Saturday 14 October 2017

ದೀಪಾವಳಿಯ ದೇವೀರಮ್ಮ,,,,, ದೇವೀರಮ್ಮನ ಗುಡ್ಡ

ದೀಪಾವಳಿ ಹಬ್ಬ ಅಂದರೆ ನಮಗೆ ಹಬ್ಬಗಳ ಹಬ್ಬ ಅಂತ ನನಗನ್ನಿಸುತ್ತೆ. ಮನೆಗಳಲ್ಲಿ ಚಿಕ್ಕವರಿಂದ ಹಿಡಿದು ಅಜ್ಜಿ ತಾತನ ವರೆಗಿನ ಎಲ್ಲರಿಗು ಸಂತಸ  ಹುಮ್ಮಸ್ಸು ಕೊಡುವ ಹಬ್ಬ ಎಂತಲೇ ಹೇಳಬಹುದು. ಬೆಳಕಿನ ಹಬ್ಬ. ನಾನು ಈ ಹಬ್ಬಕ್ಕೆ ಹಬ್ಬಗಳ ಹಬ್ಬ ಅಂತ ಯಾಕೆ ಅನ್ನಿಸುತ್ತೆ ಅಂದ್ರೆ ಈ ದೀಪಾವಳಿ ಹಬ್ಬದಲ್ಲಿ  ಬಲೀಂದ್ರ ಪೂಜೆ, ಹಿರಿಯರ ಪೂಜೆ, ಲಕ್ಷ್ಮಿ ಪೂಜೆ, ದೇವೀರಮ್ಮನ ಪೂಜೆ, ಕೆರಕನ ಪೂಜೆ ಹೀಗೆ ಹಲವಾರು ದೇವರುಗಳಿಗೆ ಹಲವಾರು ರೀತಿಯ ಸಿಹಿ ಮತ್ತು ಖಾರದ ತಿಂಡಿಗಳನ್ನು ಮಾಡಿ ಪೂಜೆ ಸಲ್ಲಿಸುವ ವಾಡಿಕೆ ಇದೆ.  ಅದಕ್ಕಾಗಿ ಇದನ್ನು ಹಬ್ಬಗಳ ಹಬ್ಬ ಅಂದರೆ ತಪ್ಪಾಗಲ್ಲ ಅಲ್ವ. ಈ ಎಲ್ಲ ಪೂಜೆಗಳನ್ನ  ಸುಮ್ನೆ ಮಾಡೋಲ್ಲ ಅದೆಲ್ಲದಕ್ಕೂ ಕಾರಣಗಳು ಇವೆ. ಬಲೀಂದ್ರ ಪೂಜೆ ಮಾಡೋದು ಬಲಿ ಚಕ್ರವರ್ತಿಗೆ ಭೂಮಿಗೆ ಸ್ವಾಗತ ಮಾಡುವ ಮತ್ತು ಆತನನ್ನು  ಸಂತಸ ಪಡಿಸಲು ಮತ್ತು ಹಿರಿಯರ ಪೂಜೆ ಮಾಡೋದು ನಮ್ಮ ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲೆಂದು. ಲಕ್ಷ್ಮಿ ಪೂಜೆ ಮಾಡೋದು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಗಿರಲೆಂದು, ಇನ್ನೊಂದು ಈ ದೇವೀರಮ್ಮ ಪೂಜೆ.  ನಾನು ಹಿಂದೆ ಬರೆದಿರುವ ಪೂಜೆಗೆ ನಾನು ಚಿಕ್ಕವಳಿದ್ದಾಗ ಒಂದು ರೀತಿಯ ಸಮಾಧಾನಕರ ಉತ್ತರ ಸಿಗುತ್ತಿತ್ತು ಆದ್ರೆ ಈ ದೇವೀರಮ್ಮನ ಪೂಜೆ ಯಾಕೆ ಮಾಡ್ತೀವಂತ ನಂಗೆ ಗೊತ್ತಿರಲಿಲ್ಲ.  ಈಗ ಸ್ವಲ್ಪ ಅದರ ಬಗ್ಗೆ ಗೊತ್ತಾದ್ದರಿಂದ ಈ ದೇವೀರಮ್ಮ ಪೂಜೆ ಬಗ್ಗೆ ಬರೀತಿದೀನಿ.  ಈ ದೇವೀರಮ್ಮ ಅಂದ್ರೆ ಪಾರ್ವತಿ.  ಪಾರ್ವತಿಯ ಹಲವು ಅವತಾರಗಳಲ್ಲಿ ಈ ದೇವೀರಮ್ಮನ ಅವತಾರವು ಒಂದು.



