Tuesday 28 June 2016

ಕಳೆದು ಹೋದವೆ? ಆ ದಿನಗಳು



ಕಳೆದು ಹೋದವೆ? ಆ ದಿನಗಳು’ಜೂನ್ ತಿಂಗಳ ಮೊದಲ ದಿನ ಐರನ್ ಮಾಡಿ ನುಸಿಯುಂಡೆಯಿಟ್ಟ ಯುನಿಫಾರಂ ಮೈಮೇಲೆ ಹಾಕ್ಕೊಂಡು ಹೊಸ ತರಗತಿ ಬೆಂಚ್ ಮೇಲೆ ಹೋಗಿ ಕುಳಿತ ಆ  ದಿನಗಳು.

ಕಳೆದು ಹೋದವೆ? ಆ ದಿನಗಳು ಹೊಸ ತರಗತಿಯ ಹೊಸ ಬುಕ್, ನೋತ್ಬೂಕ್ಸ್ ಮತ್ತು ಅವಕ್ಕೆ ಬಣ್ಣ ಬಣ್ಣದ ಬೈಂಡ್ ಹಾಕ್ಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಪ್ರೇಯರ್ ಮುಗಿದಾಕ್ಷಣ ಸ್ಕೂಲ್ ಕಾರಿಡಾರಿನಲ್ಲಿ ನಾನು ಮುಂದೆ  ನಾನು ಮುಂದೆ ಅಂತ ತರಗತಿಯೊಳಗೆ ಓಡಿ ಹೋಗಿ  ಕುಳಿತು ಖುಷಿ  ಪಟ್ಟ ಆ ದಿನಗಳು.

ಕಳೆದು ಹೋದವೆ? ಆ ದಿನಗಳು ಸಹಪಾಠಿಗಳೊಡನೆ ಸ್ಕೂಲ್ ಫೀಲ್ಡ್, ಮರದ ಕೆಳಗೆ ,ಕಾರಿಡಾರಿನಲ್ಲಿ ,ಸ್ಚೂಲ್ ಬೆಂಚ್ ಮೇಲೆ ಊಟದ ಡಬ್ಬಿಯನ್ನು ಹಂಚಿ ತಿಂದ ದಿನಗಳು.

ಕಳೆದು ಹೋದವೆ? ಆ ದಿನಗಳು ಶನಿವಾರದ PT ಪಿರಿಯಡ್ ನಲ್ಲಿ  ಮಳೆ ಬರಲೆಂದು ಪ್ರಾರ್ಥಿಸಿದ್ದು ಮತ್ತು ವಾರದಲ್ಲಿ 2 ಅಥವಾ 3 ಭಾನುವಾರಗಲಿರಲೆಂದು ಅಂದುಕೊಂಡಿದ್ದು.

ಕಳೆದು ಹೋದವೆ? ಆ ದಿನಗಳು ಸಹಪಾಠಿಗಳಡನೆ ಜಗಳವಾಡಿ ಸ್ಕೂಲ್ ನಲ್ಲಿ ಟೀಂ ಕಟ್ಟಿದ್ದು , ಕಾಂಪಿಟೆಶನ್ ಮಾಡಿದ್ದು, ಟೂ ಬಿಟ್ಟದ್ದು ಮತ್ತೆ ತಿರುಗಿ ಅವರೊಡನೆ ಫ್ರೆಂಡ್ಶಿಪ್ ಮಾಡಿಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಲಂಚ್ ಬ್ರೇಕ್ನಲ್ಲಿ ಸ್ಕೂಲ್ ಸುತ್ತಮುತ್ತಲಿನ ಮನೆಗಳಿಗೆ ಹೋಗಿ tv ನೋಡಿಬಂದು ಟೀಚರ್ ಹತ್ರ ಒದೆ ತಿಂದ ದಿನಗಳು.

ಕಳೆದು ಹೋದವೆ? ಆ ದಿನಗಳು ಸಂಜೆಯ ಲಾಂಗ್ ಬೆಲ್ ಗಾಗಿ ತರಗತಿಯಾಲ್ಲಿ ಬ್ಯಾಗ್ ರೆಡಿ ಮಾಡಿಕೊಂಡು ಕಾಯಿತಿದ್ದುದು ಬೆಲ್ ಹೊಡೆದಾಕ್ಷಣ ಎಲ್ಲಾರೂ ಕಿರುಚುತ್ತಾ ಮೇನ್ ಗೇಟ್ ಕಡೆ ಓಡುತ್ತಿದ್ದ ದಿನಗಳು.

