Thursday 2 November 2017

ಚನ್ನಗಿರಿ - ಚನ್ನಗಿರಿ ಕೋಟೆ - ಕೆಳದಿ ಚೆನ್ನಮ್ಮ ರಾಣಿ

ನಮ್ಮ ಸುತ್ತ ಮುತ್ತಲಿನ ಬೆಟ್ಟ- ಗುಡ್ಡಗಳು,  ಗುಡಿ-ಗೋಪುರಗಳು, ಕೋಟೆ, ಕಲ್ಯಾಣಿ,  ವೀರಗಲ್ಲು, ಮಾಸ್ತಿಕಲ್ಲು , ಶಾಸನಗಳು, ಸ್ಮಾರಕಗಳು, ಕಟ್ಟಡಗಳು ಇವೆಲ್ಲಾ ಹಲವಾರು ಇತಿಹಾಸದ  ವಿಷಯಗಳನ್ನ ಹಿಡಿದು ನಿಂತಿವೆ ಅಂದ್ರೆ ತಪ್ಪಾಗಲಾರದು.ಈ ಎಲ್ಲಾ ಹಳೆಯ ಕಾಲದ ಕಟ್ಟಡಗಳು ಬರೀ ಕಟ್ಟಡಗಳಲ್ಲ. ಅಲ್ಲೊಂದು ಇತಿಹಾಸವಿರುತ್ತದೆ. ಜನ ಜೀವನ, ಒಂದು ಜನಾoಗವೇ ನಡೆದು ಬಂದ  ಹಾದಿಯನ್ನು ಅವು ತಿಳಿ ಹೇಳುತ್ತವೆ. ಹಿಂದಿನ  ಕಾಲದಲ್ಲಿ ಅವುಗಳನ್ನ ಹೇಗೆ ಕಟ್ಟುತ್ತಿದ್ದರು?  ಜನ ಜೀವನ ಹೀಗಿತ್ತು.  ಎಂಬುದನ್ನು ನಮಗೆ ತಿಳಿಯಲು ಸಹಾಯವಾಗುತ್ತವೆ.  ಒಟ್ಟಾರೆ ನಮ್ಮ ಇತಿಹಾಸವನ್ನು ತಿಳಿಸುತ್ತವೆ ಅನ್ನಬಹುದು ಅಲ್ಲವೇ?.




ಈಗ ನಾನು ಬರೆಯಲು ಹೊರಟಿರುವ ಊರು ಚನ್ನಗಿರಿ ಮತ್ತು ಅಲ್ಲಿರುವ ಕೋಟೆ ಬಗ್ಗೆ. . ಚನ್ನಗಿರಿ ಬಗ್ಗೆ ಈಗಿನ ವಾಸ್ತವ ಸಂಗತಿ ಹೇಳಬೇಕು ಅಂದ್ರೆ,,  ಸ್ವತಂತ್ರ ಭಾರತದ ರಾಜ್ಯಗಳ  ವಿಭಜನೆಯ ನಂತ್ರ ಆಯಾ ರಾಜ್ಯಗಳಲ್ಲಿ ಜಿಲ್ಲೆಗಳ ವಿಂಗಡಣೆಯಾದ ಸಮಯದಲ್ಲಿ ಈ ಚನ್ನಗಿರಿ ಎಂಬ ಊರು ಮೊದಲು ಶಿವಮೊಗ್ಗ ಜಿಲ್ಲೆಗೆ ಸೇರಿತ್ತು,  ಈಗ ದಾವಣಗೆರೆ ಜಿಲ್ಲೆಗೆ ಸೇರಿದ ತಾಲ್ಲೂಕು ಆಗಿದೆ. ಈ ತಾಲ್ಲೂಕು ವ್ಯವಸಾಯಕ್ಕೆ ಪ್ರಾಧಾನ್ಯತೆ ಪಡೆದಿದೆ. ಇಲ್ಲಿ ಅರೆ ಮಲೆನಾಡು ವಾತಾವರಣವಿದೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಅಡಿಕೆ, ತೆಂಗು, ಮೆಕ್ಕೆಜೋಳ, ರಾಗಿ, ಶೇಂಗಾ, ತೊಗರಿ, ಜೋಳ, ನವಣೆ, ಉದ್ದು, ಹೆಸರು ಇನ್ನು ಅನೇಕ ಬೆಳೆಗಳನ್ನು ಪ್ರಮುಖವಾಗಿ ಬೆಳೆಯುತ್ತಾರೆ. 




ಚನ್ನಗಿರಿಯ ಇತಿಹಾಸ :-   ಈ ಊರಿಗೆ 16 ಮತ್ತು 17ನೇ  ಶತಮಾನದ ಇತಿಹಾಸವಿದೆ. ಈ ಚನ್ನಗಿರಿಯನ್ನು ಗಂಗರು- ಅಸಂಡಿನಾಡು ಎಂಬ ಹೆಸರಿನಿಂದ ಆಳುತ್ತಿದ್ದರು . ನಂತರ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನೋಳಂಬವಾಡಿಯಾಗಿ ಆಳಲ್ಪಟ್ಟಿತ್ತು. ಉಚ್ಚಂಗಿಯ ಪಾಂಡ್ಯರ ಆಳ್ವಿಕೆಯಲ್ಲಿ ಹುಲಿಕೆರೆಯಾಗಿ  ಮತ್ತು  17ನೇ  ಶತಮಾನದಲಿ ಕೆಳದಿ ಸಂಸ್ಥಾನದಿಂದ ಆಳ್ವಿಕೆ ನಡೆಸಿಕೊಂಡಿತ್ತು. ಈ ಪ್ರದೇಶದ ಬೆಟ್ಟದ ಮೇಲೆ ಕೆಳದಿ ಚೆನ್ನಮ್ಮಳು  ಕೋಟೆಯನ್ನು ಕಟ್ಟಿಸಿದ ನಂತರ ಚನ್ನಗಿರಿ ಎಂಬ ಹೆಸರು ಬಂದಿತು . ಚನ್ನಗಿರಿಯ  ಮೊದಲ ಹೆಸರು ಹುಲಿಕೆರೆ ಎಂದಿತ್ತು ಎಂದು ಹೇಳಲಾಗುತ್ತದೆ. ಸ್ವಾತಂತ್ರ ಹೋರಾಟಗಾರ ದೊಂಡಿಯವಾಘನ ಹುಟ್ಟಿದ ಊರು ಎಂದು ಹೇಳಲಾಗುತ್ತದೆ. ಚನ್ನಗಿರಿಯ ಐತಿಹಾಸಿಕ  ಕೇಂದ್ರ ಬಿಂದು ಚನ್ನಗಿರಿಯ ಕೋಟೆ. 




ಚನ್ನಗಿರಿ ಕೋಟೆ ಹೀಗಿದೆ:- 

ಬೇರೆ ಕೋಟೆಗಳಿಗೆ ಹೋಲಿಸಿದರೆ ಈ ಕೋಟೆ ಅಂತಹ ದೊಡ್ಡ ಕೋಟೆಯೇನಲ್ಲ. ಚಿಕ್ಕ ಕೋಟೆಯೇ.  ಈ  ಚನ್ನಗಿರಿ ಕೋಟೆ ಮಣ್ಣು, ಕಲ್ಲು ಮತ್ತು ಗಾರೆಯಿಂದ ಕಟ್ಟಲಾಗಿದೆ. ಇದಕ್ಕೆ ಕೊತ್ತಳವಿದ್ದು ಮುಖ್ಯ ಬಾಗಿಲು ಉತ್ತರ ದಿಕ್ಕಿಗೆ ಇದೆ. ಮೊಟ್ಟೆಯ ಆಕಾರವಿರುವ ಈ ಕೋಟೆಗೆ ಎರೆಡು  ಕಾವಲು ಗೋಪುರಗಳಿವೆ. ಮತ್ತು 7 ಬುರುಜುಗಳಿವೆ. ಬೆಟ್ಟದ ಮೇಲೆ ಒಂದು ತಗ್ಗು ಇದೆ ಅಂದಿನ ಕಾಲದಲ್ಲಿ ಬೆಟ್ಟದ ಮೇಲಿನ ಜನರಿಗೆ ನೀರಿನ ವ್ಯವಸ್ಥೆಗೆ ಈ ತಗ್ಗು ಮಾಡಿರ ಬಹುದೇನೋ.ಅನ್ನಿಸುತ್ತೆ. ಮತ್ತೊಂದು ಕಡೆ  ಬಂಡೆಗಳನ್ನು ಕೊರೆದು ಮಾಡಿದ ನೀರಿನ ಕೊಳವಿದ್ದು ಅದಕ್ಕೆ ಮೆಟ್ಟಿಲುಗಳಿವೆ. ಇಲ್ಲಿ ಬೇಟೆ ರಂಗನಾಥ ಸ್ವಾಮಿ ಗುಡಿ ಇದ್ದು  ಇಲ್ಲಿ ರಂಗನಾಥ ಸ್ವಾಮಿ ವಿಗ್ರಹವಿದೆ.  ಬೇಟೆ ಎಂದರೆ  ಯುಧ್ಧ ಎಂದು ಕನ್ನಡದ ಸಮಾನ ಪದ.  ಈ ರಂಗನಾಥ ಸ್ವಾಮಿ  ಆಗಿನ ಕಾಲದಲ್ಲಿ ಶಕ್ತಿಶಾಲಿ ಮತ್ತು ಜನರ ನಂಬಿಕೆಯ  ದೇವನಾಗಿದ್ದನು ಅನ್ನಿಸುತ್ತೆ. ಈ ಪ್ರದೆಶದಲ್ಲಿ ಆಳಿದ ರಾಜ ಮಹಾರಾಜರು ಯುಧ್ಧಕ್ಕೆ  ಹೊರಡುವ ಮುನ್ನ ಇಲ್ಲಿ ಪೂಜೆ ಸಲ್ಲಿಸಿ ಹೊರಡುತ್ತಿದ್ದರು ಎಂಬ  ನಂಬಿಕೆ ಇದೆ.  ಇಲ್ಲಿ ಹಳೆಯ ಕಾಲದ ರಥವಿದೆ. ಅದು ಮುರಿದು ಬಿದ್ದಿದೆ. 




ಕೆಳದಿ ಚೆನ್ನಮ್ಮ ರಾಣಿ  ಮತ್ತು  ಈ ಕೋಟೆಗೂ ಇರುವ  ನಂಟು :-

ಕೆಳದಿ ರಾಣಿ ಚೆನ್ನಮ್ಮ ಕ್ರಿ.ಶ. 1671  ರಿಂದ 1698  ರವರೆಗೆ ಆಳ್ವಿಕೆಯನ್ನು ನಡೆಸಿದಳು. ಆಗಿನ ಕಾಲದಲ್ಲಿ ಕೆಳದಿ ಸಂಸ್ಥಾನಕ್ಕೂ ಮತ್ತು ಮರಾಠರಿಗೂ ಯುಧ್ಧಗಳು ನಡೆಯುತ್ತಿದ್ದವು. ಆದರೂ  ಔರಂಗಜೆಬನಿಂದ ಯುಧ್ಧದಲ್ಲಿ ಸೋಲನ್ನ ಅನುಭವಿಸಿದ ಶಿವಾಜಿಯ ಮಗ ರಾಜಾರಾಮನಿಗೆ ಕೆಳದಿ ಚನ್ನಮ್ಮ  ಇಲ್ಲಿ ಆಶ್ರಯ ನೀಡಿದ್ದಳು. ಮತ್ತು  ಆ ಕಾರಣದಿಂದ   ಔರಂಗ ಜೇಬನು ಕೆಳದಿಯನ್ನು ಆಕ್ರಮಣ ಮಾಡಿದಾಗ ಆತನ ಸೈನ್ಯವನ್ನು ಯುಧ್ಧಮಾಡಿ  ಹಿಮ್ಮೆಟ್ಟಿಸುತ್ತಾಳೆ. 

ಇಷ್ಟೆಲ್ಲ ಇತಿಹಾಸವಿರುವ ಈ ಚನ್ನಗಿರಿ ಕೋಟೆ ಈಗ ಹಾಳಾದ ಸ್ಥಿತಿಯಲ್ಲಿದೆ. ಇನ್ನು ಕೆಲವು ವರ್ಷಗಳು ಉರುಳಿದಂತೆ ಇದರ ಪರಿಸ್ಥಿತಿ ಏನಾಗಬಹುದು ಅಂದರೆ ಕಾಣೆಯಾಗಬಹುದು ಎಂದು ಉತ್ತರ ಕೊಡಬಹುದಷ್ಟೆ. ಅಲ್ಲಿಯ ಜನರನ್ನ  ಅಲ್ಲಿ ಕೋಟೆ ಇದೆ ಅಂತೇ ಅಲ್ವ ಅಂತ ಕೇಳಿ ನೋಡಿ. ಅಯ್ಯೋ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತ ಹೇಳುತ್ತಾರೆ ಹಂಗೆ ಈ ಕೋಟೆ.  ಅದೇನ್ ಮಹಾ ದೊಡ್ಡ ಕೋಟೆ ಅಲ್ಲ. ಏನೋ ಸ್ಕೂಲ್- ಕಾಲೇಜು ಮಕ್ಳು ಬಂದು ಹೋಗೋ ಪಿಕ್ನಿಕ್ ಸ್ಪಾಟ್ ಅಷ್ಟೇ ಅಂತ ಹೇಳ್ತಾರೆ. ಇದು ನಮ್ಮ ಇತಿಹಾಸದ ಬಗ್ಗೆ ನಮ್ಮ ಜನ ತೋರಿಸೋ ಕಾಳಜಿ. ಅದಕ್ಕೆ ಈ ಕೋಟೆ ಬರೀಬೇಕನ್ನಿಸ್ತು ಆ ಕಾರಣಕ್ಕಾಗಿ ಈ ಬರಹ . 





ಚಿತ್ರಗಳು : ಗೂಗಲ್ಲಿನಿಂದ 

Saturday 14 October 2017

ದೀಪಾವಳಿಯ ದೇವೀರಮ್ಮ,,,,, ದೇವೀರಮ್ಮನ ಗುಡ್ಡ

ದೀಪಾವಳಿ ಹಬ್ಬ ಅಂದರೆ ನಮಗೆ ಹಬ್ಬಗಳ ಹಬ್ಬ ಅಂತ ನನಗನ್ನಿಸುತ್ತೆ. ಮನೆಗಳಲ್ಲಿ ಚಿಕ್ಕವರಿಂದ ಹಿಡಿದು ಅಜ್ಜಿ ತಾತನ ವರೆಗಿನ ಎಲ್ಲರಿಗು ಸಂತಸ  ಹುಮ್ಮಸ್ಸು ಕೊಡುವ ಹಬ್ಬ ಎಂತಲೇ ಹೇಳಬಹುದು. ಬೆಳಕಿನ ಹಬ್ಬ. ನಾನು ಈ ಹಬ್ಬಕ್ಕೆ ಹಬ್ಬಗಳ ಹಬ್ಬ ಅಂತ ಯಾಕೆ ಅನ್ನಿಸುತ್ತೆ ಅಂದ್ರೆ ಈ ದೀಪಾವಳಿ ಹಬ್ಬದಲ್ಲಿ  ಬಲೀಂದ್ರ ಪೂಜೆ, ಹಿರಿಯರ ಪೂಜೆ, ಲಕ್ಷ್ಮಿ ಪೂಜೆ, ದೇವೀರಮ್ಮನ ಪೂಜೆ, ಕೆರಕನ ಪೂಜೆ ಹೀಗೆ ಹಲವಾರು ದೇವರುಗಳಿಗೆ ಹಲವಾರು ರೀತಿಯ ಸಿಹಿ ಮತ್ತು ಖಾರದ ತಿಂಡಿಗಳನ್ನು ಮಾಡಿ ಪೂಜೆ ಸಲ್ಲಿಸುವ ವಾಡಿಕೆ ಇದೆ.  ಅದಕ್ಕಾಗಿ ಇದನ್ನು ಹಬ್ಬಗಳ ಹಬ್ಬ ಅಂದರೆ ತಪ್ಪಾಗಲ್ಲ ಅಲ್ವ. ಈ ಎಲ್ಲ ಪೂಜೆಗಳನ್ನ  ಸುಮ್ನೆ ಮಾಡೋಲ್ಲ ಅದೆಲ್ಲದಕ್ಕೂ ಕಾರಣಗಳು ಇವೆ. ಬಲೀಂದ್ರ ಪೂಜೆ ಮಾಡೋದು ಬಲಿ ಚಕ್ರವರ್ತಿಗೆ ಭೂಮಿಗೆ ಸ್ವಾಗತ ಮಾಡುವ ಮತ್ತು ಆತನನ್ನು  ಸಂತಸ ಪಡಿಸಲು ಮತ್ತು ಹಿರಿಯರ ಪೂಜೆ ಮಾಡೋದು ನಮ್ಮ ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲೆಂದು. ಲಕ್ಷ್ಮಿ ಪೂಜೆ ಮಾಡೋದು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಗಿರಲೆಂದು, ಇನ್ನೊಂದು ಈ ದೇವೀರಮ್ಮ ಪೂಜೆ.  ನಾನು ಹಿಂದೆ ಬರೆದಿರುವ ಪೂಜೆಗೆ ನಾನು ಚಿಕ್ಕವಳಿದ್ದಾಗ ಒಂದು ರೀತಿಯ ಸಮಾಧಾನಕರ ಉತ್ತರ ಸಿಗುತ್ತಿತ್ತು ಆದ್ರೆ ಈ ದೇವೀರಮ್ಮನ ಪೂಜೆ ಯಾಕೆ ಮಾಡ್ತೀವಂತ ನಂಗೆ ಗೊತ್ತಿರಲಿಲ್ಲ.  ಈಗ ಸ್ವಲ್ಪ ಅದರ ಬಗ್ಗೆ ಗೊತ್ತಾದ್ದರಿಂದ ಈ ದೇವೀರಮ್ಮ ಪೂಜೆ ಬಗ್ಗೆ ಬರೀತಿದೀನಿ.  ಈ ದೇವೀರಮ್ಮ ಅಂದ್ರೆ ಪಾರ್ವತಿ.  ಪಾರ್ವತಿಯ ಹಲವು ಅವತಾರಗಳಲ್ಲಿ ಈ ದೇವೀರಮ್ಮನ ಅವತಾರವು ಒಂದು.



