Tuesday 25 April 2017

ಬಸವನಬ್ಬವೋ ಅತ್ವ ಬಸವ ಜಯಂತಿಯೋ?

ಆಡುಮಾತಿನಲ್ಲಿ "ಬಸವನಬ್ಬ" ಅಂತ ಕರಯಲ್ಪಡುವ "ಬಸವಣ್ಣ ಹಬ್ಬ", ಯಾವಾಗಲು ನಮಗೆ ಬೇಸಿಗೆ ರಜೆ (ಏಪ್ರಿಲ್ - ಮೇ ತಿಂಗಳು) ಇರುವಾಗಲೇ ಬರುತಿತ್ತು. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಈ ಬಸವನಬ್ಬ ಎಂದರೆ, ಬೆಳಿಗ್ಗೆ ಎದ್ದು ಮನೆ ಗುಡಿಸಿ-ಸಾರಿಸಿ, ಮನೆ ಹೊರಗಲ್ಲದೆ ಅಡುಗೆ ಮನೆ ಒಲೆಗೆ ರಂಗೋಲಿ ಹಾಕಿ, ಹರಿಶಿನ ಕುಂಕುಮ ಬೊಟ್ಟು ಇಟ್ಟು, ಪೂಜೆ ಮಾಡಿ ಅಡುಗೆ ಮಾಡಲು ಶುರು ಮಾಡೋದು. ಇದು ಹೆಣ್ಣು ಮಕ್ಕಳು ಮಾಡುತ್ತಿದ್ದ ಕೆಲಸ. ಗಂಡು ಮಕ್ಕಳು ಮನೆಯಲ್ಲಿ ಇದ್ದ ಹಸು, ಕರು, ಎತ್ತುಗಳಿಗೆ ಮೈ ತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಅವುಗಳಿಗೆ ಪೂಜೆ ಮಾಡೋರು. ಅವತ್ತು ಎತ್ತು ಮತ್ತು ಹಸುಗಳು ದನಿನ ಮನೆ(ಕೊಟ್ಟಿಗೆ)ಯಿಂದ ನಡುಮನೆವರೆಗೆ ಕರೆದುಕೊಂಡು ಬಂದು ಪೂಜೆ ಮಾಡಿ ಎಡೆ ತಿನ್ನಿಸುತ್ತಿದ್ದರು. ಅವುಗಳ ಕೊರಳಿಗೆ, ಕಾಲಿಗೆ ದಾರ ಕಟ್ಟೋದು. ಗೆಜ್ಜೆ ಕಟ್ಟೋದು ಇವೆಲ್ಲ ನಡೀತಿದ್ವು. ಊರ ಮುಂದಿನ ಬಸವಣ್ಣನ ಗುಡಿಗೆ ಎಣ್ಣೆ-ಬತ್ತಿ-ಹೂ-ಊದುಬತ್ತಿ-ಕರ್ಪೂರದ ಜೊತೆ ಎಡೆಯನ್ನ ಮನೆಯಿಂದ ತೊಗೊಂಡೋಗಿ ಪೂಜೆ ಮಾಡಿಕೊಂಡು ಬರೋರು. ಅವತ್ತಿನ ದಿನ ದನಕರುಗಳಿಗೆ ಹೊಡೆಯುವಂತಿರಲಿಲ್ಲ, ನೇಗಿಲು ಹೂಡುವಂತಿರ್ಲಿಲ್ಲ, ಮುಸುರೆ ಕುಡಿಸುತ್ತಿರಲಿಲ್ಲ. ಇದು ಬಸವನ ಹಬ್ಬದಲ್ಲಿ ಕಟ್ಟು ಬಧ್ಧ ನಿಯಮವಾಗಿತ್ತು.  ನಾನು ಚಿಕ್ಕವಳಿಂದ ನೋಡಿಕೊಂಡು ಬಂದ ಬಸವನ ಹಬ್ಬ ಹಿಂಗಿತ್ತು . ಈಗಲೂ ಊರುಗಳಲ್ಲಿ ಬಸವನಹಬ್ಬ ಆಚರಣೆ ಹೀಗೇ ಇದೆ.




ಒಂದ್ಸಲ, ಈ ಹಬ್ಬ ಯಾಕೆ ಮಾಡ್ತಾರೆ?  ಈ ಹಬ್ಬದ ದಿವ್ಸ ಎತ್ತು, ಹಸುಗಳಿಗೆ ಮಾತ್ರ ಯಾಕೆ ಪೂಜೆ? ಎಮ್ಮೆಗೆ ಯಾಕೆ ಪೂಜೆ ಮಾಡಲ್ಲ? ಅಂತ  ನಮ್ಮ ಅಜ್ಜಿಯನ್ನ ಕೇಳಿದ್ದೆ!. ಆಗ ನಂಗೆ ಸಿಕ್ಕ ಉತ್ತರ ಏನಪಾಂದ್ರೆ, "ಈ ದಿನ ಶಿವನ ವಾಹನ ನಂದಿ ಹುಟ್ಟಿದ್ದಿನ. ನಾವೆಲ್ಲಾ ರೈತರು ಬೇಸಾಯಕ್ಕೆ ಅಂತ ಎತ್ತಿಗೆ ಎಷ್ಟು ಕಷ್ಟ ಕೊಡುತ್ತೀವಿ ತಾನೇ? ಅದಕ್ಕೇ, ಅವನು ಹುಟ್ಟಿದ ದಿನನಾದ್ರೂ ನಾವು ಅವನ ಸೇವೆ ಮಾಡೋಕೋಸ್ಕರ ಈ ಹಬ್ಬ ಮಾಡುತ್ತಾರೆ" ಅಂತ ಅವರ ಅಜ್ಜಿ  ಹೇಳಿದ್ದನ್ನ ನನ್ನಜ್ಜಿ ಗೌರಜ್ಜಿ ನಂಗೆ ಹೇಳಿದಳು. ನಂತರ ನನ್ನ ತಲೇಲಿ ಇನ್ನೊಂದ್ ಪ್ರಶ್ನೆ ಬಂತು. ಮತ್ತೆ ಅಜ್ಜಿ ಕೇಳ್ದೆ. ಇವತ್ತು ಎತ್ತಿನ ಪೂಜೆ, ಎಮ್ಮೆಗೆ ಯಾವತ್ತು  ಪೂಜೆ ಅಂತ? ನನ್ನಜ್ಜಿಗೆ ಕೋಪ ಬಂತು ನೋಡಿ. 'ಮಾರಿ ಹಬ್ಬ ಮಾಡ್ತಾರಲ್ಲ ಅವರನ್ನ ಹೋಗಿ ಕೇಳು'. ಅಂತ ಕೋಪ ಮಾಡ್ಕೊಂಡ್ ಹೇಳಿದ್ರು. ನಾನು ಯಾಕೋ ಇನ್ನು ಮಾತು ಮುಂದುವರೆಸಿದರೆ ಏಟು ಗ್ಯಾರಂಟಿ ಅಂತ ಅಲ್ಲಿಂದ ಕಾಲ್ಕಿತ್ತಿದ್ದೆ!.



ನಾನು ಡಿಗ್ರಿ ಓದೋಕೆ ಅಂತ  ಬೆಂಗಳೂರಿಗೆ ಬಂದಾಗ, ಇಲ್ಲಿ ಆಚರಿಸುವ ಬಸವನಹಬ್ಬ ಬೇರೆಯದೇ ರೀತಿಯಾಗಿತ್ತು. ಸರ್ಕಾರಿ ರಜೆ, ಜಗಜ್ಯೋತಿ ಬಸವಣ್ಣನವರ  ಫೋಟೋ ಅತ್ವ ವಿಗ್ರಹಕ್ಕೆ ಹಾರ ಹಾಕಿ, ಅವರು ಹುಟ್ಟಿದ ದಿನ ಎಂದು "ಬಸವ ಜಯಂತಿ" ಅನ್ನೋ ಹೆಸರಲ್ಲಿ ಆಚರಿಸುವ ಪಧ್ಧತಿ!. ಬಸವಣ್ಣನವರ ಹುಟ್ಟು, ಜೀವನ ಸಾಧನೆ, ಆದರ್ಶಗಳ ನೆನಪು!. ವಚನಗಳ ಸಾರ ಇವುಗಳನ್ನು ಸ್ಮರಿಸಿಕೊಳ್ಳುವ ದಿನ!

ಈ ಬಗ್ಗೆ ವಿಚಾರಿಸೀ ನೋಡಿದಾಗ ತಿಳಿದದ್ದು... ಈ ಎರಡೂ ಆಚರಣಾ ವಿಧಾನಗಳು ಒಂದೇ ದಿನ ಮಾಡ್ತಾರೆ ಅಂತ.  ನಾವು ಹಳ್ಳಿಗಳಲ್ಲಿ ಮಾಡುವ ಬಸವನಹಬ್ಬ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದದ್ದು. ಆದರೆ ಕ್ಯಾಲೆಂಡರ್ನಲ್ಲಿ ನೋಡುವ ಸರಕಾರೀ ಬಸವಜಯಂತಿಯು ಇತ್ತೀಚಿಗೆ ಶುರುವಾದದ್ದು. ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿ ಮತ್ತು 'ಕರ್ನಾಟಕದ ಗಾಂಧಿ' ಎಂದೇ ಹೆಸರಾಗಿರುವ ಹರ್ಡೇಕರ ಮಂಜಪ್ಪ ಬಸವ ಜಯಂತಿ ಆಚರಣೆಯನ್ನು ಶುರುಮಾಡಿದರು. ಹರ್ಡೇಕರ್ ಮಂಜಪ್ಪನವರು ಅಂದಿನ ಅನೇಕ ವಿದ್ವಾಂಸರಿಗೆ ಮತ್ತು ಜ್ಯೋತಿಷ್ಯಶಾಸ್ತ್ರಜ್ಞರಿಗೆ ಪತ್ರಗಳನ್ನು ಬರೆದು ಬಸವಣ್ಣನವರ ಹುಟ್ಟಿದ ದಿನವನ್ನ ಕಂಡು ಹಿಡಿಯಲು / ಗುರ್ತಿಸಲು ಕೇಳಿಕೊಂಡರು. ಭೀಮಕವಿಯ "ಬಸವ ಪುರಾಣ" ದ ಷಟ್ಪದಿಯಾ ಆಧಾರದ ಮೇಲೆ  ಬಸವಣ್ಣನವರು, ಆನಂದನಾಮ ಸಂವತ್ಸರದಲ್ಲಿ,  ಚಾಂದ್ರಮಾನ ಲೆಕ್ಕದ, ವೈಶಾಖ ಮಾಸ - ರೋಹಿಣಿ ನಕ್ಷತ್ರ (ವೃಷಭ ರಾಶಿ) ದಲ್ಲಿ ಹುಟ್ಟಿದರು ಮತ್ತು ಅಂದು "ಅಕ್ಷಯ ತೃತೀಯ" ಹಬ್ಬವಾಗಿತ್ತು ಎಂದು ಕಂಡು ಕೊಂಡರು. ಇದು ಆದುನಿಕ ಕ್ಯಾಲೆಂಡರ್ ಪ್ರಕಾರ ದಿನಾಂಕ 30 ಮಾರ್ಚ್ 1134 ಎಂದೂ ಲೆಕ್ಕ ಹಾಕಲಾಯಿತು. ಬಸವಣ್ಣನವರು ಹುಟ್ಟಿದ ವರ್ಷ 1105 ಎಂದೂ ಹಲವು ಪ್ರಮುಖ ಗ್ರಂಥಗಳಲ್ಲಿ ನಮೂದಾಗಿದೆ. ಬಸವಣ್ಣ ಹುಟ್ಟಿದಂದಿನಿಂದ ಶುರುವಾದ ಬಸವ ಶಕೆ ಇಂದಿಗೂ ಬಳಕೆಯಲ್ಲಿದೆ ಮತ್ತು  ಪಂಚಾಂಗಗಳಲ್ಲಿ ಅನೂಚಾನವಾಗಿ ಈ ಬಸವಶಕೆಯ ವರ್ಷಗಳು ಬಳಕೆಯಾಗುತ್ತ ಬಂತು. ಇದು (ಆಧುನಿಕ ವರ್ಷ 2017) ಬಸವ ಶಕೆ 884.