ಕಳೆದು ಹೋದವೆ? ಆ ದಿನಗಳು  ಶಾಲಾ ಹಬ್ಬಗಳಿಗಾಗಿ ಸ್ಪೋರ್ಟ್ಸ್ ಡೇ ಅನುಯಲ್ ಡೇ ಗಾಗಿ ಮಾಡುತ್ತಿದ್ದ ಒಂದು ತಿಂಗಳ ತಯಾರಿ ಮಾಡಿಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಸಹಪಾಠಿಗಳೋಡನೆ ಕಲಿತ,ಸಂಭ್ರಮಿಸಿದ,ಆಟವಾಡಿದ ,ಗೆದ್ದ ,ಸೋತ, ನಗಿಸಿದ ಅಳಿಸಿದ ,ಮುನಿಸಿಕೊಂಡ, ಜಗಳವಾಡಿದ, ನಾವು ಯೋಚಿಸಲು ಶುರುಮಾಡಿದ ಆ  ದಿನಗಳು.

ಕಳೆದು ಹೋದವೆ? ಆ ದಿನಗಳು ಸಾಕಷ್ಟು ಮೋಜು, ಮಸ್ತಿ ಗಳಿದ್ದ ಹಲವಾರು ಫ್ರೆಂಡ್ಸ್ ಗಳಿದ್ದ ,ಹಲವಾರು , ಅರಿವು , ತಪ್ಪು ಸರೀ ಯೋಚಿಸಲು ಶುರುಮಾಡಿದ ,ಅನುಭವಗಳನ್ನು ಕಲಿಸಿದ ದಿನಗಳು.

ಕಳೆದು ಹೋದವೆ? ಆ ದಿನಗಳು ತಿಂಗಳ ಟೆಸ್ಟ್ , ಅರ್ಧವಾರ್ಷಿಕ , ವಾರ್ಷಿಕ ಪರೀಕ್ಷೆಗಾಗಿ ಓದಿದ್ದು ,ಒದ್ದಾಡಿದ್ದು, ಭಯಪಟ್ಟುಕೊಂಡದ್ದು, ಹೊಸಪೆನ್ನು ಪ್ಲೇವುಡ್ ಜೋಡಿಸಿಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಪರೀಕ್ಷೆ ಮುಗಿದಾಕ್ಷಣ ಬುಕ್ಸ್ ಗಳನ್ನೆಲ್ಲ ಗಂಟುಕಟ್ಟಿ ಕಣ್ಣಿಗೆ ಕಾಣದಂತೆ ಅಟ್ಟಕ್ಕೆ ಇಟ್ಟದ್ದು ಅಲ್ಲಿದ್ದ ಚಿನ್ನಿದಾಂಡು, ಬಾಲ್, ಕವಡೆ, ಗಜ್ಜುಗ ಕೆಳಗಿಳಿಸಿಕೊಂಡ ಆ ದಿನಗಳು.

ಕಳೆದು ಹೋದವೆ? ಆ ದಿನಗಳು ಆದರೆ ನಮ್ಮ ನೆನಪಿನಲ್ಲಿ ಅಲ್ಲ ಎಂದಿಗೂ ಎಂದೆಂದಿಗೂ ಅವು ಮರೆಯಲಾಗದ ಸವಿ ನೆನಪುಗಳು , ನಮ್ಮ ನೆನಪೆಂಬ ಟೈಮ್ ಮಷೀನ್  ಯಾವಾಗಲಾದರೂ ಒಮ್ಮೊಮ್ಮೆ ಅಲ್ಲಿಗೆ ಹೋಗುತ್ತಿರುತ್ತದೆ.

ನನಗೆ ಗೊತ್ತು ನೀವೆಲ್ಲ ಒಮ್ಮೆಯಾದರು ನಿಮ್ಮ  ನೆನಪಿನ  ಟೈಮ್ ಮಷೀನ್ ನಿಂದ ಅಲ್ಲಿಗೆ ಹೋಗೇ ಹೋಗುತ್ತೀರಿ ಎಂದು ಆ ದಿನಗಳ ನೆನಪಿನ ಸರಮಾಲೆಯಲ್ಲಿ ಮಿಂದು ಬಂದಿರುವಿರಿ ಎಂದು.



Thursday 16 June 2016

ನಮ್ಮೂರ ಗಿಡಮರಗಳ ಬೇಲಿ ಎಲ್ಹೋದ್ವು?