ದೀಪಾವಳಿಯಂದು ಮನೆಗಳಲ್ಲಿ ದೇವೀರಮ್ಮನ ಪೂಜೆ :-  ನಮ್ಮ ಊರಿನ ಕಡೆ ಎಲ್ಲರ ಮನೆಗಳಲ್ಲಿ ದೀಪಾವಳಿ ಹಬ್ಬದಂದು ಎಳ್ಳಿನ ಚಿಗಣಿ ಮತ್ತು ಅಕ್ಕಿಯಿಂದ ಮಾಡಿದ  ತಮ್ಮಟದಲ್ಲಿ  ಎರೆಡೆರೆಡು ದೀಪಗಳ  ಆಕಾರವನ್ನು ಮಾಡಿ ಎಣ್ಣೆಯ ಬದಲು ಹಾಲನ್ನ ಮೀಸಲು ಕಟ್ಟಿ ಕಾಯಿಸಿದ ತುಪ್ಪವನ್ನು ಹಾಕಿ ಮದ್ಯದಲ್ಲಿ ಕಡ್ಲೆ ಬತ್ತಿಯನ್ನ ಇಟ್ಟು ಹೂ ಹಣ್ಣು ಕಾಯಿಗಳನ್ನ ಇಟ್ಟು ಪೂಜಿಸಿ ನಂತರ ಉತ್ತರ ದಿಕ್ಕಿಗೆ ಮುಖ ಮಾಡಿ ದೇವೀರಮ್ಮನಿಗೆ ಬೆಳಗುತ್ತಾರೆ. ವರ್ಷದಲ್ಲಿ ಒಮ್ಮೆ ಈ  ರೀತಿ ಪೂಜೆ ಮಾಡಿದರೆ ದೇವೀರಮ್ಮ ನಮ್ಮನ್ನ ವರ್ಷವಿಡೀ ಕೈ ಹಿಡಿದು ಕಾಪಾದುತ್ತಾಳೆ ಅನ್ನೋ ನಂಬಿಕೆ ನಮ್ಮೂರುಗಳಲ್ಲಿ ಇದೆ.



ಈ ಮೇಲಿನ ಪೂಜೆ ಬಗ್ಗೆ ಹೇಳಿದ ಮೇಲೆ ಈ ದೇವೀರಮ್ಮ ಯಾರು ಅನ್ನೋ ಪ್ರಶ್ನೆ ನಮ್ಮ ತಲೆಯಲ್ಲಿ ಬರೋದು ಸಹಜ ಅಲ್ವ. ಹೌದು ನಂಗು ಈ ಪ್ರಶ್ನೆ ನಾನು ಚಿಕ್ಕವಳಿದ್ದಾಗ ಹಬ್ಬದ ದಿನ ಬರ್ತಿತ್ತು. ಅಲ್ಲದೆ ನಮ್ಮೂರಿನ ಕಡೆ ದೀಪಾವಳಿಯಲ್ಲಿ  ದೇವೀರಮ್ಮನ ಗುಡ್ಡಕ್ಕೆ ಹೋಗಿ ದೇವೀರಮ್ಮನ ದರ್ಶನ ಮತ್ತು ದೀಪೋತ್ಸವ ನೋಡುವ ಪಧ್ಧತಿ ಇದೆ. ಮನೆಗಳಲ್ಲಿ ಈ  ಚಿಗಣಿ ಮತ್ತು ತಮ್ಟದ ದೀಪಗಳನ್ನ ಬೆಳಗುವ ಮೂಲಕ  ಆ ಬೆಟ್ಟಕ್ಕೆ, ದೆವೀರಮ್ಮನಿಗೆ ಇಲ್ಲಿಂದಲೇ ಪೂಜೆ ಸಲ್ಲಿಸುತ್ತೇವೆ ಅನ್ನೋ ನಂಬಿಕೆ ನಮ್ಮಲ್ಲಿ ಇದೆ.  ಆಗ ಅದರ ಬಗ್ಗೆ ಯೋಚಿಸೋದಕ್ಕಿಂದ ಪೂಜೆ ಮುಗಿದು ಹೊಟ್ಟೆ ತುಂಬಿಸಿಕೊಳೋ  ಕಡೆ,  ಹೊಸ ಬಟ್ಟೆ, ಪಟಾಕಿಗಳ  ಕಡೆ ನನ್ನ ಗಮನ ಇರ್ತಿತ್ತು.  ಯಾರ್ಯಾರು ಮನೇಲಿ ಎಂತೆಂತಾ ಪಟಾಕಿ ಹೊಡಿತಾರೆ ಅನ್ನೋ ಕಡೆ ಜಾಸ್ತಿ ಸಡಗರ ಇರ್ತಿತ್ತು. 

ದೇವೀರಮ್ಮನ ಗುಡ್ಡದ ಕಥೆ :- 

ಈ ದೇವೀರಮ್ಮನ ಗುಡ್ಡ ಇರುವುದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನ ಗಿರಿ ಸಾಲುಗಳಲ್ಲಿ ಚಂದ್ರ ದ್ರೋಣ ಪರ್ವತಕ್ಕೆ ಅಂಟಿಕೊಂಡಿದೆ.  ಈ  ದೇವೀರಮ್ಮ ಪಾರ್ವತಿಯ ಅವತಾರಗಳಲ್ಲಿ ಒಂದು ಅವತಾರವಾಗಿದೆ. ಮಹಿಷಾಸುರನ ಸಂಹಾರದ ನಂತರ ತನ್ನ ವಿಶ್ವ ರೂಪಗಳನ್ನು ಜಗತ್ತಿಗೆ ತೋರಿಸಿ ಶಾಂತ ರೂಪ ತಳೆದು ಈ ದೇವೀರಮ್ಮನ ಅವತಾರದಲ್ಲಿ ಈ ದೇವೀ ಗುಡ್ಡಕ್ಕೆ ಬಂದು ನೆಲೆಸುತ್ತಾಳೆ  ಎಂಬ ನಂಬಿಕೆ ಇದೆ. 

ಇನ್ನೊಂದು ಕಥೆಯಲ್ಲಿ ಆಗಿನ ಕಾಲದಲ್ಲಿ ಅಲ್ಲಿ ಇದ್ದಂಥಹ ಸಂತರುಗಳಾದ ದತ್ತಾತ್ರೇಯ, ರುದ್ರಮುನಿ, ಮುಳ್ಳಯ್ಯ, ಸೀತಾಲಯ್ಯ, ಗಲ್ಲಹಳ್ಳಿ ಅಜ್ಜಯ್ಯ ಅವರುಗಳು ಈ ದೇವಿಗಿರಿ ಬೆಟ್ಟದಲ್ಲಿ ಬಂದು ನೆಲೆಸಲು ಕೇಳಿಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. 

ನರಕ ಚತುರ್ದಶಿ ಯಂದು ಮಾತ್ರ ಈ ದೇವಿಯ ಗುಡಿಯ ಬಾಗಿಲನ್ನು ತೆರೆದು ಪೂಜೆ ಸಲ್ಲಿಸಲಾಗುತ್ತದೆ. ಅಂದು ಇಲ್ಲಿ ದೀಪೋತ್ಸವ  ನಡೆಯುತ್ತದೆ. ಇದನ್ನ ನೋಡಲು ನಾಡಿನ ಹಲವಾರು ಕಡೆಗಳಿಂದ ಜನರು ಬರುತ್ತಾರೆ. ಹರಕೆ ಇರುವವರು ಚಪ್ಪಲಿಗಳನ್ನ ಹಾಕದೆ ಈ ಬೆಟ್ಟ ಹತ್ತುವರು.


 ದೇವೀರಮ್ಮನ ಗುಡ್ಡದ  ಕೆಳಗೆ ಇರುವ ದೇವೀರಮ್ಮನ ಗುಡಿ :-

















ದೇವೀರಮ್ಮನ ಗುಡ್ಡ :-  2017 ರ 


deveerammanabetta, images,
ದೇವೀರಮ್ಮನ ಗುಡ್ಡ  ಚಿಕ್ಕಮಗಳೂರು ಜಿಲ್ಲೆ:- 


Wednesday 11 October 2017

ದೀಪಾವಳಿ ಬಗೆಗಿನ ಪೌರಾಣಿಕ ಹಿನ್ನೆಲೆ ಮತ್ತು ಜನಪದ ಕಥೆಗಳು

ಭಾರತೀಯರಿಗೆ ಹಬ್ಬಗಳನ್ನ  ಆಚರಿಸುವುದೆಂದರೆ ಎಲ್ಲಿಲ್ಲದ ಸಡಗರ. ಬಹುಶಃ ಭಾರತದಲ್ಲಿ ಆಚರಿಸುವಷ್ಟು  ಹಬ್ಬಗಳು ಬೇರೆ ಯಾವ ದೇಶಗಳಲ್ಲೂ ಇಲ್ಲ ಅಂತ ಅನ್ನಿಸುತ್ತೆ.   ಈ ಹಬ್ಬಗಳನ್ನ ಮಾಡುವ  ಮೂಲಕ  ದುಡಿತದ ಜಂಜಾಟದಿಂದ ಒಂದಷ್ಟು ನೆಮ್ಮದಿಯನ್ನು ಕಾಣಬಯಸುತ್ತಾರೆ. ಬಂಧುಗಳು- ಗೆಳೆಯರೊಂದಿಗೆ ಸಂಭ್ರಮ ಆಚರಿಸಿ ಖುಷಿಯಿಂದ  ಕಾಲ  ಕಳೆಯುತ್ತಾರೆ. ಅಂತಹ ಹಬ್ಬಗಳಲ್ಲಿ ದೀಪಾವಳಿಯು ಒಂದು. ಪ್ರತಿಯೊಬ್ಬ ಭಾರತೀಯರೂ ದೀಪಾವಳಿಯ ಹಬ್ಬದ ಸಡಗರದಲ್ಲಿ ತೇಲುತ್ತಾರೆ. ದೀಪಾವಳಿ ಹಬ್ಬವನ್ನು ಪ್ರಪಂಚದಲ್ಲಿ ಯಾವ ಮೂಲೆಯಲ್ಲಿದ್ದರೂ ಬಹಳ ಸಂತೋಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ, ಹೊಸ ಬಟ್ಟೆಗಳನ್ನು ತೊಟ್ಟು, ಸಿಹಿತಿಂಡಿಗಳನ್ನು ಹಂಚಿ, ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭಣೆಯಿಂದ ಈ ಹಬ್ಬ ಆಚರಿಸುತ್ತಾರೆ.

  ಅಂತರ್ಜಾಲ ಸಂಗ್ರಹ 


ಯಾವುದೇ ಹಬ್ಬವಾದರೂ ಅದಕ್ಕೆ ಒಂದು ಬಲವಾದ  ಪೌರಾಣಿಕ ಹಿನ್ನೆಲೆ ಇಲ್ಲವೇ ಜನಪದ ನಂಬಿಕೆಗಳು ಬಲವಾಗಿ ಪ್ರಭಾವ  ಬೀರಿರುತ್ತವೆ.  ಹಾಗೆ ನಾನು ದೀಪಾವಳಿ ಹಬ್ಬದ ಬಗ್ಗೆ  ಕೇಳಿ ಮತ್ತು ಓದಿ  ತಿಳಿದುಕೊಂಡ  ಕೆಲವು ಕಥೆಗಳನ್ನ ಇಲ್ಲಿ ಕಲೆಹಾಕುವ ಪ್ರಯತ್ನ ಮಾಡಿದ್ದೇನೆ. ಸದ್ಯಕ್ಕೆ ಗೊತ್ತಿರುವ ಎರೆಡು ಕಥೆಗಳು ಇಲ್ಲಿವೆ.


ಪೌರಾಣಿಕ ಹಿನ್ನೆಲೆ :-  ನರಕ ಚತುರ್ದಶಿಯ ಎರಡನೇ ದಿವಸ ಬಲಿಪಾಡ್ಯಮಿ.  ಇದರ ಪೌರಾಣಿಕ ಹಿನ್ನೆಲೆಯು ಹೀಗಿದೆ.
  ಅಂತರ್ಜಾಲ ಸಂಗ್ರಹ 
ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದನು ಮಹಾ ವಿಷ್ಣುಭಕ್ತನಾಗಿದ್ದ. ಆತನ ಮಗ ವಿರೋಚನ ಈ  ವಿರೋಚನನ ಮಗನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ  ಪ್ರವೃತ್ತಿಯನ್ನು ಬಿಡುತ್ತಿರಲಿಲ್ಲ. ಈತನ ರಾಜ್ಯವು ತುಂಬಾ ಸಮೃದ್ಧಿಯಿಂದ ಕೂಡಿತ್ತು.  ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು.  ಈತನನ್ನು ಸಂಹಾರಮಾಡಬೇಕೆಂದು   ಋಷಿಗಳು ವಿಷ್ಣುವಿನಲ್ಲಿ ಕೇಳಿಕೊಂಡರು.  ಹೋರಾಟ ನಡೆಸಿ ಆತನನ್ನು ಮಟ್ಟ ಹಾಕುವುದು ಕಷ್ಟ ಸಾಧ್ಯವಾಗಿತ್ತು.

ದಾನ ಮಾಡುವುದರಲ್ಲೂ ಎತ್ತಿದ ಕೈ ಈ ಬಳಿ ಚಕ್ರವರ್ತಿಯಾದಾಗಿತ್ತು. ಅದೇ  ಬಲಿಚಕ್ರವರ್ತಿಗೆ ಉರುಳಾಗಿ ಪರಿಣಮಿಸಿತು.  ಒಮ್ಮೆ ಅಶ್ವಮೇಧಯಾಗ ಮಾಡಬೇಕೆಂಬ ಆಲೋಚನೆ ಮಾಡುತ್ತಾನೆ . ಈ ಯಾಗ ಮಾಡುವಾಗ ಯಾರೇ ಏನೇ ಬೇಡಿದರೂ  ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡನು.

ಶುಕ್ರಾಚಾರ್ಯ  ಋಷಿಮುನಿಯು  ಈತನಿಗೆ ಈ ಕೆಲಸ ಮಾಡಬೇಡ ಎಂಬುದಾಗಿ ಸಲಹೆಯಿತ್ತನು. ಆದರೆ ಋಷಿಮುನಿಯ ಈ ಮಾತಿಗೆ ಬಲಿಚಕ್ರವರ್ತಿ ಬೆಲೆ ಕೊಡಲಿಲ್ಲ. ಅಶ್ವಮೇಧ ಯಾಗ ನಡೆಯಿತು. ಬಂದವರಿಗೆಲ್ಲಾ ದಾನ ಕೊಡಲಾರಂಭಿಸಿದ ಇದೇ ಸಮಯದಲ್ಲಿ ಬಲಿಚಕ್ರವರ್ತಿಯನ್ನು ಸಂಹಾರ ಮಾಡಲು ಸರಿಯಾದ  ಸಮಯವೆಂದು ಭಾವಿಸಿದ ವಿಷ್ಣುವು, ವಾಮನ ರೂಪವನ್ನು ತಾಳಿ ಬಳಿ ಚಕ್ರವರ್ತಿ ಯಾಗ ನಡೆಸುತ್ತಿರುವ  ಸ್ಥಳಕ್ಕೆ ಬಂದನು. ಬಂದವನೇ ತನಗೆ ದಾನ ನೀಡಬೇಕೆಂದು ಕೇಳಿಕೊಂಡನು.

ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುವುದು. ಈ ಸಮಯದಲ್ಲಿ ಶುಕ್ರಾಚಾರ್ಯರು ಬಲಿಚಕ್ರವರ್ತಿಯನ್ನು ಉಳಿಸುವ ಸಲುವಾಗಿ ಕಪ್ಪೆರೂಪ ತಾಳಿ ಕಮಂಡಲದ ರಂಧ್ರದಲ್ಲಿ ಸೇರಿಕೊಂಡರು. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು ಬೀಳುತ್ತಿರಲಿಲ್ಲ.ಶುಕ್ರಾಚಾರ್ಯರ ಕುಯುಕ್ತಿಯನ್ನು ಅರಿತ ವಿಷ್ಣು ಪರಮಾತ್ಮ ದರ್ಭೆಯನ್ನು ತೆಗೆದುಕೊಂಡು ಬಲಿಚಕ್ರವರ್ತಿಯಲ್ಲಿ ಏನೋ ಕಸ ಸಿಕ್ಕಿಕೊಂಡಂತಿದೆ ಅದನ್ನು ತೆಗೆಯುತ್ತೇನೆ ಎಂದು ಕಮಂಡಲದ ನಾಳಕ್ಕೆ ಚುಚ್ಚಿದನು. ಅದು ಕಪ್ಪೆಯ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. ನಂತರಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು. ಮುಂದೆ ಬಲಿಚಕ್ರವರ್ತಿ ತಮಗೇನು ನೀಡಬೇಕೆಂದು ವಾಮನನಲ್ಲಿ ಕೇಳಿಕೊಂಡನು. ಆಗ ವಾಮನನು ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳುತ್ತಾನೆ.   ಸರಿ ಎಂದು ಬಲಿಚಕ್ರವರ್ತಿ ನಿನ್ನ ಜಾಗವನ್ನು ತೆಗೆದುಕೋ ಎಂದು ಹೇಳುತ್ತಾನೆ.

ವಾಮನನ ರೂಪದಲ್ಲಿದ್ದ ವಿಷ್ಣುವು ತ್ರಿವಿಕ್ರಮನ ರೂಪ ತಾಳಿ ದೊಡ್ಡ ಆಕಾರವಾಗಿ ಎದ್ದು ನಿಲ್ಲುತ್ತಾನೆ. ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ ತೋಚದ ಬಲಿ, ತನ್ನ ತಲೆಯ ಮೇಲೆ ಇಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಆತನ ತಲೆಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದನು.

ಆ ಸಮಯದಲ್ಲಿ ಬಲಿ ಚಕ್ರವರ್ತಿಯಲ್ಲಿ ವಾಮನನು ಯಾವುದಾದರೊಂದು ವರವನ್ನು ಕೇಳೆಂದಾಗ ಬಲಿಚಕ್ರವರ್ತಿಯು ಪ್ರತಿವರ್ಷವು  ತಾನು ಭೂಮಿಗೆ ಆಗಮಿಸಿಬೇಕೆಂದು, ಭೂಮಿಯಲ್ಲಿ ತನ್ನ ನೆನಪಿಗಾಗಿ ಆ ದಿನವನ್ನು ಆಚರಿಸಬೇಕು ಎಂಬುದಾಗಿ ಕೇಳಿದನು. ಅಲ್ಲದೆ, ಆ ದಿನವು ತನ್ನ ಸಾಮ್ರಾಜ್ಯದಲ್ಲಿರುವಂತೆಯೇ, ಸರ್ವ ಸಮೃದ್ಧಿ ಪರಿಪಾಲನೆಯಿಂದ ಕೂಡಿರಬೇಕೆಂದು ಆಶಿಸಿದನು.ಅದರಂತೆ  ಬಲಿಚಕ್ರವರ್ತಿಗೆ ವಿಷ್ಣುವು ಒಂದು ವರ ನೀಡುತ್ತಾನೆ.  ಅದೇನೆಂದರೆ ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜಿಸುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ, ಇವುಗಳನ್ನು ಮಾಡಲಾಗುವುದು. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.ಸರ್ವಸಮೃದ್ಧಿಯುಂಟಾಗಿ, ಧನ-ಕನಕಗಳು ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ.

