Thursday 8 March 2018

ಸ್ವತಂತ್ರ, ಸಮಾನತೆಯ ಮಹಿಳಾ ದಿನಕ್ಕೆ ಚಿಕ್ಕ ಮಾತುಕತೆ ನೀವೇನಂತೀರಾ?

ಇವತ್ತು ಮಾರ್ಚ್ 8 ವಿಶ್ವ ಮಹಿಳಾ ದಿನ. ಇಂದು ಬೆಳಕರ್ದಾಗಿಂದ ವಾಟ್ಸಪ್, ಫೇಸ್ಬುಕ್ ನಲ್ಲಿ ಹಲವಾರು ರೀತಿಯಲ್ಲಿ ಶುಭಾಶಯಗಳು ಮೊಬೈಲ್ ನಲ್ಲಿ ಕಣ್ಮುಂದೆ ಬರುತ್ತಿವೆ. ನಮಗಾಗಿ ಒಂದು ದಿನದ ಆಚರಣೆ ಬೇಕಾ? ಪ್ರತಿ ದಿನವು ನಮ್ಮದೇ. ಮಹಿಳೆಯರಿಲ್ಲದೆ  ಪ್ರಪಂಚವೇ ಬರಡು. ಆಧುನಿಕ ಯುಗದಲ್ಲಿ ಮಹಿಳೆ ಗಂಡಿಗೆ ಸರಿಸಮನಾಗಿ ಬೆಳೆದು ನಿಂತಿದ್ದಾಳೆ. ಕೆಲವು ಕೆಲಸಗಳು ಬರಿ ಗಂಡಿಗಸ್ಟ  ಸೀಮಿತ.  ಹಿಂದಿನ ಕಾಲದಲ್ಲಿ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಹೆಣ್ಣು ಈಗ ತಾನೂ ಹೊರಗೆ ದುಡಿಯಲು ಗಂಡಿಗೆ ಸಮನಾಗಿ ತಾನೂ ಕೂಡ ಸಮರ್ಥಳು ಎಂದು ತೋರಿಸಿಕೊಟ್ಟಿದ್ದಾಳೆ. ಇದು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.. 

ಚಿತ್ರ ಗೂಗಲ್ನಿಂದ 
ಅನಾದಿ ಕಾಲದಿಂದಲೂ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಇದು ಲಿಂಗ ತಾರತಮ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ಆಧುನಿಕ ಯುಗದಲ್ಲೂ ಏನು ಕಮ್ಮಿ ಇಲ್ಲ. ಸಮಾನತೆಯ ಹೆಸರಿನಲ್ಲು ಕೂಡ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಕೌಟುಂಬಿಕವಾಗಿ ಹೇಳಬೇಕಂದ್ರೆ ಕೆಲವೊಮ್ಮೆ ಮನೆಯಿಂದ ಹೊರಗೆ ದುಡಿಯಲು ಹೊರಗೆ ಹೋದರೆ ಅವಳು ಮನೆಯ ಜವಾಬ್ದಾರಿಯನ್ನು ಅಸಡ್ಡೆ ಮಾಡುವಂತಿಲ್ಲ. ಹೊರಗೆ ಕಚೇರಿಗಳಲ್ಲಿ ತನ್ನ ಸಹೋದ್ಯೋಗಿಗಳಲ್ಲಿ ಮತ್ತು ಉನ್ನತ ಹುದ್ದೆಯಲ್ಲಿದ್ದರೆ ಅಲ್ಲಿಯೂ ಕೂಡ ಪುರುಷ ಕೆಲಸಗಾರರು ತನ್ನ ಬಾಸ್ ಹೆಣ್ಣಾದರೆ ಅಕೆಗೆ ಕೊಡುವ ಮರ್ಯಾದೆ ಅಸ್ಟಕ್ಕಸ್ಟೆ ಇರುತ್ತದೆ. ಆದರೆ ಎಲ್ಲರು ಹಾಗೆ ಅಂತಲ್ಲ ಹೆಣ್ಣು ಎಂದರೆ ಗೌರವಿಸುವ,  ಮರುಗುವ ಪುರುಷರು ಕೂಡ ಇದ್ದಾರೆ.

ಮಹಿಳೆಗೆ ಎಲ್ಲ ರೀತಿಯಲ್ಲೂ ಸಮಾನತೆ ಇದ್ದರು ಆಕೆ ಸ್ವತಂತ್ರವಾಗಿ ಯಾವ ಕೆಲಸಗಳನ್ನು ಕೂಡ ಮಾಡಲಾಗದು. ಉದಾಹರಣೆಗೆ ರಾಜಕೀಯದಲ್ಲಿ ಮೀಸಲಾತಿ ಸೀಟುಗಳಲ್ಲಿ ಎಲೆಕ್ಷನ್ನಲ್ಲಿ   ನಿಂತು ಮಹಿಳೆ ಗೆದ್ದಿರುತ್ತಾಳೆ. ಆದರೆ ಅಲ್ಲಿ ಅಧಿಕಾರ ಮಾಡುವುದು ಆಕೆಯ ಪತಿ, ತಂದೆ, ಅಣ್ಣ,ತಮ್ಮ,ಇಲ್ಲವೇ ಆಕೆಯ ಮಕ್ಕಳು ಇದು ಗ್ರಾಮೀಣ ಪ್ರದೇಶದಲ್ಲೇ ಆಗಲಿ ನಗರ ಪ್ರದೇಶದಲ್ಲೇ ಆಗಲಿ ನಡೆಯುವುದೇ ಹೀಗೆ ಅಲ್ಲಿ ಆಕೆ ಪ್ರದರ್ಶನದ ಅಧಿಕಾರಿಣಿ ಎಂಬ ಗೊಂಬೆ ಅಸ್ಟೆ. ಇದನ್ನೆಲ್ಲಾ ನೋಡಿದಾಗ ಸರ್ಕಾರ ಮಹಿಳೆಗಾಗಿ ಏನೇ ಸಮಾನತೆ ಕೊಟ್ರೂ ಅದನ್ನ ಬಳಸಿಕೊಳ್ಳುವಲ್ಲಿ ಮತ್ತೆ ಮತ್ತೆ ಹೆಣ್ಣು ಸೋಲುತ್ತಿದ್ದಾಳೆ. ಇನ್ನು ಸಿನೆಮಾ ರಂಗದಲ್ಲಿಯೂ ಕೂಡ ಲಿಂಗತಾರತಮ್ಯತೆ ಹೆಚ್ಚು ಇದೆ. ಅನೇಕ  ನಟಿಯರು ತಮಗೂ ನಾಯಕರಂತೆ ಸಮಾನ ಸಂಭಾವನೆ ಬೇಕು ಎಂದು ಅನೇಕ ದೃಶ್ಯ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೂ ಕೂಡ ಅಲ್ಲಿ ಸಂಭಾವನೆ ವಿಚಾರದಲ್ಲಿ ಸಮಾನತೆ ಬಂದಿಲ್ಲ. ಇನ್ನು  ಕೂಲಿ ಕಾರ್ಮಿಕರಲ್ಲಿ ಹೆಣ್ಣುಮಕ್ಕಳ ಕೂಲಿಹಣದಲ್ಲಿ  ಮತ್ತು ಗಂಡಸರಿಗೆ ಕೊಡುವ ಕೂಲಿಹಣದಲ್ಲೂ ವ್ಯತ್ಯಾಸವಿದೆ. ಅಲ್ಲಿ ಗಂಡುಕೂಲಿ ಹೆಚ್ಚಿನ ಸಂಭಾವನೆ ಪಡೆಯುತ್ತಾನೆ.  

ಅನೇಕ ಅಸಮಾನತೆಗಳ ನಡುವೆಯೂ ಕೂಡ ಮಹಿಳೆಯರು ಮುಂದೆ ನುಗ್ಗಿ ತಮ್ಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಹೊರಗೆ ದುಡಿದುಕೊಂಡು ಬರುವುದು  ಮಹಿಳೆಯ ಒಂದು ರೀತಿಯ ಸಾಧನೆಯಾದರೆ, ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಹೆಣ್ಣಿನದು ಇನ್ನೊಂದು ರೀತಿಯ ಕರ್ತವ್ಯ ಸಾಧನೆ. ಆಕೆ ತನ್ನ ಸಂಸಾರಕ್ಕಾಗಿ  ಮನೆಯ ನೆಮ್ಮದಿಗಾಗಿ ದುಡಿಯುವ ಸಂಬಳವಿಲ್ಲದ ನೌಕರಿ. ಅದು ಪ್ರೀತಿ, ವಾತ್ಸಲ್ಯ, ಸಹನೆ, ಸಂತಸ, ತ್ಯಾಗ, ಅನುರಾಗ  ತುಂಬಿದ ಕರ್ತವ್ಯ ಅದು. ಅದನ್ನು ಮಾಡು ಎಂದು ಯಾರು ಹೇಳಿಕೊಡಬೇಕಿಲ್ಲ ಅದನ್ನು ಆಕೆ ಗಂಡಿಗಿಂತ ಚೆನ್ನಾಗಿ ನಿಭಾಯಿಸುವಳು. ಹೆಣ್ಣಿನ ಈ ಎಲ್ಲ ಕಾರಣಕ್ಕೆ ಹೆಣ್ಣು ಪ್ರಪಂಚದ ಕಣ್ಣು ಎಂದರೆ ತಪ್ಪಾಗಲಾರದು. ಇವತ್ತು ಮಾರ್ಚ 8 ವಿಶ್ವ ಮಹಿಳೆಯರ ದಿನ, ವಿಶ್ವದ ಮಹಿಳೆಯರಿಗೆಲ್ಲರಿಗೂ ವಿಶ್ವಮಹಿಳಾ ದಿನದ   ಶುಭಾಶಯಗಳು.



Saturday 3 March 2018

ಮಗುವಿನ ಮೊದಲ ತುತ್ತು , ಕೀಲ್ಸ ಎಂಬ ಕೈಲಾಸ.