ದಾವಣಗೆರೆಯಲ್ಲಿ ಬಸವಜಯಂತಿಯನ್ನ ಮೊದಲ ಬಾರಿಗೆ - 1913ರಲ್ಲಿ ಆಚರಿಸಲಾಯಿತು. ನಂತರ ಇದು ಕರ್ನಾಟಕದ ತುಂಬಾ ಪ್ರಸಿದ್ದಿಯಾಯಿತು ಮತ್ತು ಮೂಲೆ ಮೂಲೆಗಳಲ್ಲಿ ಆಚರಣೆಯಾಗ್ತಾ ಬಂತು. ಮುಂದೆ ಕರ್ನಾಟಕ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಸರ್ಕಾರಿ ದಿನಗಳಾಗಿ ಘೋಷಣೆ ಮಾಡಿದವು ಮತ್ತು ಸರ್ಕಾರದ ಮೂಲಕವೂ ಆಚರಣೆ ಮಾಡುತ್ತಾ ಬಂದವು.




ಪಾಲ್ಗುರಿಕೆ ಸೋಮನಾಥ ತೆಲುಗಿನಲ್ಲಿ, ನಂತರ ಭೀಮ ಕವಿ ಕನ್ನಡದಲ್ಲಿ "ಬಸವಪುರಾಣ" ಬರೆದವರು. ಹರಿಹರನೂ ಸೇರಿಕೊಂಡು ಬಸವಣ್ಣನವರ ಬಗ್ಗೆ ಅಗಣಿತ ಜನರು ವಚನ, ಪುರಾಣ, ಮಹಾಕಾವ್ಯ, ರಗಳೆ ಷಟ್ಪದಿ, ಕತೆ ಕಾದಂಬರಿ ಇತ್ಯಾದಿ ಸಾಹಿತ್ಯಗಳನ್ನ ಹುಟ್ಟು ಹಾಕಿ ಕನ್ನಡ, ತೆಲುಗು, ತಮಿಳು ಸಂಸ್ಕೃತ ಸಾಹಿತ್ಯವನ್ನ ಸಮೃದ್ದಗೊಳಿಸಿದ್ದಾರೆ.         

ಇತರರಿಗೆ ಬಸವಣ್ಣನವರು ಹೇಗೆ ಕಂಡಿದ್ದಾರೆ ಎಂದು ಅವರ ಮಾತುಗಳಲ್ಲೇ ಇಲ್ಲಿ ಕೊಟ್ಟಿದ್ದೇನೆ. 

ಜನಪದರಲ್ಲಿ ಬಸವಣ್ಣ 
ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ| 
ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು||

ಪುರಾಣಗಳಲ್ಲಿ ಬಸವಣ್ಣ
ಭೀಮ ಕವಿ, ಪಾಲ್ಗುರಿಕೆ ಸೋಮನಾಥರಂತವರು ಪುರಾಣಗಳನ್ನು ರಚಿಸಿದ್ದಾರೆ.  ವೇದ ವ್ಯಾಸ ರಚಿತ ಬಸವ ಪುರಾಣ" ವೂ ಸಿಕ್ಕಿದೆ!.   

ವಚನಗಳಲ್ಲಿ ಬಸವಣ್ಣ 
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು.

ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು,
ಗುರು ತಾನೀತ ಎನ್ನ ಭವರೋಗವ ವೇಧಿಸಲು,
ಭಕ್ತ ತಾನೀತ ಎನಗೆ ವಿಸ್ತಾರವಾಗಿ.
ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನಮಹಿಮನಾಗಿ.
ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ.
ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯ ತಾನಾಗಿ.
ಎನ್ನ ಸರ್ವಸ್ವಾಯತವ ಮಾಡಿದ ಮಹಿಮ ತಾನೀತ ಕಾಣಾ,ಕಲಿಗೆದೇವರದೇವ, ನಿಮ್ಮ ಶರಣ ಬಸವಣ್ಣ.

ಬಸವ ಎಂದೊಮ್ಮೆ ಮನವೊಸೆದು ನೆನೆದಡೆ
ಬಸವ ಅಸುವಿಂಗೆ ಅಸುವಾಗಿ ತೋರ್ಪನೈಸೆ
ಬಸವ ನಾಮವ ಬಿಡದೆ ರಸನೆಯೊಳಾವಾಗ
ಬಸವ ಬಸವ ಎಂಬೆ ಯೋಗಿನಾಥ
ಶಾಸನಗಳಲ್ಲಿ ಬಸವಣ್ಣ 
ಅನೇಕ ಶಾಸನಗಳು "ಓಂ ಬಸವ ಲಿಂಗಾಯ ನಮ:" ಅನ್ನೋ ಪೀಟಿಕೆಯಿಂದ ಶುರುವಾಗುತ್ತವೆ.  ಉದಾಹರಣೆ ಶಾಲಿವಾಹನ ಶಕೆ 1530ರ ಕೊಟ್ಟೂರು ಶಾಸನ. ಬಸವಣ್ಣನವರ ಜೀವನದ ಬಗ್ಗೆ ತಿಳಿಸಿಕೊಡುವ ಶಾಸನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.  

ಸರ್ವಜ್ಞನ ತ್ರಿಪದಿಗಳಲ್ಲಿ ಬಸವಣ್ಣ 
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ

ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು – ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ

ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ಧನು ಬಸವಣ್ಣನ| ಪಾದಕ್ಕೆ
ಶರಣೆನ್ನಿರೆಲ್ಲ ಸರ್ವಜ್ಞ||

ಆಧುನಿಕ (ಕುವೆಂಪು) ರಲ್ಲಿ ಬಸವಣ್ಣ 
ಕಾರ್ತಿಕದ ಕತ್ತಲಲ್ಲಿ
ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತು,
ಓ ಆಧ್ಯಾತ್ಮ ಕ್ರಾಂತಿ ವೀರ,
ದೇವ ದಯೆಯೊಂದು ಹೇ
ಧೀರಾವತಾರ ಶ್ರೀ ಗುರು
ಬಸವೇಶ್ವರ, ಶ್ರೀ ಬಸವೇಶ್ವರ, ಶ್ರೀ ಬಸವೇಶ್ವರ

ಆಧುನಿಕ (ಮಹಾತ್ಮ ಗಾಂಧಿಜಿ) ರಲ್ಲಿ ಬಸವಣ್ಣ 
“It has not been possible for me to practice principles of Basaveshwara   which he taught 800 years ago and which he also practiced. I have adopted few of them; I am yet to a seeker in this aspect and not an accomplished one. Eradication of untouchability & dignity of labour were among his core concepts one does not find even shade of castism in him.  Had he lived during our times, he would have been a saint worthy of worship. If his followers practice his precepts you could uplift not just Bharat but the world.”


ನನಗಿಷ್ಟವಾದ ಕೆಲವು ಬಸವಣ್ಣನವರ ವಚನಗಳೊಂದಿಗೆ ಈ ಬರಹವನ್ನ ಮುಗಿಸ್ತಾ ಇದ್ದೀನಿ.
ಅರಿವುವಿಡಿದು, ಅರಿವನರಿದು,
ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು,
ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು,
ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ.
ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ
ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.

ಆತ್ಮನ ನಿಜವನರಿಯದು
ಪರಮಾತ್ಮನ ಲಿಂಗವು ತಾನೆಂದರಿದ ಶರಣಂಗೆ
ಎಂತಿರ್ದಂತೆ ಪೂಜೆ ನೋಡಾ !
ಭೋಗಿಸಿದುದೆಲ್ಲವು ಶಿವಾರ್ಪಿತ
ಶರಣ ರುಚಿಸಿದುದೆಲ್ಲವು ಪ್ರಸಾದ
ಶರಣನರಿದುದೆಲ್ಲವು ಪರಬ್ರಹ್ಮ
ಶರಣ ನುಡಿದುದೆಲ್ಲವು ಪರತತ್ವ
ಶರಣ ತಾನೆ ಕೂಡಲಸಂಗಮದೇವ.

ದೇವಲೋಕ ಮತ್ರ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ ಶರಣನಾಗಲರಿಯ.
ಸತ್ತು ಬೆರಸಿಹೆನೆಂದಡೆ ಕಬ್ಬಿನ ತುದಿಯ ಮೆಲಿದಂತೆ
ಕೂಡಲಸಂಗಮದೇವಾ.

