Monday 24 October 2016

ರಾತ್ರಿರಾಣಿ ಪಾರಿಜಾತ -tree of sadness

ಕೆಂಪು ಇಲ್ಲವೇ  ಕಿತ್ತಳೆ ಬಣ್ಣದ  ತೊಟ್ಟು ಮತ್ತು ಬಿಳಿ ದಳಗಳಿರುವ ಈ ಸುಂದರವಾದ ಹೂವು ನೋಡಲು ತುಂಬಾ ಸುಂದರ. ಈ ಮರದ ಹೂವು ನಾವು ಕೀಳುವ ಅವಶ್ಯಕತೆಯೇ ಇರೋಲ್ಲ. ಮರದ ಕೆಳಗೆ ನಿಂತು ಮರವನ್ನು ಸ್ವಲ್ಪ ಅಲುಗಾದಿಸಿದರೆ ಸಾಕು ನಮ್ಮ ಮೇಲೆ ಹೂವಿನ ಮಳೆ ಬರುತ್ತದೆ. ನಮ್ಮ ಸುತ್ತ ಮುತ್ತ ಒಂದು ಪಾರಿಜಾತ ಮರ ಇದ್ದರೆ ಸಾಕು. ಪಾರಿಜಾತದ ವಾಸನೆಯಿಂದ ಸುತ್ತಮುತ್ತಲಿನ ವಾತಾವರಣ ಹಿತವಾಗಿರುತ್ತದೆ.  ಸಾಮಾನ್ಯವಾಗಿ ಎಲ್ಲ ಗಿಡಮರಗಳ ಮೊಗ್ಗುಗಳು ಹೂವಾಗಿ ಅರಳಲು ಸೂರ್ಯನ ಬರುವಿಕೆಯನ್ನು ಕಾಯುತ್ತಿರುತ್ತವೆ. ಆದ್ರೆ ಈ ಪಾರಿಜಾತ ಹೂ ಮಾತ್ರ ಹಾಗಲ್ಲ. ಪಾರಿಜಾತ ಮೊಗ್ಗು ಹೂವಾಗಿ ಅರಳಲು ಸೂರ್ಯ ಮುಳುಗುವುದನ್ನೇ ಕಾಯುತ್ತಿರುತ್ತದೆ. ರಾತ್ರಿಯೇ ಅರಳಿ ಸೂರ್ಯ ಬರುವ ಸಮಯದಲ್ಲಿ ಬಾಡಿ ಉದುರಿಹೋಗುತ್ತದೆ. 

ಇಂಗ್ಲಿಷ್ ನಲ್ಲಿ ಇದನ್ನು ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಪ್ಹೆಫಾಲಿಕ, ಹರಿಸಿಂಗಾರ ಎಂದು ಕರೆಯುತ್ತಾರೆ. 

ಸಮುದ್ರದ ಮಥನದ ಕಾಲದಲ್ಲಿ ಮೊದಲು ಹುಟ್ಟಿಬಂದ 5 ವೃಕ್ಷ ಗಳಲ್ಲಿ ಇದೂ ಒಂದು. ಆ ವೃಕ್ಷಗಳು  ಯಾವೆಂದರೆ ಮಂದಾರ, ಸಂತಾನ, ಕಲ್ಪವೃಕ್ಷ,  ಹರಿಚಂದನ, ಪಾರಿಜಾತ. ಈ ಪಾರಿಜಾತವು ತಿಳುವಳಿಕೆ ಮತ್ತು ಜ್ಞಾನದ ಸಂಕೇತ ಎಂದು ನಂಬಲಾಗುತ್ತದೆ.