ದೀಪಾವಳಿ ಬಗೆಗಿನ ಜಾನಪದ ಕಥೆ :-
ಒಂದೂರಲ್ಲಿ ಒಬ್ಬ  ಅರಸನಿದ್ದ.  ಅವನಿಗೆ ಏಳು ಮಂದಿ ಹೆಣ್ಣುಮಕ್ಕಳು. ಅವರಲ್ಲಿ ಕೊನೆಯ ಮಗಳೆಂದರೆ ಅವನಿಗೆ ತುಂಬಾ ಮುದ್ದು. ಒಂದು  ದಿನ, ತನ್ನ ಹೆಣ್ಣು ಮಕ್ಕಳನ್ನು ಕರೆದು, ತನಗೆ ಗಂಡುಮಕ್ಕಳಿಲ್ಲದ  ಕಾರಣ, ನಿಮ್ಮ ನಿಮ್ಮ ಜೀವನದ ಗುರಿಯು ತಾನು ಹೇಳುವ ರೀತಿ ರಾಜ್ಯಭಾರ ಮಾಡಬೇಕು ಎಂದು ಹೇಳಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸುತ್ತಾಬರುತ್ತಾನೆ. ಎಲ್ಲರು ತನ್ನ ತಂದೆಯ ಆಸೆಯಂತೆ ನಡೆದುಕೊಳ್ಳಲು ಒಪ್ಪಿಗೆ ನೀಡುತ್ತಾರೆ. ಆದರೆ ಚಿಕ್ಕ ಮಗಳು ಮಾತ್ರ ತಾನು  ನನ್ನದೇ ಆದ ಗುರಿಯೊಂದಿಗೆ ನಾನು ಹುಟ್ಟಿದ್ದೇನೆ ತನಗೆ ಯಾವ ಜವಾಬ್ದಾರಿಯನ್ನು ಹೇರಬಾರದು ಎಂದು ಹೇಳುತ್ತಾಳೆ. ಇದರಿಂದ ಸಿಟ್ಟಾದ ಆ ಅರಸ  ಆಕೆಯನ್ನು ಒಬ್ಬ ಭಿಕ್ಷುಕನಿಗೆ ಮದುವೆ ಮಾಡಿ ಅರಮನೆಯಿಂದ ಹೊರಗೆ ಕಳುಹಿಸಿದ. ಆದರೂ, ಎಷ್ಟಾದರೂ ಪ್ರೀತಿಯ ಮಗಳಲ್ಲವೇ? ಪಿತೃಪ್ರೇಮದಿಂದಾಗಿ ತನ್ನ ತಪ್ಪಿನ ಅರಿವಾಗಿ ಮಗಳಿಗೆ  ಒಂದು ವರವನ್ನು ಬೇಡುವಂತೆ ಕೇಳಿದ. ಇದಕ್ಕೆ ಅವಳು ಕೇಳಿದ್ದೇನೆಂದರೆ, ಕಾರ್ತಿಕ ಅಮಾವಾಸ್ಯೆಯ ರಾತ್ರಿಯಂದು ಆತನ ಇಡೀ  ಸಾಮ್ರಾಜ್ಯವು ಕತ್ತಲಲ್ಲಿ ಇರಬೇಕೆಂಬ ವಿಚಿತ್ರ ಬೇಡಿಕೆಯನ್ನ ಇಡುತ್ತಾಳೆ.  ಇದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ ರಾಜ.  ಕಾರ್ತಿಕ ಅಮಾವಾಸ್ಯೆಯ ಒಂದು ದಿನ  ತನ್ನ ರಾಜ್ಯದ ಜನತೆಗೆ ಮನೆಯಲ್ಲಿ ದೀಪಗಳನ್ನ ಹಚ್ಚದಂತೆ ಆಜ್ಞೆ ಹೊರಡಿಸುತ್ತಾನೆ. ಆ ದಿನ ಆ ಕೊನೆಯ ಮಗಳು ಮಾತ್ರ ಕಗ್ಗತ್ತಲಲ್ಲಿ  ಕಾಡಿನಲ್ಲಿರುವ ತನ್ನ ಗುಡಿಸಲಿನಲ್ಲಿ ಹಣತೆ ಉರಿಸಿದಳು. ಅವತ್ತು  ಆ ದೀಪವನ್ನು ಗಮನಿಸಿ  ಲಕ್ಷ್ಮೀದೇವಿಯು  ಆಕೆಯ ಮನೆಗೆ ಬಂದು. ಆ  ರಾತ್ರಿ ಆಶ್ರಯವನ್ನು ಕೇಳುತ್ತಾಳೆ. ಆಗ ಆ ಭಿಕ್ಷುಕನ ಹೆಂಡತಿಯಾಗಿದ್ದ ಕೊನೆ ಮಗಳು ಲಕ್ಷ್ಮಿಗೆ  ಮರಳಿ ಹೋಗದಂತಿದ್ದರೆ ಮಾತ್ರವೇ ಮನೆಯೊಳಗೆ ಬರಮಾಡಿಕೊಳ್ಳುವುದಾಗಿ  ಶರತ್ತು ಹಾಕಿದಳು. ಇದೇ ದಿನವನ್ನು ದೀಪಾವಳಿ ಅಮಾವಾಸ್ಯೆಯಲ್ಲಿ  ಶ್ರೀ ಲಕ್ಷ್ಮೀಯ ಪೂಜೆ ಆಚರಿಸಲಾಗುತ್ತದೆ.






Saturday 7 October 2017

ಈ ಹಂಟರ್ಸ್ ಮೂನ್, ಟೂ ಸನ್ಸ್ , ಚೇಸಿಂಗ್ ಮೂನ್ ಅಂದ್ರೆ ಏನು?

ಈ ಹಂಟರ್ಸ್  ಮೂನ್, ಟೂ ಸನ್ಸ್ , ಚೇಸಿಂಗ್ ಮೂನ್  ಅಂದ್ರೆ ಏನು?



ಇಡೀ ಪ್ರಪಂಚದಲ್ಲಿ , ಎಲ್ಲ ದೇಶಗಳಲ್ಲಿಯೂ ದಿನ, ತಿಂಗಳು ವರ್ಷಗಳನ್ನ ಕಂಡುಹಿಡಿದಿರುವುದು ಸೂರ್ಯ ಮತ್ತು ಚಂದ್ರನ ಚಲನೆಯ ಮೂಲಕವೇ. ಸೂರ್ಯನ ಚಲನೆಗಿಂತ   ಚಂದ್ರನ ಚಲನೆಯನ್ನು ತಿಳಿಯಲು ತುಂಬಾ ಸುಲಭ ಅದು ಕೂಡ ಅಮಾವಾಸ್ಯೆ ಹುಣ್ಣಿಮೆಗಳ ಮೂಲಕ. ಪ್ರಪಂಚದಲ್ಲಿನ ಎಲ್ಲ ಪಂಚಾಂಗಗಳು ಕೂಡ ಈ  ಚಂದ್ರನ ಚಲನೆಯ ಆಧಾರದ ಮೇಲೆ ಆಗಿವೆಯೇನೋ ಎಂಬುದು ನನ್ನ ಅನಿಸಿಕೆ.

ನಮ್ಮಲ್ಲಿ ಅಮಾವಾಸ್ಯೆ ಹುಣ್ಣಿಮೆಗಳಿಗೆ ಹೆಸರುಗಳು ಇರುವಂತೆ ವಿದೇಶಿಯರು ಕೂಡ ಪ್ರತಿ ಹುಣ್ಣಿಮೆ ಮತ್ತು ಅಮ್ಮಾವಸ್ಯೆಗೆ ಒಂದೊಂದು ಹೆಸರುಗಳನ್ನಿಟ್ಟಿರುವುದು ಕೂಡ ವಿಶೇಷವೇ.   ಮೊನ್ನೆ  ಗುರುವಾರದಂದು ಅಮೆರಿಕೆಯ ಕೆನಡಾ ದಲ್ಲಿ ಹುಣ್ಣಿಮೆಯನ್ನ ಹಂಟರ್ಸ್ ಮೂನ್, ಟೂಸನ್ಸ್ ,  ಚೇಸಿಂಗ್ ಮೂನ್ ಎಂದು ಅನೇಕ ಹೆಸರುಗಳಿಂದ ಕರೆದು, ಅಕ್ಟೋಬರ್ ೫ ಗುರುವಾರದ  ಹುಣ್ಣಿಮೆಯನ್ನು ಸ್ಪೆಷಲ್ ಎಂದು ಹೇಳಿದ್ದಾರೆ. ಅದಕ್ಕೆ ಕಾರಣ ಅಂದು ಸೂರ್ಯನ ಮುಳುಗುವಿಕೆ ಮತ್ತು ಚಂದ್ರನ ಹುಟ್ಟು ಎರೆಡನ್ನು ಕೂಡ ನಾವು ಕಾಣಬಹುದಾಗಿತ್ತು . ಒಂದೇ ದಿನ ಸೂರ್ಯ ಮತ್ತು ಚಂದ್ರನನ್ನು ಕಂಡ ದಿನ ಅದಾಗಿತ್ತು. ಇದು ಕಲ್ಪನೆಯಲ್ಲ ಸತ್ಯ. ಅದಕ್ಕೆ ಸಾಕ್ಷಿ ಈ ಚಿತ್ರಗಳು.




Thursday 5 October 2017

ಸೀಗೆ ಹುಣ್ಣಿಮೆ

ನಮ್ಮ ಸಂಪ್ರದಾಯದಲ್ಲಿ ಎಲ್ಲ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಿಗೆ ಅದರದೇ  ಆದ  ಹೆಸರು ಮತ್ತು ವಿಶೇಷತೆಗಳಿವೆ. ಅವುಗಳಿಗೆ  ಪ್ರಕೃತಿಯಯಲ್ಲಾಗುವ ಬದಲಾವಣೆಗಳ ಜೊತೆ- ಜೊತೆಗೆ ವಿಶೇಷತೆಗಳು ಕೂಡ ಅಂಟಿಕೊಂಡು ಬಂದಿರಬಹುದು ಎಂದು ನಾವು ಅಂದುಕೊಳ್ಳಬಹುದು.


ನಾವುಗಳು ಆಚರಿಸುವ  ಹುಣ್ಣಿಮೆಗಳು ಈ ರೀತಿ ಇವೆ. ಬನದ ಹುಣ್ಣಿಮೆ, ಭರತ ಹುಣ್ಣಿಮೆ, ಹೋಳಿ ಹುಣ್ಣಿಮೆ, ದವನದ ಹುಣ್ಣಿಮೆ, ಆಗಿ ಹುಣ್ಣಿಮೆ(ಅಧಿಕ) ಕಾರಹುಣ್ಣಿಮೆ, ಕಡ್ಲಿ ಕಡುಬು ಹುಣ್ಣಿಮೆ [ಗುರುಪೂರ್ಣಿಮಾ], ನೂಲ ಹುಣ್ಣಿಮೆ, ಅನಂತ ಹುಣ್ಣಿಮೆ, ಸೀಗೆ ಹುಣ್ಣಿಮೆ, ಗೌರಿ ಹುಣ್ಣಿಮೆ, ಹೊಸ್ತಿಲ ಹುಣ್ಣಿಮೆ.


ಇವತ್ತು ಸೀಗೆ ಹುಣ್ಣಿಮೆ. ಇವತ್ತಿನ ಸೀಗೆ ಹುಣ್ಣಿಮೆಯೂ  ಕೂಡ ಕೆಲವೊಂದು ವಿಶೇಷತೆಯನ್ನು ಹೊಂದಿದೆ. ಇಂದು ಪ್ರತಿ ಹಳ್ಳಿಗಳಲ್ಲಿ ರೈತರು ತಮ್ಮ ಹೊಲ, ಗದ್ದೆಗಳಲ್ಲಿ, ತೋಟಗಳಲ್ಲಿ ಈ ಸೀಗೆ ಹುಣ್ಣಿಮೆಯ  ಹಬ್ಬವನ್ನಾಚರಿಸುತ್ತಾರೆ.  ಈ ಸೀಗೆ ಹುಣ್ಣಿಮೆಯನ್ನು ಭೂ ತಾಯಿಯ ಸೀಮಂತ ಎಂದು ಕೂಡ ಕರೆಯುವುದುಂಟು.

 ಈ ಸೀಗೆ ಹುಣ್ಣಿಮೆ ಸಮಯದಲ್ಲಿ ಭತ್ತ , ಅಡಿಕೆ, ರಾಗಿ , ಜೋಳ  ಇನ್ನು ಅನೇಕ ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಕಾಳುಗಟ್ಟಿ, ತೆನೆ ತುಂಬಿ, ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತವೆ. ಭೂಮಿ ತಾಯಿ ಯನ್ನ ಹೆಣ್ಣಿಗೆ ಹೋಲಿಸಿ ಹೊಲಗಳಲ್ಲಿನ ಬೆಳೆ ತುಂಬಿಕೊಡಿರುವುದರಿಂದ ಆಕೆ ಗರ್ಭ ಕಟ್ಟಿದ ಹೆಣ್ಣು ಎಂದು ಕಲ್ಪಿಸಿಕೊಂಡು ಆಕೆಗೆ ಸೀಮಂತ  ಮಾಡುವ ರೀತಿ ಈ ಸೀಗೆ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.

ಈ ಸೀಗೆ ಹುಣ್ಣಿಮೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನನಗೆ ತಿಳಿದ ಮಟ್ಟಿಗೆ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಪೈರು ಚೆನ್ನಾಗಿ ಬರಲೆಂದು  ಹೊಲಗಳಿಗೆ ಪೂಜೆ ಸಲ್ಲಿಸುತ್ತಾರೆ. ತಮ್ಮ ಜಾನುವಾರಗಳಿಗೆ ಪೂಜೆ ಮಾಡುತ್ತಾರೆ. ಹೊಲಗಳ ನಾಲ್ಕು ದಿಕ್ಕುಗಳಲ್ಲಿ ಚರಗ ಚೆಲ್ಲುತ್ತಾರೆ. ಎತ್ತಿನ ಸಗಣಿಯಿಂದ 5 ಉಂಡೆಗಳನ್ನು ಮಾಡಿ ಅದಕ್ಕೆ ಹೂವುಗಳನ್ನ ಸಿಕ್ಕಿಸಿ ಪಾಂಡವರು ಎಂದು ಪೂಜಿಸುತ್ತಾರೆ. ಕೆಲವು ಮುತ್ತೈದೆಯರಿಗೆ ಉಡಿ ತುಂಬುತ್ತಾರೆ.ತುಂಬುತ್ತಾರೆ. ಹೊಲ ಗದ್ದೆಗಳಲ್ಲಿ ತಮ್ಮ ಕುಟುಂಬದವರ ಮತ್ತು ಬಂಧು ಬಾಂಧವರುಗಳ  ಜೊತೆ ಕೂಡಿ ಕುಳಿತು ಊಟ ಮಾಡುತ್ತಾರೆ.

Saturday 29 July 2017

ಅಗಸೆ ಬೀಜವೆಂಬ ಸಂಜೀವಿನಿ

ಊಟ ಬರಿ ಹೊಟ್ಟೆಯ ಹಸಿವನ್ನು ಹೋಗಿಸುವ ಪದಾರ್ಥವಲ್ಲ. ಜೀವಿಗಳ ಬದುಕಿನ ಸಂಜೀವಿನಿ ಅದು. ಊಟದಲ್ಲಿ ಎಲ್ಲ ರೀತಿಯ ಪೋಷಕಾಂಶಗಳು ಸಮನಾಗಿ,   ಸಮಯಕ್ಕೆ ಸರಿಯಾಗಿ ದೇಹದಲ್ಲಿ ಬೆರೆತಲ್ಲಿ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಈಗಿನ ಒತ್ತಡದ ಬದುಕಿನಲ್ಲಿ ಒಂದೇ ಆಹಾರದಲ್ಲಿ ಎಲ್ಲಾ ರೀತಿಯ ಅಂಶಗಳು ಸಿಕ್ಕರೆ ಇನ್ನು ಒಳ್ಳೆಯದು ಅಲ್ಲವೇ. ನಮ್ಮ ಅಜ್ಜ ಅಜ್ಜಿಯರ ಪ್ರಕಾರ ಮೆಂತ್ಯ ತಿಂತಿದ್ರೆ ರೋಗಕ್ಕೆ ಅಂತ್ಯ ಅಂತ ಹೇಳುತ್ತಿದ್ದುದು ನೆನಪಾಯ್ತು. ಮೆಂತ್ಯದಂತೆ ಅನೇಕ ರೀತಿಯ ಕಾಳುಗಳು ನಮ್ಮ ಸುತ್ತ ಮುತ್ತ ಇರುತ್ತವೆ. ನಾವುಗಳು ಅವನ್ನು ಬಳಸಲು ಗೊತ್ತಿರಬೇಕು ಅಷ್ಟೇ,, ಈಗ ನಾ ಹೇಳ ಹೊರಟಿರುವುದು ಅಗಸೆ ಕಾಳಿನ ಬಗ್ಗೆ. ಆಧುನಿಕ ಆಹಾರ ಹಾವಳಿಯಲ್ಲಿ ಮೂಲೆ ಗುಂಪಾಗಿರುವ ಅಗಸೆ ಕಾಳಿನ ಬಗ್ಗೆ.

ಅಗಸೆ ಬೀಜಗಳು 
ಭೂಮಿ ಮೇಲೆ ಇರುವ ತೃಣಧಾನ್ಯಗಳಲ್ಲಿ ಮೊದಲ ಸ್ಥಾನ ಮೆಂತ್ಯಕ್ಕೆ. ಮೆಂತ್ಯ ವನ್ನು ಬಿಟ್ಟರೆ ಪೋಷಕಾಂಶಗಳನ್ನು ಹೊಂದಿರುವ 2 ನೇ ಸ್ಥಾನ ಸಿಗುವುದು ಈ  ಅಗಸೆ ಬೀಜಕ್ಕೆ.   ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡಲು ಇದು ನೆರವಾಗುತ್ತದೆ. ಈ ಅಗಸೆ ಬೀಜಕ್ಕೆ ಸುಮಾರು 6೦೦೦ ವರ್ಷಗಳ ಇತಿಹಾಸವಿದೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.   ಶತಮಾನಗಳಿಂದಲೂ ಈ ಅಗಸೆ ಬೀಜಗಳು ಆಹಾರದ ಮೂಲಕ ಅನೇಕ  ಲಾಭಗಳನ್ನು ಒದಗಿಸುತ್ತಿದೆ.  ಕ್ರಿ.ಪೂ. 3೦೦೦ ನೇ ಶತಮಾನದಲ್ಲಿ  ಬ್ಯಾಬಿಲೋನಿಯಾದ ಇತಿಹಾಸದಲ್ಲಿ ಜನರ ದೈನಂದಿನ ಆಹಾರದಲ್ಲಿ ಅಗಸೆಗೆ ಪ್ರಮುಖ ಸ್ಥಾನ ಇತ್ತು ಎಂದು ವರ್ಣಿತವಾಗಿದೆ.  ಅಗಸೆ ಬೀಜಗಳಲ್ಲಿ ಅನೇಕ  ರೀತಿಯ ಆರೋಗ್ಯ ಗುಣಗಳಿವೆ.