ಅರಿವು ಮರವೆಯೊಳಡಗಿ, ಮರವೆ ಅರಿವಿನೊಳಡಗಿ,
ತೆರಹಿಲ್ಲದಿರ್ದೆನೆಂಬ ಹಮ್ಮಿದೇನೋ, ಹಮ್ಮಿದೇನೋ
ಬ್ರಹ್ಮಾದ್ ಬ್ರಹ್ಮವ ನುಂಗಿ, ಮತ್ತಾ ಪರಬ್ರಹ್ಮನು ತಾನೆಂದೆಂಬ
ಹಮ್ಮಿದೇನೊ, ಹಮ್ಮಿದೇನೊ
ಆದಿ ಶೂನ್ಯವು ಶೂನ್ಯ, ಮಧ್ಯ ಶೂನ್ಯವು ಶೂನ್ಯ,
ಅಂತ್ಯ ಶೂನ್ಯವು ಶೂನ್ಯ,
ಶೂನ್ಯವಾದ ಬಳಿಕ ಅಲ್ಲಿಂದತ್ತ ನಿಂದ ನಿಲವನಾರು ಬಲ್ಲರು ಹೇಳಾ
ಬಯಲು ಚಿತ್ರಿಸಿದ ಚಿತ್ರವನಾ ಬಯಲರಿಯದಂತೆ
ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವು.

Friday 21 April 2017

ಪಂಚಾಂಗ - ಜ್ಯೋತಿಷ ಶಾಸ್ತ್ರ, ಪುರಾಣ - ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯ


ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಮತ್ತು ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಈ ದಿನ  ಕುಬೇರ, ವಿಷ್ಣು, ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಯನ್ನು ಪೂಜಿಸಿದರೆ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಬೆಳ್ಳಿ ಬಂಗಾರದ ಅಂಗಡಿಗಳಲ್ಲಿ ವ್ಯಾಪಾರ ತುಂಬಾ ಜೋರಾಗಿ ನಡೆಯುತ್ತದೆ. ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಮಾಡಿದರೆ ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ. ನಮ್ಮ ಹೆಣ್ಣುಮಕ್ಕಳು ಒಡವೆಯನ್ನು ಖರೀದಿಸಲು ತುಂಬಾ ಇಷ್ಟ ಪಡುತ್ತಾರೆ. ಏಕೆಂದರೆ ಅದು ಕೂಡ ಅಪತ್ಕಾಲಕ್ಕೆ ನೆರವಾಗುವ ಆಸ್ತಿಯಲ್ಲವೇ. ಹಾಗೇ ಹೆಣ್ಣಿನ ಸೌದರ್ಯದ ಮತ್ತು ಹೆಮ್ಮೆಯ ಪ್ರತೀಕ ಈ ಒಡವೆ. ಅಲ್ಲದೇ ಈ ನಂಬಿಕೆ ತಲಾಂತರಗಳಿಂದ ಇಷ್ಟು ಗಟ್ಟಿಯಾಗಿ ಜನರು ನಂಬಿಕೊಂಡು ಬಂದಿದ್ದಾರೆಂದರೆ ಏನು ಅರ್ಥ?  ಆ ದಿನದ ಮಹಿಮೆಯಿಂದ  ನಂಬಿದವರ ಜೀವನದಲ್ಲಿ ಒಳ್ಳೆಯದು ಆಗಿದೆ ಎಂದೇ ಅರ್ಥ. ಅಲ್ಲವೇ? ನಮ್ಮ ಭಾರತೀಯ ಪಂಚಾಗ ಸುಮ್ಮನೆ ಬಂದಿಲ್ಲ ಅದು ಒಂದು ವಿಜ್ಞಾನ. ಎನ್ನುವುದಕ್ಕೆ ಇದು ಕೂಡ ಒಂದು ಸಾಕ್ಷಿ.





ವೈಶಾಖ ಮಾಸದ - ಶುಕ್ಲ ಪಕ್ಷದ - ಮೂರನೇ ದಿನವೇ 'ಅಕ್ಷಯ ತೃತೀಯ'. ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ನಾಲ್ಕು "ಪೂರ್ಣಮುಹೂರ್ತ" ಗಳಲ್ಲಿ  (ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಹಬ್ಬದ ದಿನಗಳು) ಇದು ಒಂದು. ಈ ದಿನಗಳಲ್ಲಿ  ಒಳ್ಳೆಯ ಕೆಲಸ ಮಾಡಲು  ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿದ ನೆನಪು. ಈ ದಿವಸ ಸಾಮಾನ್ಯವಾಗಿ ಯಾವುದೇ ಒಳ್ಳೆ  ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ.

ಪಂಚಾಂಗದಲ್ಲಿ ಅಕ್ಷಯ ತೃತೀಯ 
ಅಕ್ಷಯ ತೃತೀಯದಂದು  ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ - ಉಚ್ಚರಾಶಿಯಲ್ಲಿ (ಸೂರ್ಯ - ಮೇಷರಾಶಿಯಲ್ಲಿ ಮತ್ತು ಚಂದ್ರ - ವೃಶಭಾರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು  ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು  ಮನಸ್ಸುಮತ್ತು ಬುಧ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ  ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು.

ಅಕ್ಷಯ ತೃತೀಯ ಹಬ್ಬದ ದಿನವನ್ನ ಹೇಗೆ ಲೆಕ್ಕ ಹಾಕುತ್ತಾರೆ.
ಈ ಹಬ್ಬವನ್ನ ಚಂದ್ರ ಮತ್ತು ಸೂರ್ಯ ಇಬ್ಬರೂ ತಮ್ಮ ತಮ್ಮ ಉಚ್ಚ ರಾಶಿಯಲ್ಲಿ ಇರುವ ದಿನದಂದು ಆಚರಿಸುತ್ತಾರೆ. ಸೂರ್ಯನು ತನ್ನ ಉನ್ನತ ಸ್ತಾನವಾದ ಮೇಶರಾಶಿಯಲ್ಲಿ - ಅಂದರೆ ಸೌರಮಾನ ಲೆಕ್ಕದ ಮೇಷ ಮಾಸದಲ್ಲಿ - ಪೂರ್ತಿ 30 ದಿನಗಳು ಇರುತ್ತಾನೆ. ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾಯಿಸಿದರೆ, ಚಂದ್ರ ದಿನಕ್ಕೊಮ್ಮೆ ನಕ್ಷತ್ರ ಬದಲಾಯಿಸುತ್ತಾನೆ (ಅಂದಾಜು ಎರಡೂವರೆ ದಿನಕ್ಕೊಂದು ರಾಶಿ). ಹಾಗಾಗಿ ಈ ಮೇಷ ಮಾಸದ ಯಾವ ದಿನದಂದು ಚಂದ್ರ ತನ್ನ ಉಚ್ಚ ಸ್ತಾನದಲ್ಲಿ ಇರುತ್ತಾನೋ ಅಂದೇ ಈ ಅಕ್ಷಯ ತೃತೀಯ. ಚಾಂದ್ರಮಾನ ಲೆಕ್ಕದ ಮೂಲಕ ನೋಡಿದರೆ ಈ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಆಗಿರುತ್ತದೆ. 




ಪುರಾಣ ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯದ ವಿಶೇಷತೆ:
  • ಈ ದಿನ ಹಲವು  ಮಹತ್ಕಾರ್ಯಗಳು ಶುರುವಾದ ದಿನ 
    • ಕೃತಯುಗ (ಸತ್ಯ ಯುಗ) ಶುರುವಾದ ದಿನ ಎಂದು ಹೇಳಲಾಗುತ್ತದೆ.
    • ವೇದವ್ಯಾಸರು ಗಣಪತಿ ಆಶೀರ್ವಾದ ಪಡೆದು  ಮಹಾಭಾರತ ಬರೆಯಲು ಪ್ರಾರಂಭಿಸಿದ ದಿನ.
    • ಗಂಗಾ ಮಾತೆ ಕೈಲಾಸದಿಂದ ಭೂಮಿಗೆ ಇಳಿದ ದಿನ ಎಂದು ಹೇಳಲಾಗುತ್ತದೆ.
  • ಈ ದಿನ ಹಲವು ಮಹಾತ್ಮರು ಹುಟ್ಟಿದ ದಿನ 
    • ಜಗಜ್ಯೋತಿ ಬಸವಣ್ಣ ಹುಟ್ಟಿದ ದಿನ.
    • ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. 
    • ವಿಷ್ಣು ಪರಶುರಾಮನಾಗಿ ಅವತಾರವೆತ್ತಿದ ದಿನ.  
  • ಇನ್ನೂ ಹಲವು ಮಹತ್ ಘಟನೆಗಳು ಈ ದಿನ ನಡೆದಿವೆ ಎಂದು ಪುರಾಣಗಳು ಹೇಳುತ್ತವೆ 
    •  ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದದಿನ.
    • ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಈ ಅಕ್ಷಯ ತೃತೀಯದ ದಿನವೇ.
    • ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ.
    • ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ.
    • ಕೃಷ್ಣನು  ಕುಚೇಲನನ್ನು ಸತ್ಕರಿಸಿದ ಪುಣ್ಯ ದಿನ.
ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಈ ದಿನ ಅಕ್ಷಯ ತೃತೀಯ ಆಚರಿಸಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸೋಣ. ಎಲ್ಲರ ಸಂಪತ್ತು ಅಕ್ಷಯವಾಗಲಿ. ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು.





ಜ್ಯೋತಿಷ ಶಾಸ್ತ್ರದ ಮೂಲಕ ಅಕ್ಷಯ ತೃತೀಯ:  

ಅಕ್ಷಯ ತೃತೀಯ  ಯಾವ ನಕ್ಷತ್ರದಲ್ಲಿ ಬಂದರೆ ಹೆಚ್ಚು ಶ್ರೇಷ್ಠ ?
ಈ ಹಬ್ಬ 'ತೃತೀಯ ತಿಥಿ' (ತದಿಗೆಯ ದಿನ) ಯಲ್ಲಿ ಮತ್ತು 'ವೃಷಭ ರಾಶಿ'ಯ ದಿನ ಆಚರಣೆ ಮಾಡುತ್ತಾರೆ ಅಂತ ತಿಳೀತು. ಆದರೆ ಈ ವೃಷಭ ರಾಶಿ ಮತ್ತು ತೃತೀಯ ತಿಥಿ ಎರಡೂ ಜೊತೆಯಲ್ಲಿ ಬರುವಾಗ ಅಂದು ಮೂರು ನಕ್ಷತ್ರಗಳಲ್ಲಿ (ಕೃತಿಕಾ, ರೋಹಿಣಿ, ಮೃಗಶಿರ) ಯಾವುದಾದರೊಂದು ಬರುವ ಸಾಧ್ಯತೆ ಇದೆ.  ಅಕ್ಷಯ ತೃತೀಯ, ಶುಕ್ಲ ಪಕ್ಷದ 'ಮೂರನೇ' ದಿನ / 'ತೃತೀಯ ತಿಥಿ' ಯಲ್ಲಿ ಬರುತ್ತೆ ಅಂತ ಹೆಸರೇ ಹೇಳುತ್ತೆ.