ಕೀಲ್ಸ ಅನ್ನೋದು ಒಂದು ಸಿಹಿ ಊಟ. ನಮ್ಮೂರಿನ ಕಡೆ ಶಿವರಾತ್ರಿಯ ವಿಶೇಷ ಈ ಕೀಲ್ಸ. ಶಿವರಾತ್ರಿ ಹಬ್ಬವನ್ನ  ಉಪವಾಸದ ಹಬ್ಬ, ನಿದ್ದೆಗೆಡುವ ಹಬ್ಬ ಅಂತಾನೆ ಹೇಳಬಹುದು. ಆದರೆ ಶಿವರಾತ್ರಿ ದಿನ "ಕಿಲ್ಸ ತಿಂದು ಕೈಲಾಸ ಕಾಣು" ಎಂದು ನಮ್ಮ ಹಿರಿಯರು ಹೇಳಿದ ಮಾತು ಈಗ ಕಿವಿಯಲ್ಲಿ ಗುಯ್ಗುಡುತ್ತಿದೆ. ಅದು ಗಾದೆಯೋ ಅಥವಾ ಆ ಸಮಯಕ್ಕೆ ಆ ಕೀಲ್ಸಕ್ಕೆ ಕೊಟ್ಟ ಗೌರವವೋ ನಂಗೆ ಗೊತ್ತಿಲ್ಲ. ಆದರೂ ಈ ಕೀಲ್ಸಕ್ಕೆ ಶಿವರಾತ್ರಿ ದಿನ ರಾಜ ಗೌರವ ಅಂತೂ ಇದೆ. ಉಪವಾಸದ ನಂತರ  ಈ ಕೀಲ್ಸವೇ ದೇವರ ಎಡೆಗೆ (ನೈವೇದ್ಯ) ಮಾಡುವುದು. ಈಗಿನ ಹೊಸ ಹೊಸ ರುಚಿಗಳ ಮಧ್ಯೆಯೂ ಹಬ್ಬದ ದಿನ ನಾವು ಈ ಕೀಲ್ಸವನ್ನು ಮರೆಯುವುದಿಲ್ಲ. ಮಾಡುವ ವಿಧಾನವು ಕೂಡ ಸುಲಭವಾಗಿದೆ. 


ನಮ್ಮ ಅಜ್ಜ ಅಜ್ಜಿಯರ ಕಾಲದಲ್ಲಿ ಮಕ್ಕಳಿಗೆ ಮೊದಲ ತುತ್ತು ಈ ಕೀಲ್ಸ ಆಗಿರುತ್ತಿತ್ತು. ಇದು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಈಗಿನ ಮಕ್ಕಳಿಗೆ ನಾವು "ಆರು ತಿಂಗಳಿಗೆ ಅನ್ನದ ಆಸೆ" ಅಂತ ಅನ್ನ ತಿನ್ನಿಸಲು ಶುರು ಮಾಡ್ತೀವಿ. ಆದ್ರೆ ನಮ್ಮ ಅಜ್ಜ ಅಜ್ಜಿಯರ  ಕಾಲದಲ್ಲಿ  ಈಗ ನಾವು ಉಣ್ಣುವ ಅಕ್ಕಿಯ ಅನ್ನ ಅವರು ತಿನ್ನುತ್ತಿರಲಿಲ್ಲವಂತೆ - ನವಣೆ ಅಕ್ಕಿ ಅನ್ನ ತಿನ್ನುತ್ತಿದ್ದರಂತೆ. ಅದು ತುಂಬಾ ಗಟ್ಟಿ ಆಹಾರ. ಅನ್ನಕ್ಕಿಂತ ಮೊದಲು  ರಾಗಿ ಹಾಲಿನಿಂದ ಮಾಡಿದ ಈ ಕೀಲ್ಸವನ್ನು ಮಕ್ಕಳ ಮೊದಲ ಬೇಯಿಸಿದ ತುತ್ತು ಅಂತ ತಿನ್ನಿಸ್ತಿದ್ರಂತೆ. 

ಮಕ್ಕಳಷ್ಟೇ ಅಲ್ಲ, ಎಲ್ಲಾ ವಯೋಮಾನದವರು  ಕೂಡ ಇಷ್ಟಪಡುವ ಸಿಹಿ ಇದಾಗಿದೆ.  ಹೊಟ್ಟೆಯಲ್ಲಿ ಕಸಿವಿಸಿ ಆಗಿ ಏನೂ ಊಟ ಸೇರುತ್ತಿಲ್ಲ ಎಂದಾಗ ಈ ಕೀಲ್ಸ ತಿಂದರೆ ಹೊಟ್ಟೆ ನಿರಾಳವಾಗುತ್ತದೆ. ಇದು ಮನೆಯಲ್ಲೇ ತಯಾರಿಸುವುದರಿಂದ ಮತ್ತು ಇಲ್ಲಿ ಸಿಹಿಗಾಗಿ ಬೆಲ್ಲ ಹಾಕುವುದರಿಂದ ಸಕ್ಕರೆ ಕಾಯಿಲೆ ಇರುವವರು ಕೂಡ ನಿರಾತಂಕವಾಗಿ ತಿನ್ನಬಹುದು. ಬೇಸಿಗೆಯಲ್ಲಿ ದೇಹದ ಉಷ್ಣ ಹೋಗಿಸಿ ದೇಹವನ್ನು ತಂಪಾಗಿಸಲು ಈ ಕಿಲ್ಸ ಮಾಡಿಕೊಂಡು ತಿನ್ನುವರು. ಈ ಕೀಲ್ಸ ಸಾಮಾನ್ಯವಾಗಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು  ಈ ಭಾಗಗಳಲ್ಲಿ ಹೆಚ್ಚಾಗಿ ಮಾಡುವರು.




ಕೀಲ್ಸ ಮಾಡುವ ವಿಧಾನ :-
  • ಮೊದಲು 2 ಲೋಟ ರಾಗಿಯನ್ನು ತೆಗೆದುಕೊಂಡು ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಸಿಡಬೇಕು.
  • ಎರೆಡು ಲೋಟ ರಾಗಿಗೆ ಒಂದು ವರೆ ಲೋಟ ಬೆಲ್ಲ ಪುಡಿಮಾಡಿ  ಬೆಲ್ಲವನ್ನು ಪಾಕ ಕುದಿಸಬೇಕು.
  • ನೆಂದಿರುವ ರಾಗಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ರಾಗಿ ಹಾಲನ್ನು ಒಂದು ಪಾತ್ರೆಗೆ ಸೋಸಿಕೊಳ್ಳಬೇಕು.
  • ಏಲಕ್ಕಿ ಶುಂಟಿ ಗಳನ್ನೂ ಕುಟ್ಟಿ ಪುಡಿ ಮಾಡಿಟ್ಟು, ಕುದಿಯುತ್ತಿರುವ ಬೆಲ್ಲದ ಪಾಕಕ್ಕೆ ಹಾಕಬೇಕು.
  • ನಂತರ ಬೆಲ್ಲದ ಪಾಕವನ್ನು ಸೋಸಿಕೊಂಡಿರುವ ರಾಗಿ ಹಾಲಿಗೆ ಸೇರಿಸಿ ಒಲೆಮೇಲೆ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಬೇಯಿಸುವಾಗ ರಾಗಿ ಹಾಲು ಗಂಟು ಆಗದಂತೆ ಮತ್ತು ಪಾತ್ರೆ ತಳ ಹಿಡಿದು ಸೀದು ಹೋಗದಂತೆ ಎಚ್ಚರಿಕೆಯಿಂದ ಗೂರಡುತ್ತಿರಬೇಕು.
  • ಸ್ವಲ್ಪ ಹೊತ್ತು ಚೆನ್ನಾಗಿ ಬೇಯುತ್ತಾ ಅದು ಗಟ್ಟಿಯಾಗುತ್ತಾ ಹೋಗುತ್ತದೆ.  
  • ಆಗ ಪಾತ್ರೆಯನ್ನು ಕೆಳಗಿಳಿಸಿ, ಬಿಸಿಬಿಸಿ ಯಾಗಿರುವಾಗಲೇ ಒಂದು ತಟ್ಟೆಗೆ ಅದನ್ನು ಹಾಕಿ ಮೇಲೆಕೆಳಗೆ ಆಗದಂತೆ ಸಮವಾಗಿ ಸವರಬೇಕು.
  • 3-4 ಗಂಟೆಗಳ ನಂತರ ಅದು ಗಟ್ಟಿಯಾಗುತ್ತದೆ. ನಂತರ ಚಾಕುವಿನಿಂದ ಬರ್ಫಿಯ ರೀತಿ ಚೌಕಾಕಾರವಾಗಿ ಕತ್ತರಿಸಿ ತೆಗೆದರೆ ಕಿಲ್ಸ ತಿನ್ನಲು  ರೆಡಿ. 

ಒಳ್ಳೆ ಗುಣ ಇರುವ ಈ ರೀತಿಯ ನಮ್ಮ ಹಿರಿಕರ ಊಟವನ್ನು ನಾವು ಮುಂದುವರೆಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು ಅಲ್ಲವ. ನನ್ನ ಅನಿಸಿಕೆಯ ಪ್ರಕಾರ ನಮ್ಮ ಆರೋಗ್ಯ ಇರುವುದು ನಮ್ಮ ಊಟದಲ್ಲೇ. ಪ್ರಪಂಚದಲ್ಲಿ ಎಲ್ಲೇ ಹೋದರು ಆ  ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಆಹಾರ ಪಧ್ಧತಿಗಳು ರೂಢಿಯಾಗುತ್ತಾ ಬಂದಿವೆ. ಆದರೆ ನಾವು ನಾವು ಆಧುನಿಕತೆಗೆ ಒಳಗಾಗಿ ಇಡೀ ಪ್ರಪಂಚದ ಊಟದ ಪಧ್ಧತಿಗಳನ್ನು ನಮ್ಮ ತಟ್ಟೆಗೆ ತಂದು ಇರಿಸಿಕೊಂಡಿದ್ದೇವೆ. ಅದು ತಪ್ಪು ಅಂತ ಹೇಳುವುದಕ್ಕೆ ಆಗೋಲ್ಲ. ಊಟ ತನ್ನಿಚ್ಛೆ. ನೋಟ ಪರರ ಇಚ್ಛೆ. ಅಲ್ವಾ. 