ನಾನು ಈ ಬಾರಿ ಊರಿಗೆ ಹೋದಾಗ ಯಾಕೋ ಎಲ್ಲರ ಮನೆ, ತೋಟ, ಕಣ, ಜಮೀನುಗಳ  ಮುಂದೆ ತಂತಿಯಿಂದ ಕೂಡಿದ ಬೇಲಿ ತುಂಬಾ ಗಮನ ಸೆಳೆದವು. ನಾವು ಚಿಕ್ಕವರಿದ್ದಾಗ ಇದ್ದ  ಗಿಡಮರಗಳಿಂದ ಕೂಡಿದ ಬೇಲಿ ಕಾಣುವುದೇ  ಅಪರೂಪವಾಗಿಹೋಗಿವೆ. ನಮಗೆ ಬೇಲಿ ಎಂದಾಕ್ಷಣ ನೆನಪಾಗುವುದು ಬೇಲಿಯಲ್ಲಿನ ತೊಂಡೆಹಣ್ಣು, ಕಾಕಿಹಣ್ಣು, ಕಾರೆಹಣ್ಣು, ಈಚಲಹಣ್ಣು, ಬಾರೆಹಣ್ಣು, ಪೇರಲ, ಹುಣಸೆಹಣ್ಣು, ಕರಿಬೇವುಹಣ್ಣು ಕೆಲವೊಂದು ಹೆಸರೇ ಗೊತ್ತಿಲ್ಲದ ತಿನ್ನುವ ಹಣ್ಣುಗಳು ಮತ್ತು ಹಲವಾರು ಪಕ್ಷಿಗಳ ಗೂಡುಗಳು. ನಮಗೆ ದಾರಿಲ್ಲಿ ಕಾಲಿಗೆ ಮುಳ್ಳು ಚುಚ್ಚಿದಾಗ ಹಾಲವಾಣ ಗಿಡದ ಹಾಲು ಹಾಕಿ ಮುಳ್ಳು ತೆಗೆಯುತ್ತಿದ್ದದು. ಚಿಟ್ಟೆ ಹಿಡಿಯಿತ್ತಿದ್ದದ್ದು, ಕಳ್ಳಿ ಹಾಲಿನಿಂದ ಗಾಳಿಯಲ್ಲಿ ಗುಳ್ಳೆಗಳನ್ನು ಬರಿಸುತ್ತಿದ್ದದು. ಓಹ್ ಎಸ್ಟೋoದು  ನೆನಪುಗಳು.

ಇನ್ನು ಕೆಲವು ಮರಗಳು ಬೇಲಿಗೆoದೇ ಪ್ರಸಿದ್ಧವಾಗಿದ್ದವು. ಕವಳೆಕಾಯಿ, ಗಜ್ಜುಗ, ಅರಳು, ಸೀಗೆಕಾಯಿ, ಬೇವು, ಆಲದ ಮರ, ಗೋಣಿ, ತಂಗಡಿ, ಹಾಲವಾಣ, ನುಗ್ಗೆ, ಅಗಚೆ, ಗ್ಲಿರಿಸೀಡಿಯಾ ಮತ್ತೆ  ಇನ್ನೂ ಹಲವು ಸಿಲ್ವರ್ ಮರ , ಬೀಟೆ, ಸಾಗವಾನಿ, ಹುಣಸೇಮರ, ಮಾವಿನಮರ, ಹಲಸು, ಅಮಟೆಕಾಯಿ, ನುಗ್ಗೆಕಾಯಿಮರ, ಬೆಲ್ಲದ ಹಣ್ಣಿನ ಮರ, ಶಲ್ಲಕಾಯಿ  ಉಪ್ಪಿನಕಾಯಿ ಮರ, ಬುಗರಿಮರ, ಉಂಗುರಕಾಯಿ ಮರ, ಸುಬಾಬುಲ್, ಇವೆಲ್ಲಾ ಮರಗಳು ನಮ್ಮ ಹಳ್ಳಿಗಳಲ್ಲಿ ಬೆಳೆಸುತ್ತಿದ್ದರು.