ಅಗಸೆ ಬೀಜಗಳಲ್ಲಿನ ಅಂಶಗಳು :-
ಒಮೆಗಾ-3 ಕೊಬ್ಬಿನಾಮ್ಲವು ಒಳ್ಳೆಯ ಕೊಬ್ಬನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂನಷ್ಟು ಒಮೆಗಾ-3 ಕೊಬ್ಬಿನಾಮ್ಲವಿದೆ. ಅಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತೆ. ಎಸ್ಟೋಜನ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಅಗಸೆ ಬೀಜದಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿರುತ್ತದೆ. 


ಅಗಸೆ ಬೀಜದ ಆರೋಗ್ಯಕಾರಿ ಲಾಭಗಳು :-


 ಕ್ಯಾನ್ಸರ್ ಗೆ ಮದ್ದು:-
ಕ್ಯಾನ್ಸರ್ನ  ಇತ್ತೀಚಿನ ಅಧ್ಯಯನಗಳ ಪ್ರಕಾರ ಅಗಸೆ ಬೀಜವು ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಅಗಸೆ ಬೀಜದಲ್ಲಿರುವ ಲಿಗ್ನನಸ್ ಸ್ತನ ಕ್ಯಾನ್ಸರ್ ನ ಟ್ಯಾಮ್ಕ್ಷಿಫೆನ್ ನೊಂದಿಗೆ ಯಾವುದೇ ಹಸ್ತಕ್ಷೇಪ ಮಾಡದೆ ಹಾರ್ಮೋನುಗಳಿಗೆ ಸೂಕ್ಷ್ಮವಾಗಿರುವ ಕ್ಯಾನ್ಸರ್ ನಿಂದ ರಕ್ಷಣೆ ನೀಡಬಹುದು.


ಸ್ವಚ್ಛ ಹೃದಯಕ್ಕೆ:-
ಹೃದಯರೋಗ ಅಧ್ಯಯನಗಳ ಪ್ರಕಾರ ಒಮೆಗಾ-3 ಉರಿಯೂತ ವಿರೋಧಿ ಕ್ರಮ ಮತ್ತು ಹೃದಯಬಡಿತ ಸಾಮಾನ್ಯ ಮಾಡುವ ಮೂಲಕ ವಿವಿಧ ಕಾರ್ಯವಿಧಾನದೊಂದಿಗೆ ಹೃದಯರಕ್ತನಾಳ ವ್ಯವಸ್ಥೆಗೆ ನೆರವಾಗುತ್ತದೆ. ಹಲವಾರು ಅಧ್ಯಯನಗಳ ಪ್ರಕಾರ ಒಮೆಗಾ-3 ಭರಿತ ಆಹಾರಗಳು ಅಪಧಮನಿ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ ಮತ್ತು ಬಿಳಿ ರಕ್ತಕಣಗಳು ರಕ್ತನಾಳಗಳ ಒಳಗೋಡೆಗೆ ಅಂಟಿಕೊಳ್ಳದಂತೆ ಇಟ್ಟುಕೊಂಡು ಲೋಳೆಯು ಅಪಧಮನಿಗಳಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.


ಸಕ್ಕರೆ ಕಾಯಿಲೆ (ಮಧುಮೇಹ):-
ಸಕ್ಕರೆ ಕಾಯಿಲೆ ಇರುವವರು ದಿನಾಲೂ ಅಗಸೆ ಬೀಜ ತಿನ್ನುವುದರಿಂದ  ಅದರಲ್ಲಿನ ಲಿಗ್ನನಸ್ ಅಂಶಗಳು ರಕ್ತದ ಸಕ್ಕರೆಮಟ್ಟವನ್ನು  ಸುಧಾರಿಸುತ್ತದೆ.  ಎಂದು ವೈದ್ಯಕೀಯ  ಅಧ್ಯಯನಗಳು ಹೇಳಿವೆ.


ಉರಿಯೂತ:-
ಉರಿಯೂತ ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನೆನಸ್ ಕೆಲವೊಂದು ಉರಿಯೂತಕಾರಿ ಅಂಶಗಳು ದೇಹದಲ್ಲಿ ಬಿಡುಗಡೆಯಾಗದಂತೆ ತಡೆಯಲು ನೆರವಾಗಿ ಕೆಲವೊಂದು ರೋಗ(ಪರ್ಕಿಸನ್ ಮತ್ತು ಅಸ್ತಮಾ)ಗಳಿಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. 


ಹೃದಯಾಘಾತ ಮತ್ತು ಪಾರ್ಶ್ವವಾಯು:-
ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಲಿಗ್ನೆನಸ್ ಉರಿಯೂತಕಾರಿ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಅಪಧಮನಿಗಳಲ್ಲಿ ಲೋಳೆಯು ಹೆಚ್ಚಾಗುವ ಮೂಲಕ ಉಂಟಾಗುವ ಉರಿಯೂತ ಕಡಿಮೆ ಮಾಡುವ ಮೂಲಕ ಅಗಸೆ ಬೀಜಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ಕಡಿಮೆ ಮಾಡಲು ನೆರವಾಗುತ್ತದೆ.


ಮಹಿಳೆಯ ಮುಟ್ಟಿನ ಹಾಟ್ ಫ್ಲಾಷಸ್:-
ದಿನಕ್ಕೆ ಎರಡು ಚಮಚ ಅಗಸೆಬೀಜವನ್ನು  ಜ್ಯೂಸ್ ಅಥವಾ ಮೊಸರಿನೊಂದಿಗೆ ಸೇವನೆ ಮಾಡುವುದರಿಂದ ಹಾಟ್ ಫ್ಲಾಷಸ್ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಟ್ ಫ್ಲಾಷಸ್ ನ ತೀವ್ರತೆ ಶೇ.50% ರಷ್ಟು ಕಡಿಮೆಯಾಗುತ್ತದೆ. ನಿಯಮಿತವಾಗಿ ಅಗಸೆ ಈ ರೀತಿಯಾಗಿ ಮಹಿಳೆಯರು ಸೇವಿಸುತ್ತಿದ್ದರೆ ಗರ್ಭಕೋಶದ ಹಲವಾರು ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ಜೀರ್ಣ ಕ್ರಿಯೆ ಹೆಚ್ಚಿಸುತ್ತೆ:-
ಅಗಸೆಬೀಜದಲ್ಲಿರುವ ನಾರಿನ ಅಂಶ ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ ಪೌಷ್ಟಿಕಾಂಶಗಳು ದೇಹಕ್ಕೆ ಸೇರೋ ಹಾಗೆ ಮಾಡುತ್ತದೆ. ಮಲಬಧ್ದತೆ ಸರಿಯಾಗಿ ಆಗುತ್ತದೆ. ಮೊಳಕೆ ರೋಗ ( ಪೈಲ್ಸ್ ) ಇರುವವರಿಗೆ ಈ ಅಗಸೆ ಹಸಿ ಬೀಜದ ಪುಡಿಯನ್ನ ಖಾಲಿ ಹೊಟ್ಟೆಗೆ ಕುಡಿದರೆ ರಕ್ತ ಸ್ರಾವ ಕಮ್ಮಿ ಆಗಿ, ನೋವು ಕಮ್ಮಿ ಆಗಿ, ಮೋಶನ್ ಸರಾಗವಾಗಿ ಆಗುತ್ತದೆ. ಎಂದು ಮನೆ ಮದ್ದು  ಪುಸ್ತಕಗಳಲ್ಲಿ ಬರೆದಿರುತ್ತಾರೆ.

ಚರ್ಮದ ಆರೋಗ್ಯಕ್ಕೆ:-
ಅಗಸೆ ಬೀಜದಲ್ಲಿನ ಎಣ್ಣೆ ಅಂಶ ಮೈ ಚರ್ಮ ಕೆಂಪಾಗೋದು, ಉರಿ- ತುರಿಕೆ ಯಾಗುವುದನ್ನು ತಪ್ಪಿಸುತ್ತದೆ.  ಮತ್ತು  ಮೈ ಚರ್ಮ ಮೃದುವಾಗಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚರ್ಮಕ್ಕೆ ಸೂರ್ಯನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸುತ್ತದೆ. ದಿನಾ ಒಂದೆರೆಡು ಚಮಚ ಅಗಸೆ ಬೀಜ ಹಸಿಯಾಗಿ ತಿನ್ನೋದ್ರಿಂದ ಮುಖದ ಮೇಲೆ ಮೊಡವೆಗಳು ಆಗುವುದಿಲ್ಲ.


ಕೂದಲುಗಳ ಸಮಸ್ಯೆಗೆ ಪರಿಹಾರ:-
ದಿನಾ ಅಗಸೆ ತಿನ್ನೋದ್ರಿಂದ ಕೂದಲುದುರುವುದು ನಿಲ್ಲುತ್ತದೆ. ಅಗಸೆ ಎಣ್ಣೆ ತಲೆಗೆ ಹಚ್ಚೊದ್ರಿಂದ ತಲೆ ಹೊತ್ತು ಕಮ್ಮಿ ಆಗುತ್ತದೆ. ಬೊಕ್ಕ ತಲೆ ಆಗಲು ನಮ್ಮ ದೇಹದಲ್ಲಿನ ಟೆಸ್ಟೋಸ್ಟೀರಾನ್  ಹಾರ್ಮೂನ್ ಕಾರಣ. ಈ ಹಾರ್ಮೋನ್ ಮಟ್ಟವನ್ನ ಸುಧಾರಿಸಿ ಬೊಕ್ಕ ತಲೆಯಲ್ಲಿ ಕೂದಲು ಉದುರುವುದು ನಿಲ್ಲುತ್ತದೆ.

 
ಈ ಅಗಸೆ ಬೀಜ ತನ್ನಲ್ಲಿರುವ ಪೌಷ್ಠಿಕಾಂಶಗಳಿಂದ ಇತ್ತೀಚಿಗೆ ಎಲ್ಲರ ಗಮನ ಸೆಳೆಯುತ್ತಿದೆ.  ದೇಹಕ್ಕೆ ಬೇಕಾಗುವಷ್ಟು ಫೈಬರ್, ಅಂಟಿ  ಆಕ್ಸಿಡೆಂಟ್ಸ್ , ಕಬ್ಬಿಣ, ಉತ್ತಮ ಕೊಬ್ಬಿನ ಅಂಶ ಹೊಂದಿದೆ. ಅಗಸೆನಾ ಸೊಪ್ಪು, ಬೀಜ ಮತ್ತು ಎಣ್ಣೆ ರೂಪದಲ್ಲಿ ಬಳಸಬಹುದು. ಮೀನು ತಿಂದಾಗ ಸಿಗುವ ಒಮೇಗಾ- ೩ ಅಗಸೆಯಲ್ಲಿ ಸಿಗುತ್ತೆ.  ಚರ್ಮ ಕೂದಲು ಅಲ್ಲದೆ ದೇಹದ ಹಲವು ಅಂಗಾಂಶಗಳಿಗೆ ಇದರ ಉಪಯೋಗಗಳಿವೆ.   ಆರೋಗ್ಯದ ಅವಶ್ಯಕತೆಗಾಗಿ ಮತ್ತೆ ಜನರು ನಮ್ಮ ಪೂರ್ವಿಕರ ಆಹಾರ ಪಧ್ದತಿಯ ಮೊರೆ ಹೋಗುತ್ತಿದ್ದಾರೆ. ಆಧುನಿಕ ವಿದೇಶೀ ಆಹಾರದ ಮಧ್ಯೆ ಕತ್ತಲಿಗೆ ಸರಿದಿದ್ದ ಅಗಸೆ ಬೀಜ ಮತ್ತೆ  ಬೆಳಕಿಗೆ ಬರುತ್ತಿದೆ.

ಅಗಸೆ ಕಾಳಿನ ಚಟ್ನಿ ಪುಡಿ, ಅಗಸೆ ಸೊಪ್ಪಿನ ಪಲ್ಯ, ಅಗಸೆ ಕಾಲಿನ ಎಣ್ಣೆ , ರೂಪದಲ್ಲಿ ಉಪಯೋಗಿಸಬಹುದು. ಅಗಸೆ ಕಾಲಿನ ಎಣ್ಣೆ ತೆಗೆದ ಮೇಲೆ ಬರುವ ಹೊತ್ತು ದನಕರುಗಳಿಗೆ ಹಿಂಡಿ  ರೂಪದಲ್ಲಿ ತಿನ್ನಿಸುತ್ತಾರಂತೆ.   


ಸಂಗ್ರಹ : ( ಅಂತರ್ಜಾಲ ತಡಕಾಡಿ ಹೆಕ್ಕಿ ಬರೆದದ್ದು )


Friday 28 July 2017

ನಾನು ಮಾಡಿದ ಅಗಸೆ ಬೀಜದ ಚಟ್ನಿ ಪುಡಿ


 ಅಗಸೆ ಬೀಜಗಳು
ಹೀಗೆ ಒಂದಿನ ಅಂಗಡಿಗೆ ಹೋದಾಗ,  ಅಗಸೆ ಬೀಜ ಅಂತ ಹೆಸರು ಇರೋ ಬೀಜಗಳ ಪೊಟ್ಟಣ ನನ್ನ  ಕಣ್ಣಿಗೆ ಬಿತ್ತು. ಟ್ರೈ ಮಾಡಿ ನೋಡೋಣ ಅಂತ ತೊಗೊಂಡು ಬಂದೆ.  ನಮ್ಮ ಮನೆಯಲ್ಲಿ ಅಗಸೆ ಬೀಜವನ್ನ ತಂದೆ. ಅದನ್ನ ಹೇಗೆ ಅಡುಗೆಯಲ್ಲಿ ಬಳಸೋದು ಅಂತ ನಂಗೆ ಗೊತ್ತಿರಲಿಲ್ಲ.  ಯಾಕಂದ್ರೆ ನಾನು ಇದುವರೆಗೂ ಅದರ ಹೆಸರು ಕೇಳಿದ್ದೆ, ಚಟ್ನಿ ಪುಡಿ ತಿಂದಿದ್ದೆ. ಅಷ್ಟೇ.  ಅದೂ ನಾನು ಹಾಸ್ಟೆಲ್ ನಲ್ಲಿ ಇದ್ದಾಗ ಉತ್ತರ ಕರ್ನಾಟಕದಿಂದ ಬಂದಿದ್ದ ನನ್ನ ಕೆಲವು ಗೆಳತಿಯರು ಅದರ ಚಟ್ನಿ ಪುಡಿಯನ್ನ ತೊಗೊಂಡು ಬರ್ತಿದ್ರು.  ಆಗ ರುಚಿ ನೋಡಿದ ನೆನಪು ನನ್ನ ನಾಲಿಗೆಗೆ ಸ್ವಲ್ಪ ಗೊತ್ತಿತ್ತು ಅಷ್ಟೇ.   ಪ್ರತಿ ದಿನ ಅದನ್ನ ಏನು ಮಾಡೋದು ಅಂತ ಯೋಚನೆ ಮಾಡೋದು ಇನ್ನೊಂದು ದಿನ ಮಾಡಿದರಾಯ್ತು ಅಂತ ವಾಪಾಸ್ ಇಡೋದು .ಇದೇ ಆಗಿತ್ತು . ಒಂದು ದಿನ ನನ್ನ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಅಗಸೆ ಬೀಜದ ಫೋಟೋ ಹಾಕಿ, ಇದರ ಚಟ್ನಿ ರೆಸೆಪಿ ಹೇಳಿ ಅಂತ ಹಾಕಿದೆ. ಅದರಲ್ಲಿ ಅಂಬಿಕಾ ಅನ್ನೋ ನನ್ನ ಗೆಳತಿ  ಮಾಡೋ ರೀತಿಯನ್ನ ಕಳಿಸಿದಳು. ಹಾಗೇ ನಾನು ಅದರ ಪ್ರಕಾರ ಚಟ್ನಿ ಪುಡಿ ಮಾಡಿದೆ. ಮೊದಲ ಬಾರಿಯೇ ಅತಿ ರುಚಿಕಟ್ಟಾದ ಚಟ್ನಿ ಪುಡಿ ರೆಡಿ ಆಗಿತ್ತು. ನನ್ನ ಮಕ್ಕಳಿಗೂ ತುಂಬಾ ಇಷ್ಟ ಆಯ್ತು.  ಈ ಅಗಸೆ ಬೀಜ ಗೊತ್ತಿರದವರಿಗೆ ತಿಳಿಸಲೆಂದು ಈ ಲೇಖನ ಬರೀತಾಯಿದೀನಿ. ಹಾಗೆ ಅದನ್ನ ಇತರರು ರುಚಿ ನೋಡ್ಲಿ ಅಂತ ಅದನ್ನ ಮಾಡುವ ರೀತಿಯನ್ನ ಇಲ್ಲಿ ಬರೀತಾಯಿದೀನಿ.

ಅಗಸೆ ಬೀಜದ ಚಟ್ನಿ ಪುಡಿ

ಅಗಸೆ ಬೀಜದ ಚಟ್ನಿ ಮಾಡುವ ವಿಧಾನ :-



ಬೇಕಾಗಿರುವ ಸಾಮಗ್ರಿಗಳು 

ಮೊದಲು ಅಗಸೆ ಬೀಜಗಳನ್ನ ಕಡಿಮೆ ಉರಿಯಲ್ಲಿ  ಕಾಳುಗಳು ದುಂಡಗೆ, ಸ್ವಲ್ಪ ಕಂದು ಬಣ್ಣ ಬರುವಂತೆ, ಹಸಿವಾಸನೆ ಹೋಗುವಂತೆ ಹುರಿದುಕೊಳ್ಳಬೇಕು. ಜೊತೆಗೆ ಶೇಂಗಾ ಬೀಜಗಳನ್ನು ಸ್ವಲ್ಪ ಹುರಿದುಕೊಳ್ಳಬೇಕು. ಅದಕ್ಕೆ ಒಂದು ಚಿಕ್ಕ ಚಮಚ ಜೀರಿಗೆ , ಒಂದು ಚಿಕ್ಕ ಚಮಚ ಖಾರದ ಪುಡಿ, ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು, ಒಂದೆರೆಡು ಎಸಳು ಹುಣಸೇಹಣ್ಣು, ಒಂದು ದೊಡ್ಡ ಗಾತ್ರದ ಬೆಳ್ಳುಳ್ಳಿ, ಒಂದು ನಿಂಬೆಹಣ್ಣು ಗಾತ್ರದ ಬೆಲ್ಲ   ಎಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು. ನೀರು ತಾಕಿಸಬಾರದು.