Monday 12 February 2018

ಎಲ್ಲವನ್ನು ತ್ಯಜಿಸಿದ ಬಹುಬಾಲಿಗೆ ಏಕೆ ಮಹಾಮಸ್ಥಾಭಿಷೇಕ


ಬಾಹುಬಲಿ ಎಂದರೆ ಅವನೊಬ್ಬ ಜ್ಞಾನಿ , ಯೋಗಿ, ವಿರಾಗಿ ಜೀವನದಲ್ಲಿ ಎಲ್ಲವನ್ನು ತ್ಯಜಿಸಿದವನು. ಬದುಕಿದ್ದಾಗಲೇ  ಉಟ್ಟ ಬಟ್ಟೆಯ ಮೇಲು ವ್ಯಾಮೋಹ ಇಲ್ಲದಂಥಹ ವ್ಯಕ್ತಿ. ಅನ್ನ,ನೀರು ಬಿಟ್ಟು ನಿರಾಹಾರಿಯಾಗಿ ತಪಸ್ಸಿಗೆ ನಿಂತವನು ಈ ಮಹಾನ್ ವ್ಯಕ್ತಿ. ಇವನ ಕಲ್ಲಿನ ಮೂರ್ತಿಗೆ  ಹಾಲು, ತುಪ್ಪ, ಗಂಧ, ಹರಿಶಿನ, ಕುಂಕುಮ ನೀರುಗಳಿಂದ ಅದ್ದೂರಿಯ ಮಹಾಮಸ್ಥಾಭಿಷೇಕ ಏಕೆ? ಜೈನ ತೀರ್ಥಂಕರರಲ್ಲಿ ಬಾಹುಬಲಿ 24 ನೆಯವನು ಉಳಿದ ತೀರ್ಥಂಕರರಿಗಿಂತ ಈತ ಹೇಗೆ ಭಿನ್ನ? ಬಾಹುಬಲಿಯ ಸರಳತೆ, ತ್ಯಾಗಕ್ಕೆ ಮತ್ತು  ವೈರಾಗ್ಯಕ್ಕೆ  ವ್ಯತಿರಿಕ್ತವಾಗಿ ಜನರು ಈ ಮಸ್ಥಾಭಿಷೇಕ ನಡೆಸುತ್ತಿದ್ದಾರೆಯೇ? ಈ ರೀತಿಯ ಅನೇಕ ಪ್ರಶ್ನೆಗಳು ನನ್ನ ತಲೆಯಲ್ಲಿ ಇತ್ತೀಚಿಗೆ ಗಿರಕಿ ಹೊಡೆಯುತಿವೆ. ಈ ರೀತಿಯ ನನ್ನ ಅನೇಕ ಪ್ರಶ್ನೆಗಳಿಗೆ ನಾನು ಉತ್ತರ ಹುಡುಕಲು ಹೊರಟಾಗ ನಂಗೆ ತೋಚಿದ ಕೆಲವು ವಿಚಾರಗಳನ್ನು ಇಲ್ಲಿ ಗೀಚಿದ್ದೀನಿ.

ಮಹಾಮಸ್ಥಾಭಿಷೇಕ ಹೇಗೆ ಶುರುವಾಯಿತು ಎಂಬುದಕ್ಕೆ ಪೌರಾಣಿಕ ಕಥೆ :--
ನಾನು ತಿಳಿದ ಪ್ರಕಾರ ಎಲ್ಲಿಯೂ ಬಾಹುಬಲಿ ತನಗೆ ಪೂಜೆ ಮಾಡಬೇಕು, ಅಭಿಷೇಕ ಮಾಡಬೇಕು ಎಂದು ಹೇಳಿಲ್ಲ. ಇದು ಅವರ ಅನುಯಾಯಿಗಳು ಬಾಹುಬಲಿಯ ಮೇಲಿನ ಭಕ್ತಿಗೆ ತಾವುಗಳೇ ರೂಢಿಸಿಕೊಂಡು ಬಂದಿರುವ ಪಧ್ಧತಿ ಇದು. ಬಾಹುಬಲಿ ಮೂರ್ತಿಯನ್ನು ಕೆತ್ತಿಸಿ ಪ್ರತಿಸ್ಥಾಪಿಸಿದ ನಂತರ ಚಾವುಂಡರಾಯನಿಗೆ ಅಹಂಕಾರ  ಆವರಿಸಿರುತ್ತೆ. ಅದನ್ನ ಹೋಗಲಾಡಿಸಲು ಆ ಊರಿನ ಗ್ರಾಮದೇವತೆ ಒಂದು ಅಜ್ಜಿಯ ರೂಪ ತಾಳಿ ಮೊದಲ ಬಾರಿಗೆ ತಾನೇ ಸ್ವತಹ  ಮಸ್ತಾಭಿಷೇಕ ಮಾಡುತ್ತಾಳೆ. ಆಗ ಆ ಅಜ್ಜಿಯ ಸಾಹಸ ನೋಡಿ ಅವನಿಗೆ ಆ ಅಜ್ಜಿಯ ಮುಂದೆ ತನ್ನ ಕೆಲಸ ತೃಣ ಎನಿಸಿ ಅಜ್ಜಿಗೆ  ತಲೆಬಾಗಿ ತನ್ನ ಅಹಂಕಾರವನ್ನು ತ್ಯಜಿಸುತ್ತಾನೆ.

ಮಹಾಮಸ್ಥಾಭಿಷೇಕ ಮಾಡಲು ವೈಜ್ಞಾನಿಕ ಕಾರಣ :--
ಈ ಬಾಹುಬಲಿ ಮೂರ್ತಿಯನ್ನು ಕೆತ್ತಿರುವುದು ಕಲ್ಲಿನಲ್ಲಿ. ಮೂರ್ತಿಯು ಹಾಳಾಗದಂತೆ ಇರಲು ರಕ್ಷಣೆ ಮಾಡುವ ಸಲುವಾಗಿ ಈ ಮಹಾಮಜ್ಜನ  ಶುರು ಮಾಡಿರಬಹುದು. ಬಯಲಿನಲ್ಲಿರುವ ಈ ಮೂರ್ತಿಗೆ ಬಿಸಿಲು , ಮಳೆಗಳಿಂದ ರಕ್ಷಣೆ ಇಲ್ಲ. ಆದಕಾರಣ ಮೂರ್ತಿ ವಿರೂಪಗೊಳಗಾಗಬಾರದು ಎಂದು ಕೂಡ ಈ ಮಸ್ತಾಭಿಷೇಕ ಮಾಡುತ್ತಿರಬಹುದು.

ಮಹಾಮಸ್ಥಾಭಿಷೆಕಕ್ಕೆ 12 ವರ್ಷಗಳೆ ಏಕೆ :--
1-  ಬಾಹುಬಲಿಯು ಜೀವನದಲ್ಲಿ ಎಲ್ಲವನ್ನು ತ್ಯಜಿಸಿ ನಿರಾಹಾರಿಯಾಗಿ 12 ತಿಂಗಳುಗಳ ಕಾಲ ತಪಸ್ಸಿಗೆ ನಿಲ್ಲುವನು. ಹಾಗೆ ಬಾಹುಬಲಿ ಮೂರ್ತಿ ತಯಾರಾಗಲು 12 ವರ್ಷಗಳ ಕಾಲದ ಗಡುವು ತೆಗೆದುಕೊಂಡಿತ್ತು. ಈ ಕಾರಣಗಳಿಂದ ಮಹಾಮಸ್ತಾಭಿಷೇಕ ನಡೆಸಲು 12 ವರ್ಷಗಳಿಗೊಮ್ಮೆ ನಡೆಸುವ ಪದ್ಧತಿ ಬಂದಿರಬಹುದು.
2-  ಮಹಾಮಸ್ತಾಭಿಷೇಕಕ್ಕೆ ಬಳಸುವಂಥಹ ವಸ್ತುಗಳನ್ನು ಪ್ರಪಂಚದ ವಿವಿಧ ಮೂಲೆಗಳಿಂದ ತರಿಸಲಾಗುತ್ತದೆ. ಅಲ್ಲಿ ಬಳಸುವ ಹರಿಶಿನ, ಕುಂಕುಮ ಗಂಧ ಇತ್ಯಾದಿ ಎಲ್ಲವು. ಅವುಗಳನ್ನು ಸಂಗ್ರಹಿಸಲು  ತುಂಬಾ ಸಮಯ ಹಿಡಿಯುತ್ತದೆ. ಅಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸುವುದಿಲ್ಲ. ಮಜ್ಜನಕ್ಕೆ ಬೇಕಾಗುವ ಎಲ್ಲ ವಸ್ತುಗಳು ಗಿಡಮೂಲಿಕೆಗಳಿಂದ ತಯಾರಾದವು ಗಳಿಂದ ಮಹಾ ಮಜ್ಜನ ನಡೆಯುತ್ತದೆ. 
3-  ಅಸ್ಟು ದೊಡ್ಡ ಮೂರ್ತಿಗೆ ಎಲ್ಲ ವಸ್ತುಗಳನ್ನು ಜೋಡಿಸಿಕೊಂಡು  ಪ್ರತಿವರ್ಷ ಮಸ್ಥಾಭಿಶೀಕ ಮಾಡಲು ಬಹಳ ಖರ್ಚು ಆಗುವುದರಿಂದ ಮತ್ತು ಬಾಹುಬಲಿಯ ತಲೆಯ ಮೇಲಿನ ಎತ್ತರ ತಲುಪಲು ಅಟ್ಟ ಕಟ್ಟಲು ಬಹಳ ಸಮಯ ಹಿಡಿಯುತ್ತೆ ಅದು ಒಂದು ಕಾರಣ ವಿರಬಹುದು ಈ ಎಲ್ಲಾ ಕಾರಣಗಳಿಂದ 12 ವರ್ಷಕ್ಕೊಮ್ಮೆ ಮಹಾಮಸ್ಥಾಭಿಷೇಕ ನಿರ್ಧಾರವಾಗಿರಬಹುದು. 


