ ಹಾಕಬೇಕು.
  • ನಂತರ ಬೆಲ್ಲದ ಪಾಕವನ್ನು ಸೋಸಿಕೊಂಡಿರುವ ರಾಗಿ ಹಾಲಿಗೆ ಸೇರಿಸಿ ಒಲೆಮೇಲೆ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಬೇಯಿಸುವಾಗ ರಾಗಿ ಹಾಲು ಗಂಟು ಆಗದಂತೆ ಮತ್ತು ಪಾತ್ರೆ ತಳ ಹಿಡಿದು ಸೀದು ಹೋಗದಂತೆ ಎಚ್ಚರಿಕೆಯಿಂದ ಗೂರಡುತ್ತಿರಬೇಕು.
  • ಸ್ವಲ್ಪ ಹೊತ್ತು ಚೆನ್ನಾಗಿ ಬೇಯುತ್ತಾ ಅದು ಗಟ್ಟಿಯಾಗುತ್ತಾ ಹೋಗುತ್ತದೆ.  
  • ಆಗ ಪಾತ್ರೆಯನ್ನು ಕೆಳಗಿಳಿಸಿ, ಬಿಸಿಬಿಸಿ ಯಾಗಿರುವಾಗಲೇ ಒಂದು ತಟ್ಟೆಗೆ ಅದನ್ನು ಹಾಕಿ ಮೇಲೆಕೆಳಗೆ ಆಗದಂತೆ ಸಮವಾಗಿ ಸವರಬೇಕು.
  • 3-4 ಗಂಟೆಗಳ ನಂತರ ಅದು ಗಟ್ಟಿಯಾಗುತ್ತದೆ. ನಂತರ ಚಾಕುವಿನಿಂದ ಬರ್ಫಿಯ ರೀತಿ ಚೌಕಾಕಾರವಾಗಿ ಕತ್ತರಿಸಿ ತೆಗೆದರೆ ಕಿಲ್ಸ ತಿನ್ನಲು  ರೆಡಿ. 

ಒಳ್ಳೆ ಗುಣ ಇರುವ ಈ ರೀತಿಯ ನಮ್ಮ ಹಿರಿಕರ ಊಟವನ್ನು ನಾವು ಮುಂದುವರೆಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು ಅಲ್ಲವ. ನನ್ನ ಅನಿಸಿಕೆಯ ಪ್ರಕಾರ ನಮ್ಮ ಆರೋಗ್ಯ ಇರುವುದು ನಮ್ಮ ಊಟದಲ್ಲೇ. ಪ್ರಪಂಚದಲ್ಲಿ ಎಲ್ಲೇ ಹೋದರು ಆ  ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಆಹಾರ ಪಧ್ಧತಿಗಳು ರೂಢಿಯಾಗುತ್ತಾ ಬಂದಿವೆ. ಆದರೆ ನಾವು ನಾವು ಆಧುನಿಕತೆಗೆ ಒಳಗಾಗಿ ಇಡೀ ಪ್ರಪಂಚದ ಊಟದ ಪಧ್ಧತಿಗಳನ್ನು ನಮ್ಮ ತಟ್ಟೆಗೆ ತಂದು ಇರಿಸಿಕೊಂಡಿದ್ದೇವೆ. ಅದು ತಪ್ಪು ಅಂತ ಹೇಳುವುದಕ್ಕೆ ಆಗೋಲ್ಲ. ಊಟ ತನ್ನಿಚ್ಛೆ. ನೋಟ ಪರರ ಇಚ್ಛೆ. ಅಲ್ವಾ.