ಮಿಕ್ಸರ್ ನಲ್ಲಿ  ತಯಾರಾಗಿರುವ ಅಗಸೆ ಚಟ್ನಿ ಪುಡಿ 


Monday 24 July 2017

ಶ್ರಾವಣ ಮಾಸ ಬಂದಾಗ - ಹಬ್ಬಗಳು ಬಂದಾಗ

ಶ್ರಾವಣ ಬಂತೆಂದರೆ ನಮ್ಮ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ಸಂತಸದ ಛಾಯೆ ಎದ್ದು ಕಾಣುತ್ತಿರುತ್ತದೆ. ಎಲ್ಲ ಹೆಣ್ಣುಮಕ್ಕಳ ಸಮೂಹ ಒಟ್ಟುಗೂಡಿ ಹಬ್ಬಗಳ ಆಚರಣೆಗೆ ಮುಂದಾಗುತ್ತಾರೆ. ಭೀಮನ ಅಮಾವಾಸ್ಯೆಯಿಂದ ಶುರುವಾಗೋ ನಮ್ಮ ಹೆಣ್ಣುಮಕ್ಕಳ ವ್ರತಗಳು, ಹಬ್ಬಗಳು,  ಮನೆ- ಮಂದಿ,  ಊರು- ಕೇರಿ, ಕಣ್ಣು ಹೊರಳಿದ ಕಡೆಯಲ್ಲೆಲ್ಲಾ ಹೊಸತನದ ರಂಗು ಚಿಮ್ಮುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಮನೆಯ ಸುಖ ಸಮೃದ್ಧಿಗಾಗಿ ಹೆಣ್ಣುಮಕ್ಕಳು ಪೂಜೆ ವ್ರತಾಚಾರಣೆಗಳನ್ನ  ಮಾಡುವುದು  ಸಾಮಾನ್ಯ.

ಮಂಗಳ ಗೌರೀ ವ್ರತ  
 ಶ್ರಾವಣ ಮಾಸ ಎಂದರೆ ಶಿವನ ಮಾಸ ಎಂದು ಹೇಳಲಾಗುತ್ತದೆ. ನಮ್ಮೂರಿನ ಕಡೆ ಶ್ರಾವಣ ಮಾಸದಲ್ಲಿ ಅವರವರ ಮನೆಯ ರೂಢಿಯಂತೆ ಕುಲ ದೇವರ  ವಾರಗಳ  ದಿನಗಳಂದು  ವಿಶೇಷವಾಗಿ ಪೂಜೆ ಮಾಡುತ್ತಾರೆ.  ಅಂದು ಮನೆಯಲ್ಲಿ ಸಿಹಿ ಮಾಡಿ ಉಣ್ಣುತ್ತಾರೆ. ನಾವು ಚಿಕ್ಕವರಿದ್ದಾಗ ನಮ್ಗೆಲ್ಲಾ  ಶ್ರಾವಣ  ಅಂದ್ರೆ  ವಿವಿಧ ಬಗೆಯ ಊಟ ಮತ್ತು ವಿಶೇಷ ತಿಂಡಿಗಳನ್ನ ಚಪ್ಪರಿಸಿ ತಿನ್ನುವ  ಖುಷಿ. 

ನಾವು ಚಿಕ್ಕವರಿದ್ದಾಗ ಶ್ರಾವಣ ಮಾಸದಲ್ಲಿ ನಮ್ಮ ಮನೆಗಳಲ್ಲಿ ನಮಗೆ ವಹಿಸುತ್ತಿದ್ದ ಸಾಮಾನ್ಯ ಕೆಲಸ ಹೀಗಿತ್ತು ಸೋಮವಾರ ಬಸವಣ್ಣ ಮತ್ತು ಶಿವನ ಗುಡಿಗೆ,  ಮಂಗಳವಾರ, ಶುಕ್ರವಾರ , ಕುಕ್ಕಡದಮ್ಮ, ಕಾಳಮ್ಮ, ಕರಿಯಮ್ಮ ಗುಡಿಗಳಿಗೆ, ಗುರುವಾರ ದತ್ತಾತ್ರೇಯ ಆಶ್ರಮಕ್ಕೆ, ಶನಿವಾರ ಆಂಜನೇಯ ಗುಡಿಗಳಿಗೆ  ಎಣ್ಣೆ ಬತ್ತಿ , ಕಾಯಿ , ಬಾಳೆಹಣ್ಣು ,  ಊದುಬತ್ತಿ, ಎಡೆ  ಎಲ್ಲ ತೊಗೊಂಡ್ ಹೋಗಿ ಪೂಜೆ ಮಾಡಿ ಎಡೆ ಕೊಟ್ಟು ಬರೂ ಕೆಲಸ ವಹಿಸುತ್ತಿದ್ರು. ನಾವು ಗುಡಿಗಳಿಗೆ ಹೋದಾಗ ಅಲ್ಲಿ  ಗುಡಿಗಳಲ್ಲಿ ಎಷ್ಟೊಂದು ರೀತಿಯ ಎಡೆ ಇರ್ತಿದ್ವು  ಅಂದ್ರೆ!!! ನಮ ಬಾಯಲ್ಲಿ ನೀರು ಬರ್ತಿತ್ತು. ಕೆಲವೊಮ್ಮೆ ನಮ್ಮ ಇಷ್ಟದ ತಿಂಡಿಗಳು ಇದ್ರೆ ಅದು ನಮ್ಮ ಹೊಟ್ಟೆ ಸೇರೋದು ಖಾಯಂ ಆಗಿತ್ತು. ಗಿಣ್ಣವನ್ನ ಎಡೆಯಾಗಿ ಯಾರಾದ್ರೂ ಕೊಟ್ಟಿದ್ರಂತೂ ಅದು ನಮ್ಮೊಟ್ಟೆ ಸೇರೇಸೇರ್ತೀತ್ತು.  ಅಲ್ಲಿ ಯಾರಾದ್ರೂ ದೊಡ್ಡೋರು ನೋಡಿದ್ರೆ ದೇವ್ರಿಗೆ ಅಂತ ಎಡೆ  ಇಟ್ಟಿದ್ದನ್ನ ತಿನ್ನಬಾರದು ಅಂತ ಬೈಯ್ಯೋವ್ರು. ನಾವು ಅವ್ರಿಗೆ ತಿರುಗಿಸಿ 'ನಿಮ್ಮನೆ ಎಡೆ ನಾವೇನು ಮುಟ್ಟಿಲ್ಲ ಬಿಡಿ' ಅಂತ ತಿರುಗಿಸಿ ಉತ್ರ ಕೊಡುತಿದ್ವಿ.  ಇನ್ನು ಕೆಲವರು ಚಿಕ್ಕಮಕ್ಳು ತಿಂದ್ರೆ ಏನು ಆಗಲ್ಲ ತಿನ್ನಿ ತಿನ್ನಿ ಅಂತ ಪ್ರೋತ್ಸಾಹಿಸುತ್ತಿದ್ರು. ಇದು ನಮ್ಮ ಚಿಕ್ಕಂದಿನ ಶ್ರಾವಣ.

ವರಮಹಾಲಕ್ಷ್ಮಿ ವ್ರತ 
ಆಗೆಲ್ಲ ನಮಗೆ ಶ್ರಾವಣ ಅಂದ್ರೆ ಏನು? ಅದರ ವಿಶೇಷತೆ ಏನು ? ಏನೂ  ಗೊತ್ತಿರ್ಲಿಲ್ಲ, ಶ್ರಾವಣದ  ಬಗ್ಗೆ ಮೇಲೆ ಹೇಳಿದ ಸಂಗತಿಗಳು ಮಾತ್ರ ಈಗ ನಮಗೆ ನೆನಪಿರುವುದು.  ಆಮೇಲೆ  ನಾವು ಬೆಳೆದಂತೆ ತವರು ಮನೆ - ಗಂಡನ ಮನೆ ಅಂತ ನಾವು ಕೂಡ ಕೆಲವೊಂದು ಆಚರಣೆಗಳನ್ನ ಪಾಲಿಸಿಕೊಂಡು ಹೋಗುವ ಜವಾಬ್ದಾರಿಗಳು ಬಂದವು. ಅದರ ಜೊತೆ . ಕೆಲವೊಂದು ರೂಢಿಗಳನ್ನ  ಮನೆಯಲ್ಲಿ ಹೇಳಿಕೊಟ್ಟರೆ,  ಇನ್ನು ಕೆಲವು ನ್ಯೂಸ್ ಪೇಪರ್ ಓದಿ , ಟಿವಿ ಕಾರ್ಯಕ್ರಮಗಳನ್ನು ನೋಡಿ, ಅಥವಾ ಸುತ್ತ ಮುತ್ತ ಕೆಲವರು ಮಾಡುವದನ್ನು ನೋಡಿ.  ಒಹೋ ಇದನ್ನ ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಅನ್ನೋ ಆಸೆಯಲ್ಲಿ , ಈ ರೀತಿಯಾಗಿ ಹಲವಾರು ವ್ರತ ಪೂಜೆಗಳನ್ನ ರೂಢಿಸಿಕೊಂಡು ಶ್ರಾವಣದಲ್ಲಿ ಪ್ರತಿ ದಿನ ಹಬ್ಬ ಎನ್ನುವಂತೆ ವ್ರತಾಚರಣೆಗಳನ್ನ ಮಾಡುತ್ತಿದ್ದೇವೆ.

ಋತುಗಳ ರಾಜ ವಸಂತ ಋತುವಾದರೆ, ಮಾಸಗಳ ರಾಜ ಶ್ರಾವಣ ಮಾಸ ಎನ್ನಬಹುದೇನೋ. ಈ ಶ್ರಾವಣ ಮಾಸದಲ್ಲಿ ಬರುವಷ್ಟು ಹಬ್ಬ ಮತ್ತು ವ್ರತಾಚರಣೆಗಳು ಇನ್ನಾವ ಮಾಸದಲ್ಲೂ ಬರುವುದಿಲ್ಲ ಎಂದೇ ಹೇಳಬಹುದು.

ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ೧೭ ನಕ್ಷತ್ರಗಳು ಮಳೆಯನ್ನೂ ತರುತ್ತವೆ.

ನಮ್ಮಲ್ಲಿ ಆಷಾಢ ಮಾಸದಲ್ಲಿ ಅತ್ತೆ-ಸೊಸೆ, ಮಾವ-ಅಳಿಯ, ಗಂಡ-ಹೆಂಡತಿ ಒಂದೇ ಮನೆಯಲ್ಲಿ ಇರುವಂತಿಲ್ಲ.  ಮತ್ತು ಒಬ್ಬರ ಮುಖ ಒಬ್ಬರು ನೋಡುವಂತಿಲ್ಲ.  ಎಂಬ ವಾಡಿಕೆ ಇದೆ. ಆಷಾಢ ಮಾಸ ಕಳೆದ ನಂತ್ರ ಬರುವುದೇ ಈ ಶ್ರಾವಣ ಮಾಸ.  ಈ ಮಾಸದಲ್ಲಿ ದೂರಾಗಿದ್ದ ಗಂಡ - ಹೆಂಡತಿ , ಅತ್ತೆ - ಸೊಸೆ, ಮಾವ - ಅಳಿಯ, ಮುಖಾ ಮುಖಿಯಾಗಿ ಭೇಟಿಯಾಗುತ್ತಾರೆ. ಅದೂ ಹಲವು ಹಬ್ಬಗಳನ್ನ ಆಚರಿಸುವ ಮೂಲಕ!!.

ಮೊದಲು ಬರುವುದು ಭೀಮನ ಅಮಾವಾಸ್ಯೆ ಹೆಂಡತಿ ತನ್ನ ತಾಳಿ ಭಾಗ್ಯ ಗಟ್ಟಿ ಇರಲೆಂದು ಗಂಡನ ಆಯಸ್ಸು ಆರೋಗ್ಯ ಮತ್ತು ಸಮೃದ್ಧಿಗೆ ಶಿವನನ್ನು ಕುರಿತು ಮಾಡುವ ವ್ರತವಾಗಿದೆ. ಹೀಗೆ ಮಂಗಳ ಗೌರಿ, ನಾಡಹಬ್ಬ ನಾಗ ಚತುರ್ಥಿ (ಪಂಚಮಿ), ಬಸವ ಪಂಚಮಿ,  ಮಂಗಳ ಗೌರೀ ವ್ರತ, ವರಮಹಾಲಕ್ಷ್ಮೀ ವ್ರತ, ಗಾಯತ್ರೀ ಆರಾಧನೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಹೀಗೆ ಒಂದೊಂದಾಗಿ ಹಬ್ಬಗಳು ಆಚರಿಸಲ್ಪಡುತ್ತವೆ.

ನಾಗಪಂಚಮಿ 

Friday 21 July 2017

ಡಾಕ್ಟರ್ ಫಿಶ್- ಕೆಲವು ಚರ್ಮದ ತೊಂದರೆಗಳಿಗಾಗಿ

ಡಾಕ್ಟರ್ ಫಿಶ್ ಏನಪ್ಪಾ ಇದು ಮೀನುಗಳು ಯಾವಾಗ ಡಾಕ್ಟರ್ ಸರ್ಟಿಫಿಕೇಟ್ ತೊಗೊಂದ್ವು  ಅಂತ ಅನ್ನಿಸ್ತಿದ್ಯಾ?  ಮೊದಲು ನಂಗು ಕೂಡ ಹಾಗೆ ಅನ್ನಿಸ್ತು. ಹೋದ ಶನಿವಾರ ಮೈಸೂರ್ಗೆ ಹೋದಾಗ,  ಅಲ್ಲಿ  ಕ್ಲೇ ಮ್ಯೂಸಿಯಂ ಹತ್ರ ಒಂದು ಫಿಶ್ ಟ್ಯಾಂಕ್ ನಲ್ಲಿ  ಚಿಕ್ಕ ಮೀನುಗಳು ಇದ್ವು ಕೆಲವರು ಅದರೊಳಗೆ  ಕಾಲು ಇಳಿಸಿಕೊಂಡು ಕೂತಿದ್ರು. ಡಾಕ್ಟರ್ ಫಿಶ್ ಸ್ಪಾ.  ಪರ್ ೧೦೦ ಫಾರ್ ೧೦ ಮಿನಿಟ್ಸ್ ಅಂತ ಬರೆದಿತ್ತು.  ನೋಡೋಣ ಒಂದು ಟ್ರೈ ನಾನು ಮಾಡೋಣ ಅಂತ ೧೦೦ ರೂಪಾಯಿ  ಕೊಟ್ಟು ನಾನು ಆ ಡಾಕ್ಟರ್ ಫಿಶ್ ಟ್ಯಾಂಕ್ ಒಳಗೆ ಕಾಲಿಟ್ಟು ಕುಳಿತೆ. ನಾನು ಕಾಲ್ನ ನೀರಿಗೆ ಇಳಿಸಿದ್ದೀ ತಡ ಆ ಟ್ಯಾಂಕ್ ನಲ್ಲಿದ್ದ  ಫಿಶ್ ಗಳೆಲ್ಲ ನನ್ನ ಕಾಲಿಗೆ ಮುತ್ತಾಕೊಂಡುಬಿಟ್ಟವು. ತಕ್ಷಣ ಭಯ ಆಯ್ತು, ನಂತ್ರ ಅವು ನನ್ನ ಪಾದಗಳಿಗೆ ಕಚಗುಳಿ ಕೊಡ್ತಾಯಿದ್ವು. ನಂತ್ರ ಭಯ ಹೋಗಿ ಮೀನುಗಳ  ಕಚಗುಳಿ ತಡ್ಕೊಳ್ಳೊಗಾಗ್ದೇ ನಗು ಬರ್ತಿತ್ತು.




ಹಾಗೆ ಮೀನುಗಳ  ಮಾಲೀಕಳನ್ನ ಕೇಳಿದೆ ಏನಿದರ ವಿಶೇಷ?  ಎಲ್ಲಿಂದ ನೀವು ಇದನ್ನ ತೊಗೊಂಡ್ ಬರ್ತೀರಾ ಅಂತ. ಅದಕ್ಕೆ ಆಕೆ ಕೊಟ್ಟ ಉತ್ತರ ಇವುಗಳ ಹೆಸರು ಡಾಕ್ಟರ್ ಫಿಶ್ ಅಥವಾ  ಸರ್ಜನ್ ಫಿಶ್ ಅಂತ.  ಈ ಮೀನುಗಳು  ನಮ್ಮ ದೇಹದ ಡೆಡ್ ಸ್ಕಿನ್, ಇನ್ಫೆಕ್ಷನ್, ಕೊಳೆಯ ಭಾಗವನ್ನ ತಿಂದು ಸ್ಕಿನ್ ನನ್ನ ಕ್ಲೀನ್ ಮಾಡುತ್ತವೆ. ಹಾಗೆ ನರಗಳ ರಕ್ತ ಪರಿಚಲನೆಗೆ ಹೆಲ್ಪ್ ಮಾಡುತ್ತವೆ.  ವಿದೇಶಗಳಲ್ಲಿ ಸ್ಕಿನ್ ಪ್ರಾಬ್ಲೆಮ್ಸ್ ಗೆ ಈ ಫಿಶ್ ನ ಉಪಯೋಗಿಸುತ್ತಾರೆ. ನಮ್ಮ ಆಯುರ್ವೇದದಲ್ಲಿ ಗಿಜಣೆ ಗಳನ್ನು ಬಳಸುವುದಿಲ್ವ ಹಾಗೆ ಇದು ಒಂದು ರೀತಿಯ ಟ್ರೀಟ್ಮೆಂಟ್ ಅಂತ ಹೇಳಿದ್ಲು. ಇತ್ತೀಚಿನ ದಿನಗಳಲ್ಲಿ ಸ್ಪಾ ಗಳಲ್ಲಿ ಈ ಫಿಶ್ ಗಳ  ಹೆಚ್ಚು ಬೇಡಿಕೆ ಇದೆ ಅಂತ ಹೇಳಿದ್ಲು. 