ಗಿಡಮರಗಳಿಂದ ಕೂಡಿದ ಬೇಲಿ ತಿನ್ನಲು ಹಣ್ಣು, ತರಕಾರಿ, ಸೊಪ್ಪು, ಬಿಸಿಲಿಂದ ದಣಿದು ಬಂದವರಿಗೆ ನೆರಳು,  ಹಕ್ಕಿ ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಆಸರೆಯಾಗುತಿದ್ದವು, ಜೇನುಹುಳಗಳು ಗೂಡು ಕಟ್ಟಿಕೊಳ್ಳುತಿದ್ದವು. ನಮ್ಮ ಹಿರಿಯರು ಬಿರುಗಾಳಿಯಿಂದ ಬೆಳೆಗಳಿಗೆ ಆಗುವ ಅನಾಹುತ ತಪ್ಪಿಸಲು ಈ ಗಿಡಮರಗಳನ್ನು ಬೇಲಿ ರೂಪದಲ್ಲಿ ಹಾಕುತಿದ್ದರು. ಜನರು ಮನೆಗಳ ಸುತ್ತ, ಕಣಗಳ ಸುತ್ತ, ತೋಟ ಮತ್ತು ಹೊಲಗಳ ರಕ್ಷಣೆಗೆ ಮತ್ತು ಮಣ್ಣಿನ ಸವಕಳಿ ತಪ್ಪಿಸಲು, ನೀರನ್ನು ಭೂಮಿ ಹಿಡಿದಿಟ್ಟುಕೊಳ್ಳಲು ಬದುಗಳಲ್ಲಿ ಬೇಲಿಯಂತೆ ಹಾಕಿ ಕೊಳ್ಳುತಿದ್ದರು. ಈ ಎಲ್ಲ ಉಪಯೋಗ ತಂತಿ ಬೇಲಿಯಿಂದ ಆಗುತ್ತಾ?  ಈಗಿನ ಬೇಲಿಗಳಲ್ಲಿ ನಾವು ಕಾಣುವುದು  ಕಲ್ಲಿನ ಕಂಬ ಮತ್ತು ತಂತಿಯ ಬಲೆಗಳು ಮಾತ್ರ.  ತಂತಿಬೇಲಿ ಆಧುನಿಕ ಬೇಸಾಯ ಪದ್ಧತಿಯ ಇನ್ನೊಂದು ರೂಪವೇ? ಆದರೆ ಇಂದು ನಮ್ಮ ಆಧುನಿಕ ರೈತರು ತಂತಿ ಬೇಲಿ ಸಲುವಾಗಿ ಗಿಡಮರಗಳಿರಲಿ, ಹುಲ್ಲುಗಳಿಂದ ಕೂಡಿದ ಬದುಗಳನ್ನು ಜನರು ಒತ್ತಿಸಿ ತಂತಿ ಬೇಲಿ ಕಲ್ಲುಕಂಬ ಗಳನ್ನು ಹಾಕಿಕೊಂಡಿದ್ದಾರೆ.

ಗಿಡಮರಗಳ ಬೇಲಿಯು ಮಳೆ ನೀರು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಹೆಚ್ಚುವಂತೆ ಮಾಡುತ್ತೆ. .ಅಲ್ಲದೆ ಎಸ್ಟೋ ರೀತಿಯ ಪ್ರಾಣಿ, ಪಕ್ಷಿಗಳಿಗೆ ವಾಸಸ್ಥಾನವಾಗಿರುತ್ತಿದ್ದವು. ಅಲ್ಲಿ ವಾಸವಾಗಿದ್ದ ಎಸ್ಟೋ ಪ್ರಾಣಿ, ಪಕ್ಷಿಗಳು ನಮ್ಮ ಹೊಲದ ಬೆಳೆ ಹಾಳು ಮಾಡುವ ಇಲಿಗಳನ್ನು ಮತ್ತು ಕೀಟಗಳನ್ನು ಆಹಾರವಾಗಿ ತಿಂದು ಹಾಕಿ ರೈತನ ಮಿತ್ರನಂತೆ ಹೊಲಗಳ, ತೋಟಗಳ ರಕ್ಷಣೆ ಮಾಡುತ್ತಿದ್ದವು. ನಮ್ಮ ಸಾಕು ಪ್ರಾಣಿಗಳಾದ ಹಸು ಎಮ್ಮೆ ಗಳಿಗೆ ಮೇವು ದೊರೆಯುತ್ತಿತ್ತು. ಬಿಸಿಲಿನ ಧಗೆಗೆ ಬಳಲಿ ಬಂದವರಿಗೆ ನೆರಳು ದೊರೆಯುತ್ತಿತ್ತು. ಯಾವುದೇ ಖರ್ಚಿಲ್ಲದೆ ಆಗುವ ಬೇಲಿ ಇದು. ಇಸ್ಟೆಲ್ಲ ಸೃಜನ ಶೀಲತೆಯಿಂದ ಕೂಡಿದ ಬೇಲಿಯ ಬದಲು ರೈತ ಯಾಕೆ ತಂತಿ ಬೇಲಿಯ ಮೊರೆ ಹೋಗುತ್ತಿದ್ದಾನೋ ಗೊತ್ತಿಲ್ಲ. ಗಿಡ ಮರಗಳ ಜೊತೆ ಅಲ್ಲಿರುವ ಪ್ರಾಣಿ ಪಕ್ಷಿಗಳ ಜೊತೆ ಮನುಷ್ಯನ  ಸಹಬಾಳ್ವೆ ಜೀವನ ಎಷ್ಟು ಚೆನ್ನಾಗಿತ್ತು. ಆದರೆ ಈಗ ಮನುಷ್ಯ ತಾನೊಬ್ಬನೇ ಚೆನ್ನಾಗಿ ಬದುಕಬೇಕೆಂಬ ದುರಾಸೆಗೆ ತಂತಿ ಬೇಲಿ ಉತ್ತಮ ಉದಾಹರಣೆಯೇ?