ಈ ಪಾರಿಜಾತ ಮರದ ಬಗ್ಗೆ ಹಲವಾರು ಕಥೆಗಳು--

ಕಥೆ-1.  ಪಾರಿಜಾತ ಎಂಬ ಹೆಸರಿನ ರಾಜಕುಮಾರಿ ಸೂರ್ಯನನ್ನು ಪ್ರೀತಿಸಿತ್ತಿದ್ದಳಂತೆ. ಸುರ್ಯ ಕೂಡ  ಆಕೆಯ ಪ್ರೀತಿಗೆ ಮರುಳಾಗಿ ಪ್ರೀತಿಸಲು ಶುರು ಮಾಡಿದನಂತೆ, ಅವರಿಬ್ಬರ ಪ್ರೀತಿ ಎಸ್ಟು ಆಳವಾಗಿತ್ತೆಂದ್ರೆ , ಈ ರಾಜಕುಮಾರಿ ತನ್ನ ಪ್ರಜೆಗಳನ್ನು ಮರೆತರೆ, ಸೂರ್ಯನು ತಾನು  ಜಗತ್ತಿಗೆ ಬೆಳಕು ಕೊಡುವ ಕೆಲಸ  ಮರೆತು ಇಬ್ಬರು ಪ್ರೀತಿಯಲ್ಲಿ ಮುಳುಗಿರುತ್ತಾರೆ, ಆಗ ದೇವತೆಗಳು ಸೂರ್ಯನ ಬಳಿ ತನ್ನ ಕರ್ತವ್ಯವನ್ನು ನಿಭಾಯಿಸಲು ಹೇಳುವಂತೆ ನಾರದನನ್ನು  ಕಳಿಸುತ್ತಾರೆ. ಆಗ ತನ್ನ ಮೋಹದಿಂದ ಜಗತ್ತಿಗೆ ಆಗುತ್ತಿರುವ ಕಷ್ಟವನ್ನು ನೋಡಿ ಸೂರ್ಯ ಪಾರಿಜಾತಳಿಗೆ ಹೇಳದೇ ಅಲ್ಲಿಂದ ಹೊರಟು ತನ್ನ ಕರ್ತವ್ಯ ಪಾಲನೆ ಮಾಡಲು ಅಣಿಯಾಗುತ್ತಾನೆ. ಇದನ್ನು ಸಹಿಸದ ಪಾರಿಜಾತ ಸೂರ್ಯನ ಬಳಿ ಹೋಗಿ ತನ್ನೊಡನೆ eegalee ರಾಜ್ಯಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತಾಳೆ. ಆದರೆ ತನಗೆ ಪಾರಿಜಾತಳ ಪ್ರೀತಿಗಿಂತ   ತನ್ನ ಕರ್ತವ್ಯ  ದೊಡ್ಡದು  ಎಂಬುದನ್ನು ಮತ್ತು ನಿನ್ನೊಡನೆ ಬರಲಾಗದು ಎಂದು ಹೇಳುತ್ತಾನೆ. ಈ ಮಾತನ್ನು  ಸಹಿಸಲಾಗದ ಪಾರಿಜಾತಳು ತನ್ನ ರಾಜ್ಯಕ್ಕೆ ವಾಪಾಸಾಗುತ್ತಾಳೆ.  ಸೂರ್ಯನ ವಿರಹವನ್ನು ತಾಳಲಾರಾದೆ ಬೆಂಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವಳ ದೇಹದ  ಬೂದಿಯಿಂದ ಈ ಪಾರಿಜಾತ ಮರ ಹುಟ್ಟಿತು ಎಂದು ಈ ಕಥೆ ಯಿಂದ ಹೇಳಲಾಗುತ್ತದೆ. 
ಸೂರ್ಯನ ಮೇಲಿನ ಪ್ರೀತಿ, ವಿರಹ, ದುಃಖ, ಕೋಪ ವನ್ನು ಪಾರಿಜಾತ  ಈ ಪ್ರಪಂಚಕ್ಕೆ ಈ ರೀತಿ ತೋರ್ಪದಿಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ಧರಿಂದ ಇದನ್ನು ಕವಿಗಳು ದುಃಖತಪ್ತ ಮರ tree of sadness ಎಂದು ಕರೆದಿದ್ದಾರೆ.