ವಾಪಸ್ ಬೆಮನೆಗೆ ಬಂದ್ರೂ ಆ ಡಾಕ್ಟರ್ ಫಿಶ್ ವಿಷಯ ನನ್ನ ತಲೇಲಿ  ಗಿರಾಕಿ ಹೊಡಿತಾಯಿತ್ತು. ನೋಡೋಣ ಅಂತ ಕುತೂಹಲಕ್ಕೆ ಗೂಗಲ್ ಸರ್ಚ್ ಮಾಡಿದಾಗ ನಂಗೆ ಸಿಕ್ಕ ಡಾಕ್ಟರ್ ಫಿಶ್ ನ ಕೆಲವು  ಮಾಹಿತಿಗಳನ್ನ ಇಲ್ಲಿ ಬರೀತಾಯಿದೀನಿ. 

ಈ ಡಾಕ್ಟರ್ ಫಿಶ್ ನ ನಿಜವಾದ ಹೆಸರುಗಳು  ಗರ್ರ ರುಫಾ , ನಿಬ್ಬಲ್ ಫಿಶ್ ,ಕಂಗಾಲ್ ಫಿಶ್ , ಬೋನೇಫಿಶ್  ಈ ಮೀನು ಸಿಪ್ರಿನಿಡ್ ಅನ್ನೋ ತಳಿಯ ಮೀನುಗಳ ಗುಂಪಿನಲ್ಲಿ ಬರುತ್ತವೆ.  ಇದು ಸಾಮಾನ್ಯವಾಗಿ ಸಿಹಿನೀರಿನ ಕೊಳಗಳು , ಸರೋವರ,  ಹೊಂಡ,  ನದಿಗಳಲ್ಲಿ ಕಂಡುಬರುತ್ತವೆ. ನೀರಿನಲ್ಲಿನ ಪಾಚಿ, ಮತ್ತು ಸಣ್ಣ ಪುಟ್ಟ ಗಿಡಗಳು, ನೀರಿನಲ್ಲಿರುವ ಪ್ರಾಣಿಗಳ ಮೇಲಿನ ಡೆಡ್ ಸ್ಕಿನ್  ಇವು ಇವುಗಳ ಊಟ. ಈ ಡಾಕ್ಟರ್ ಮೀನುಗಳು ಚರ್ಮದಲ್ಲಿನ ಡೆಡ್ ಸ್ಕಿನ್,  ಕ್ರಿಮಿ, ಕೊಳೆ  ತಿನ್ನುವುದರಿಂದ ಈ ಫಿಷ ನನ್ನ ಆಹಾರವಾಗಿ ತಿನ್ನಲು ಯೋಗ್ಯವಲ್ಲ ಎನ್ನುವರು. 

ಇವು ಸಾಮಾನ್ಯವಾಗಿ ಕಂಡುಬರುವುದು, ಟರ್ಕಿ, ಸಿರಿಯಾ,ಓಮನ್, ಇರಾಕ್, ಇರಾನ್,ದೇಶಗಳಲ್ಲಿ ಹೆಚ್ಚು ಪ್ರಮಾಣಗಳಲ್ಲಿ ಕಂಡುಬರುತ್ತವೆ. ಟರ್ಕಿ ದೇಶದಲ್ಲಿ ಸರ್ಕಾರವೇ ಕಾನೂನು ಬಧ್ದಹವಾಗಿ ರಫ್ತು  ಮಾಡುವ ಉದ್ದೇಶದಿಂದ ರಕ್ಷಣೆ ಮಾಡುತ್ತದೆ. 

೨೦ ನೇ  ಶತಮಾನದಿಂದ ಈ ಮೀನುಗಳನ್ನು ಕೆಲವೇ ದೇಶಗಳಲ್ಲಿ ಸೋರಿಯಾಸಿಸ್ ನಂತಹ ಚರ್ಮ ರೋಗಕ್ಕೆ ಟ್ರೀಟ್ಮೆಂಟ್ ರೀತಿ ಬಳಸುತ್ತಿದ್ದರು. ಇತ್ತೀಚಿಗೆ ಸ್ಪಾ ಗಳಲ್ಲಿ ಪೆಡಿಕ್ಯೂರ್ ಮತ್ತು ಬಾಡಿ ಮಸಾಜ್ ಮಾಡಲು ಈ ಡಾಕ್ಟರ್ ಫಿಶ್ ಗಳ  ಮೊರೆ ಹೋಗುತ್ತಿದ್ದಾರೆ. ಇತ್ತೀಚಿಗೆ ಚೀನಾ, ಜಪಾನ್, ಇಂಡಿಯಾ ಮುಂತಾದ ದೇಶಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.   

Thursday 20 July 2017

ಸಾಮಾನ್ಯ ವ್ಯಕ್ತಿ ನಾಯಕನಾದಾಗ - ಒಂದು ಮೊಟ್ಟೆಯ ಕಥೆ

ಇತ್ತೀಚಿನ ಸಿನೆಮಾಗಳನ್ನ ನೋಡಿದಾಗ ಫೇಮಸ್ ನಾಯಕ , ಫೇಮಸ್ ನಾಯಕ ನಟಿ, ಅದ್ದೂರಿ ಸೆಟ್, ಅವಾಚ್ಯ ಮಾತುಗಳು ,ಹೊಡೆದಾಟ ಬಡಿದಾಟಗಳು , ಚಾಕು, ಚೂರಿ, ಮಚ್ಚು, ಕತ್ತಿ, ರಕ್ತ, ಇವುಗಳು ಇದ್ರೆ  ಒಳ್ಳೆ ಸಿನಿಮಾ ಮಾಡಬಹುದು.  ಜನರ ಮನಸ್ಸನ್ನ ಗೆಲ್ಲಬಹುದು  ಅನ್ನೋ  ಜನ ಒಂದು ಕಡೆಯಾದ್ರೆ. ಇನ್ನು ಕೆಲವರು ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಭರ ಮತ್ತು ಜನರ ಮನಸ್ನಲ್ಲಿ ನಾವು ಸದಾ ಇರಬೇಕು ಅನ್ನೋ ಆಸೆ. ಒಳ್ಳೆ ರೀತಿಯಲೋ  ಅಥವಾ ಕೆಟ್ಟ ರೀತಿಯಲೋ ಒಟ್ಟು ಪ್ರಚಾರದಲ್ಲಿ ಇರಬೇಕು ಅನ್ನೋ ಮನೋಭಾವನೆ ಈಗ ಚಿತ್ರರಂಗದಲ್ಲಿ ಇದೆ. ಒಟ್ಟಿನಲ್ಲಿ ಜನ ಅವರುಗಳ ಬಗ್ಗೆ ಮಾತಾಡಿಕೊಳ್ಳುತ್ತಾನೆಯೇ ಇರಬೇಕು ಅದಕ್ಕೋಸ್ಕರ ಎಂಥಾ ಚೀಪ್ ಗಿಮಿಕ್ ಮಾಡೋಕು ರೆಡಿ ಇರ್ತಾರೆ ಕೆಲವರು. ಅಂತಹುದರಲ್ಲಿ  ಯಾವುದೇ ಅತಿರೇಕಗಳನ್ನ ಮಾಡದೇ ಸರಳ ಸುಂದರ ಸಿನೆಮಾ ಮಾಡಿ ಗೆದ್ದಿದೆ.  ರಾಜ್ ಕುಮಾರ್ ರವರನ್ನು ಆದರ್ಶವಾಗಿಟ್ಟು ಕೊಂಡು ಬದುಕುವ ಮೊಟ್ಟೆ ತಲೆಯ ವ್ಯಕ್ತಿ ಜೀವನ ಸುಂದರವಾಗಿ ಮೂಡಿಬಂದಿದೆ.  



ಈ ಭಾನುವಾರ ನಾ ನೋಡಿದ ಸಿನೆಮಾ ಒಂದು ಮೊಟ್ಟೆಯ ಕಥೆ . ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿರುವಂತ ಅತಿರೇಕಗಳು ಈ ಚಿತ್ರದಲ್ಲಿ ಇಲ್ಲ. ಅಂದ್ರೆ  ನಾಯಕ - ಖಳ ನಾಯಕರ ಹೊಡೆದಾಟ ಬಡಿದಾಟವಿಲ್ಲದ, ನಾಯಕಿಯರ ದೇಹಪ್ರದರ್ಶನವಿಲ್ಲ, ನಿಜವಾದ ಸೌಂದರ್ಯ ಅಂದ್ರೆ ಏನು ಎಂದು ತಿಳಿಸಿದ ಚಿತ್ರ, ಸಹ ನಟ - ನಟಿಯರನ್ನು ಹೊಡೆದು, ಬಡಿದು , ತಳ್ಳಿ  ತಮಾಷೆ ಮಾಡದೇ ನಗು ತರಿಸಿದ ಚಿತ್ರ . ಅತಿರೇಕ ಎನ್ನೋ ಸೆಂಟಿಮೆಂಟ್ ಡೈಲಾಗ್ ಇಲ್ಲದೆ ಕಣ್ಣಂಚಲ್ಲಿ ನೀರು ಜಿನುಗಿಸುತ್ತೆ. ಇದು ಅಂತ ನನಗೆ ಅನ್ನಿಸ್ತು.

ಇದು ಸಾಮಾನ್ಯ ಜನ ಜೀವನದಲ್ಲಿ ನಡೆಯುವ ಸತ್ಯ ಸಂಗತಿಗಳನ್ನ ತೆರೆ ಮೇಲೆ ಆಡಂಬರವಿಲ್ಲದೆ ಸರಳವಾಗಿ ನೈಜತೆಯಿಂದ ಚಿತ್ರಿಸಿರುವ ಸಿನೆಮಾ ಇದಾಗಿದೆ. ಜನಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಈ ಮೊಟ್ಟೆಯ ಕಥೆಯ ನಾಯಕ.  ಅವರವರ ಜೀವನಕ್ಕೆ ಅವರೇ ನಾಯಕ ನಾಯಕಿಯರು ಅಲ್ವ? ಹಾಗೆ ಒಬ್ಬ ಮೊಟ್ಟೆ ತಲೆಯ ವ್ಯಕ್ತಿ ಯೊಬ್ಬನ ಜೀವನವನ್ನ ಕೇಂದ್ರವಾಗಿಟ್ಟು ಮೂಡಿಬಂದಿರುವ ಸಿನೆಮಾ ಇದು. ಆತನಿಗೆ ತನ್ನ ಬೋಳು ತಲೆಯಿಂದ ಪ್ರತಿದಿನ ಆಗುವ ಅವಮಾನಗಳು.  ಮದುವೆಯಾಗುವ ಹುಡುಗಿಯರು ಆತನನ್ನು ರಿಜೆಕ್ಟ್ ಮಾಡಿದರೂ,,, ಈ ಬಾರಿ ಮದುವೆ  ಸಂಬಂಧ ಏನಾಯ್ತು? ಅಂತ ಯಾರಾದ್ರೂ ಕೇಳಿದ್ರೆ.  ಆತ ತಾನೇ ರಿಜೆಕ್ಟ್ ಮಾಡಿದೆ ಅನ್ನೋ ಸುಳ್ಳು ಸ್ವಾಭಿಮಾನದ ಮಾತು. ಸಮಯ ಸಂದರ್ಭಕ್ಕೆ ಸರಿಯಾಗಿ ಬರುವ ಅಣ್ಣಾವ್ರ ಹಾಡುಗಳು ಪ್ರತಿಬಾರಿ ನಗು ಬರಿಸುತ್ತವೆ . 


ತನ್ನ ಎದುರಿರುವ ಎಕನಾಮಿಕ್ಸ್ ಲೇಡಿ ಲೆಕ್ಚರ್ಳನ್ನು  ಇಷ್ಟ ಪಡುತ್ತಾನೆ. ನಂತ್ರ ಅವಳು ಕಾಲೇಜಗೆ ಹೊಸದಾಗಿ ಬರೋ ಸುಂದರ ಇಂಗ್ಲಿಷ್ ಲೆಕ್ಚರ್ ಮೇಲೆ ಮನಸಾಗುತ್ತೆ. ನಂತ್ರ ಅವರಿಗೆ ಮದುವೆ   ಆಗಿದೆ  ಅಂತ ಗೊತ್ತಾದ ಮೇಲೆ ಈ ಮೊಟ್ಟೆ ಹುಡುಗನ ಗುಣವೇ ಮೇಲು ಎನಿಸುತ್ತೆ ಆಕೆಗೆ. ಇನ್ನೊಂದು ಕಡೆ  ಬೋಳುತಲೆಗಳನ್ನೇ ಬಂಡವಾಳವಾಗಿಟ್ಟು  ಕೊಂಡು ತನ್ನ ಕೆಲಸ ಸಾಧಿಸಿಕೊಳ್ಳಲು ಜನರ ಹಾದಿತಪ್ಪಿಸುವ ಹುಡುಗಿ.  ಅಮಾಯಕರನ್ನ ಹಾದಿತಪ್ಪಿಸುವ ಸಮಾಜದ ಕೆಲವು ಕಪಟಿ ಜನರಿಗೆ ಒಳ್ಳೆ ಉದಾಹರಣೆ ಯಾಗುತ್ತಾಳೆ.

 ಈ ಮೊಟ್ಟೆ ಹುಡುಗನಿಗೂ ಅಷ್ಟೇ,,ನನ್ನನ್ನು ಮೊದಲು ಎಸ್ಟೋ  ಜನ ಹುಡುಗಿಯರು ರಿಜೆಕ್ಟ್ ಮಾಡಿದ್ರು ಅನ್ನೋದನ್ನು ಮರೆತು, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತಿನಂತೆ ,,ಈತನನ್ನ ಇಷ್ಟಪಟ್ಟು, ಮನಸಾರೆ ಮದುವೆಯಾಗಲು ಒಪ್ಪಿಗೆ ಕೊಟ್ಟು, ತನ್ನ ಜೊತೆ ಎಂಗೇಜ್ ಮೆಂಟ್ ಆದ ಹುಡುಗಿ ದಪ್ಪ ಎಂದು, ಆಕೆಯನ್ನ ಮದುವೆಯಾದ್ರೆ  ಜೀವನವೇ ಜಿಗುಪ್ಸೆಯಾಗುತ್ತೆ ಅಂತ ಒಳಗೊಳಗೇ ಹಿಂಸೆ  ಪಡುತ್ತಿರುತ್ತಾನೆ. ಕೊನೆಗೊಂದು ದಿನ ಆಕೆಯೊಂದಿಗೆ ಮದುವೆಯನ್ನ ಮುರಿದುಕೊಳ್ಳುತ್ತಾನೆ. ಆಮೇಲೆ ತಾನು ಮಾಡಿದ್ದು  ತಪ್ಪು ಎಂದು ತಿಳಿದು  ಮತ್ತೆ ಆಕೆಯನ್ನೇ ಮದುವೆಯಾಗಲು ಚಡಪಡಿಸುವ ಪರಿ  ನೈಜತೆಯಿಂದ ಚಿತ್ರಿಸಿದ್ದಾರೆ.


ಮೊಟ್ಟೆ ನಾಯಕನ ಮನಸ್ಸು ಬದಲಾಯಿಸುವಲ್ಲಿ ಮುಖ್ಯ ಅನ್ನಿಸುವ ಪ್ರಸಂಗ ಎಂದರೆ ಕಾಲೇಜಿನಲ್ಲಿ ಈ ಮೊಟ್ಟೆಯ ಆಪ್ತ ಶ್ರೀನಿವಾಸ ಒಮ್ಮೆ ಆತನ ಮನೆಗೆ ಊಟಕ್ಕೆ ಕರೆಯುತ್ತಾನೆ. ಅವರ ಮನೆಗೆ ಹೋದಾಗ ಗೊತ್ತಾಗುತ್ತೆ ಆತನ ಹೆಂಡತಿ ಮೂಕಿ ಅಂತ.  ಆತನದು ಕೂಡ ಲವ್ ಮ್ಯಾರೇಜ್ ಅಂತ ನಾಯಕನಿಗೆ ಗೊತ್ತಿರುತ್ತೆ. ಆತ ಶ್ರೀನಿವಾಸನನ್ನು ಕೇಳುತ್ತಾನೆ ತಿಳಿದು ತಿಳಿದು ಮೂಕಿಯನ್ನ ಹೇಗೆ ಲವ್ ಮಾಡಿ ಮದುವೆ ಆದಿರಾ ಅಂತ. ಆಗ ಶ್ರೀನಿವಾಸ ಕೊಡುವ ಉತ್ತರ   ಜೀವನ ನಡೆಸಲು ಸೌಂದರ್ಯ ಮುಖ್ಯವಲ್ಲ, ಪ್ರೀತಿ ಮುಖ್ಯ, ಹೊಂದಿಕೊಂಡು ಹೋಗುವ ಮನಸ್ಸು ಇನ್ನು ಮುಖ್ಯ ಎಂದು. ಆ ಸಂದರ್ಭ ಪ್ರತಿಯೊಬ್ಬರ ಕಣ್ಣಿನ ಅಂಚಲ್ಲಿ ನೀರು ತರಿಸದೆ ಇರಲಾರದು. 

ಇದು ನಾನು ನೋಡಿದ ಒಂದು ಮೊಟ್ಟೆಯ ಕಥೆ ಸಿನೆಮಾದ ಬಗೆಗಿನ ನನ್ನ ಮಾತುಗಳು. 
  


Tuesday 25 April 2017

ಬಸವನಬ್ಬವೋ ಅತ್ವ ಬಸವ ಜಯಂತಿಯೋ?