ಟಿಪ್ಪಣಿ 1 :  7 ಗ್ರಹಗಳು 360 ಡಿಗ್ರಿ ವೃತ್ತದ ಯಾವ ಯಾವ ಡಿಗ್ರಿ ಯಲ್ಲಿ ಉಚ್ಚರಾಗಿರುತ್ತಾರೆ
  • ಸೂರ್ಯ : ಮೇಷದ 19ನೇ ಡಿಗ್ರಿ (ಅಂದರೆ 18°00' - 18°59')(ಪೂರ್ಣ ವೃತ್ತದ 19ನೆ ಡಿಗ್ರಿ);
  • ಚಂದ್ರ   : ವೃಶಭದ 3ನೇ ಡಿಗ್ರಿ; (ಪೂರ್ಣ ವೃತ್ತದ 33ನೆ ಡಿಗ್ರಿ);
  • ಗುರು    : ಕಟಕ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 105ನೆ ಡಿಗ್ರಿ);
  • ಬುಧ    : ಕನ್ಯಾ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 165ನೆ ಡಿಗ್ರಿ);
  • ಶನಿ     : ತುಲಾ ರಾಶಿಯ 21ನೆ ಡಿಗ್ರಿ; (ಪೂರ್ಣ ವೃತ್ತದ 201ನೆ ಡಿಗ್ರಿ);
  • ಮಂಗಳ : ಮಕರ ರಾಶಿಯ 28ನೆ ಡಿಗ್ರಿ; (ಪೂರ್ಣ ವೃತ್ತದ 298ನೆ ಡಿಗ್ರಿ);
  • ಶುಕ್ರ    : ಕುಂಭ ರಾಶಿಯ 27ನೆ ಡಿಗ್ರಿ; (ಪೂರ್ಣ ವೃತ್ತದ 327ನೆ ಡಿಗ್ರಿ);

ಟಿಪ್ಪಣಿ 2: ಡಿಗ್ರಿ ಲೆಕ್ಕಾಚಾರ 
  1. ಒಂದು ಪೂರ್ಣ ವೃತ್ತ = 360 ಡಿಗ್ರಿ. 
  2. ಈ 360 ಡಿಗ್ರಿ ವೃತ್ತವನ್ನ 12 (ರಾಶಿಗಳು) ಭಾಗಗಳಾಗಿ ಮಾಡಿದಾಗ ಒಂದೊಂದು ರಾಶಿಗೆ 30 ಡಿಗ್ರಿ ಆಗುತ್ತೆ.
  3. ಈ 360 ಡಿಗ್ರಿ ವೃತ್ತವನ್ನ 27 ನಕ್ಷತ್ರಗಳಿಗೆ ಹಂಚಿದರೆ ಒಂದೊಂದು ನಕ್ಷತ್ರಕ್ಕೆ 13° 20' ಬರುತ್ತೆ. 
  4. 27 ನಕ್ಷತ್ರಗಳನ್ನ 12 ರಾಶಿಗಳಿಗೆ ಹಂಚಿದರೆ ಒಂದೊಂದು ರಾಶಿಗೆ ಎರಡೂವರೆ ನಕ್ಷತ್ರಗಳು ಬರುತ್ತವೆ.
  5. ಒಂದು ನಕ್ಷತ್ರದಲ್ಲಿ ನಾಲ್ಕು ಪಾದಗಳಿರುತ್ತವೆ ಹಾಗಾಗಿ ಒಂದೊಂದು ಪಾದ 3° 20' ಜಾಗವನ್ನಾಕ್ರಮಿಸುತ್ತೆ.
  6. ಒಂದು ರಾಶಿಗೆ ಎರಡೂವರೆ ನಕ್ಷತ್ರಗಳಾದ್ದರಿಂದ ಮತ್ತು ಒಂದು ನಕ್ಷತ್ರಕ್ಕೆ 4 ಪಾದಗಳಾದ್ದರಿಂದ ಒಂದು ರಾಶಿಗೆ 10 ಪಾದಗಳು. ಇದು 13° 20' ಆಗುತ್ತೆ .    
ಉದಾಹರಣೆ:   
ಮೇಷರಾಶಿಯಲ್ಲಿ ನ 10 ಪಾದ (ಎರಡೂವರೆ ನಕ್ಷತ್ರ) ಗಳು = 4 ಅಶ್ವಿನಿ  + 4 ಭರಣಿ + 2 ಕೃತ್ತಿಕಾ = 4*3° 20' + 4*3° 20'+ 2*3° 20' = 30ಡಿಗ್ರಿ

ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ, ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ ಮತ್ತು ಕೃತಿಕಾದ ಮೊದಲ ಎರಡು ಪಾದಗಳು ಬರುತ್ತವೆ. ವೃಶಭ ರಾಶಿಯಲ್ಲಿ ಕೃತಿಕಾ ನಕ್ಷತ್ರ ದ ಮೂರು ಮತ್ತು ನಾಲ್ಕನೇ ಪಾದಗಳು ಮತ್ತು ರೋಹಿಣಿ, ಮೃಗಶಿರ ನಕ್ಷತ್ರಗಳು ಬರುತ್ತವೆ. ನಾವು ಮಾತಿನಲ್ಲಿ ಸೂರ್ಯ ಮೇಷರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ,  ಇನ್ನೂ ಆಳಕ್ಕಿಳಿದು ನೋಡಿದರೆ ಈ ಸೂರ್ಯ ಮೇಷ ರಾಶಿಯ ಭರಣಿ  ನಕ್ಷತ್ರ (13° 20' ರಿಂದ 26° 40') ದಲ್ಲಿ  ಮಾತ್ರ ನಿಜವಾಗಿ ಉಚ್ಚ (19 ಡಿಗ್ರಿ - ಭರಣಿ ೩ನೆ ಪಾದ)  ನಾಗಿರುತ್ತಾನೆ ಅಂತ ತಿಳಿಯುತ್ತೆ.

ಸರಳೀಕರಿಸಿ ನಾವು ಚಂದ್ರನು ವೃಶಭರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ, ಸರಿಯಾಗಿ ಲೆಕ್ಕ ಹಾಕಿದರೆ ಈ ಚಂದ್ರ ವೃಷಭ ರಾಶಿಯ ಕೃತಿಕಾ ನಕ್ಷತ್ರದ 3ನೇ ಪಾದದಲ್ಲಿ ತನ್ನ ನಿಜ ಉಚ್ಚ ಸ್ತಾನದಲ್ಲಿರುತ್ತಾನೆ. ಹಾಗಾಗಿ ನಮ್ಮ ಕೆಲ ಪುರಾಣಗಳಲ್ಲೂ ಕೃತಿಕ ನಕ್ಷತ್ರದಲ್ಲಿ ಬಂದ ಅಕ್ಷಯ ತೃತೀಯ ಹಬ್ಬ ಅತಿ ವಿಶೇಷ ಎನ್ನುತ್ತಾರೆ.

ಇನ್ನೊಂದು ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ, ಚಂದ್ರನಿಗೆ 27 ಜನ  ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿ ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ (ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ)  ಅಕ್ಷಯ ತೃತೀಯ ಶ್ರೇಷ್ಠ ಅನ್ನುವ ನಂಬಿಕೆ ಹೊಂದಿದ್ದಾರೆ. ಸೋಮವಾರ ಚಂದ್ರನ ವಾರವಾದ್ದರಿಂದ, ಈ ತದಿಗೆಯಂದು ರೋಹಿಣಿ ನಕ್ಷತ್ರವಿದ್ದು ಸೋಮವಾರವಾಗಿದ್ದರೆ ಇನ್ನೂ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ಇದೆ.                

(ಚಿತ್ರಗಳು;ಗೂಗಲ್ಲಿನಿಂದ)

Tuesday 18 April 2017

ಇತ್ತೀಚಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ? ಕಾರಣ ಏನಿರಬಹುದು?

ಇತ್ತೀಚಿಗೆ ದೈಹಿಕವಾಗಿ  ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ?. ಡಿಪ್ರೆಶನ್, ಸಣ್ಣ ಸಣ್ಣದಕ್ಕೆಲ್ಲ ಸಿಟ್ಟು-ಸೆಡವು-ಅಸಮಾಧಾನ-stress ಮುಂತಾದ ಮಾನಸಿಕ ತೊಂದರೆಗಳು ನಿಮ್ಮನ್ನ ಕಾಡ್ತಾಯಿದಾವಾ?  ನೆನಪಿನಶಕ್ತಿ ಮೊದಲಿಗಿಂತ ಕಮ್ಮಿ ಆಗಿದೆ ಅನ್ಸುತ್ತಾ?, ನಿಮ್ಮ ನಡವಳಿಕೆಯಲ್ಲಿಯೂ  ಏನೋ ಬದಲಾವಣೆಗಳಾಗಿವೆ ಅಂತ ಅನ್ನಿಸ್ತಿದ್ಯಾ? ಆಗಾಗ ಕಣ್ಣು ಮಂಜುಗಟ್ಟಿದಂತೆ ಆಗುತ್ತಿದ್ದಿಯಾ, ದೇಹದಲ್ಲಿ ನರಗಳು ಹಿಡಿದುಕೊಂಡಂತೆ,  ಅಲ್ಲಲ್ಲಿ ಮುಳ್ಮುಳ್ನಂತೆ /  ಚುಚ್ಚಿದಂತೆ ಅನುಭವ ಆಗುತ್ತಿದಿಯ?, ಮಾಂಸ ಖಂಡಗಳಲ್ಲಿ ಶಕ್ತಿ ಇಲ್ಲದಂತಾಗಿ, ನಡೆಯಲು, ಮೆಟ್ಟಿಲುಗಳನ್ನ ಹತ್ತಿಳಿಯಲು ಸುಸ್ತಾಗುತಿದಿಯಾ?, ಮಲಬಧ್ಧತೆ, ಭೇದಿ , ಗ್ಯಾಸ್ಟ್ರಿಕ್ ಕಾಡುತ್ತಿದ್ದರೆ, ನಾಲಿಗೆ ಮೆತ್ತಗಿದೆ ಅಂತಾ ಅನ್ನಿಸುತ್ತಾ ಇದ್ರೆ, ನಿಮ್ಮಚರ್ಮ  ರಕ್ತ ಹೀನತೆಯಿಂದ  ಬಿಳಿಚಿಕೊಂದಿದ್ರೆ, ನಿಮ್ಮ ಉಸಿರಾಟ ಕಮ್ಮಿ ಆಗಿದೆ (short breaths)  ಅಂತನಿಸಿದಿಯಾ, ಆಗಾಗ ಎದೆ ಹಿಡಿದುಕೊಂಡಂತೆ ಆಗುತ್ತಾ ಇದ್ದೀಯ? ದೇಹದಲ್ಲಿ ಸುಸ್ತು ,ತಲೆನೋವು ಪ್ರತಿದಿನ ಬರುತ್ತಿದ್ಯಾ?? ತಲೆಯಲ್ಲಿ ಕೂದಲುಗಳು ಕಮ್ಮಿ ಆದಂತೆ ಕಾಣುತ್ತಿವೆಯಾ??