ಕಥೆ-2. ದೇವಾಸುರರ ಸಮುದ್ರ ಮಥನದ ಕಾಲದಲ್ಲಿ ಹುಟ್ಟಿಬಂದ ಪಾರಿಜಾತ ಮರವನ್ನು ನಾರದರು ಕೃಷ್ಣನ ಕೈಯಲ್ಲಿ ಕೊಡುತ್ತಾರೆ. ಕೃಷ್ಣನು ಅದನ್ನು ಸತ್ಯಭಾಮೆಯ ತೋಟದಲ್ಲಿ  ನೆಡುತ್ತಾನೆ. ಅದರ ಹೂವು ರುಕ್ಮಿಣಿಯ ಮನೆಯ ಅಂಗಳದಲ್ಲಿ ಬೀಳುವಂತೆ ನೆಟ್ಟಿರುತ್ತಾನೆ. ನಾರದರು ಒಮ್ಮೆ ರುಕ್ಮಿಣಿಯ ಮನೆಗೆ ಹೋದಾಗ ಆ ಹೂವನ್ನು ನೋಡಿ ಇದನ್ನು ನಾನು ನಿನ್ನ ಪ್ರೀತಿಪಾತ್ರರ ಮನೆಯಲ್ಲಿ ನೆಡಬೇಕು ಎಂದು ಹೇಳಿದ್ದೆ. ಎಂದು ಹೇಳಿ ರುಕ್ಮಿಣಿ ಮತ್ತು ಸತ್ಯಭಾಮೆಯ ನಡುವೆ ಜಗಳ ತಂದಿರಿಸುವ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ.  

ಸಸ್ಯ ಶಾಸ್ತ್ರಜ್ಞರ ಪ್ರಕಾರ -ಇದು ಹೂವಲ್ಲ ಎಂಬ ವಾದವನ್ನು ಮಂಡಿಸುತ್ತಾರೆ. ಇದು nyctanthes arbor-tristis ಎಂಬ ಸಸ್ಯಗಳ ಗುಂಪಿಗೆ ಸೇರುತ್ತದೆ ಎಂದು ಹೇಳುತ್ತಾರೆ. ಈ ಮರ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಜಾಂಡೀಸ್, ಮಲಬಧ್ಧತೆಯ ತೊಂದರೆಗಳಿಗೆ ಈ ಮರದ ಎಳೆಗಳ ರಸವನ್ನು ಔಷಧಿಗಳಿಗೆ ಉಪಯೋಗಿಸುತ್ತಾರೆ. ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ಮತ್ತು ಹಲವು ರೀತಿಯ ಜ್ವರಗಳಿಗೆ ಮತ್ತು ಯಕೃತ್ ನ ರೋಗಕ್ಕೆ, ಜೀರ್ಣಾಂಗಗಳ ತೊಂದರೆಗಳಿಗೆ , ಕರುಳಿನ ಹುಳುಗಳ ನಿವಾರಣೆಗೆ ಪಾರಿಜಾತ ಮರದ ಹೂವು ಮತ್ತು ಎಲೆಗಳಿಂದ, ಬೀಜಗಳಿಂದ ಆಯುರ್ವೇದದಲ್ಲಿ ಔಷಧ ತಯಾರಿಸುತ್ತಾರೆ.
ವೇದಗಳ ಕಾಲದಲ್ಲಿ ಬಟ್ಟೆಗೆ ಹಾಕುವ ಬಣ್ಣವನ್ನು ಈ ಹೂವಿನಿಂದ ತಯಾರಿಸುತ್ತಿದ್ದರು ಎಂದು ಹೇಳಲಾಗುತ್ತದೆ.

ಈ ಪಾರಿಜಾತ ಹೂವು ಹಲವಾರು ಕವಿಗಳಿಗೆ ಕವಿತೆಗೆ ಸ್ಪೂರ್ತಿಯಾಗಿದೆ. ತನ್ನಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣನಿಗೆ ಪ್ರಿಯವಾದ ಹೂವು ಇದು. ಮಕ್ಕಳಿಗೂ  ಪ್ರೀತಿ. ಈ ಪಾರಿಜಾತ ಹೂವಿನ  ಮರ ಕಂಡರೆ ಸಾಕು ಕೆಳಗೆ ಬಿದ್ದಿರೋ ಹೂವುಗಳ ಹಿಡಿದು ಆಟ ಶುರು ಮಾಡಿಬಿಡುತ್ತಾರೆ. ಪಾರಿಜಾತದ ಹೂವುಗಳನ್ನು ಹಿಸುಕಿದಾಗ ಕೈ ಕಿತ್ತಳೆ ಬಣ್ಣ ಬರುತ್ತೆ ಆಗಂತೂ ಮಕ್ಕಳು ಇನ್ನು ಖುಷಿ ಪಡುತ್ತಾರೆ.

Wednesday 19 October 2016

ಬದುಕಿನ ಚಕ್ರದ ಸಾಧನೆ ಅಂದ್ರೆ ಏನು? what is the success of life?