ಅಚಲ ಬಾಹುಬಲಿ ಮೂರ್ತಿಯ ವಿಸ್ಮಯಗಳು  :--
ಬಾಹುಬಲಿ ಮೂರ್ತಿಯು ಸಾವಿರಾರು ವರ್ಷಗಳಿಂದ ಆಚಲವಾಗಿ ನಿಂತಿದೆ. ಬಿಸಿಲು, ಮಳೆ, ಗಾಳಿ, ಧೂಳು ಎನ್ನದೆ ಸ್ಥಿರವಾಗಿ ನಿಂತಿದೆ. ಆ ಮೂರ್ತಿಯ ಮೇಲೆ ಒಂದು ಸಣ್ಣ ಬಿರುಕು ಕೂಡ ಇಲ್ಲಿಯವರೆಗೂ ಆಗಿಲ್ಲ. ಇನ್ನೊಂದು ವಿಸ್ಮಯವೆಂದರೆ ಪಕ್ಷಿಗಳು ಕೂಡ ಈ ಶಿಲೆಯಮೇಲೆ ಕೂತು ಗಲೀಜು ಮಾಡುವುದಿಲ್ಲ. ಇದು ಕೂಡ ಆಶ್ಚರ್ಯ ಎನಿಸುತ್ತೆ.  ವಾಸ್ತವದಲ್ಲಿ ಇದು ಸುಳ್ಳು ಎನಿಸಿದರು ಇದು ಕಣ್ಣಿಗೆ ಕಾಣುವ ನಿತ್ಯ ಸತ್ಯ. 


ಬಾಹುಬಲಿ ಶಿಲಾಮೂರ್ತಿಯ ಇತಿಹಾಸ:--
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಶ್ರವಣಬೆಳಗೊಳ ಜೈನರ ಪವಿತ್ರ ಕ್ಷೇತ್ರ. ಇದನ್ನು ಜೈನರ ಕಾಶಿ ಎಂತಲೂ ಕರೆಯುವರು. ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿರುವ ಬಾಹುಬಲಿಯ ಏಕಶಿಲಾ ಮೂರ್ತಿಯನ್ನು ಕ್ರಿ.ಶ. 973 ರಲ್ಲಿ ಚಾವುಂಡರಾಯ ಎಂಬುವನು ಈ ಏಕಶಿಲಾ ವಿಗ್ರಹವನ್ನು ಕೆತ್ತಿಸಿದನು ಎಂದು ಶಿಲಾ ಶಾಸನಗಳಲ್ಲಿ ತಿಳಿದು ಬರುತ್ತದೆ. ಆದರೆ ಕೆಲವು ಸಾಹಿತ್ಯಗಳು ಬಾಹುಬಲಿ ಸಹೋದರ ಭರತನು ಕೆತ್ತಿಸಿದ ಎಂದು ಉಲ್ಲೇಖಿಸುತ್ತವೆ. ಈ ವಿಗ್ರಹವನ್ನು ಕೆತ್ತಿದ ವ್ಯಕ್ತಿ  ಒಂದುಕಡೆ  ಅರಿಷ್ಟನೇಮಿ ಎಂಬುವನು ಇದನ್ನು ಕೆತ್ತಿದನು ಎಂದು,  ಮತ್ತೊಂದು ಕಡೆ ತುಳುನಾಡಿನ ಪ್ರಸಿಧ್ಧ ಶಿಲ್ಪಿ ವೀರಶಂಭು ಕಲ್ಕುಡ ಕೆತ್ತಿದ್ದಾನೆ ಎಂದು ತಿಳಿದುಬರುತ್ತದೆ.

ಬೊಪ್ಪಣ ಕವಿಯ ಪದ್ಯದಲ್ಲಿ  ಬಾಹುಬಲಿಯ ಗುಣಗಳು :--

ಅನುಪಮ ರೂಪನೇ ಸ್ಮರನುದಗ್ರನೇನಿರ್ಜಿತಚಕ್ರಿ ಮತ್ತುದಾ

ರನೆ ನೆರೆಗೆಲ್ದು ಮಿತ್ತ ನಖಿಲೋರ್ವಿಯನತ್ಯಭಿಮಾನಿಯೇ ತಪಃ

ಸ್ಥನುಮೆರಡಂಘ್ರಿಯಿತ್ತೆಳೆಯೊಳಿರ್ದಪುದೆಂಬನನೂನಬೋಧನೇ

ವಿನಿಹತಕರ್ಮಬಂಧನೆನೆ ಬಾಹುಬಲೀಶನಿದೇನುದಾತ್ತನೋ



ಜೈನಧರ್ಮ ಮತ್ತು ಭರತ ಬಾಹುಬಲಿ :--

ಜೈನ ಧರ್ಮವನ್ನು ಸ್ಥಾಪಿಸಿದವರು  ವೃಷಭನಾಥರು. ಇವರಿಗೆ ಸುನಂದ ಮತ್ತು ನಂದಾ ಎನ್ನುವ ಇಬ್ಬರು ಹೆಂಡತಿಯರು ಮತ್ತು ನೂರುಜನ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರು. ಈ  ಬಾಹುಬಲಿಯು ಸುನಂದೆಯ ಮಗ. ವೃಷಭನಾಥರಿಗೆ ಜೀವನದಲ್ಲಿ ವೈರಾಗ್ಯ ಉ೦ಟಾಗಿ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಬೋಧಿಸುತ್ತಿದ್ದರು.

ಮೊದಲ ಮಗನಾದ  ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೋಹಿತರು ಹೇಳಿದರು. ಅದಕ್ಕಾಗಿ ಭರತನು ತನ್ನ ಎಲ್ಲ ತಮ್ಮ೦ದಿರಿಗೆ ಕಾಣಿಕೆಗಳೊಡನೆ ಬರುವ೦ತೆ ಇಲ್ಲವೇ ಯುಧ್ಧಕ್ಕೆ ತಯಾರಾಗುವಂತೆ  ಹೇಳಿಕಳಿಸಿದಾಗ ಬಾಹುಬಲಿಯನ್ನು ಬಿಟ್ಟು  ಇತರರು ರಾಜ್ಯವನ್ನು ಭರತನಿಗೆ ಬಿಟ್ಟು ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು. ಬಾಹುಬಲಿಯು ತ೦ದೆಯ ಹೊರತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆ೦ದು  ಹೇಳಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು. ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ  ಜಟ್ಟಿಕಾಳಗವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆ೦ದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಇದರಿಂದ ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆನಿ೦ತಿತು. ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉ೦ಟಾಗಿ ರಾಜ್ಯವನ್ನು ತೊರೆದು ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು. ಬಹುಕಾಲ ತಪಸ್ಸು ಆಚರಿಸಿದರೂ ಕೇವಲಜ್ಞಾನವನ್ನು ಪಡೆಯಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಭರತನು ಬ೦ದು ಈ ಭೂಮಿಯನ್ನು ನೀನು ಗೆದ್ದು ನನಗೆ ಕೊಟ್ಟಿರುವೆ ಆದ್ದರಿ೦ದ ಮನದಲ್ಲಿ ಈ ಭಾವನೆ ತೊರೆದು ಬಿಡು ಎಂದು ಬೇಡಿದನು. ನಂತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು.

Wednesday 7 February 2018

ವಚನಗಳಲ್ಲಿ ಶಿವರಾತ್ರಿಯ ಉಲ್ಲೇಖ

ವಚನಕಾರರು ತಮ್ಮ ವಚನಗಳಲ್ಲಿ ಶಿವರಾತ್ರಿಯನ್ನು ಹೇಗೆ ಉಲ್ಲೇಖಿಸಿದ್ದಾರೆ ಎಂದು ತಿಳಿಯಲು ಮನಸಾಗಿ ವಚನ ಸಂಚಯದಲ್ಲಿ ಹುಡುಕಿದಾಗ ಸಿಕ್ಕ ವಚನಗಳನ್ನು ಈ ಬ್ಲಾಗ್ನಲ್ಲಿ  ಇರಿಸುವ ಪ್ರಯತ್ನ ಮಾಡಿದ್ದೇನೆ.