ಈ ಎಲ್ಲ (ಅತ್ವ ಇವುಗಳಲ್ಲೂ ಹಲವು) ಸಮಸ್ಯೆಗಳು ನಿಮ್ಮನ್ನ ಕಾಡುತ್ತಿದ್ದರೆ ನಿಮಗೆ ಖ೦ಡಿತವಾಗಿ ವಿಟಮಿನ್ದ B12 ಕೊರತೆ ಇದೆ ಎಂದೇ ಅರ್ಥ. !!!!



ದೇಹದಲ್ಲಿ ನರಮಂಡಲ ಮತ್ತು ಕೆಂಪು ರಕ್ತ ಕಣಗಳು ಆರೋಗ್ಯಕರವಾಗಿರಲು ಈ ವಿಟಮಿನ್ B12 ತುಂಬಾ ಅತ್ಯವಶ್ಯಕ.  ಈ ವಿಟಮಿನ್ B12 ದೇಹದಲ್ಲಿ ಅನೇಕ ಕೆಲಸಗಳು ಸರಾಗವಾಗಿ ಆಗಲು ಸಹಾಯ ಮಾಡುತ್ತದೆ. ಇದರ ಕೊರತೆ ದೇಹದಲ್ಲಿ ಉಂಟಾದರೆ ದೇಹದಲ್ಲಿನ ಡಿಎನ್ಎ ಮೇಲೆ ಮತ್ತು RBC ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ರಕ್ತ ಹೀನತೆ ಉಂಟಾಗುತ್ತದೆ. ಹೊಟ್ಟೆ ಗ್ಯಾಸ್ಟ್ರಿಕ್ ನಿಂದ ಬಳಲುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗುತ್ತದೆ. ದೇಹಕ್ಕೆ ಸಣ್ಣ ಪುಟ್ಟ ಜ್ವರಗಳು ಬಂದಾಗ ಹುಶಾರಾಗಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ.



ಈ ವಿಟಮಿನ್ನಿನ ಕೊರತೆ ನಿಮ್ಮ ರಕ್ತ ಪರೀಕ್ಷೆಯಲ್ಲಿ ಕಂಡುಬಂದರೆ ಡಾಕ್ಟರ್ ಗಳು ಹೇಳುವ ಹಾಗೆ ಇಂಜಕ್ಷನ್, ಮತ್ತು ಮಾತ್ರೆಗಳನ್ನ ತೆಗೆದುಕೊಂಡರೆ ಈ ಕೊರತೆಯನ್ನು ತಪ್ಪಿಸಬಹುದು ಮತ್ತು ಅದರಿಂದ ದೇಹಕ್ಕೆ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು.



ಡಾಕ್ಟರಗಳು ಹೇಳೋ ಪ್ರಕಾರ ಸಸ್ಯಾಹಾರಿಗಳಲ್ಲಿ ಈ ವಿಟಮಿನ್ B12 ಕೊರತೆ ಹೆಚ್ಚಾಗಿರುತ್ತೆ. ಸಸ್ಯಾಹಾರಗಳಿಂದ ಸಿಗದೆ ಇರುವ ಏಕೈಕ ವಿಟಮಿನ್ ಇದಾಗಿದೆ. ಹಾಲು, ಮೊಸರು, ಬೆಣ್ಣೆ, ಚೀಸ್ಗ ಳಲ್ಲಿ ಈ ವಿಟಮಿನ್ B12 ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತದೆ. ಯಾವುದೇ ಹಣ್ಣು ತರಕಾರಿಗಳಲ್ಲಿ ಈ B12 ಇರುವುದಿಲ್ಲ ಹಾಗಾಗಿ ಸಸ್ಯಹಾರಿಗಳಲ್ಲಿ ಈ ವಿಟಮಿನ್ ಕೊರತೆ ಅತಿ ಹೆಚ್ಚು. ಮಾಂಸಹಾರದಲ್ಲಿ ಇದು ಅತಿ ಹೆಚ್ಚಾಗಿ ಇರುತ್ತದೆ.  ಮಾಂಸಹಾರಿಗಳಲ್ಲಿ ಈ ವಿಟಮಿನ್ B12 ಕೊರತೆ  ತುಂಬಾ ಕಮ್ಮಿ. ಇಲ್ಲ ವೆಂದೇ ಹೇಳುವರು.



ದೇಹದಲ್ಲಿ ಈ ವಿಟಮಿನ್ B12 ಕೊರತೆ ಉಂಟಾಗಲು ಅನೇಕ ಕಾರಣಗಳಿವೆ. ಕೆಲವೊಂದು ಆಪರೇಷನ್ ಗಳನ್ನ ಮಾಡಿಸಿಕೊಂಡಾಗ, TB, ಕ್ಯಾನ್ಸರ್, ನಂಥ ಕಾಯಿಲೆಗಳು ಬಂದವರಲ್ಲಿ, ಮತ್ತು ದೀರ್ಘ ಕಾಲ ಟ್ರೀಟ್ಮೆಂಟ್ ಹೊಂದುವ ಕಾಯಿಲೆಗಳು ಅಟ್ಯಾಕ್ ಅದ ದೇಹಗಳಲ್ಲಿ ಈ ವಿಟಮಿನ್ ಕೊರತೆಯುಂಟಾಗುತ್ತದೆ.

ವಿಟಮಿನ್ B12 ದೇಹಕ್ಕೆ ಅತಿ ಹೆಚ್ಚು ಅವಶ್ಯಕವಾದ ವಿಟಮಿನ್ ಮತ್ತು ಅತಿ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕು. ಈಗಿನಿಂದಲೇ ಎಚ್ಚೆತ್ತುಕೊಂಡು ಸಮತೋಲನ ಆಹಾರ ತಿಂದು ಆರೋಗ್ಯವಾಗಿರೋಣ ಎಂಬುದು ನನ್ನ ಅಂಬೋಣ.


Wednesday 12 April 2017

Pink Moon ಅನ್ನುವ ಕವಿ ಸಮಯ


ಇತ್ತೀಚೆಗೆ ಒಂದು ಮೂರು ನಾಲ್ಕು ದಿನಗಳಿಂದ ನನ್ನ whatsup ಮತ್ತು ಫೇಸ್ಬುಕ್  ನಲ್ಲಿ ಏಪ್ರಿಲ್ ನಲ್ಲಿ "ಪಿಂಕ್ ಮೂನ್" ಮರೆಯದೆ ನೋಡಿ ಅನ್ನೋ ಮೆಸೇಜ್ ಗಳನ್ನ ನೋಡಿ ನಾನು ಇವತ್ತು ಇದುವರೆಗೂ ಕಾಯ್ತಾ ಕೂತಿದ್ದೆ. ಪಿಂಕ್ ಮೂನ್ ನೋಡೊಕಂತ.  ಆದ್ರೆ ನನಗೆ ನಿರಾಸೆ ಕಾದಿತ್ತು ಎಂದಿನಂತೆ ಚಂದ್ರ ನಂಗೆ ಬಿಳಿಯಾಗೆ ಕಂಡ. :)

ಕೆಲ ಹುಣ್ಣಿಮೆ ದಿನಗಳಲ್ಲೂ - ಎಂದಿನ ಹುಣ್ಣಿಮೆಯಂತೆ ಬೆಳ್ಳಗೇ ಕಂಡರೂ -  ಈ ಚಂದ್ರನನ್ನ ಒಮ್ಮೆಮ್ಮೆ 'ಬ್ಲೂ ಮೂನ್' ಅಂತ ಕರೆದರೆ ಮತ್ತೆ ಈಗ 'ಪಿಂಕ್ ಮೂನ್' ಅಂತಾರೆ. ಯಾಕಪ್ಪ ಈತರ? ಇಂದು ಈ ಚಂದ್ರ ನಿಜಕ್ಕೂ ಗುಲಾಬಿ ಬಣ್ಣದವನಾಗಿರ್ತಾನ ಅತ್ವ ಇದು ಬರಿಯ ಕವಿ ಕಲ್ಪನೆಯ ಅಂತ ಯೋಚನೆ ಮಾಡಿದಾಗ ನನಗೆ ಕಂಡು ಬಂದ ಕೆಲ ವಿಷಯಗಳನ್ನ ಬರೀತಾ ಇದ್ದೀನಿ.

ನಾವು ಅಂದುಕೊಂಡಿರುವಂತೆ ಇವತ್ತು ಚಂದ್ರ ಗುಲಾಬಿ ಬಣ್ಣದಲ್ಲಿ ಕಾಣೋದಿಲ್ಲ. ಪಿಂಕ್ ಮೂನ್ ನ ಇತಿಹಾಸ ಬೇರೆನೇ ಇದೆ.