ಹೌದಲ್ವ!! ಸಾಧನೆ ಅಂದ್ರೆ ಏನು? ಅನ್ನೋ ನಮ್ಮ ಪ್ರಶ್ನೆಗೆ ನಾವು ಕೊಡೂ ಉತ್ತರ - ಯಾರೂ ಮಾಡಲಾಗದ ಕೆಲಸವನ್ನ ತಾನು ಮಾಡಿ ಎಲ್ಲರಿಂದ ಹೊಗಳಿಕೆ ಗಳಿಸುವು. ರಾಷ್ಟ್ರ, ರಾಜ್ಯ, ದೇಶಮಟ್ಟದ, ಅತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳನ್ನ ಗಳಿಸುವು. ತಾನು ಹುಟ್ಟಿ ಬೆಳೆದ ಊರಿಗೆ, ಜಿಲ್ಲೆಗೆ , ರಾಜ್ಯಕ್ಕೆ,  ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡುವುದು. ಜನ ಮನ್ನಣೆ ಗಳಿಸುವುದು. ಈ ಸಾಧನೆಗಳಿಗೆ ವಿಶೇಷ ಆಸಕ್ತಿ ಮತ್ತು ಬುಧ್ಧಿವಂತಿಕೆ ಇದ್ದವರು ಮಾತ್ರ ಇವುಗಳನ್ನು ಸಾಧಿಸಲು ಸಾದ್ಯ. ಇನ್ನು ಕೆಲವರು  ಚಿಕ್ಕವರಿದ್ದಾಗ ಡಾಕ್ಟರರನ್ನ, ಇಂಜಿನಿಯರ್, ಲಾಯರ್ ನನ್ನೊ, ನೋಡಿ ತಾನು ಆ ರೀತಿ ಉದ್ಯೋಗ ಪಡೆದು ಜೀವನದಲ್ಲಿ ಸಾರ್ಥಕತೆ ಪಡೆಯುವುದು.  ಇನ್ನು ಹೇಳುತ್ತಾ ಹೋದರೆ ಸಾಧನೆ ಅನ್ನೋ ಪದಕ್ಕೆ ದೊಡ್ಡ ಪುಸ್ತಕ ಬರೆಯುವಸ್ಟು ವಿಷಯಗಳು ಸಿಗುತ್ತವೆ.



ಆದರೆ ಸಾಮಾನ್ಯ ಮನುಷ್ಯನಿಗೆ ಸಾಧನೆ ಅಂದ್ರೆ ಏನು? ಸಾಮಾನ್ಯವಾಗಿ ಚಿಕ್ಕ ಪುಟ್ಟ ಕೆಲಸ ಅಥವಾ ಜವಾಬ್ದಾರಿಗಳನ್ನು ಮಾಡಿ ಅದೇ ನಮ್ಮ ಜೀವನದ  ಸಾಧನೆ ಅಂತ  ನಾವೆಲ್ಲರೂ ಖುಷಿಯಿಂದ ಹೇಳಿಕೊಳ್ಳುತ್ತಿರುತ್ತೇವೆ. ಇತ್ತೀಚೆಗಸ್ಟ ಈ ಸಾಧನೆ ಅನ್ನೋ ವಿಷಯವಾಗಿ ನಾ ಓದಿದ  what's up ಸಂದೇಶವೊಂದು  ನನಗೆ ತುಂಬಾ ಇಷ್ಟವಾಯಿತು. ಇಂಗ್ಲಿಷ್ನಲ್ಲಿದ್ದ ಕಾರಣ ಅದನ್ನು  ನಾನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನದಲ್ಲಿ ನನಗೆ ಸರಿಯೆನಿಸಿದ ಪದಗಳನ್ನು ಸೇರಿಸಿದ್ದೇನೆ. ಅದೇನಂದ್ರೆ,



ಸಾಧನೆ ಅಂದ್ರೆ ಏನು?

ನಮ್ಮ 4 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನ್ನ ಬಟ್ಟೆ ಮತ್ತು ಹಾಸಿಗೆ ಒದ್ದೆ ಮಾಡದೇ ಇರುವುದು.

ನಮ್ಮ 8 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ನಮ್ಮ ಮನೆಗೆ ಬರುವ ದಾರಿಯನ್ನು ನೆನಪಿಟ್ಟುಕೊಂಡು ಮನೆಗೆ ಬರುವುದು.