ಬಸವಣ್ಣ



ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ.
ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.
ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,
ಕೂಡಲಸಂಗಮದೇವಾ
ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ. 342
--------------------------------------------------------------------------------
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ. 280
--------------------------------------------------------------------------------
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ.
--------------------------------------------------------------------------------
ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು.
ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು.
ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು.
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನು.
ಎನ್ನಲ್ಲಿ ನಡೆುಲ್ಲಾಗಿ, ನಾನು ಭಕ್ತನೆಂತಹೆನಯ್ಯಾ,
ಕೂಡಲಸಂಗಮದೇವಾ 292
--------------------------------------------------------------------------------
ಅಚ್ಚಿಗವೇಕಯ್ಯಾ ಸಂಸಾರದೊಡನೆ ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು. 173
--------------------------------------------------------------------------------
`ಯಸ್ಯ ಕ್ರಿಯಾ ತಸ್ಯ ಭವತಿ' ಎಂದು ಕಟ್ಟಾಚಾರದಲು ಇದ್ದು,
ನಾನು ಅನುಸರಿಸಿಕೊಂಡು ನಡೆವನ್ನಕ್ಕ ಕರ್ಮಕಾಂಡಿಯಲ್ಲ.
ಉತ್ಪತ್ತಿ-ಸ್ಥಿತಿ-ಭೋಗ-ಭುಕ್ತಿ ಕಾಯವುಳ್ಳನ್ನಕ್ಕ ಭಕ್ತಿಕಾಂಡಿಯಲ್ಲ,
ಪರವು ಸಾಧ್ಯವಾಯಿತ್ತೆಂದು ಕ್ರೀಯೆಲ್ಲವ ಮೀರಿ ನಡೆವೆನು.
ಪರತತ್ವವನರಿದೆಹೆನೆಂಬನ್ನಕ್ಕ ಜ್ಞಾನಕಾಂಡಿಯಲ್ಲ.
ಇನ್ನು ಕರ್ಮಕಾಂಡ, ಭಕ್ತಿಕಾಂಡ, ಜ್ಞಾನಕಾಂಡ
ಈ ತ್ರಿವಿಧದಲ್ಲಿ ವಂಚಕನಾದಡೆ
ಈಸು ವಿಧದೊಳಗೆ ಅಂಗವಿಲ್ಲ,
ಮೇಲೆ ಸತ್ಪುರುಷರ ಸಂಗವಿಲ್ಲ,
ಯುಕ್ತಿಯಿಲ್ಲ, ಭಕ್ತಿಯೆಂತಹುದಯ್ಯಾ
ಬಲ್ಲವರ ಬೆಸಗೊಂಡಡೆ ಎನ್ನ ಬಿಮ್ಮು ಕೆಟ್ಟಿಹುದೆಂದು
ಮೆಲ್ಲನೆ ಪ್ರಸಂಗದಿಂದ ತಿಳಿದು ನೋಡುವೆ.
ಕೂಡಲಸಂಗಮದೇವಾ,
ಎನ್ನ ಗುಣವ ನೋಡದೆ
ಶಿವರಾತ್ರಿಯ ಸಂಕಣ್ಣಗಳಿಗೆ ಕರುಣಿಸಿದಂತೆ
ಎನಗೆ ಕೃಪೆಮಾಡಯ್ಯಾ.
--------------------------------------------------------------------------------

ಚೆನ್ನಬಸವಣ್ಣ
ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ_
ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ
ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು
ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ
ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು.
ಅದೇನು ಕಾರಣವೆಂದಡೆ:
ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ
ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ:
ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ,
ಅವನು ದಿನದ ಭಕ್ತನು.
ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ
ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು
ಮಾಡುವನಾಗಿ
ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು
ಸರಿಯೆಂದು ಹೋಲಿಸಿ ನುಡಿವಂಗೆ,
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ,
ಅವ ಭಕ್ತನಲ್ಲ, ಅವಂಗೆ ಅಘೋರನರಕ.
ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ
ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ.
ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ
ನಾಯಕನರಕದಲ್ಲಿಕ್ಕುವನು
--------------------------------------------------------------------------------

ಸೋಮವಾರ ಮಂಗಳವಾರ ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ?
ದಿನ ಶ್ರೇಷ*ವೋ ಲಿಂಗ ಶ್ರೇಷ*ವೋ?
ದಿನ ಶ್ರೇಷ*ವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು.
ಸೋಮೇ ಭೌಮೇ ವ್ಯತೀಪಾತೇ ಸಂಕ್ರಾಂತಿಶಿವರಾತ್ರಯೋಃ
ಏಕಭಕ್ತೋಪವಾಸೇನ ನರಕೇ ಕಾಲಮಕ್ಷಯಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂಥವರ ಮುಖವ ನೋಡಲಾಗದು.
--------------------------------------------------------------------------------

ಸಿದ್ಧರಾಮೇಶ್ವರ
ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು
ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಂಗಕ್ಕೆ.
--------------------------------------------------------------------------------
ಮುಕ್ತಾಯಕ್ಕ
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ. 
--------------------------------------------------------------------------------

ಮೂರುಸಾವಿರ ಮುಕ್ತಿಮುನಿ
ಸಚ್ಚಿದಾನಂದ ಬ್ರಹ್ಮೋಪದೇಶ ಭಕ್ತಮಹೇಶ್ವರರು
ಪರಮಪಾತಕಸೂತಕಂಗಳ ಬಾಹ್ಯಾಂತರಂಗದಲ್ಲಿ ಹೊದ್ದದೆ,
ಸತ್ಯಶರಣರು ಮಾಡುಂಡುದೊಂದು ಕಾಯಕ,
ಬೇಡುಂಡುದೊಂದು ಕಾಯಕದಿಂದ ಗಳಿಸಿದಂಥ ಪದಾರ್ಥಗಳ,
ಗುರುಚರಪರಸ್ಥಿರಕ್ಕೆ ಷಟ್‍ಸ್ಥಲಸಂಬಂಧಗಳಿಂದ,
ಷಡ್ವಿಧಮಂತ್ರಗಳ ಸೊಮ್ಮಿನಿಂ ಸಂತೃಪ್ತರಾಗಿರ್ಪುದು.
ಆ ನಿಲುಕಡೆಯೆಂತೆಂದಡೆ :
ಶ್ರುತಿಗುರುಸ್ವಾನುಭವ ಸಾಕ್ಷಿಯಾಗಿ,
ಶ್ರೀಗುರುಲಿಂಗಜಂಗಮವೆ ಪರಾತ್ಪರವೆಂದು ಕಂಡು,
ಷಡುಸ್ಥಲಮಾರ್ಗವಿಡಿದು, ತನ್ನ ನಿಜವ ತಾನರಿಯದೆ,
ಭವಿಶೈವ ಬ್ಥಿನ್ನ ಕರ್ಮಿಗಳಂತೆ ಭಾವಭ್ರಮೆಗೆಟ್ಟು,
ಹೊಲಬುದಪ್ಪಿ, ಭೋಗಾಪೇಕ್ಷಿತರಾಗಿ,
ಹಲವು ಶಾಸ್ತ್ರೋಪದೇಶವಿಡಿದು,
ಕಾಶಿ ರಾಮೇಶ್ವರ ಕಂಚಿ ಕಾಳಹಸ್ತಿ ಪಂಪಾಕ್ಷೇತ್ರ
ಗೋಕರ್ಣ ಶ್ರೀಶೈಲಾದಿಯಾದ ತೀರ್ಥಯಾತ್ರೆ,
ವೀರಣ್ಣ ಬಸವಣ್ಣ ಮಲ್ಲಣ್ಣ ಹಾವಿಗೆ ದಂಡಾಗ್ರ ಗಿಳಿಲು ಶಂಖ
ಭಸ್ಮಗುಂಟಿಕೆ ತೀರ್ಥದಗುಂಬ ಹಾದಿಬೆನವ ಹಳ್ಳದ ಬೆನವ ವಾಸರದಯ್ಯ
ವಿನಾಯಕ ಶಕ್ತಿ ಗಣೇಶ ಚಂಡಿ ಚಾಮುಂಡಿಯಲ್ಲಿ
ಏಕನಾತಿ ಹಿರಿಹೊಳೆ ಜಟ್ಟಿಂಗ ತೆಪ್ಪದಾರತಿ ಪಂಚಪಾಂಡವರು
ಬನ್ನಿಮಹಾಂಕಾಳಿ ತುಳಸಿ ಬಿಲ್ವವೃಕ್ಷ
ಸಮಾದ್ಥಿ ಗದ್ದುಗೆ ಪುರಾಣ ವಚನಾರ್ಥಪುಸ್ತಕ
ಲೆಕ್ಕದ ಓಹಿ ಕತ್ತಿ ಕಂಡೇಪೂಜೆ, ಊರಬೀರ ಪೀರ ಗೋರಿ ಸತ್ತವರ ತಿಥಿ
ಚಿತ್ತಹೊಲೆ ಕರ್ಮದ ಗಂಗೆ ಗುಗ್ಗುಳ ಗೌರೀನೋಂಪಿ ದೀಪಹರಕೆ ಪೂಜೆ
ಕರಿಯಸೀರೆ ಊರ ಮಾರಿದೇವತೆ ಅಂಬಲಿ ಮಜ್ಜಿಗೆ ಕುಂಭ ಹೊಸ್ತಲ
ಮದುವೆಯಕಂಭ ಕುಂಭ ಸರಕಿನಗಂಟು
ಮಹತ್ವ ಮೆರೆದವರ ಪಾದಮುದ್ರೆ ಕಡೆಯಾದವಕ್ಕೆ,
ತನ್ನ ಕಾಯ ವಾಚ ಮನದಲ್ಲಿ ಹೊಳೆದು,
ಪಿತ-ಮಾತೆ ಸತಿ-ಸುತ ಒಡಹುಟ್ಟಿದವರು ಸೇವಕ ಕಡೆಯಾದವರಿಂದೆ
ತನ್ನ ಮನೆಯಲ್ಲಿ ಮಾಡಿದ ಎಡೆ
ವಾರಮೃತ್ಯೋದಕ, ಪಾದೋದಕಸಂಬಂಧವಾದ,
ವಿಭೂತಿ-ಗಂಧಾಕ್ಷತೆ-ಪುಷ್ಪ-ಪತ್ರಿ ಧೂಪ-ದೀಪ ಹಣ್ಣು-ಕಾಯಿ
ವಸ್ತ್ರಾಭರಣ-ಪಂಚಕಳಸ ಕಾಣಿಕೆ ಮೊದಲಾದ ಬ್ಥಿನ್ನವ
ಕರ್ಮಕ್ರಿಯಾಚಾರಲಿಂಗಬಾಹ್ಯರಾದ
ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿ
ಯೋಗಿ-ಜೋಗಿ ಶ್ರವಣ-ಸನ್ಯಾಸಿ ಯತಿ-ವ್ರತಿ ಮನು-ಮುನಿ
ಗರುಡ-ಗಂಧರ್ವ ಯಕ್ಷ-ರಾಕ್ಷಸ ಸಿದ್ಧ-ಸಾಧ್ಯರುಪದೇಶವಿಡಿದು
ಚರಲಿಂಗೋದಯಘನಪಾದತೀರ್ಥವರ್ಪಿಸಿ,
ನೈವೇದ್ಯ ಮಾಡಿಸುವಂಥಾದ್ದೆ ಅನಾಚಾರ.
ಇದೇ ಭವಿಮಾಟಕೂಟ ಅಸತ್ಯದ ನಡೆನುಡಿಯ ವಿಚಾರದ ಪ್ರಥಮಪಾತಕ.
ಇದಕ್ಕೆ ಹರನಿರೂಪ ಸಾಕ್ಷಿ :
``ಶಿವಾಚಾರಸುಸಂಪನ್ನಃ ಕೃತ್ವ್ದಾನ್ಯದೈವಸ್ಯ ಪೂಜನಂ |
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ |
ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ||
ತದ್ದಿನಂ ದಿನದೋಷೇಣ ಶೋಣಿತಂ ಸುರಾಮಾಂಸಯೋಃ |
ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ ||
ಸೌಮೇ ಭೌಮೇ ವ್ಯತಿಪಾತೇ ಸಂಕ್ರಾಂತಿಶಿವರಾತ್ರಿಯೋ |
ಶೈವಕರ್ಮೋಪವಾಸಿನಾಂ ನರಕೇ ಕಾಲಮಕ್ಷಯಂ ||
ಕಾರ್ತೀಕಮಾಘಶ್ರಾವಣ ಶೈವಪೂಜಾವಿಶೇಷತಃ |
ವೀರಶೈವಸ್ತಥಾ ಕೃತ್ವಾ ಸನ್ತಶ್ಟ ಪ್ರಾಕೃತೈಃ ಸಮಾಃ ||
ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ |
ಜಂಗಮಾರ್ಪಿತನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವದಾ ||
ಸತ್ಪಾತ್ರದತ್ತವಿತ್ತಸ್ಯ ತದ್ಧನಂ ಸ್ವಧನಂ ಸುಖಂ |
ಅಪಾತ್ರದತ್ತ ವಿತ್ತಸ್ಯ ತದ್ಧನಂ ಸ್ವಸುಖಂ ಭವೇತ್ ||
ಚರಸ್ಯ ಗಮನೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ |
ಅನ್ಯಗೃಹಂ ಗಮಿಷ್ಯಂತಿ ಸದ್ಯೋ ಗೋಮಾಂಸಭಕ್ಷಣಮ್ ||
ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ |
ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಬಹುಲಿಂಗಪೂಜಕಸ್ಯ ಬಹುಭಾವಗುರುಸ್ತಥಾ |
ಬಹುಪ್ರಸಾದಂ ಭುಂಜಂತಿ ವೇಶ್ಯಾಪುತ್ರಸ್ತಥೈವ ಚ ||
ಅಭಕ್ತಜನಸಂಗಶ್ಚ ಮಂತ್ರಸ್ಯ ಚ ಆಗಮಃ |
ಅನ್ಯದೈವಪರಿತ್ಯಾಗಃ ಲಿಂಗಭಕ್ತಸ್ಯ ಲಕ್ಷಣಂ ||
ಲಿಂಗಧಾರಕಭಕ್ತಾನಾಂ ಲಿಂಗಬಾಹ್ಯಸತೀಸುತಾಃ |
ಆಲಿಂಗಿತಾ ಚುಂಬಿತಾಶ್ಚ ರೌರವಂ ನರಕಂ ವ್ರಜೇತ್ ||''
ಇಂತೆಂಬ ಹರಗುರುವಾಕ್ಯಪ್ರಮಾಣವದಾಗಿ,
ಸದ್ಭಕ್ತಶರಣಗಣಾರಾಧ್ಯರು ಭೂಪ್ರತಿಷ್ಠಾದಿಗಳ ಹೊದ್ದಿದಡೆ,
ಭವಬಂಧನವಪ್ಪದು ತಪ್ಪದು.
ಅದು ಕಾರಣವಾಗಿ ಗುರುಮಾರ್ಗಿಕರು ಹೊದ್ದದೆ,
ಭವಸಾಗರವ ದಾಂಟಿ, ನಿರ್ಧರದಿಂದಿಪ್ಪುದೊಂದು
ನರಗುರಿಗಳ ಪ್ರಥಮಪಾತಕನಿರಸನ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------------------------------------------------------------------------