ಆಡುಮಾತಿನಲ್ಲಿ "ಬಸವನಬ್ಬ" ಅಂತ ಕರಯಲ್ಪಡುವ "ಬಸವಣ್ಣ ಹಬ್ಬ", ಯಾವಾಗಲು ನಮಗೆ ಬೇಸಿಗೆ ರಜೆ (ಏಪ್ರಿಲ್ - ಮೇ ತಿಂಗಳು) ಇರುವಾಗಲೇ ಬರುತಿತ್ತು. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಈ ಬಸವನಬ್ಬ ಎಂದರೆ, ಬೆಳಿಗ್ಗೆ ಎದ್ದು ಮನೆ ಗುಡಿಸಿ-ಸಾರಿಸಿ, ಮನೆ ಹೊರಗಲ್ಲದೆ ಅಡುಗೆ ಮನೆ ಒಲೆಗೆ ರಂಗೋಲಿ ಹಾಕಿ, ಹರಿಶಿನ ಕುಂಕುಮ ಬೊಟ್ಟು ಇಟ್ಟು, ಪೂಜೆ ಮಾಡಿ ಅಡುಗೆ ಮಾಡಲು ಶುರು ಮಾಡೋದು. ಇದು ಹೆಣ್ಣು ಮಕ್ಕಳು ಮಾಡುತ್ತಿದ್ದ ಕೆಲಸ. ಗಂಡು ಮಕ್ಕಳು ಮನೆಯಲ್ಲಿ ಇದ್ದ ಹಸು, ಕರು, ಎತ್ತುಗಳಿಗೆ ಮೈ ತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಅವುಗಳಿಗೆ ಪೂಜೆ ಮಾಡೋರು. ಅವತ್ತು ಎತ್ತು ಮತ್ತು ಹಸುಗಳು ದನಿನ ಮನೆ(ಕೊಟ್ಟಿಗೆ)ಯಿಂದ ನಡುಮನೆವರೆಗೆ ಕರೆದುಕೊಂಡು ಬಂದು ಪೂಜೆ ಮಾಡಿ ಎಡೆ ತಿನ್ನಿಸುತ್ತಿದ್ದರು. ಅವುಗಳ ಕೊರಳಿಗೆ, ಕಾಲಿಗೆ ದಾರ ಕಟ್ಟೋದು. ಗೆಜ್ಜೆ ಕಟ್ಟೋದು ಇವೆಲ್ಲ ನಡೀತಿದ್ವು. ಊರ ಮುಂದಿನ ಬಸವಣ್ಣನ ಗುಡಿಗೆ ಎಣ್ಣೆ-ಬತ್ತಿ-ಹೂ-ಊದುಬತ್ತಿ-ಕರ್ಪೂರದ ಜೊತೆ ಎಡೆಯನ್ನ ಮನೆಯಿಂದ ತೊಗೊಂಡೋಗಿ ಪೂಜೆ ಮಾಡಿಕೊಂಡು ಬರೋರು. ಅವತ್ತಿನ ದಿನ ದನಕರುಗಳಿಗೆ ಹೊಡೆಯುವಂತಿರಲಿಲ್ಲ, ನೇಗಿಲು ಹೂಡುವಂತಿರ್ಲಿಲ್ಲ, ಮುಸುರೆ ಕುಡಿಸುತ್ತಿರಲಿಲ್ಲ. ಇದು ಬಸವನ ಹಬ್ಬದಲ್ಲಿ ಕಟ್ಟು ಬಧ್ಧ ನಿಯಮವಾಗಿತ್ತು.  ನಾನು ಚಿಕ್ಕವಳಿಂದ ನೋಡಿಕೊಂಡು ಬಂದ ಬಸವನ ಹಬ್ಬ ಹಿಂಗಿತ್ತು . ಈಗಲೂ ಊರುಗಳಲ್ಲಿ ಬಸವನಹಬ್ಬ ಆಚರಣೆ ಹೀಗೇ ಇದೆ.




ಒಂದ್ಸಲ, ಈ ಹಬ್ಬ ಯಾಕೆ ಮಾಡ್ತಾರೆ?  ಈ ಹಬ್ಬದ ದಿವ್ಸ ಎತ್ತು, ಹಸುಗಳಿಗೆ ಮಾತ್ರ ಯಾಕೆ ಪೂಜೆ? ಎಮ್ಮೆಗೆ ಯಾಕೆ ಪೂಜೆ ಮಾಡಲ್ಲ? ಅಂತ  ನಮ್ಮ ಅಜ್ಜಿಯನ್ನ ಕೇಳಿದ್ದೆ!. ಆಗ ನಂಗೆ ಸಿಕ್ಕ ಉತ್ತರ ಏನಪಾಂದ್ರೆ, "ಈ ದಿನ ಶಿವನ ವಾಹನ ನಂದಿ ಹುಟ್ಟಿದ್ದಿನ. ನಾವೆಲ್ಲಾ ರೈತರು ಬೇಸಾಯಕ್ಕೆ ಅಂತ ಎತ್ತಿಗೆ ಎಷ್ಟು ಕಷ್ಟ ಕೊಡುತ್ತೀವಿ ತಾನೇ? ಅದಕ್ಕೇ, ಅವನು ಹುಟ್ಟಿದ ದಿನನಾದ್ರೂ ನಾವು ಅವನ ಸೇವೆ ಮಾಡೋಕೋಸ್ಕರ ಈ ಹಬ್ಬ ಮಾಡುತ್ತಾರೆ" ಅಂತ ಅವರ ಅಜ್ಜಿ  ಹೇಳಿದ್ದನ್ನ ನನ್ನಜ್ಜಿ ಗೌರಜ್ಜಿ ನಂಗೆ ಹೇಳಿದಳು. ನಂತರ ನನ್ನ ತಲೇಲಿ ಇನ್ನೊಂದ್ ಪ್ರಶ್ನೆ ಬಂತು. ಮತ್ತೆ ಅಜ್ಜಿ ಕೇಳ್ದೆ. ಇವತ್ತು ಎತ್ತಿನ ಪೂಜೆ, ಎಮ್ಮೆಗೆ ಯಾವತ್ತು  ಪೂಜೆ ಅಂತ? ನನ್ನಜ್ಜಿಗೆ ಕೋಪ ಬಂತು ನೋಡಿ. 'ಮಾರಿ ಹಬ್ಬ ಮಾಡ್ತಾರಲ್ಲ ಅವರನ್ನ ಹೋಗಿ ಕೇಳು'. ಅಂತ ಕೋಪ ಮಾಡ್ಕೊಂಡ್ ಹೇಳಿದ್ರು. ನಾನು ಯಾಕೋ ಇನ್ನು ಮಾತು ಮುಂದುವರೆಸಿದರೆ ಏಟು ಗ್ಯಾರಂಟಿ ಅಂತ ಅಲ್ಲಿಂದ ಕಾಲ್ಕಿತ್ತಿದ್ದೆ!.



ನಾನು ಡಿಗ್ರಿ ಓದೋಕೆ ಅಂತ  ಬೆಂಗಳೂರಿಗೆ ಬಂದಾಗ, ಇಲ್ಲಿ ಆಚರಿಸುವ ಬಸವನಹಬ್ಬ ಬೇರೆಯದೇ ರೀತಿಯಾಗಿತ್ತು. ಸರ್ಕಾರಿ ರಜೆ, ಜಗಜ್ಯೋತಿ ಬಸವಣ್ಣನವರ  ಫೋಟೋ ಅತ್ವ ವಿಗ್ರಹಕ್ಕೆ ಹಾರ ಹಾಕಿ, ಅವರು ಹುಟ್ಟಿದ ದಿನ ಎಂದು "ಬಸವ ಜಯಂತಿ" ಅನ್ನೋ ಹೆಸರಲ್ಲಿ ಆಚರಿಸುವ ಪಧ್ಧತಿ!. ಬಸವಣ್ಣನವರ ಹುಟ್ಟು, ಜೀವನ ಸಾಧನೆ, ಆದರ್ಶಗಳ ನೆನಪು!. ವಚನಗಳ ಸಾರ ಇವುಗಳನ್ನು ಸ್ಮರಿಸಿಕೊಳ್ಳುವ ದಿನ!

ಈ ಬಗ್ಗೆ ವಿಚಾರಿಸೀ ನೋಡಿದಾಗ ತಿಳಿದದ್ದು... ಈ ಎರಡೂ ಆಚರಣಾ ವಿಧಾನಗಳು ಒಂದೇ ದಿನ ಮಾಡ್ತಾರೆ ಅಂತ.  ನಾವು ಹಳ್ಳಿಗಳಲ್ಲಿ ಮಾಡುವ ಬಸವನಹಬ್ಬ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದದ್ದು. ಆದರೆ ಕ್ಯಾಲೆಂಡರ್ನಲ್ಲಿ ನೋಡುವ ಸರಕಾರೀ ಬಸವಜಯಂತಿಯು ಇತ್ತೀಚಿಗೆ ಶುರುವಾದದ್ದು. ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿ ಮತ್ತು 'ಕರ್ನಾಟಕದ ಗಾಂಧಿ' ಎಂದೇ ಹೆಸರಾಗಿರುವ ಹರ್ಡೇಕರ ಮಂಜಪ್ಪ ಬಸವ ಜಯಂತಿ ಆಚರಣೆಯನ್ನು ಶುರುಮಾಡಿದರು. ಹರ್ಡೇಕರ್ ಮಂಜಪ್ಪನವರು ಅಂದಿನ ಅನೇಕ ವಿದ್ವಾಂಸರಿಗೆ ಮತ್ತು ಜ್ಯೋತಿಷ್ಯಶಾಸ್ತ್ರಜ್ಞರಿಗೆ ಪತ್ರಗಳನ್ನು ಬರೆದು ಬಸವಣ್ಣನವರ ಹುಟ್ಟಿದ ದಿನವನ್ನ ಕಂಡು ಹಿಡಿಯಲು / ಗುರ್ತಿಸಲು ಕೇಳಿಕೊಂಡರು. ಭೀಮಕವಿಯ "ಬಸವ ಪುರಾಣ" ದ ಷಟ್ಪದಿಯಾ ಆಧಾರದ ಮೇಲೆ  ಬಸವಣ್ಣನವರು, ಆನಂದನಾಮ ಸಂವತ್ಸರದಲ್ಲಿ,  ಚಾಂದ್ರಮಾನ ಲೆಕ್ಕದ, ವೈಶಾಖ ಮಾಸ - ರೋಹಿಣಿ ನಕ್ಷತ್ರ (ವೃಷಭ ರಾಶಿ) ದಲ್ಲಿ ಹುಟ್ಟಿದರು ಮತ್ತು ಅಂದು "ಅಕ್ಷಯ ತೃತೀಯ" ಹಬ್ಬವಾಗಿತ್ತು ಎಂದು ಕಂಡು ಕೊಂಡರು. ಇದು ಆದುನಿಕ ಕ್ಯಾಲೆಂಡರ್ ಪ್ರಕಾರ ದಿನಾಂಕ 30 ಮಾರ್ಚ್ 1134 ಎಂದೂ ಲೆಕ್ಕ ಹಾಕಲಾಯಿತು. ಬಸವಣ್ಣನವರು ಹುಟ್ಟಿದ ವರ್ಷ 1105 ಎಂದೂ ಹಲವು ಪ್ರಮುಖ ಗ್ರಂಥಗಳಲ್ಲಿ ನಮೂದಾಗಿದೆ. ಬಸವಣ್ಣ ಹುಟ್ಟಿದಂದಿನಿಂದ ಶುರುವಾದ ಬಸವ ಶಕೆ ಇಂದಿಗೂ ಬಳಕೆಯಲ್ಲಿದೆ ಮತ್ತು  ಪಂಚಾಂಗಗಳಲ್ಲಿ ಅನೂಚಾನವಾಗಿ ಈ ಬಸವಶಕೆಯ ವರ್ಷಗಳು ಬಳಕೆಯಾಗುತ್ತ ಬಂತು. ಇದು (ಆಧುನಿಕ ವರ್ಷ 2017) ಬಸವ ಶಕೆ 884.

ದಾವಣಗೆರೆಯಲ್ಲಿ ಬಸವಜಯಂತಿಯನ್ನ ಮೊದಲ ಬಾರಿಗೆ - 1913ರಲ್ಲಿ ಆಚರಿಸಲಾಯಿತು. ನಂತರ ಇದು ಕರ್ನಾಟಕದ ತುಂಬಾ ಪ್ರಸಿದ್ದಿಯಾಯಿತು ಮತ್ತು ಮೂಲೆ ಮೂಲೆಗಳಲ್ಲಿ ಆಚರಣೆಯಾಗ್ತಾ ಬಂತು. ಮುಂದೆ ಕರ್ನಾಟಕ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಸರ್ಕಾರಿ ದಿನಗಳಾಗಿ ಘೋಷಣೆ ಮಾಡಿದವು ಮತ್ತು ಸರ್ಕಾರದ ಮೂಲಕವೂ ಆಚರಣೆ ಮಾಡುತ್ತಾ ಬಂದವು.




ಪಾಲ್ಗುರಿಕೆ ಸೋಮನಾಥ ತೆಲುಗಿನಲ್ಲಿ, ನಂತರ ಭೀಮ ಕವಿ ಕನ್ನಡದಲ್ಲಿ "ಬಸವಪುರಾಣ" ಬರೆದವರು. ಹರಿಹರನೂ ಸೇರಿಕೊಂಡು ಬಸವಣ್ಣನವರ ಬಗ್ಗೆ ಅಗಣಿತ ಜನರು ವಚನ, ಪುರಾಣ, ಮಹಾಕಾವ್ಯ, ರಗಳೆ ಷಟ್ಪದಿ, ಕತೆ ಕಾದಂಬರಿ ಇತ್ಯಾದಿ ಸಾಹಿತ್ಯಗಳನ್ನ ಹುಟ್ಟು ಹಾಕಿ ಕನ್ನಡ, ತೆಲುಗು, ತಮಿಳು ಸಂಸ್ಕೃತ ಸಾಹಿತ್ಯವನ್ನ ಸಮೃದ್ದಗೊಳಿಸಿದ್ದಾರೆ.         

ಇತರರಿಗೆ ಬಸವಣ್ಣನವರು ಹೇಗೆ ಕಂಡಿದ್ದಾರೆ ಎಂದು ಅವರ ಮಾತುಗಳಲ್ಲೇ ಇಲ್ಲಿ ಕೊಟ್ಟಿದ್ದೇನೆ. 

ಜನಪದರಲ್ಲಿ ಬಸವಣ್ಣ 
ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ| 
ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು||

ಪುರಾಣಗಳಲ್ಲಿ ಬಸವಣ್ಣ
ಭೀಮ ಕವಿ, ಪಾಲ್ಗುರಿಕೆ ಸೋಮನಾಥರಂತವರು ಪುರಾಣಗಳನ್ನು ರಚಿಸಿದ್ದಾರೆ.  ವೇದ ವ್ಯಾಸ ರಚಿತ ಬಸವ ಪುರಾಣ" ವೂ ಸಿಕ್ಕಿದೆ!.   

ವಚನಗಳಲ್ಲಿ ಬಸವಣ್ಣ 
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು.

ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು,
ಗುರು ತಾನೀತ ಎನ್ನ ಭವರೋಗವ ವೇಧಿಸಲು,
ಭಕ್ತ ತಾನೀತ ಎನಗೆ ವಿಸ್ತಾರವಾಗಿ.
ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನಮಹಿಮನಾಗಿ.
ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ.
ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯ ತಾನಾಗಿ.
ಎನ್ನ ಸರ್ವಸ್ವಾಯತವ ಮಾಡಿದ ಮಹಿಮ ತಾನೀತ ಕಾಣಾ,ಕಲಿಗೆದೇವರದೇವ, ನಿಮ್ಮ ಶರಣ ಬಸವಣ್ಣ.

ಬಸವ ಎಂದೊಮ್ಮೆ ಮನವೊಸೆದು ನೆನೆದಡೆ
ಬಸವ ಅಸುವಿಂಗೆ ಅಸುವಾಗಿ ತೋರ್ಪನೈಸೆ
ಬಸವ ನಾಮವ ಬಿಡದೆ ರಸನೆಯೊಳಾವಾಗ
ಬಸವ ಬಸವ ಎಂಬೆ ಯೋಗಿನಾಥ
ಶಾಸನಗಳಲ್ಲಿ ಬಸವಣ್ಣ 
ಅನೇಕ ಶಾಸನಗಳು "ಓಂ ಬಸವ ಲಿಂಗಾಯ ನಮ:" ಅನ್ನೋ ಪೀಟಿಕೆಯಿಂದ ಶುರುವಾಗುತ್ತವೆ.  ಉದಾಹರಣೆ ಶಾಲಿವಾಹನ ಶಕೆ 1530ರ ಕೊಟ್ಟೂರು ಶಾಸನ. ಬಸವಣ್ಣನವರ ಜೀವನದ ಬಗ್ಗೆ ತಿಳಿಸಿಕೊಡುವ ಶಾಸನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.  

ಸರ್ವಜ್ಞನ ತ್ರಿಪದಿಗಳಲ್ಲಿ ಬಸವಣ್ಣ 
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ

ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು – ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ

ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ಧನು ಬಸವಣ್ಣನ| ಪಾದಕ್ಕೆ
ಶರಣೆನ್ನಿರೆಲ್ಲ ಸರ್ವಜ್ಞ||

ಆಧುನಿಕ (ಕುವೆಂಪು) ರಲ್ಲಿ ಬಸವಣ್ಣ 
ಕಾರ್ತಿಕದ ಕತ್ತಲಲ್ಲಿ
ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತು,
ಓ ಆಧ್ಯಾತ್ಮ ಕ್ರಾಂತಿ ವೀರ,
ದೇವ ದಯೆಯೊಂದು ಹೇ
ಧೀರಾವತಾರ ಶ್ರೀ ಗುರು
ಬಸವೇಶ್ವರ, ಶ್ರೀ ಬಸವೇಶ್ವರ, ಶ್ರೀ ಬಸವೇಶ್ವರ

ಆಧುನಿಕ (ಮಹಾತ್ಮ ಗಾಂಧಿಜಿ) ರಲ್ಲಿ ಬಸವಣ್ಣ 
“It has not been possible for me to practice principles of Basaveshwara   which he taught 800 years ago and which he also practiced. I have adopted few of them; I am yet to a seeker in this aspect and not an accomplished one. Eradication of untouchability & dignity of labour were among his core concepts one does not find even shade of castism in him.  Had he lived during our times, he would have been a saint worthy of worship. If his followers practice his precepts you could uplift not just Bharat but the world.”


ನನಗಿಷ್ಟವಾದ ಕೆಲವು ಬಸವಣ್ಣನವರ ವಚನಗಳೊಂದಿಗೆ ಈ ಬರಹವನ್ನ ಮುಗಿಸ್ತಾ ಇದ್ದೀನಿ.
ಅರಿವುವಿಡಿದು, ಅರಿವನರಿದು,
ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು,
ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು,
ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ.
ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ
ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.

ಆತ್ಮನ ನಿಜವನರಿಯದು
ಪರಮಾತ್ಮನ ಲಿಂಗವು ತಾನೆಂದರಿದ ಶರಣಂಗೆ
ಎಂತಿರ್ದಂತೆ ಪೂಜೆ ನೋಡಾ !
ಭೋಗಿಸಿದುದೆಲ್ಲವು ಶಿವಾರ್ಪಿತ
ಶರಣ ರುಚಿಸಿದುದೆಲ್ಲವು ಪ್ರಸಾದ
ಶರಣನರಿದುದೆಲ್ಲವು ಪರಬ್ರಹ್ಮ
ಶರಣ ನುಡಿದುದೆಲ್ಲವು ಪರತತ್ವ
ಶರಣ ತಾನೆ ಕೂಡಲಸಂಗಮದೇವ.

ದೇವಲೋಕ ಮತ್ರ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ ಶರಣನಾಗಲರಿಯ.
ಸತ್ತು ಬೆರಸಿಹೆನೆಂದಡೆ ಕಬ್ಬಿನ ತುದಿಯ ಮೆಲಿದಂತೆ
ಕೂಡಲಸಂಗಮದೇವಾ.