ನಮ್ಮ 12 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಗೆಳೆಯರನ್ನ ಸಂಪಾದಿಸಿಕೊಳ್ಳೋದು.

ನಮ್ಮ 18 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಡ್ರೈವಿಂಗ್ ಲೈಸನ್ಸ್ ಪಡೆಯೋದು.

ನಮ್ಮ 23 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಸ್ನಾತಕೋತ್ತರ ಪದವಿ ಪಡೆಯೋದು.

ನಮ್ಮ 25 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ದುಡಿಮೆ ಶುರು ಮಾಡುವುದು.

ನಮ್ಮ 30 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮದುವೆಯಾಗಿ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುವದು.

ನಮ್ಮ 35 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಹಣ ಸಂಪಾದಿಸುವುದು.

ನಮ್ಮ 45 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಜವಾಬ್ದಾರಿ ವ್ಯಕ್ತಿಯಾಗಿ ಮನೆತನ ನಿಭಾಯಿಸುವದು.

ನಮ್ಮ 50 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸ ಮಾಡಿಸುವುದು.

ನಮ್ಮ 55 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತಮ್ಮ ಕರ್ತವ್ಯಗಳನ್ನ ನಿಭಾಯಿಸಲು ಸಮರ್ಥರಾಗಿರುವುದು.

ನಮ್ಮ 60 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಡ್ರೈವಿಂಗ್ ಲೈಸೆನ್ಸ್ ಹೊಂದಲು ಯೋಗ್ಯರಾಗಿರುವುದು.

ನಮ್ಮ 65 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಯಾವುದೇ ಖಾಯಿಲೆಗಲಿಲ್ಲದೆಇರುವುದು.

ನಮ್ಮ 70 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನಗೆ ಮತ್ತು ಸುತ್ತಲಿನವರಿಗೆ  ಬೇಜಾರೆನಿಸದೆ ಬದುಕುವುದು.

ನಮ್ಮ 75 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಹಳೆ ಸ್ನೇಹಿತರನ್ನು ಮತ್ತೆ ಸೇರುವುದು.

ನಮ್ಮ 80 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮನೆ ದಾರಿ ಮರೆಯದಿರುವುದು.

ನಮ್ಮ 85 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನ್ನ ಬಟ್ಟೆ ಮತ್ತು ಹಾಸಿಗೆ ಒದ್ದೆ ಮಾಡಿಕೊಳ್ಳದಿರುವುದು.

ಈ ಮೆಸೇಜ್ ನಲ್ಲಿ ಬದುಕಿನ ಚಕ್ರದ ಅರಿವು ಇದೆ ಅಂತ ನಂಗೆ ಅನ್ನಿಸ್ತು. ಭೂಮಿ ಮೇಲಿನ ಪ್ರತಿ ಮನುಶ್ಯನ ಜೀವನದ ಸಾಧನೆಯ ಖುಷಿ ಇವುಗಳಲ್ಲಿದೆ. ಈ ಮೇಲಿನ ಎಲ್ಲ ವಿಚಾರಗಳು ನಮ್ಮೆಲ್ಲರ ಮನಸ್ಸಿನಲ್ಲಿ ಬಂದು ಹೋಗುತ್ತಿರುತ್ತವೆ. ನಾವು ಈ ವಯಸ್ಸಿನಲ್ಲಿ ಹೀಗೇ ಇರಬೇಕು ಅನ್ನೋ ಲೆಕ್ಕಹಾಕಿ ಯೋಚಿಸುತ್ತಿರುವಾಗ ಈ ಅಂಶಗಳು ನಮ್ಮ ಬದುಕಿನಲ್ಲಿ ಹೀಗೆ ನಡೀಬೇಕು ಅಂತ ಅಂದುಕೊಂಡಿದ್ದು ಇದೆ.

Monday 3 October 2016

ಗೂಳಿಗೆ ಕೆಂಪು ಬಣ್ಣ ಕಂಡ್ರೆ ಯಾಕೆ ಆಗೋಲ್ಲ?