ನಮ್ಮದು ಚಿತ್ರದುರ್ಗದ ಬಯಲು ಸೀಮೆಯ ನಾಡು, ನಮ್ಮ ರೈತರು ತಂತಿಬೇಲಿ ಬದಲು ಆ ಜಾಗದಲ್ಲಿ ತಮಗೆ ನಿತ್ಯ ಜೀವನಕ್ಕೆ ಬೇಕಾಗುವ ಗಿಡ ಮರಗಳು, ಹಣ್ಣಿನ  ಮರಗಳು, ತರಕಾರಿ ಕೊಡುವಂತಹ ಮರ, ಗಿಡಗಳನ್ನು ಹಾಕಿಕೊಂಡರೆ ನಮ್ಮ ಬಯಲುಸೀಮೆ ನಾಡೂ ಕೂಡ ಮಲೆನಾಡಾಗುತ್ತದೆ. ಅದರಲ್ಲಿ ಎರೆಡು ಮಾತಿಲ್ಲ. ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಕೃಷಿ ಭೂಮಿ ಮತ್ತು ರೈತರನ್ನು ಹೊಂದಿರುವ ದೇಶ ನಮ್ಮ ಭಾರತ ಆದರೂ ಅಪೌಸ್ಥಿಕತೆ ಯಿಂದ ನರಳುತ್ತಿರುವ ದೇಶವೂ ಹೌದು.  ಇದು ಹೇಗೆ ಸಾದ್ಯ? ಆಧುನಿಕ ರೈತರೇ  ನೀವೇ ಯೋಚಿಸಿ? ನೀವು ಚಿಕ್ಕವರಿರುವಾಗ ನಿಮ್ಮ ತಂದೆ ತಾಯಿ, ಅಜ್ಜ ಅಜ್ಜಿಯಂದಿರು ಹೇಗೆ ಬೇಸಾಯ ಮಾಡುತಿದ್ರು ಅವರ ಅನುಭವವನ್ನು ಸಲ್ಪ ನಿಮ್ಮ ಕೃಷಿಗೆ ಅಳವಡಿಸಿಕೊಳ್ಳಿ. 
  
ನಾನು ಹೀಗೆ ಕೆಲವರನ್ನು ವಿಚಾರಿಸಿದಾಗ ನನಗೆ ಸಿಕ್ಕ ಬೇಲಿಯ ಗಿಡ ಮರಗಳ ಮಾಹಿತಿ ಹೀಗಿತ್ತು. ಎಲ್ಲಾ ರೀತಿಯ ಗಿಡಮರಗಳನ್ನು ಬೇಲಿಯ ರೀತಿಯಲ್ಲಿ ಹಾಕಬಹುದು. ಇಂತಹುದೇ ಗಿಡ ಮರ ಅನ್ನೋ ನಿಯಮವೇನೂ ಇಲ್ಲ . ಆಯಾ ಜಾಗದ ಹೊಲದ ಮಣ್ಣು ಮತ್ತು ವಾತಾವರಣವನ್ನು ಅನುಸರಿಸಿ ಬೆಳೆಯುವ ಮತ್ತು ನಮಗೆ ತರಕಾರಿ ಹೂ ಹಣ್ಣು ಗಳನ್ನೂ ಒದಗಿಸಿವ ರೀತಿ  ಮತ್ತು ವ್ಯಾಪಾರೀ ದೃಷ್ಟಿಯಿಂದಲೂ ಗಿಡಮರಗಳ ಬೇಲಿ ನಿರ್ಮಿಸಬಹುದು ಎಂಬುದು.