ಅರಿವು ಮರವೆಯೊಳಡಗಿ, ಮರವೆ ಅರಿವಿನೊಳಡಗಿ,
ತೆರಹಿಲ್ಲದಿರ್ದೆನೆಂಬ ಹಮ್ಮಿದೇನೋ, ಹಮ್ಮಿದೇನೋ
ಬ್ರಹ್ಮಾದ್ ಬ್ರಹ್ಮವ ನುಂಗಿ, ಮತ್ತಾ ಪರಬ್ರಹ್ಮನು ತಾನೆಂದೆಂಬ
ಹಮ್ಮಿದೇನೊ, ಹಮ್ಮಿದೇನೊ
ಆದಿ ಶೂನ್ಯವು ಶೂನ್ಯ, ಮಧ್ಯ ಶೂನ್ಯವು ಶೂನ್ಯ,
ಅಂತ್ಯ ಶೂನ್ಯವು ಶೂನ್ಯ,
ಶೂನ್ಯವಾದ ಬಳಿಕ ಅಲ್ಲಿಂದತ್ತ ನಿಂದ ನಿಲವನಾರು ಬಲ್ಲರು ಹೇಳಾ
ಬಯಲು ಚಿತ್ರಿಸಿದ ಚಿತ್ರವನಾ ಬಯಲರಿಯದಂತೆ
ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವು.

Friday 21 April 2017

ಪಂಚಾಂಗ - ಜ್ಯೋತಿಷ ಶಾಸ್ತ್ರ, ಪುರಾಣ - ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯ


ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಮತ್ತು ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಈ ದಿನ  ಕುಬೇರ, ವಿಷ್ಣು, ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಯನ್ನು ಪೂಜಿಸಿದರೆ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಬೆಳ್ಳಿ ಬಂಗಾರದ ಅಂಗಡಿಗಳಲ್ಲಿ ವ್ಯಾಪಾರ ತುಂಬಾ ಜೋರಾಗಿ ನಡೆಯುತ್ತದೆ. ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಮಾಡಿದರೆ ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ. ನಮ್ಮ ಹೆಣ್ಣುಮಕ್ಕಳು ಒಡವೆಯನ್ನು ಖರೀದಿಸಲು ತುಂಬಾ ಇಷ್ಟ ಪಡುತ್ತಾರೆ. ಏಕೆಂದರೆ ಅದು ಕೂಡ ಅಪತ್ಕಾಲಕ್ಕೆ ನೆರವಾಗುವ ಆಸ್ತಿಯಲ್ಲವೇ. ಹಾಗೇ ಹೆಣ್ಣಿನ ಸೌದರ್ಯದ ಮತ್ತು ಹೆಮ್ಮೆಯ ಪ್ರತೀಕ ಈ ಒಡವೆ. ಅಲ್ಲದೇ ಈ ನಂಬಿಕೆ ತಲಾಂತರಗಳಿಂದ ಇಷ್ಟು ಗಟ್ಟಿಯಾಗಿ ಜನರು ನಂಬಿಕೊಂಡು ಬಂದಿದ್ದಾರೆಂದರೆ ಏನು ಅರ್ಥ?  ಆ ದಿನದ ಮಹಿಮೆಯಿಂದ  ನಂಬಿದವರ ಜೀವನದಲ್ಲಿ ಒಳ್ಳೆಯದು ಆಗಿದೆ ಎಂದೇ ಅರ್ಥ. ಅಲ್ಲವೇ? ನಮ್ಮ ಭಾರತೀಯ ಪಂಚಾಗ ಸುಮ್ಮನೆ ಬಂದಿಲ್ಲ ಅದು ಒಂದು ವಿಜ್ಞಾನ. ಎನ್ನುವುದಕ್ಕೆ ಇದು ಕೂಡ ಒಂದು ಸಾಕ್ಷಿ.





ವೈಶಾಖ ಮಾಸದ - ಶುಕ್ಲ ಪಕ್ಷದ - ಮೂರನೇ ದಿನವೇ 'ಅಕ್ಷಯ ತೃತೀಯ'. ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ನಾಲ್ಕು "ಪೂರ್ಣಮುಹೂರ್ತ" ಗಳಲ್ಲಿ  (ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಹಬ್ಬದ ದಿನಗಳು) ಇದು ಒಂದು. ಈ ದಿನಗಳಲ್ಲಿ  ಒಳ್ಳೆಯ ಕೆಲಸ ಮಾಡಲು  ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿದ ನೆನಪು. ಈ ದಿವಸ ಸಾಮಾನ್ಯವಾಗಿ ಯಾವುದೇ ಒಳ್ಳೆ  ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ.

ಪಂಚಾಂಗದಲ್ಲಿ ಅಕ್ಷಯ ತೃತೀಯ 
ಅಕ್ಷಯ ತೃತೀಯದಂದು  ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ - ಉಚ್ಚರಾಶಿಯಲ್ಲಿ (ಸೂರ್ಯ - ಮೇಷರಾಶಿಯಲ್ಲಿ ಮತ್ತು ಚಂದ್ರ - ವೃಶಭಾರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು  ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು  ಮನಸ್ಸುಮತ್ತು ಬುಧ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ  ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು.

ಅಕ್ಷಯ ತೃತೀಯ ಹಬ್ಬದ ದಿನವನ್ನ ಹೇಗೆ ಲೆಕ್ಕ ಹಾಕುತ್ತಾರೆ.
ಈ ಹಬ್ಬವನ್ನ ಚಂದ್ರ ಮತ್ತು ಸೂರ್ಯ ಇಬ್ಬರೂ ತಮ್ಮ ತಮ್ಮ ಉಚ್ಚ ರಾಶಿಯಲ್ಲಿ ಇರುವ ದಿನದಂದು ಆಚರಿಸುತ್ತಾರೆ. ಸೂರ್ಯನು ತನ್ನ ಉನ್ನತ ಸ್ತಾನವಾದ ಮೇಶರಾಶಿಯಲ್ಲಿ - ಅಂದರೆ ಸೌರಮಾನ ಲೆಕ್ಕದ ಮೇಷ ಮಾಸದಲ್ಲಿ - ಪೂರ್ತಿ 30 ದಿನಗಳು ಇರುತ್ತಾನೆ. ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾಯಿಸಿದರೆ, ಚಂದ್ರ ದಿನಕ್ಕೊಮ್ಮೆ ನಕ್ಷತ್ರ ಬದಲಾಯಿಸುತ್ತಾನೆ (ಅಂದಾಜು ಎರಡೂವರೆ ದಿನಕ್ಕೊಂದು ರಾಶಿ). ಹಾಗಾಗಿ ಈ ಮೇಷ ಮಾಸದ ಯಾವ ದಿನದಂದು ಚಂದ್ರ ತನ್ನ ಉಚ್ಚ ಸ್ತಾನದಲ್ಲಿ ಇರುತ್ತಾನೋ ಅಂದೇ ಈ ಅಕ್ಷಯ ತೃತೀಯ. ಚಾಂದ್ರಮಾನ ಲೆಕ್ಕದ ಮೂಲಕ ನೋಡಿದರೆ ಈ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಆಗಿರುತ್ತದೆ. 




ಪುರಾಣ ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯದ ವಿಶೇಷತೆ:
  • ಈ ದಿನ ಹಲವು  ಮಹತ್ಕಾರ್ಯಗಳು ಶುರುವಾದ ದಿನ 
    • ಕೃತಯುಗ (ಸತ್ಯ ಯುಗ) ಶುರುವಾದ ದಿನ ಎಂದು ಹೇಳಲಾಗುತ್ತದೆ.
    • ವೇದವ್ಯಾಸರು ಗಣಪತಿ ಆಶೀರ್ವಾದ ಪಡೆದು  ಮಹಾಭಾರತ ಬರೆಯಲು ಪ್ರಾರಂಭಿಸಿದ ದಿನ.
    • ಗಂಗಾ ಮಾತೆ ಕೈಲಾಸದಿಂದ ಭೂಮಿಗೆ ಇಳಿದ ದಿನ ಎಂದು ಹೇಳಲಾಗುತ್ತದೆ.
  • ಈ ದಿನ ಹಲವು ಮಹಾತ್ಮರು ಹುಟ್ಟಿದ ದಿನ 
    • ಜಗಜ್ಯೋತಿ ಬಸವಣ್ಣ ಹುಟ್ಟಿದ ದಿನ.
    • ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. 
    • ವಿಷ್ಣು ಪರಶುರಾಮನಾಗಿ ಅವತಾರವೆತ್ತಿದ ದಿನ.  
  • ಇನ್ನೂ ಹಲವು ಮಹತ್ ಘಟನೆಗಳು ಈ ದಿನ ನಡೆದಿವೆ ಎಂದು ಪುರಾಣಗಳು ಹೇಳುತ್ತವೆ 
    •  ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದದಿನ.
    • ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಈ ಅಕ್ಷಯ ತೃತೀಯದ ದಿನವೇ.
    • ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ.
    • ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ.
    • ಕೃಷ್ಣನು  ಕುಚೇಲನನ್ನು ಸತ್ಕರಿಸಿದ ಪುಣ್ಯ ದಿನ.
ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಈ ದಿನ ಅಕ್ಷಯ ತೃತೀಯ ಆಚರಿಸಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸೋಣ. ಎಲ್ಲರ ಸಂಪತ್ತು ಅಕ್ಷಯವಾಗಲಿ. ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು.





ಜ್ಯೋತಿಷ ಶಾಸ್ತ್ರದ ಮೂಲಕ ಅಕ್ಷಯ ತೃತೀಯ:  

ಅಕ್ಷಯ ತೃತೀಯ  ಯಾವ ನಕ್ಷತ್ರದಲ್ಲಿ ಬಂದರೆ ಹೆಚ್ಚು ಶ್ರೇಷ್ಠ ?
ಈ ಹಬ್ಬ 'ತೃತೀಯ ತಿಥಿ' (ತದಿಗೆಯ ದಿನ) ಯಲ್ಲಿ ಮತ್ತು 'ವೃಷಭ ರಾಶಿ'ಯ ದಿನ ಆಚರಣೆ ಮಾಡುತ್ತಾರೆ ಅಂತ ತಿಳೀತು. ಆದರೆ ಈ ವೃಷಭ ರಾಶಿ ಮತ್ತು ತೃತೀಯ ತಿಥಿ ಎರಡೂ ಜೊತೆಯಲ್ಲಿ ಬರುವಾಗ ಅಂದು ಮೂರು ನಕ್ಷತ್ರಗಳಲ್ಲಿ (ಕೃತಿಕಾ, ರೋಹಿಣಿ, ಮೃಗಶಿರ) ಯಾವುದಾದರೊಂದು ಬರುವ ಸಾಧ್ಯತೆ ಇದೆ.  ಅಕ್ಷಯ ತೃತೀಯ, ಶುಕ್ಲ ಪಕ್ಷದ 'ಮೂರನೇ' ದಿನ / 'ತೃತೀಯ ತಿಥಿ' ಯಲ್ಲಿ ಬರುತ್ತೆ ಅಂತ ಹೆಸರೇ ಹೇಳುತ್ತೆ.

ಟಿಪ್ಪಣಿ 1 :  7 ಗ್ರಹಗಳು 360 ಡಿಗ್ರಿ ವೃತ್ತದ ಯಾವ ಯಾವ ಡಿಗ್ರಿ ಯಲ್ಲಿ ಉಚ್ಚರಾಗಿರುತ್ತಾರೆ
  • ಸೂರ್ಯ : ಮೇಷದ 19ನೇ ಡಿಗ್ರಿ (ಅಂದರೆ 18°00' - 18°59')(ಪೂರ್ಣ ವೃತ್ತದ 19ನೆ ಡಿಗ್ರಿ);
  • ಚಂದ್ರ   : ವೃಶಭದ 3ನೇ ಡಿಗ್ರಿ; (ಪೂರ್ಣ ವೃತ್ತದ 33ನೆ ಡಿಗ್ರಿ);
  • ಗುರು    : ಕಟಕ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 105ನೆ ಡಿಗ್ರಿ);
  • ಬುಧ    : ಕನ್ಯಾ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 165ನೆ ಡಿಗ್ರಿ);
  • ಶನಿ     : ತುಲಾ ರಾಶಿಯ 21ನೆ ಡಿಗ್ರಿ; (ಪೂರ್ಣ ವೃತ್ತದ 201ನೆ ಡಿಗ್ರಿ);
  • ಮಂಗಳ : ಮಕರ ರಾಶಿಯ 28ನೆ ಡಿಗ್ರಿ; (ಪೂರ್ಣ ವೃತ್ತದ 298ನೆ ಡಿಗ್ರಿ);
  • ಶುಕ್ರ    : ಕುಂಭ ರಾಶಿಯ 27ನೆ ಡಿಗ್ರಿ; (ಪೂರ್ಣ ವೃತ್ತದ 327ನೆ ಡಿಗ್ರಿ);

ಟಿಪ್ಪಣಿ 2: ಡಿಗ್ರಿ ಲೆಕ್ಕಾಚಾರ 
  1. ಒಂದು ಪೂರ್ಣ ವೃತ್ತ = 360 ಡಿಗ್ರಿ. 
  2. ಈ 360 ಡಿಗ್ರಿ ವೃತ್ತವನ್ನ 12 (ರಾಶಿಗಳು) ಭಾಗಗಳಾಗಿ ಮಾಡಿದಾಗ ಒಂದೊಂದು ರಾಶಿಗೆ 30 ಡಿಗ್ರಿ ಆಗುತ್ತೆ.
  3. ಈ 360 ಡಿಗ್ರಿ ವೃತ್ತವನ್ನ 27 ನಕ್ಷತ್ರಗಳಿಗೆ ಹಂಚಿದರೆ ಒಂದೊಂದು ನಕ್ಷತ್ರಕ್ಕೆ 13° 20' ಬರುತ್ತೆ. 
  4. 27 ನಕ್ಷತ್ರಗಳನ್ನ 12 ರಾಶಿಗಳಿಗೆ ಹಂಚಿದರೆ ಒಂದೊಂದು ರಾಶಿಗೆ ಎರಡೂವರೆ ನಕ್ಷತ್ರಗಳು ಬರುತ್ತವೆ.
  5. ಒಂದು ನಕ್ಷತ್ರದಲ್ಲಿ ನಾಲ್ಕು ಪಾದಗಳಿರುತ್ತವೆ ಹಾಗಾಗಿ ಒಂದೊಂದು ಪಾದ 3° 20' ಜಾಗವನ್ನಾಕ್ರಮಿಸುತ್ತೆ.
  6. ಒಂದು ರಾಶಿಗೆ ಎರಡೂವರೆ ನಕ್ಷತ್ರಗಳಾದ್ದರಿಂದ ಮತ್ತು ಒಂದು ನಕ್ಷತ್ರಕ್ಕೆ 4 ಪಾದಗಳಾದ್ದರಿಂದ ಒಂದು ರಾಶಿಗೆ 10 ಪಾದಗಳು. ಇದು 13° 20' ಆಗುತ್ತೆ .    
ಉದಾಹರಣೆ:   
ಮೇಷರಾಶಿಯಲ್ಲಿ ನ 10 ಪಾದ (ಎರಡೂವರೆ ನಕ್ಷತ್ರ) ಗಳು = 4 ಅಶ್ವಿನಿ  + 4 ಭರಣಿ + 2 ಕೃತ್ತಿಕಾ = 4*3° 20' + 4*3° 20'+ 2*3° 20' = 30ಡಿಗ್ರಿ

ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ, ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ ಮತ್ತು ಕೃತಿಕಾದ ಮೊದಲ ಎರಡು ಪಾದಗಳು ಬರುತ್ತವೆ. ವೃಶಭ ರಾಶಿಯಲ್ಲಿ ಕೃತಿಕಾ ನಕ್ಷತ್ರ ದ ಮೂರು ಮತ್ತು ನಾಲ್ಕನೇ ಪಾದಗಳು ಮತ್ತು ರೋಹಿಣಿ, ಮೃಗಶಿರ ನಕ್ಷತ್ರಗಳು ಬರುತ್ತವೆ. ನಾವು ಮಾತಿನಲ್ಲಿ ಸೂರ್ಯ ಮೇಷರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ,  ಇನ್ನೂ ಆಳಕ್ಕಿಳಿದು ನೋಡಿದರೆ ಈ ಸೂರ್ಯ ಮೇಷ ರಾಶಿಯ ಭರಣಿ  ನಕ್ಷತ್ರ (13° 20' ರಿಂದ 26° 40') ದಲ್ಲಿ  ಮಾತ್ರ ನಿಜವಾಗಿ ಉಚ್ಚ (19 ಡಿಗ್ರಿ - ಭರಣಿ ೩ನೆ ಪಾದ)  ನಾಗಿರುತ್ತಾನೆ ಅಂತ ತಿಳಿಯುತ್ತೆ.

ಸರಳೀಕರಿಸಿ ನಾವು ಚಂದ್ರನು ವೃಶಭರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ, ಸರಿಯಾಗಿ ಲೆಕ್ಕ ಹಾಕಿದರೆ ಈ ಚಂದ್ರ ವೃಷಭ ರಾಶಿಯ ಕೃತಿಕಾ ನಕ್ಷತ್ರದ 3ನೇ ಪಾದದಲ್ಲಿ ತನ್ನ ನಿಜ ಉಚ್ಚ ಸ್ತಾನದಲ್ಲಿರುತ್ತಾನೆ. ಹಾಗಾಗಿ ನಮ್ಮ ಕೆಲ ಪುರಾಣಗಳಲ್ಲೂ ಕೃತಿಕ ನಕ್ಷತ್ರದಲ್ಲಿ ಬಂದ ಅಕ್ಷಯ ತೃತೀಯ ಹಬ್ಬ ಅತಿ ವಿಶೇಷ ಎನ್ನುತ್ತಾರೆ.

ಇನ್ನೊಂದು ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ, ಚಂದ್ರನಿಗೆ 27 ಜನ  ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿ ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ (ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ)  ಅಕ್ಷಯ ತೃತೀಯ ಶ್ರೇಷ್ಠ ಅನ್ನುವ ನಂಬಿಕೆ ಹೊಂದಿದ್ದಾರೆ. ಸೋಮವಾರ ಚಂದ್ರನ ವಾರವಾದ್ದರಿಂದ, ಈ ತದಿಗೆಯಂದು ರೋಹಿಣಿ ನಕ್ಷತ್ರವಿದ್ದು ಸೋಮವಾರವಾಗಿದ್ದರೆ ಇನ್ನೂ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ಇದೆ.                

(ಚಿತ್ರಗಳು;ಗೂಗಲ್ಲಿನಿಂದ)