ನಮ್ಮಲ್ಲಿ ಕಾರ ಹುಣ್ಣಿಮೆ (ಕಾರಬ್ಬ / ಕಾರ ಹಬ್ಬ), ಆಗಿ ಹುಣ್ಣಿಮೆ, ಬನದ ಹುಣ್ಣಿಮೆ, ನೂಲ ಹುಣ್ಣಿಮೆ, ದವನದ ಹುಣ್ಣಿಮೆ, ಸೀಗೆ ಹುಣ್ಣಿಮೆ, ಎಳ್ಳು ಅಮಾವಾಸ್ಯೆ  ಹೀಗೆ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯಗಳಿಗೆ ಹೆಸರು ಕೊಟ್ಟು ಹಬ್ಬ ಆಚರಣೆ ಮಾಡುವ ಪಧ್ಧತಿ ಮೊದಲಿಂದಲೂ ಇದೆ.    ಬಹುಶ ಜಗತ್ತಿನ ಎಲ್ಲ ಹಳೆಯ ಸಂಸ್ಕೃತಿಗಳಲ್ಲೂ ಈ ಪದ್ಧತಿ ಇದೆ ಅನ್ನಬಹುದು. ಮೂಲ ಅಮೆರಿಕನ್ನರೂ (Native Americans) ಸಹಾ ಈ ರೀತಿ ಹುಣ್ಣಿಮೆಯ ಚಂದ್ರನಿಗೆ ಹೆಸರು ಕೊಡುವ ಪದ್ಧತಿ ಹೊಂದಿದ್ದರು ಎಂದು ತಿಳುದು ಬರುತ್ತೆ, ಈ ಮೂಲ ಅಮೆರಿಕನ್ನರ ಆಚರಣೆಗಳ ಮೂಲದಿಂದ ಹುಟ್ಟಿದ್ದೇ ಈ ಪಿಂಕ್ ಮೂನ್ ಅನ್ನುವ ಹೆಸರು.

ನಮ್ಮಲ್ಲಿ "ಕಾರ" ಹುಣ್ಣಿಮೆ (ಕಾರಬ್ಬ), "ಎಳ್ಳು" ಅಮಾವಾಸ್ಯೆ ಇತ್ಯಾದಿ ಹೆಸರುಗಳನ್ನಿಟ್ಟು ಹೇಗೆ ಹುಣ್ಣಿಮೆ ಅಮಾವಾಸ್ಯೆಗಳನ್ನ ಗುರ್ತಿಸ್ತಿದ್ದೆವೋ ಮತ್ತಿವು ನಮ್ಮ ಸಂಸ್ಕೃತಿ ಹಬ್ಬ ಆಚರಣೆಗಳ ಭಾಗವಾಗುತ್ತಿದ್ದವೋ ಅದೇ ರೀತಿ ಮೂಲ ಅಮೆರಿಕನ್ನರ ಸಂಸ್ಕೃತಿಯ ಪಳೆಯುಳಿಕೆಯೇ ಈ "ಪಿಂಕ್ ಮೂನ್" ಅನ್ನುವ ಹೆಸರು!!

ಅಮೇರಿಕದಲ್ಲಿ  ಇಲ್ಲಿ ನಮಗಿರುವಂತೆ ಏಪ್ರಿಲ್ ನಲ್ಲಿ ವಸಂತ ಋತು (ಅವರು ಸ್ಪ್ರಿಂಗ್ ಸೀಸನ್ ಅಂತಾರೆ). ಈ ಋತುವಿನಲ್ಲಿ ಆ ದೇಶದಲ್ಲಿ ಒಂದು ವಿಶೇಷ ಜಾತಿಯ ಮರಗಳು ಗುಲಾಬಿ ಬಣ್ಣದ ಹೂವುಗಳಿಂದ ತುಂಬಿರುತ್ತವೆ. ನಮ್ಮಲ್ಲಿ ಹೇಗೆ ವಸಂತ ಋತು ಎಂದರೆ ಪ್ರಕೃತಿ ಹಸಿರು ತುಂಬಿದಂತೆ   ಕಾಣುವುದೋ ಹಾಗೆ ಮತ್ತು  ನಾವು ವಸಂತ ಋತುವನ್ನು ಹಸಿರು ಬಣ್ಣದ ಸೀರೆಯುಟ್ಟ ಪ್ರಕೃತಿ  ಅಂತ ವರ್ಣಿಸುತ್ತೆವೆಯೋ ಹಾಗೆಯೇ ಈ ಪಿಂಕ್ ಮೂನ್ ಕಲ್ಪನೆ. ಅಸ್ಟೇ.,,. ಅಲ್ಲಿನ ಸ್ಪ್ರಿಂಗ್ ನ   ಕಾಲದಲ್ಲಿ   ಅಲ್ಲಿನ ಕೆಲವು ಜಾತಿಯ ಮರಗಳು ಗುಲಾಬಿ ಬಣ್ಣದ ಹೂವುಗಳಿಂದ  ಕಂಗೊಳಿಸುತ್ತಿರುತ್ತವೆ. ಆಗ ಬರುವ ಮೊದಲ ಬೆಳದಿಂಗಳಿನ ಬೆಳಕು  ಪಿಂಕ್ ಹೂವಿನ ಮೇಲೆ ಬೀಳುವುದರಿಂದ ಆ ಹುಣ್ಣಿಮೆ ಚಂದ್ರನನ್ನು ಪಿಂಕ್ ಮೂನ್ ಎಂದು ಕರೆಯುತ್ತಿದ್ದರು.  ಅಲ್ಲಿನ ಜನರ ವಾಡಿಕೆಯಂತೆ ಮತ್ತು ಅಲ್ಲಿನ ಕವಿಗಳ ಕಲ್ಪನೆಯಂತೆ   ಅವರ ವಸಂತ ಋತುವಿನ ಮೊದಲ ಬೆಳದಿಂಗಳಿನ ಚಂದ್ರನನ್ನು ಪಿಂಕ್ ಮೂನ್ ಅಂತ ವರ್ಣಿಸುತ್ತಾರೆ.  ಹಾಗೆ ಅಲ್ಲಿನ ಕವಿಗಳು ತಮ್ಮ ಪದ್ಯಗಳಲ್ಲಿ ಅವರ ಸ್ಪ್ರಿಂಗ್ ಸೀಸನ್ನ ಮೊದಲ ಹುಣ್ಣಿಮೆ ಚಂದ್ರನನ್ನ  ಪಿಂಕ್ ಮೂನ್ ಎಂದು ತಮ್ಮ ಕವಿತೆಗಳಲ್ಲಿ ವರ್ಣಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ  ಏಪ್ರಿಲ್ ನ ತಿಂಗಳಿನ ಮೂನ್ ನನ್ನು  ಅಮೇರಿಕಾನಲ್ಲಿ ಪಿಂಕ್ ಮೂನ್ ಎಂದು ಕರೆಯುವ ರೂಢಿ ಶುರುವಾಯಿತು ಎಂದು ಹೇಳಬಹುದು.

ಅಮೇರಿಕಾದ ವಸಂತ ಋತುವಿನಲ್ಲಿ ಪಿಂಕ್ ಬಣ್ಣದಿಂದ ಕಂಗೊಳಿಸುವ ವಿಶೇಷ ರೀತಿಯ ಮರಗಳು :-

ಗೂಗಲ್ಲಿಂದ ಪಿಂಕ್ ಬಣ್ಣದ ಹೂಗಳು ಪಿಂಕ್ ಬಣ್ಣ ಕೊಡುವ ಹೂಗಳು - ಗೂಗಲ್ಲಿಂದ
ಈ ಕೆಳಗಿನ ಪಿಂಕ್ ಮೂನ್ ಮೇಲಿನ ಕವಿತೆ ಸಂತ ಕಾಲವನ್ನು ಮತ್ತು ಆಗ  ಅರಳುವ ಪಿಂಕ್ ಹೂವಿನ ವರ್ಣನೆ ಇದೆ


ಮಂಗಳವಾರ ರಾತ್ರಿ ಪಿಂಕ್ ಮೂನ್ ಗಾಗಿ ಕಾದು ಕುಳಿತು ನಾನು ನನ್ನ ಮೊಬೈಲಲ್ಲಿ ಕ್ಲಿಕ್ಕಿಸಿದ ಚಂದ್ರನ ಕೆಲವು ಪಟಗಳು : 





Wednesday 5 April 2017

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ ... suicide is not a solution...

ಹೀಗೆ ಫೇಸ್ ಬುಕ್ ಸ್ಕ್ರಾಲ್ ಮಾಡ್ತಾ ಇರೋವಾಗ ಒಂದು ನ್ಯೂಸ್ ಓದಿದೆ. ಬೆಂಗಳೂರು ಮೂಲದ 24 ವರ್ಷದ ಅರ್ಜುನ್ ಭಾರದ್ವಾಜ್ ಎಂಬ ಇಂಜಿನಿಯರ್ ಸ್ಟೂಡೆಂಟ್ ಮುಂಬೈಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ರೂಂನಿಂದ  ಮೇಲಿನಿಂದ ಕೆಳಕ್ಕೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರೋದು. ಆತನ ಆತ್ಮಹತ್ಯೆಗೆ ಕಾರಣ ಏನು ಎಂದು ಕೂಡ ಫೇಸ್ಬುಕ್ ನಲ್ಲಿ ಲೈವ್ ಚಾಟ್ ಮಾಡಿ,  ಎಲ್ಲರಿಗು ಬೈ ಹೇಳಿ,  ನಂತರ ಕೆಳಗೆ ಹಾರಿ ಆತ್ಮ ಹತ್ಯೆ  ಮಾಡಿಕೊಂಡಿರುವುದು. ಅವನ ಆತ್ಮಹತ್ಯೆಗೆ ಕಾರಣ, ಅವನಿಗಿದ್ದ ಡಿಪ್ರೆಶನ್. ಈ ನ್ಯೂಸ್ ಓದಿದ ಮೇಲೆ ಈ  ಆತ್ಮಹತ್ಯೆ  ಯಾಕೆ ಮಾಡ್ಕೊತಾರೆ?  ಡಿಪ್ರೆಶನ್ ಯಾಕೆ ಬರುತ್ತೆ    ಅನ್ನೋ ಪ್ರಶ್ನೆಗಳು  ಇವತ್ತು ನನ್ನ ತಲೆಲ್ಲಿ ಗಿರ್ಕಿ ಹೊಡಿತಾ ಇವೆ. ನನ್ನ ತಲೇಲಿ  ಏನೆಲ್ಲಾ ವಿಷಯಗಳು ಬಂದವೋ ಅವನ್ನ ಇಲ್ಲಿ ಬರಿತಾಯಿದಿನಿ.. 