ಕುಷ್ಟಗಿ ಕರಿಬಸವೇಶ್ವರ
ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ
ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ
ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ
ಚಿಕ್ಕಯ್ಯ ಡೋಹರ ಕಕ್ಕಯ್ಯ
ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ
ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ
ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ
ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ
ಶರಣು ಶರಣಾರ್ಥಿ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
--------------------------------------------------------------------------------


ಹಾವಿನಹಾಳ ಕಲ್ಲಯ್ಯ
ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ.
ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ,
ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ
ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ?
ಆಗಮವಿದ್ಥಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ.
ಆದ ಕೇಳಲಾಗದು ಭ್ರಾಂತು ಬೇಡ.
ಭಾವಮೂರುತಿ ಬಲ್ಲ ಪ್ರಮಾಣವಿದೆ.
ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ.
ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ?
ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ.
ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ,
ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ.
ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ.
--------------------------------------------------------------------------------

ಕಾಡಸಿದ್ಧೇಶ್ವರ
ಇಂತಪ್ಪ ತ್ರಿವಿಧಾಚರಣೆಯಲ್ಲಿ ಬ್ಥಿನ್ನಜ್ಞಾನಿಗಳಾಗಿ
ಬ್ಥಿನ್ನ ಕ್ರಿಯಗಳಾಚರಿಸಿ,
ಬ್ಥಿನ್ನಭಾವ ಮುಂದುಗೊಂಡು ವ್ರತವನಾಚರಿಸುವ
ಅಜ್ಞಾನಿಗಳಾದ ಜೀವಾತ್ಮರಿಗೆ
ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ ?
ಮತ್ತೆಂತೆಂದೊಡೆ :
ಸುಜ್ಞಾನೋದಯವಾಗಿ ಸಕಲಪ್ರಪಂಚ ನಿವೃತ್ತಿಯ ಮಾಡಿ,
ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವಾಗಿ
ಸರ್ವಾಂಗಲಿಂಗಮಯ ತಾನೆಂದು ತಿಳಿದುನೋಡಿ,
ಅಂತಪ್ಪ ಘನಮಹಾಲಿಂಗ ಇಷ್ಟಬ್ರಹ್ಮವನು
ತನುವಿನಲ್ಲಿ ಸ್ವಾಯತವ ಮಾಡಿ,
ಆ ತನುಪ್ರಕೃತಿಯನಳಿದು
ಆ ಇಷ್ಟಲಿಂಗದ ಸತ್ಕ್ರಿಯವನಾಚರಿಸುವುದೇ
ದಿನಚರಿ ವಾರ ಸೋಮವಾರವ್ರತವೆಂಬೆ.
ಅಂತಪ್ಪ ಇಷ್ಟಬ್ರಹ್ಮದ ಚಿತ್ಕಲಾಸ್ವರೂಪವಾದ
ನಿಷ್ಕಲಪ್ರಾಣಲಿಂಗವನು ಮನದಲ್ಲಿ ಸ್ವಾಯತವಮಾಡಿ,
ಆ ಮನೋಪ್ರಕೃತಿಯನಳಿದು ಆ ನಿಷ್ಕಲ ಪ್ರಾಣಲಿಂಗದ
ಸುಜ್ಞಾನಕ್ರಿಯಗಳನಾಚರಿಸುವುದೇ
ದ್ವಾದಶಮಾಸದೊಳಗೆ ಶ್ರೇಷ್ಠವಾದ ಶ್ರಾವಣಮಾಸದವ್ರತವೆಂಬೆ.
ಅಂತಪ್ಪ ಇಷ್ಟಬ್ರಹ್ಮಾನಂದಸ್ವರೂಪವಾದ
ನಿರಂಜನಭಾವಲಿಂಗವನು -
ಧನವೆಂದಡೆ ಆತ್ಮ.
ಅಂತಪ್ಪ ಆತ್ಮನಲ್ಲಿ ಸ್ವಾಯತವ ಮಾಡಿ,
ಆ ಆತ್ಮಪ್ರಕೃತಿಯನಳಿದು, ಆ ನಿರಂಜನ ಭಾವಲಿಂಗದ
ಮಹಾಜ್ಞಾನಾಚರಣೆಯನಾಚರಿಸುವುದೇ
ದ್ವಾದಶಮಾಸ, ದ್ವಾದಶ ಚತುರ್ದಶಿ,
ದ್ವಾದಶ ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ
ಶಿವರಾತ್ರಿಅಮವಾಸೆಯ ವ್ರತವೆಂಬೆ.
ಇಂತೀ ತ್ರಿವಿಧಲಿಂಗ ಮೊದಲಾದ ಚಿದ್ಘನಲಿಂಗವು
ತನ್ನ ಸರ್ವಾಂಗದಲ್ಲಿ ಸ್ವಾಯತವುಂಟೆಂದು
ಶ್ರೀಗುರುಮುಖದಿಂ ತಿಳಿಯದೆ ಲಿಂಗವಿರಹಿತರಾಗಿ,
ಬಾಹ್ಯದ ಕ್ರಿಯೆಗಳ ಪಿಡಿದು ವ್ರತವನಾಚರಿಸುವುದೆಲ್ಲ
ಮಾಯಾವಿಲಾಸ ಭವದ ಬಟ್ಟೆ ಎಂದು ತಿಳಿಯದೆ
ಭವಭಾರಿಗಳಾಗಿ, ಭವಕ್ಕೆ ಭಾಜನವಾಗಿ ಕೆಟ್ಟು
ಮನು ಮುನಿ ದೇವ ದಾನವರು ಮಾನವರು ಮೊದಲಾದ
ಸಕಲ ಲೋಕಾದಿಲೋಕಂಗಳು ತಮ್ಮ ನಿಲುವು ತಾವಾರೆಂಬುದನ್ನರಿಯದೆ
ಇದಿರಿಟ್ಟು ಕೆಟ್ಟುಪೋದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
--------------------------------------------------------------------------------