ದೀಪಾವಳಿಯಂದು ಮನೆಗಳಲ್ಲಿ ದೇವೀರಮ್ಮನ ಪೂಜೆ :-  ನಮ್ಮ ಊರಿನ ಕಡೆ ಎಲ್ಲರ ಮನೆಗಳಲ್ಲಿ ದೀಪಾವಳಿ ಹಬ್ಬದಂದು ಎಳ್ಳಿನ ಚಿಗಣಿ ಮತ್ತು ಅಕ್ಕಿಯಿಂದ ಮಾಡಿದ  ತಮ್ಮಟದಲ್ಲಿ  ಎರೆಡೆರೆಡು ದೀಪಗಳ  ಆಕಾರವನ್ನು ಮಾಡಿ ಎಣ್ಣೆಯ ಬದಲು ಹಾಲನ್ನ ಮೀಸಲು ಕಟ್ಟಿ ಕಾಯಿಸಿದ ತುಪ್ಪವನ್ನು ಹಾಕಿ ಮದ್ಯದಲ್ಲಿ ಕಡ್ಲೆ ಬತ್ತಿಯನ್ನ ಇಟ್ಟು ಹೂ ಹಣ್ಣು ಕಾಯಿಗಳನ್ನ ಇಟ್ಟು ಪೂಜಿಸಿ ನಂತರ ಉತ್ತರ ದಿಕ್ಕಿಗೆ ಮುಖ ಮಾಡಿ ದೇವೀರಮ್ಮನಿಗೆ ಬೆಳಗುತ್ತಾರೆ. ವರ್ಷದಲ್ಲಿ ಒಮ್ಮೆ ಈ  ರೀತಿ ಪೂಜೆ ಮಾಡಿದರೆ ದೇವೀರಮ್ಮ ನಮ್ಮನ್ನ ವರ್ಷವಿಡೀ ಕೈ ಹಿಡಿದು ಕಾಪಾದುತ್ತಾಳೆ ಅನ್ನೋ ನಂಬಿಕೆ ನಮ್ಮೂರುಗಳಲ್ಲಿ ಇದೆ.



ಈ ಮೇಲಿನ ಪೂಜೆ ಬಗ್ಗೆ ಹೇಳಿದ ಮೇಲೆ ಈ ದೇವೀರಮ್ಮ ಯಾರು ಅನ್ನೋ ಪ್ರಶ್ನೆ ನಮ್ಮ ತಲೆಯಲ್ಲಿ ಬರೋದು ಸಹಜ ಅಲ್ವ. ಹೌದು ನಂಗು ಈ ಪ್ರಶ್ನೆ ನಾನು ಚಿಕ್ಕವಳಿದ್ದಾಗ ಹಬ್ಬದ ದಿನ ಬರ್ತಿತ್ತು. ಅಲ್ಲದೆ ನಮ್ಮೂರಿನ ಕಡೆ ದೀಪಾವಳಿಯಲ್ಲಿ  ದೇವೀರಮ್ಮನ ಗುಡ್ಡಕ್ಕೆ ಹೋಗಿ ದೇವೀರಮ್ಮನ ದರ್ಶನ ಮತ್ತು ದೀಪೋತ್ಸವ ನೋಡುವ ಪಧ್ಧತಿ ಇದೆ. ಮನೆಗಳಲ್ಲಿ ಈ  ಚಿಗಣಿ ಮತ್ತು ತಮ್ಟದ ದೀಪಗಳನ್ನ ಬೆಳಗುವ ಮೂಲಕ  ಆ ಬೆಟ್ಟಕ್ಕೆ, ದೆವೀರಮ್ಮನಿಗೆ ಇಲ್ಲಿಂದಲೇ ಪೂಜೆ ಸಲ್ಲಿಸುತ್ತೇವೆ ಅನ್ನೋ ನಂಬಿಕೆ ನಮ್ಮಲ್ಲಿ ಇದೆ.  ಆಗ ಅದರ ಬಗ್ಗೆ ಯೋಚಿಸೋದಕ್ಕಿಂದ ಪೂಜೆ ಮುಗಿದು ಹೊಟ್ಟೆ ತುಂಬಿಸಿಕೊಳೋ  ಕಡೆ,  ಹೊಸ ಬಟ್ಟೆ, ಪಟಾಕಿಗಳ  ಕಡೆ ನನ್ನ ಗಮನ ಇರ್ತಿತ್ತು.  ಯಾರ್ಯಾರು ಮನೇಲಿ ಎಂತೆಂತಾ ಪಟಾಕಿ ಹೊಡಿತಾರೆ ಅನ್ನೋ ಕಡೆ ಜಾಸ್ತಿ ಸಡಗರ ಇರ್ತಿತ್ತು. 