ಇತ್ತೀಚಿನ ದಿನಗಳಲ್ಲಿ ತುಂಬಾನೇ ಯಂಗ್ಸ್ಟರ್ಸ್ ಅತ್ಮಹತ್ಯೆ ಮಾಡಿಕೊಳ್ಳೋದು ಕಾಮನ್ ಆಗಿಹೋಗಿದೆ. sslc ಮತ್ತು puc ರಿಸಲ್ಟ ಅನೌನ್ಸ್ಆದ  ದಿನಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಇನ್ನೂ ಹೆಚ್ಚು.  ಬರೀ ಓದಿನ ವಿಷಯದಲ್ಲಿ ಮಾತ್ರವಲ್ಲ ನೌಕರಿ , ಕೌಟುಂಬಿಕ , ಸಾಮಾಜಿಕ, ಆರೋಗ್ಯಕ್ಕೆ ಸಂಬಂಧಿಸಿದಂತೆ ಎಸ್ಟೋ ವಿಷಯಗಳಿಗೆ ನಮ್ಮಎಲ್ಲರ  ಮನಸ್ಸುಗಳು  ಡಿಪ್ರೆಶನ್ ಗೆ ಹೋಗುತ್ತವೆ. 

ಡಿಪ್ರೆಶನ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುವರ ಪಟ್ಟಿಯಲ್ಲಿ ಪ್ರಪಂಚದಲ್ಲಿyee  ನಮ್ಮ ಭಾರತದ ಹೆಸರು  ಮುಂಚೂಣಿಯಲ್ಲಿ ಇರುವುದು  ವಿಷಾದನೀಯ.  ಈ ಡಿಪ್ರೆಶನ್ ಗೆ ಕಾರಣ ಏನು ಅಂತ ಯೋಚಿಸಿದಾಗ ಹಲವಾರು ವಿಷಯಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಪ್ರತಿ ವಿಷಯದಲ್ಲೂ ಪ್ರಬಲವಾಗಿ ಪೈಪೋಟಿ ಮಾಡಲೇ ಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ತಾವು ಎಲ್ಲರಿಗಿಂತ ಹೆಚ್ಚು ಮಾರ್ಕ್ಸ್ ತೆಗಿಬೇಕು ಅನ್ನೋ ಒತ್ತಡ. ತಂದೆ-ತಾಯಿಯರಿಗೆ ತಮ್ಮ ಮಗನ ಶಾಲಾ ಕಾಲೇಜುಗಳ ಬಿಲ್ ಕಟ್ಟುವ ಒತ್ತಡ. ನೌಕರಿ ಸಿಕ್ಕ ಮೇಲೆ ಒಳ್ಳೆ ಸಂಬಳ ಬರುತ್ತಿಲ್ಲ ಎಂಬ ಒತ್ತಡ, ಆಫೀಸ್ ನಲ್ಲಿ ತನಗೆ ಒಳ್ಳೆಯ ಸ್ಥಾನ ಸಿಕ್ಕುತ್ತಿಲ್ಲ ಎಂಬ ಒತ್ತಡ, ಇವುಗಳ ಜೊತೆ  ಕೌಟುಂಬಿಕ ಸಮಸ್ಯೆಗಳ ಸಾಗರದಲ್ಲಿ ಈಜುತ್ತಿರುವ ಎಲ್ಲರೂ  ಒಂದಲ್ಲ ಒಂದು ರೀತಿಯ ಅವರವರದೇ ಆದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುತ್ತಾರೆ. ಈ ಸಮಸ್ಯೆಗಳನ್ನ ಹೇಗೆ ನಿಭಾಯಿಸುತ್ತೀವಿ ಅದೇ ಜೀವನದ ಲೆಖ್ಖಾಚಾರ.

ಕೆಲವರು ಸಮಸ್ಯೆಗಳನ್ನ ಸ್ಫೂರ್ತಿ ಯಾಗಿ ತೆಗೆದುಕೊಂಡು ಬಗೆಹರಿಸಿಕೊಳ್ಳುತ್ತಾರೆ. ಸಮಸ್ಯೆ ಮನುಷ್ಯನಿಗಲ್ದೆ ಮರಕ್ಕ ಬರುತ್ತೆ ಅಂತ ಯಾವುದೇ ಸಮಸ್ಯೇನು ಕೂಲ್ ಆಗಿ ತೊಗೊಳೋ ಅಂಥವರು ಕೆಲವರಾದರೆ. ಇನ್ನು ಕೆಲವರು ಇಡೀ ಮೌಂಟ್ ಎವರೆಸ್ಟ್ ತಮ್ಮ ತಲೆ ಮೇಲೆ ಹೊತ್ತು ನಿಂತಿದಿವೇನೋ ಅನ್ನೋ ಮನಸ್ಥಿತಿಯಲ್ಲಿರುತ್ತಾರೆ. ಹೀಗೆ ಸಮಸ್ಯೆಯ ಸುಳಿಯಲ್ಲಿ ಮುಳುಗಿ ಡಿಪ್ರೆಶನ್ ಹಂತ ತಲುಪುತ್ತಾರೆ.  ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಾರೆ ಮತ್ತು  ಈ ಆತ್ಮಹತ್ಯೆಗೆ ಅನ್ನೋ ಅಪರಾಧವನ್ನ ತಮಗೆ ತಾವೇ ಮಾಡಿಕೊಳ್ಳುತ್ತಾರೆ. 

ಡಿಪ್ರೆಶನ್ ಆದಾಗ ನಾವು ಮಾಡಬೇಕಾದ್ದು ಇಸ್ಟೇ.....
 ನಮ್ಮ ಮನಸ್ಸು ಡಿಪ್ರೆಶನ್ ನಲ್ಲಿ ಮುಳುಗಿದೆ ಎಂದೆನಿಸಿದ  ಸಮಯದಲ್ಲಿ  ಮನೆಯ ಹಿರಿಯರೊಡನೆ ಕೂತು ತಮ್ಮ ಡಿಪ್ರೆಶನ್  ಬಗ್ಗೆ ಚರ್ಚಿಸಬೇಕು. ಇಲ್ಲವೇ  ಮಾನಸಿಕ ತಜ್ಞರ , ಡಾಕ್ಟರ ಹತ್ರ ಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸರಿಯಾದ ಮೆಡಿಸಿನ್ ತೊಗೊಂಡ್ರೆ ಎಲ್ಲ ಸರಿಹೋಗುತ್ತೆ. ನಮ್ಮ ಜನರಲ್ಲಿ ಇನ್ನೊಂದು ಅಳುಕು ಇದೆ. ಮಾನಸಿಕ ತಜ್ಞರನ್ನ ಭೇಟಿ ಮಾಡಿ ಅಲ್ಲಿ ಟ್ರೀಟ್ಮೆಂಟ್ ತೊಗೊಂಡ್ರೆ ನನ್ನ ಸುತ್ತಮುತ್ತಲಿನ ಸಮಾಜ ಎಲ್ಲಿ ತನ್ನನ್ನ ಹುಚ್ಚ ಅಂತ ಅನ್ನುತ್ತೋ ? ಅಂತ. ವಿದೇಶಗಳಲ್ಲಿ ಮಾನಸಿಕ ಡಾಕ್ಟರ ಗಳಿಗೆ ತುಂಬಾ ಬೇಡಿಕೆ. ಅಲ್ಲಿ ಸಣ್ಣ ಪುಟ್ಟ  ತಲೆನೋವಿಗೆಲ್ಲ  ಮತ್ತೆ ಚಿಕ್ಕ-ಪುಟ್ಟ ಬೇಜಾರಾದರು ಮಾನಸಿಕ ತಜ್ಞರನ್ನ ಭೇಟಿ ಮಾಡೋದು ಸಹಜವಾಗಿಹೋಗಿದೆ. ಇದು ನಮ್ಮಲ್ಲೂ ಬರಬೇಕು. ಆಗ ಈ ಆತ್ಮಹತ್ಯೆಯಂಥ ಸಮಸ್ಯೆ ಸಮಾಜದಲ್ಲಿ ಕಡಿಮೆಯಾಗುತ್ತದೆ. 

ಸಮಸ್ಯೆ ಯಾರಿಗಿರಲ್ಲ ಹೇಳಿ ಪ್ರತಿಯೊಬ್ಬರಿಗೂ ಅವರವರದೇ ಆದ ಸಮಸ್ಯೆಗಳು ಇರುತ್ವೆ. ಹುಟ್ಟು-ಸಾವು, ಹಗಲು-ರಾತ್ರಿ, ಕಪ್ಪು-ಬಿಳುಪು, ಸುಖ-ದುಃಖ, ನೋವು-ನಲಿವು ಎಲ್ಲವನ್ನ ಭೂಮಿ ಮೇಲೆ ಹುಟ್ಟಿದ ಮೇಲೆ   ಎಲ್ಲ  ಅನುಭವಿಸಲೇ ಬೇಕು. ಆನೆಗೆ ಆನೆ ಭಾರ ಆದ್ರೆ , ಇರುವೆಗೆ ಇರುವೆ ಭಾರ.  ನಮ್ಮ ಕಷ್ಟನೆ ದೊಡ್ಡದು ಅಂತ ತಲೆ ಮೇಲೆ ಕೈ ಹೊತ್ತು ಮೂಲೆಗೆ ಕೂರಬಾರದು. ಹಾಗೇ ಯಾವ ಅನಾಹುತಾನೂ ಮಾಡ್ಕೊಬಾರದು. ನಿರಂತರ ಹೋರಾಟವೇ ಜೀವನ.

ಈಗ ನನಗೆ ಪುರಂದರ ವಿಠಲರ ಒಂದು ಕೀರ್ತನೆ ನೆನಪಾಗುತ್ತಿದೆ ಅದೇನೆಂದರೆ ,,

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸಂಸಾರದಲ್ಲಿ ಅಸೆ ಲೇಶ ಇಡದ್ಹಾಂಗೆ

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ

ಗೇರು ಹಣ್ಣಿನಲ್ಲಿ ಬೀಜ  ಸೇರಿದಂತೆ ಸಂಸಾರದಿ
ಮೀರಿ ಆಸೆ ಮಾಡದಂತೆ  ಧೀರ ಕೃಷ್ಣ ನ ಭಕುತರೆಲ್ಲ

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ
ಮೋಸ ಹೋಗದ್ಹಾಂಗೆ ಜಗದೀಶ ಪುರಂದರ ವಿಠಲನ ನೆನೆದು.