ಸೊಡ್ಡಳ ಬಾಚರಸ
ವೇದದವರನೊಲ್ಲದೆ ನಮ್ಮ ಮಾದಾರ ಚನ್ನಯ್ಯಂಗೊಲಿದ.
ಶಾಸ್ತ್ರದವರನೊಲ್ಲದೆ ಶಿವರಾತ್ರಿಯ ಸಂಕಣ್ಣಂಗೊಲಿದ.
ಆಗಮದವರನೊಲ್ಲದೆ ತೆಲುಗುಜೊಮ್ಮಯ್ಯಂಗೊಲಿದ.
ಪುರಾಣಕರ್ಮಿಗಳೆಂಬ ವಿಶಿಷ್ಟಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ.
ಅಣ್ಣ ಕೇಳಾ ಸೋಜಿಗವ !
ದಾಸದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ,
ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು
--------------------------------------------------------------------------------



ಕಾಡಸಿದ್ಧೇಶ್ವರ
ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಮಾಘಮಾಸದ ಚತುರ್ದಶಿದಿವಸ
ಒಂದೊತ್ತು ಉಪವಾಸವ ಮಾಡಿ,
ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು
ಸಾಯಂಕಾಲಕ್ಕೆ ಸ್ನಾನವ ಮಾಡಿ,
ಜಂಗಮವ ಕರತಂದು ಅರ್ಚಿಸಿ,
ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ,
ಏಕಾರತಿ ಪಂಚಾರತಿಗಳಿಂದ ಪೂಜಿಸಿ,
ಪಾದೋದಕವ ಸೇವಿಸಿ,
ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು
ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು
ಮೊದಲಾದ ಫಲಹಾರ
ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ,
ಬುಂದೆ, ಲಡ್ಡು ಮೊದಲಾದ ಫಲಹಾರ.
ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು,
ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ
ಅಂಗಕ್ಕೆ ಗಡಣಿಸಿಕೊಂಡು,
ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ,
ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು
ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು
ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು
ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ,
ಸ್ನಾನವ ಮಾಡಿ ಬಂದು ಜಂಗಮವ ಕರಿಸಿ,
ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ,
ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು
ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ.
ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
--------------------------------------------------------------------------------

ಉರಿಲಿಂಗಪೆದ್ದಿ
ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ
ಋಕ್‍ಯಜುಸ್ಸಾಮಾಥರ್ವಣದಲ್ಲಿ ಅಂತರ್ಗತವಾಗಿಹ
ಶ್ರೀರುದ್ರ, ಪಂಚಬ್ರಹ್ಮ, ಶ್ವೇತಾಶ್ವತರ, ಬ್ರಹದಾರಣ್ಯಕ,
ಕೇನ, ಈಶ, ಜಾಬಾಲ, ಗರ್ಭ, ಕಾಲಾಗ್ನಿರುದ್ರ, ವಾಜಸನೇಯ,
ಶಿವಸಂಕಲ್ಪ, ಬ್ರಹ್ಮಬಿಂದು, ಕಾತ್ಯಾಯನ, ಕಣ್ವ
ಇತ್ಯಾದಿ ನಿಖಿಲೋಪನಿಷತ್ತುಗಳನ್ನು ಪ್ರತಿಪಾದಿಸಿ ನೋಡಲು,
ನಿತ್ಯಶುದ್ಧ ನಿರ್ಮಲಪರಶಿವನನ್ನು
ಸತ್ಯಶುದ್ಧ ಶಿವಾಚಾರಸಂಪನ್ನಭಕ್ತರನಲ್ಲದೆ
ವಿಸ್ತರಿಸಿ ಸ್ತುತಿಗೈದುದಿಲ್ಲ. ಅದಕ್ಕೆ ಶಪಥ,
ಆ ವೇದಪುರಷರ ಚಿತ್ತವೇ ಸಾಕ್ಷಿ.
ಶಿವನ ಶರಣರು ವಾಙõïಮಾನಸಾಗೋಚರರು ಎಂದು ಹೇಳುತ್ತಲಿದೆ ಶ್ರುತಿ.
ಅಖಿಲಬ್ರಹ್ಮಾಂಡಂಗಳಿಗೆ ಪಿತಮಾತೆಯಹ ಶಿವನಲ್ಲಿ
ಶಿವನ ಶರಣನು ಅವಿರಳನೆಂಬುದಕ್ಕೆ
`ಯಥಾ ಶಿವಸ್ತಥಾ ಭಕ್ತಃ' ಎಂಬ ವೇದವಾಕ್ಯವೇ ಪ್ರಮಾಣ.
`ನಾಭ್ಯಾ ಅಸೀದಂತರಿಕ್ಷಂ ಶೀಷ್ರ್ಣೋ್ಞ್ಯಃ ಸಮವರ್ತತ' ಎಂಬ ಶ್ರುತಿ,
ಸಕಲ ಬ್ರಹ್ಮಾಂಡಕೋಟಿಗಳು ಶಿವನ ನಾಭಿಕೂಪದಲ್ಲಿ
ಅಡಗಿಹವೆಂದು ಹೇಳಿತ್ತು.
`ಭಕ್ತಸ್ಯ ಹೃತ್ಕಮಲಕರ್ಣಿಕಾಮಧ್ಯಸ್ಥಿತೋ[s]ಹಂ ನ ಸಂಶಯಃ ಎಂಬ
ಶ್ರುತಿ,
ಅಂತಹ ಶಿವನು ಸದ್ಭಕ್ತನೊಳಗಡಗಿಹನೆಂದು ಹೇಳಿತ್ತು.
`ಅಘೋರೇಭ್ಯೋ[s]ಥ ಘೋರೇಭ್ಯೋ ಘೋರಘೋರತರೇಭ್ಯಃ
ಸರ್ವೇಭ್ಯಃ ಸರ್ವಶರ್ವೆರಭ್ಯೋ ನಮಸ್ತೆ ಅಸ್ತು ರುದ್ರರೂಪೇಭ್ಯಃ ಎಂಬ
ಶ್ರುತಿ,
ಶಿವನ ಅಘೋರಮೂರ್ತಿಯ ನಿತ್ಯತೇಜೋಮೂರ್ತಿಯೆಂದು ಹೇಳಿತ್ತು.
ಜ್ಯೋತಿರ್ಲಿಂಗತ್ವಮೇವಾರ್ಯೇ ಲಿಂಗೀ ಚಾಹಂ ಮಹೇಶ್ವರಿ
ತದೇತದವಿಮುಕ್ತಾಖ್ಯಂ ಜ್ಯೋತಿರಾಲೋಕ್ಯತಾಂ ಪ್ರಿಯೇ ಎಂಬ ವಾಕ್ಯ,
ಶರಣಸತಿ ಲಿಂಗಪತಿಯಹ ಶಿವನ ಶರಣನೇ ಜ್ಯೋತಿರ್ಲಿಂಗವೆಂದು ಹೇಳಿತ್ತು.
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ಎಂಬ ಶ್ರುತಿ,
ಶಿವಧ್ಯಾನ ಸ್ತುತಿ ನಿರೀಕ್ಷಣೆ ಪೂಜೆಯಿಂದಲ್ಲದೆ
ಜನ್ಮ ಮೃತ್ಯು ಜರಾ ವ್ಯಾಧಿ ಹಿಂಗಿ
ಪರಮಸುಖ ಪರಮನಿರ್ವಾಣವಾಗದೆಂದು ಹೇಳಿತ್ತು.
`ಅಪವರ್ಗಪದಂ ಯಾತಿ ಶಿವಭಕ್ತೋ ನ ಚಾಪರಃ' ಎಂಬ ವಾಕ್ಯ,
ಮುಕ್ತಿ ಶಿವಭಕ್ತಂಗಲ್ಲದೆ ಮತ್ತೊಬ್ಬರಿಗಿಲ್ಲವೆಂದು ಹೇಳಿತ್ತು.
`ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಂ
ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ತೇ ನಮಃ' ಎಂಬ ಶ್ರುತಿ,
ಪರಬ್ರಹ್ಮವೆಂಬುದು ಶಿವನಲ್ಲದೆ
ಬೇರೆ ಬೇರೆ ಮತ್ತೊಂದು ವಸ್ತುವಿಲ್ಲವೆಂದು ಹೇಳಿತ್ತು.
`ಬ್ರಹ್ಮಣಿ ಚರತಿ ಬ್ರಾಹ್ಮಣಃ' ಎಂಬ ವಾಕ್ಯ,
ಅಂತಹ ಬ್ರಹ್ಮವ ಚಿಂತಿಸಿ ನಿರೀಕ್ಷಿಸಿ ಸ್ತುತಿಸಿ ಪೂಜಿಸಿ
ಪ್ರಸನ್ನಪ್ರಸಾದವ ಪಡೆವ ಸದ್ಭಕ್ತನೇ ಮಹಾಬ್ರಾಹ್ಮಣನೆಂದು ಹೇಳಿತ್ತು.
`ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತಃ ಪಾತ್
ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂಬ ಶ್ರುತಿ, ಸಕಲ
ಜೀವರ ಶಿವನೆಂದು ಹೇಳಿತ್ತು.
`ಭಕ್ತಸ್ಯ ಚೇತನೋ ಹ್ಯಹಂ' ಎಂಬ ವಾಕ್ಯ,
ಶಿವಭಕ್ತಂಗೆ ನಾನೇ ಚೈತನ್ಯನೆಂದು ಹೇಳಿತ್ತು.
ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ
ಶಿವಭಕ್ತನ ಶ್ರೀಮೂರ್ತಿಗಿನ್ನು ಸರಿಯುಂಟೆರಿ
`ವಾಚೋತೀತಂ ಮನೋತೀತಂ ಭಾವಾತೀತಂ ಪರಂ ಶಿವಂ
ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ'
ಇಂತಪ್ಪ ಶಿವನಲ್ಲಿ ಅವಿನಾಭಾವರಪ್ಪ ಶರಣರ ಕಂಡಡೆ ಕರ್ಮಕ್ಷಯ,
ನೋಡಿದಡೆ ಕಣ್ಗೆ ಮಂಗಳತರ ನಿರುಪಮಸುಖ,
ನುಡಿಸಿದಡೆ ಶಿವರಾತ್ರಿ, ಸಂಭಾಷಣೆ ಮಾಡಿದಡೆ
ಜನ್ಮಕರ್ಮಬಂಧನನಿವೃತ್ತಿ, ಜೀವನ್ಮುಕ್ತನಹ,
ಇದು ನಿತ್ಯ ಕೇಳಿರಣ್ಣಾ.
ದರ್ಶನಾತ್ ಶಿವಭಕ್ತನಾಂ ಸಕೃತ್ಸಂಭಾಷಣಾದಪಿ
ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ
ಎಂದು ನಾರದಬೋಧೆಯಲ್ಲಿ ಈಶ್ವರ ಹೇಳಿದನು.
ಇಂತಪ್ಪ ಈಶ್ವರನ ಕಾಣವು ವೇದಂಗಳು.
`ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್'
ಎಂದುದಾಗಿ,
ಇಂತು ವೇದಕ್ಕತೀತನಹಂತಹ ಶಿವನ ಶರಣರ
ಮಾಹಾತ್ಮೆಯ ಹೊಗಳಲ್ಕೆ ವೇದಕ್ಕೆ ವಶವಲ್ಲ,
ಮಂದಮತಿಮಾನವರ ಮಾತಂತಿರಲಿ.
ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎಂಬೆ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------------------------------------------------------------------------