ದೇವೀರಮ್ಮನ ಗುಡ್ಡದ ಕಥೆ :- 

ಈ ದೇವೀರಮ್ಮನ ಗುಡ್ಡ ಇರುವುದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನ ಗಿರಿ ಸಾಲುಗಳಲ್ಲಿ ಚಂದ್ರ ದ್ರೋಣ ಪರ್ವತಕ್ಕೆ ಅಂಟಿಕೊಂಡಿದೆ.  ಈ  ದೇವೀರಮ್ಮ ಪಾರ್ವತಿಯ ಅವತಾರಗಳಲ್ಲಿ ಒಂದು ಅವತಾರವಾಗಿದೆ. ಮಹಿಷಾಸುರನ ಸಂಹಾರದ ನಂತರ ತನ್ನ ವಿಶ್ವ ರೂಪಗಳನ್ನು ಜಗತ್ತಿಗೆ ತೋರಿಸಿ ಶಾಂತ ರೂಪ ತಳೆದು ಈ ದೇವೀರಮ್ಮನ ಅವತಾರದಲ್ಲಿ ಈ ದೇವೀ ಗುಡ್ಡಕ್ಕೆ ಬಂದು ನೆಲೆಸುತ್ತಾಳೆ  ಎಂಬ ನಂಬಿಕೆ ಇದೆ. 

ಇನ್ನೊಂದು ಕಥೆಯಲ್ಲಿ ಆಗಿನ ಕಾಲದಲ್ಲಿ ಅಲ್ಲಿ ಇದ್ದಂಥಹ ಸಂತರುಗಳಾದ ದತ್ತಾತ್ರೇಯ, ರುದ್ರಮುನಿ, ಮುಳ್ಳಯ್ಯ, ಸೀತಾಲಯ್ಯ, ಗಲ್ಲಹಳ್ಳಿ ಅಜ್ಜಯ್ಯ ಅವರುಗಳು ಈ ದೇವಿಗಿರಿ ಬೆಟ್ಟದಲ್ಲಿ ಬಂದು ನೆಲೆಸಲು ಕೇಳಿಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. 

ನರಕ ಚತುರ್ದಶಿ ಯಂದು ಮಾತ್ರ ಈ ದೇವಿಯ ಗುಡಿಯ ಬಾಗಿಲನ್ನು ತೆರೆದು ಪೂಜೆ ಸಲ್ಲಿಸಲಾಗುತ್ತದೆ. ಅಂದು ಇಲ್ಲಿ ದೀಪೋತ್ಸವ  ನಡೆಯುತ್ತದೆ. ಇದನ್ನ ನೋಡಲು ನಾಡಿನ ಹಲವಾರು ಕಡೆಗಳಿಂದ ಜನರು ಬರುತ್ತಾರೆ. ಹರಕೆ ಇರುವವರು ಚಪ್ಪಲಿಗಳನ್ನ ಹಾಕದೆ ಈ ಬೆಟ್ಟ ಹತ್ತುವರು.


 ದೇವೀರಮ್ಮನ ಗುಡ್ಡದ  ಕೆಳಗೆ ಇರುವ ದೇವೀರಮ್ಮನ ಗುಡಿ :-

















ದೇವೀರಮ್ಮನ ಗುಡ್ಡ :-  2017 ರ 


deveerammanabetta, images,
ದೇವೀರಮ್ಮನ ಗುಡ್ಡ  ಚಿಕ್ಕಮಗಳೂರು ಜಿಲ್ಲೆ:- 


No comments:

Post a Comment