Tuesday 4 April 2017

ಏಯ್ ! ತರ್ಲೆ ಜಿರಳೆ, ನಿಂದೆಸ್ಟ್ ರಗಳೆ ?

ಹಬ್ಬಗಳು ಬಂತಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳಿಗೆ ಮನೆ ಸ್ವಚ್ಛ ಮಾಡೋ ಕೆಲಸ. ಮನೆಯ ಮೂಲೇ- ಮೂಲೇನೂ ಗುಡಿಸಿ ಒರೆಸಿ ಹಬ್ಬಕ್ಕೆ ಮನೆ ಸಿಂಗಾರ ಮಾಡಿ, ಹಬ್ಬ ಮುಗಿಯೋದ್ರಲ್ಲಿ ಹೆಣ್ಣುಮಕ್ಕಳ ಬೆನ್ನು ಮೂಳೆ ಮುರಿದು ಬಿದ್ದಿರುತ್ತೆ. ಎಲ್ಲ ಕೆಲಸ ಓಕೆ... ಆದ್ರೆ!!  ಮನೆ ಕ್ಲೀನ್ ಮಾಡೋವಾಗ ಈ ಜಿರಳೆಗಳ ಹಾವಳಿ ಇದ್ಯಲ್ಲ ಅದನ್ನ ನೆನೆಸಿಕೊಂಡರೆ ಮೈಎಲ್ಲಾ ಉರಿಯುತ್ತೆ. ಮನೆಯ ಯಾವ ಜಾಗದಲ್ಲಿ ಇವು ಇರಲ್ಲ ಹೇಳಿ ? ಇವುಗಳನ್ನ ತಿನ್ನೋಕಂತ ಮನೇಲಿ ನಾವು ಇದೀವಿ ಅಂತ ಆಗಾಗ ಗೋಡೆ ಮೇಲೆ ಹರಿದಾಡೋ ಹಲ್ಲಿಗಳದ್ದು ಇನ್ನೊಂತರ ಕಾಟ. ಆ ಜಿರಳೆಗಳು,  ಜಿರಳೆಗಳ ಕಪ್ಪು ಪಿಸ್ಕಿ, ಹಲ್ಲಿಗಳು ಜಿರಳೆಗಳನ್ನ ತಿಂದು  ಅರ್ಧ ದೇಹ ಅಲ್ಲೇ ಬಿದ್ದಿದ್ದು , ಅದನ್ನ ತಿನ್ನೋಕೆ ಬರೋ ಇರುವೆಗಳು,,,ಇವುಗಳಿಂದಾಗೋ ಹಿಂಸೇನ ಯಾರಿಗಂತಾ ಹೇಳೋದು ?



ನಾನು  ಈ ಜಿರಳೆಯಿಂದ ಉಪಟಳ ತಪ್ಪಿಸಿಕೊಳ್ಳೋಕೆ ಸಿಕ್ಕೋರತ್ರ ಎಲ್ಲ ಟಿಪ್ಸ್ ಕೇಳಿ, ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ, ನನಗೆ ಸಿಕ್ಕ ಕೆಲವೊಂದು ಸಮಾಧಾನಕರ, ಮಾಡಲು ಸುಲಭದ ಟಿಪ್ಸ್ ಗಳನ್ನ ಇಲ್ಲಿ ಬರಿತಾಯಿದೀನಿ....ನನ್ನಂತೆ ಜಿರಲೆಗಳಿಂದ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ನನ್ನದೊಂದು ಪುಟ್ಟ ಅಳಿಲು ಸೇವೆ ಥರ ಇವು ಅಳಿಲು ಸಲಹೆಗಳು ಅಂದುಕೊಳ್ಳಿ ,,,,,ಟ್ರೈ ಮಾಡಿ ನೋಡಿ,,,,

ಸಲಹೆಗಳು 


  • ಮೆಣಸು, ಈರುಳ್ಳಿ, ಬೆಳ್ಳುಳ್ಳಿ ರಸಗಳನ್ನು ಮಾಡಿ  ಜಿರಳೆ ಓಡಾಡುವಲ್ಲಿ ಚಿಮುಕಿಸಿದರೆ ಜಿರಳೆಗಳು ಸಾಯುತ್ತವೆ.
  • ಸ್ವಲ್ಪ ರೆಡ್ ವೈನ್ ನನ್ನು ಸ್ಲಾಬ್ ಕೆಳಗೆ ಚಿಮುಕಿಸಿದರೆ ಜಿರಳೆ ಬರುವುದಿಲ್ಲ.
  • ಅಡುಗೆ ಮನೆ ಕಬೋಡ ಒಳಗೆ ರೆಡ್ ವೈನ್ ಇಟ್ಟರೆ ಸಾಕು ಜಿರಳೆ ಬರುವುದಿಲ್ಲ.
  • ಜಿರಳೆ ಬರುವ ಕಡೆ ಸ್ಲಾಬ್  ಅಡಿ ಲವಂಗ ಪುಡಿಯನ್ನು ಇಡಿ. ಎರೆಡು - ಮೂರೂ ವಾರಕ್ಕೊಮ್ಮೆ ಪುಡಿ ಬದಲಾಯಿಸುತ್ತಿರಿ.
  • ಸುವಾಸನೆ ಭರಿತ ಕರಿಬೇವು ಸೊಪ್ಪನ್ನು  ಜಿರಳೆ ಓಡಾಡುವಲ್ಲಿ ಇಟ್ಟರೆ ಜಿರಳೆಗಳು ಆ ವಾಸನೆಗೆ ದೂರ ಓಡುತ್ತವೆ.
  • ಕಾಫೀ ಬೀಜ ಅಥವಾ ಕಾಫೀ ಪುಡಿ  ಮತ್ತು ತಂಬಾಕು ಪುಡಿಯನ್ನು ಮಿಶ್ರಣ ಮಾಡಿ ಅಲ್ಲಲ್ಲಿ ಚಿಕ್ಕ ಪ್ಲ್ಯಾಸ್ಟಿಕ್ ಕಪ್ ಗಳಲ್ಲಿ ತುಂಬಿಡಿ ಅದನ್ನು ತಿಂದು  ಜಿರಳೆ ಸಾಯುತ್ತವೆ.
  • ಮೊಟ್ಟೆಯ ಚಿಪ್ಪನ್ನು ಜಿರಳೆ ಬರುವ ಕಡೆ ಇಟ್ಟರೆ ಸಾಕು ಜಿರಳೆ ಮನೆಯೊಳಗೇ ಬರುವುದಿಲ್ಲ.
  • ಸಕ್ಕರೆ ಪುಡಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ , ಅದಕ್ಕೆ ಬೋರಿಕ್  ಆಸಿಡ್ ಹಾಕಿ ಮಿಶ್ರಣ ಮಾಡಿ ಇಟ್ಟರೆ ಅದರ ವಾಸನೆಗೆ ಜಿರಳೆ ದೂರ ಓಡುತ್ತವೆ.
  • ಬೋರಾಕ್ಸ್  ಪುಡಿಯನ್ನು 15 ದಿನಗಳಿಗೊಮ್ಮೆ ಚಿಮುಕಿಸುತ್ತಿದ್ದರೆ ಜಿರಳೆಗಳು ಬರುವುದಿಲ್ಲ. 
  • ಬೋರಿಕ್ ಆಮ್ಲ ಮತ್ತು ಅದರ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಅಲ್ಲಲ್ಲಿ ಇಡಿ. ಅದನ್ನು ತಿಂದ ಜಿರಳೆಗಳು ಸಾಯುತ್ತವೆ.
  • ಸ್ನಾನದ ಸೋಪ್ ಮತ್ತು ನೀರನ್ನು ಮಿಶ್ರಣ ಮಾಡಿ ನೇರವಾಗಿ ಜಿರಳೆ ಮೇಲೆ ಚಿಮುಕಿಸಿದರೆ ಆ ನೀರು  ಜಿರಳೆಗಳನ್ನು ಕೊಲ್ಳುತ್ತದೆ.
  • ಪ್ರತಿ ಎರೆಡು ವಾರಕ್ಕೊಮ್ಮೆ 2 ಕಪ್  ಅಮೋನಿಯಗೆ ನೀರನ್ನು ಹಾಕಿ ನೆಲವನ್ನು ಒರೆಸುತ್ತಿದ್ದರೆ ಆ ವಾಸನೆಗೆ ಜಿರಳೆ ಹೊರ ಹೋಗುತ್ತವೆ.
  • ಸಪ್ತಾಲಿನ್ ಬಾಲ್ ನ್ನು ಬಟ್ಟೆಗಳಿರುವಲ್ಲಿ,  ಬಾತ್ರೂಮ್ ನಲ್ಲಿ, ಅಡುಗೆ ಮನೆಯಲ್ಲಿ ಅಲ್ಲಲ್ಲಿ ಇಡಿ ಅದರ ವಾಸನೆಗೆ ಜಿರಳೆ ದೂರ ಹೋಗುತ್ತವೆ.
  • 3ಭಾಗ ಬೊರಾಕ್ಸ್ ಮತ್ತು ಒಂದು ಭಾಗ ಸಕ್ಕರೆ ಮಿಶ್ರಣ ಮಾಡಿ ಜಿರಳೆ ಹೆಚ್ಚಾಗಿರುವ ಜಾಗಕ್ಕೆ ಸ್ಪ್ರೇ ಮಾಡಿ ತಕ್ಷಣ ಜಿರಳೆಗಳು ಸಾಯುತ್ತವೆ.
  • ಬೊರಕ್ಷ್ ಬಳಸಲು ಇಷ್ಟ ಇಲ್ಲ  ಅಂದ್ರೆ ಅಡುಗೆ ಸೋಡಾ ಮತ್ತು ಸಕ್ಕರೆ ಸಮ ಪ್ರಮಾಣದಲ್ಲಿ ಬೆರೆಸಿ ಚಿಮುಕಿಸಿ.
  • ಫ್ಯಾಬ್ರಿಕ್ ಸಾಫ್ಟ್ನಾರ್ 3 ಭಾಗ , ಎರೆದು ಭಾಗ ನೀರು ಬಳಸಿ  ಜಿರಳೆ ಮೇಲೆ  ಮೇಲೆ ಸ್ಪ್ರೇ ಮಾಡಿ.