ಜಕ್ಕಣಯ್ಯ
ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ
ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ.
ಅದು ಹೇಗೆಂದಡೆ: ಅರುಹೆಂಬ ಸಮ್ಮಾರ್ಜನೆಯ ಮಾಡಿ,
ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ,
ಸುಜ್ಞಾನವೆಂಬ ರಂಗವಾಲಿಯ ತುಂಬಿ,
ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ,
ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ
ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
--------------------------------------------------------------------------------

ಮೂರುಸಾವಿರ ಮುಕ್ತಿಮುನಿ
ಪರಮಬೆಳಗಿನಿಂದೆಸೆವ
ನಿಜವೀರಶೈವ ಭಕ್ತಜಂಗಮಲಿಂಗ ಘನಗಂಭೀರರು
ಪಂಚಾಭಿಷೇಕ ಮೊದಲಾದ ಅನಂತ ಅಭಿಷೇಕ
ಪತ್ರಿ ಪುಷ್ಪ ಫಲಹಾರ ಪಂಚಕಜ್ಜಾಯ ಪರಮಾನ್ನ ಪಾಯಸ
ಮೊದಲಾದ ಕಟ್ಟಳೆಗಳ ಮಾಡದೆ,
ವಾರ ತಿಥಿ ನಕ್ಷತ್ರ ವ್ಯತಿಪಾತ ವೈಧೃತಿ,
ಚಂದ್ರಸೂರ್ಯಗ್ರಹಣ ಹುಣ್ಣಿಮೆ ಅಮವಾಸ್ಯೆ
ಸತ್ತ ಹೆತ್ತ ಕರ್ಮದ ತಿಥಿಗಳು,
ಕಾರ್ತೀಕ ಮಾಘ ಶ್ರಾವಣ ಶಿವರಾತ್ರಿ ನವರಾತ್ರಿ
ಸಂಕ್ರಾಂತಿ ಕತ್ತಲರಾತ್ರಿ ದಿನರಾತ್ರಿಗಳೆಂಬ
ದಿವಾರ್ಚನೆ ಸಾಮಾನ್ಯದಾರ್ಚನೆ ಮೊದಲಾದ
ಶೈವಜಡಕರ್ಮಗಳ ಹೊದ್ದಲೀಯದೆ,
ಸತ್ಯಶುದ್ಧ ನಡೆನುಡಿಯಿಂದ
ಕೇವಲ ನಿಜಗುರುಲಿಂಗಜಂಗಮಮೂರ್ತಿಗಳ
ಬಂದ ಬರವ ನಿಂದ ನಿಲುಗಡೆಯನರಿದು,
ಅಷ್ಟವಿಧಾರ್ಚನೆ ಷೋಡಶೋಪಚಾರಗಳೊದಗಿದಂತೆ
ನಿಜಾನಂದಭರಿತದಿಂದರ್ಚನಂಗೈದು,
ಪರಶಿವಯೋಗಾನುಸಂಧಾನದಿಂದಾಚರಿಸುವುದೇ
ನಿರವಯಪ್ರಭು ಮಹಾಂತನ ಪ್ರತಿಬಿಂಬರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------------------------------------------------------------------------
.
ಘಟ್ಟಿವಾಳಯ್ಯ
ಕೊಂಬಿನ ಮೇಲಣ ಬೇಡಂಗೆ ಶಿವರಾತ್ರಿಯನಿತ್ತನೆಂಬರು;
ಕಾಳಿದಾಸಂಗೆ ಕಣ್ಣನಿತ್ತನೆಂಬರು;
ಮಯೂರಂಗೆ ಮಯ್ಯನಿತ್ತನೆಂಬರು;
ಬಾಣಂಗೆ ಕಯ್ಯನಿತ್ತನೆಂಬುರು;
ಸಿರಿಯಾಳಂಗೆ ಮಗನನಿತ್ತನೆಂಬರು;
ಸಿಂಧುಬಲ್ಲಾಳರಾಯಂಗೆ ವಧುವನಿತ್ತನೆಂಬರು;
ದಾಸಂಗೆ ತವನಿಧಿಯನಿತ್ತನೆಂಬರು.
ಆರಾರ ಮುಖದಲ್ಲಿ ಇದೇ ವಾರ್ತೆ ಕೇಳಲಾಗದೀ ಶಬ್ದವನು.
ಲಿಂಗವಿತ್ತುದುಳ್ಳಡೆ ಅಚಳಪದವಾಗಬೇಕು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಅದು ನಿಲದ ವಾರ್ತೆ.
--------------------------------------------------------------------------------

ಷಣ್ಮುಖಸ್ವಾಮಿ
ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಶುದ್ಧಶಿವರಾತ್ರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಜಾತ್ರೆ ಉತ್ಸವ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಪರಮಾನಂದದೋಕುಳಿ ತಾನೆ ಕಾಣಿರೊ.
ನಿಚ್ಚ ನಿಚ್ಚ ನಮ್ಮ ಅಖಂಡೇಶ್ವರನ ಶರಣಂಗೆ
ಒಸಗೆ ವೈಭವಂಗಳು ತಾನೆ ಕಾಣಿರೊ.
--------------------------------------------------------------------------------
ಘನಲಿಂಗಿದೇವ
ಲಿಂಗಾಂಗ ಸಂಬಂಧದ ಭೇದವನರಿಯದೆ
ನಾವು ಲಿಂಗಾಗಿಸಂಬಂಧಿಗಳೆಂದು
ಅಂದಚಂದವಾಗಿ ನುಡಿದುಕೊಂಬ
ಕ್ರಿಯಾಭ್ರಾಂತರು ನೀವು ಕೇಳಿರೋ
ಲಿಂಗಾಂಗ ಸಂಬಂಧದ ಉತ್ತರೋತ್ತರದ ನಿರ್ಣಯವ.
ಹೊರಗಣ ಹೂವನ್ನೆ ತಂದು
ಸ್ಥೂಲತನುವಿನ ಮೇಲಿಪ್ಪ ಆಚಾರಲಿಂಗಮಂ ಪೂಜೆಮಾಡಿ
ತನುವ ಸಮರ್ಪಿಸಿ ಬೇಡಿಕೊಂಡು
ಹೊರಗಣ ಹೊನ್ನು ಹೆಣ್ಣು ಮಣ್ಣು ಷಟ್ಕರ್ಮಂಗಳ
ಬಿಟ್ಟುದೇ ಇಷ್ಟಲಿಂಗಪೂಜೆ.
ಒಳಗಣ ಹೂವನ್ನೆ ತಂದು
ಸೂಕ್ಷ ್ಮತನುವಿನ ಮೇಲಿಪ್ಪ ಜಂಗಮಲಿಂಗಮಂ ಪೂಜೆಮಾಡಿ
ಮನವ ಸಮರ್ಪಿಸಿ ಉಪಾವಸ್ಥೆಯಂ ಮಾಡಿ
ಒಳಗಣ ಅಂತಃಕರಣಂಗಳಂ ಸುಟ್ಟುದೇ ಪ್ರಾಣಲಿಂಗಪೂಜೆ.
ಮನೋಮಧ್ಯದೊಳಿಪ್ಪ ಭಾವಪುಷ್ಪವನ್ನೆ ತಂದು
ಕಾರಣತನುವಿನ ಮೇಲಿಪ್ಪ ತೃಪ್ತಿಲಿಂಗಮಂ ಪೂಜೆ ಮಾಡಿ
ಸಂತೋಷವಂ ಸಮರ್ಪಿಸಿ ದೈನ್ಯಂಬಟ್ಟು
ಜ್ಞಾನ ಕ್ರಿಯೆಗಳಳಿದುದೇ ಭಾವಲಿಂಗಪೂಜೆ.
ಈ ಪ್ರಕಾರದ ಲಿಂಗಾಂಗ ಸಾಧಕತ್ವಮಂ
ಶಿವರಾತ್ರಿಯ ಸಂಕಣ್ಣಂಗೊಲಿದಂತೆ
ಎನಗೊಲಿದು ಕರುಣಿಸಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.

--------------------------------------------------------------------------------