ಇವಾಗ ದಸರಾ ರಜೆ. ಮಕ್ಕಳ ಶಾಲೆಗೆ ರಜೆ ಇರೋ ಕಾರಣ ಮನೇಲಿ ತುಂಬಾ ಗಲಾಟೆ ಜಾಸ್ತಿ ಆಗಿದೆ. ಇವರ ಗಲಾಟೆಲಿ ಮನಸ್ಸು ಪಿಚ್ಚ್ ಅಂತಾ ಇತ್ತು, ರಾತ್ರಿ ಊಟ ಆದಮೇಲೆ ಸ್ವಲ್ಪ ಮಕ್ಕಳನ್ನ ಆಚೆ ನಡೆದಾಡಿಸಿಕೊಂಡು ಬರೋಣ ಅಂತ ಎಲ್ಲ ರಾತ್ರಿ ವಾಕಿಂಗ್ ಹೊರಟ್ವಿ, ದಾರಿಲಿ ಮಕ್ಕಳ ಪ್ರಶ್ನಾವಳಿ ಶುರು ಆಯಿತು. ಮಕ್ಕಳೆಂದರೆ ಹಾಗೆ ಅಲ್ವೇ?. ತಮ್ಮ ಸುತ್ತಮುತ್ತ ಏನೇ ನಡೆದರೂ ಅದನ್ನ ತಿಳಿದುಕೊಳ್ಳೂವರೆಗೂ ಅಥವಾ ಅವರ ಮನಸ್ಸಿಗೆ ಸಮಾಧಾನ ಅಗೂವರೆಗೂ ನಾವು ಉತ್ತರ ಕೊಡುತ್ತಲೇ ಇರಬೇಕು. ಇವತ್ತು ಉತ್ತರ ಕೊಡದಿದ್ದರೂ ಮತ್ತೊಂದು ದಿನ ಆ ಪ್ರಶ್ನೆ ನಮ್ಮನ್ನ ಕೇಳೆಕೇಳ್ತಾರೆ.



ಸ್ವಲ್ಪ ದಿನದಿಂದಿನ ಕತೆ ಇದು.  ನಾವು ಊರಿಗೆ ಹೋದಾಗ ಒಂದು ಹಸು ದಾರೀಲಿ ಬರ್ತಾಯಿತ್ತು. ಆಗ ಅವರ ಅಜ್ಜಿ- ತಾತ, ಪ್ರಣವನಿಗೆ ಹೇಳಿದ್ರು, ಆ ಗೂಳಿ ಸರಿಯಿಲ್ಲ. ಕೆಂಪು ಬಟ್ಟೆ ಹಾಕ್ಕೊಂಡಿದಿಯ ಬಾರೋ ಈ ಕಡೆ. ಕೆಂಪು ಬಟ್ಟೆ ಕಂಡ್ರೆ ಅದು ಗುದ್ದೋಕೆ  ಬರುತ್ತೆ ಅಂತ.  ಅವತ್ತು ಅವನಲ್ಲಿ ಹುಟ್ಟಿದ "ಯಾಕೆ ಗೂಳಿಗಳಿಗೆ ಕೆಂಪು ಬಟ್ಟೆ ಕಂಡ್ರೆ ಆಗಲ್ಲ?" ಅನ್ನೋ ಪ್ರಶ್ನೆಯನ್ನ ಮತ್ತೆ ಮತ್ತೆ ಕೇಳ್ತಾನೆ ಇರ್ತಾನೆ. ಇದಕ್ಕೆ ಉತ್ತರ ನಮಗಾರಿಗೂ ಗೊತ್ತಿರ್ಲಿಲ್ಲ. ಬೇರೆಯವರನ್ನ ಕೇಳಿ ತಿಳ್ಕೊಳ್ಳೋ ತಾಳ್ಮೆನೂ ಇರದ ನಾವು ಏನೋ ಒಂದು ಕಾರಣ ಹೇಳಿ ತಪ್ಪಿಸ್ಕೋತ ಇದ್ವಿ.

ಮೊನ್ನೆ ವಾಕಿಂಗ್ ಹೊತ್ತಲ್ಲೂ ಮತ್ತೆ ಈ ಪ್ರಶ್ನೆನ ಕೇಳದ. ಅದಕ್ಕೆ ಅವನ ಅಪ್ಪನಿಗೆ ಈ  ಪ್ರಶ್ನೆ  ಕೇಳಿದರೆ ಉತ್ತರ ಸಿಗುತ್ತೆ ಅಂದೆ. ಆದ್ರೆ ಅವರಿಂದ ಸಿಕ್ಕ ಉತ್ತರ ಗೂಗಲ್ನಲ್ಲಿ  ಹುಡುಕಿ ಹೇಳು. ಈ ಸರಿನಾದ್ರೂ ಸರಿ ಉತ್ರ ಕೊಡ್ಬೇಕು ಅಂತ ನಿರ್ಧಾರ ಮಾಡಿ ಗೂಗಲ್ ಮಾಡಿದ್ಮೇಲೆ ನನಗೆ ಸಿಕ್ಕ ವಿವರ ಇಲ್ಲಿ ಬರೀತಾ ಇದ್ದೀನಿ.

ಗೂಳಿಗೂ ಮತ್ತು ಕೆಂಪು ಬಣ್ಣಕ್ಕೂ ಯಾಕೆ ಆಗಿಬರೋಲ್ಲ ಅನ್ನೋ ನನ್ನ ಮಗನ ಪ್ರಶ್ನೆಗೆ ಸಿಕ್ಕ ಇನ್ಫಾರ್ಮೇಷನ್ ಗಳು ಹೀಗಿದ್ವು.

ನಿಜವಾಗ್ಲೂ ಗೂಳಿಗೆ ಕೆಂಪು ಬಣ್ಣ ಕಂಡ್ರೆ ಆಗೋಲ್ವ? ಯಾಕೆ ಹೀಗೆ? ಬರೀ ಗೂಳಿಗೆ ಮಾತ್ರನಾ  ಅಥವಾ ಇತರೆ ಪ್ರಾಣಿಗಳಿಗೂ ಹೀಗೆ ಬೇರೆ ಬೇರೆ ಬಣ್ಣಗಳ ಬಗ್ಗೆ ಅಸಮಧಾನ ಆಗುತ್ತಾ?!

ಹೌದು, ಪ್ರಕೃತಿಯಲ್ಲಿ ಎಲ್ಲ ಪ್ರಾಣಿಗಳಿಗೂ ಒಂದೊಂದು ಕೊಡುಗೆ ಮತ್ತು ಕೊರತೆಗಳು ಇವೆ.  ಉದಾಹರಣೆಗೆ ನಾವು ಬೆಳಕಿನ ಪ್ರಭಾವ ಇಲ್ಲದೆ ಕತ್ತಲಲ್ಲಿ ಯಾವ ವಸ್ತುವನ್ನು ನೋಡಲಾಗುವುದಿಲ್ಲ. ಆದರೆ ಬೆಕ್ಕು, ಹುಲಿಯಂಥ ಪ್ರಾಣಿಗಳು ಕತ್ತಲಲ್ಲೂ ತನ್ನ ಬೇಟೆ ಹುಡುಕುವಸ್ಟ್ ಉತ್ತಮ ಕಣ್ಣುಗಳನ್ನು ಹೊಂದಿವೆ.

ಕೆಲವರ ಪ್ರಕಾರ ಗೂಳಿಯ ಕಣ್ಣಿಗೆ ಕೆಂಪುಬಣ್ಣದ ಕುರುಡುತನವಿದೆ (colorblind to red) ಎಂದು ಹೇಳುತ್ತಾರೆ. ಗೂಳಿಗೆ ತಮ್ಮ ಮುಂದಿರುವ ವಸ್ತುಗಳ ನಡುವೆ ಎಲ್ಲ ಬಣ್ಣದ ವಸ್ತುಗಳು ಕಂಡು ಈ ಕೆಂಪು ಬಣ್ಣದ ವಸ್ತು ಕಾಣದಿದ್ದಾಗ, ಅದು ಕಣ್ಣು ಮುಚ್ಚಿದ ಹಾಗು ಕೋರೈಸುವ ರೀತಿ ಅನುಭವ ಆಗಿ ಭಯಕ್ಕೋ ಅಥವಾ ಕೋಪಕ್ಕೋ ಆ ರೀತಿ ಕೆಂಪು ಬಣ್ಣ ದ ಮೇಲೆ ದಾಳಿ ಮಾಡುತ್ತವೆ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಎಲ್ಲರ ನಂಬಿಕೆ ಏನು ಅಂದ್ರೆ ಗೂಳಿಗೆ ಕೆಂಪು ಬಣ್ಣ ಕಂಡ್ರೆ ಆಗೋಲ್ಲ ಅಂತ. ಇದಕ್ಕೆ 2007 ರಲ್ಲಿ, discovery channels ನ myth busters ತಂಡ ಗೂಳಿ ಮತ್ತು 3 ಬಣ್ಣಗಳ ಜೊತೆ ಒಂದು ಪ್ರಯೋಗ ನಡೆಸುತ್ತಾರೆ.

ಮೊದಲನೆಯದಾಗಿ, ಗೂಳಿಯ ಮುಂದೆ ಕೆಂಪು, ನೀಲಿ, ಮತ್ತು ಬಿಳಿಯ 3 ಬಣ್ಣದ ಬಾವುಟಗಳನ್ನ ಗೂಳಿಯ ಮುಂದೆ ತಂದಿಡುತ್ತಾರೆ. ಗೂಳಿಯು ಯಾವುದೇ ಬಣ್ಣದ ಭೇದವಿಲ್ಲದೆ ಆ ಬಾವುಟಗಳ ಮೇಲೇ ನುಗ್ಗುತ್ತದೆ.
ಎರೆಡನೆಯದಾಗಿ, ಮತ್ತೆ ಈ ಮೂರೂ ಬಣ್ಣದ (ಕೆಂಪು, ನೀಲಿ, ಬಿಳಿ ) ಬಟ್ಟೆ ತೊಟ್ಟಿರುವ ನಕಲಿ ವಸ್ತುಗಳನ್ನು ಗೂಳಿಯ ಮುಂದೆ ತರುತ್ತಾರೆ. ಆಗಲು ಗೂಳಿಯು ಯಾವುದೇ ಬಣ್ಣದ ಭೇದವಿಲ್ಲದೆ ಆ ವಸ್ತುಗಳನ್ನು ಮೇಲೆ ಹಾಯುತ್ತದೆ.

ಮೂರನೆಯದಾಗಿ, ಅವೇ ಮೂರೂ ಬಣ್ಣದ (ಕೆಂಪು, ನೀಲಿ, ಬಿಳಿ) ಬಟ್ಟೆಗಳನ್ನು ತೊಟ್ಟ ಮನುಶ್ಯರ ನ್ನು ಗೂಳಿಯ ಮುಂದೆ ನಿಲ್ಲಿಸುತ್ತಾರೆ. ಆದರೆ ಅದು ಕೆಂಪು ಬಣ್ಣದ ವ್ಯಕ್ತಿಯನ್ನು ಬಿಟ್ಟು, ಮೊದಲು ನೀಲಿ ಮತ್ತು ಬಿಳಿ ಬಣ್ಣದ ವ್ಯಕ್ತಿಗಳ ಮೇಲೆ ಮೊದಲು ಹಾಯ್ದು ನಂತರ ಕೆಂಪು ಬಣ್ಣದ ವ್ಯಕ್ತಿಯ ಮೇಲೆ ಹಾಯುತ್ತದೆ.

ಈ ಪ್ರಯೋಗದ ಮೇಲೆ ಅವರ ಹೇಳಿಕೆ- ಗೂಳಿಗೆ ಅಥವಾ ಕೆಲವು  ಪ್ರಾಣಿಗಳಿಗೆ ಕೆಂಪು ಸೇರಿಸಿ ಕೆಲವು ಬಣ್ಣಗಳ ಕುರುಡುತನ ಇರುತ್ತದೆ. ಆ ಬಣ್ಣದ ವಸ್ತು ಅಥವಾ ವ್ಯಕ್ತಿ ಆ ಪ್ರಾಣಿಗಳ ಮುಂದೆ  ಬಂದಾಗ ಕಣ್ಣು ಮುಚ್ಚಿದ , ಹಾಗೂ ಬೇರೆ ಬಣ್ಣಗಳ ವಸ್ತುಗಳ ಜೊತೆ ಆ ಬಣ್ಣವು ಕಾಣದಿದ್ದಾಗ ಅದು ಗೊಂದಲಕ್ಕೀಡಾಗಿ ಕೊಪಗೊಂಡು,  ಆ ಕಾಣದ ಬಣ್ಣದ ವಸ್ತುವಿನ ಮೇಲೆ ಹಾಯ್ದು ಕೋಪ ತೋರಿಸಿಕೊಳ್ಳುತ್ತವೆ. ಎಂದು ಹೇಳಲಾಗುತ್ತದೆ.