ಇತ್ತೀಚೆಗಂತೂ ತೊಂಡೆ, ಹಾಗಲ, ಸೌತೆ, ಕುಂಬಳ, ಸೋರೆಕಾಯಿ, ಟೊಮೇಟೊ, ಹೀರೇಹಾಯಿ, ಪಡುವಲಕಾಯಿ, ಇಂತಹ ಬೇಲಿಯಲ್ಲಿ ಸಿಕ್ಕುತಿದ್ದ ತರಕಾರಿಯನ್ನೂ ರೈತನೂ ಸಂತೆಯಿಂದ ಕೊಂಡುತಂದು ತಿನ್ನುತ್ತಾನೆ. ಅದೇ ಇನ್ನೂ ನನಗೆ ಆಶ್ಚರ್ಯ ತರಿಸಿದ ಸಂಗತಿ. ನಾವು ಚಿಕ್ಕವರಿದ್ದಾಗ ಇವೆಲ್ಲ ನಮ್ಮ ಹಿತ್ತಲುಗಳಲ್ಲೇ ಚಪ್ಪರಕಟ್ಟಿ  ಅಥವಾ ಬೇಲಿಗಳಿಗೆ ಈ ತರಕಾರಿ ಬಳ್ಳಿಗಳನ್ನು  ಹಬ್ಬಿಸಿ  ಈ ಎಲ್ಲ ಕಾಯಿಪಲ್ಲೆ ತಾವೇ ಬೆಳೆದು ತಿನ್ನುತಿದ್ದರು. ಇನ್ನು ಬೇಕಾದ ತರಕಾರಿಗಳನ್ನ ಪಕ್ಕದಮನೆ  ಅಥವಾ ಪರಿಚಯದವರೊಡನೆ ಕಡ ಕೊಟ್ಟು ಕಡ ಇಸ್ಕೊಂತಿದ್ರು. ನಮಗೆ ಬೆಳೆದು ಕೊಡಬೇಕಾದ ರೈತನೇ ತರಕಾರಿಗಳನ್ನ ಕೊಂಡು ತಿನ್ನುವಂತಹ ಸ್ಥಿತಿ ತಂದುಕೊಂಡರೆ  ಹೇಗೆ? ಜಮೀನುಗಳಿಲ್ಲದೆ ಇರೋ ನಾವು ಊಟಕ್ಕೋಸ್ಕರ ಇನ್ನು ಮುಂದೆ ಏನೆಲ್ಲ ಪರದಾಡಬೇಕಾಗುವುದೋ ಏನೋ ?

.



Wednesday 15 June 2016

ಶಾಲೆಯ ಆ ದಿನಗಳು

ಶಾಲೆಯ ಆ ದಿನಗಳು …. school days



ಶಾಲೆಯ ಆ ದಿನಗಳು!! ಆಹಾ,  ಈ ಪದಗಳ ಕೇಳುತ್ತಲೇ ನಮ್ಮ ಹೃದಯ ಏದುಸಿರು ಬಿಡುತ್ತೆ. ಜೂನ್ ಬಂತೆಂದರೆ ಸಾಕು ಮಳೆಯ ಜೊತೆ ಜೊತೆಗೇ ಶುರುವಾಗೋ ಆ ಶಾಲಾ ದಿನಗಳು, ಎಕ್ಸಾಮು ಮುಗಿದ ದಿನವೇ ತೊಳೆದು ಐರನ್ ಮಾಡಿ ನುಸಿ ಉಂಡೆಯಿಟ್ಟಿದ್ದ ನೀಲಿ-ಬಿಳಿ ಯುನಿಫಾರ್ಮ್‌‌‌‌ನ್ನು ಟ್ರಂಕ್‌ನಿಂದ ಹೊರತೆಗೆದು ಕೊಡವಿ ಮೈಮೇಲೆ ಹಾಕ್ಕೊಂಡು ಹೋಗೋದೇ ಒಂದು ಖುಷಿ ಆಗಿರ್ತಿತ್ತು. ಮಳೆಗಾಲವಾದ್ದರಿಂದ ಕೊಡೆಯೂ ಜೊತೆಗಿರ್ತಾ ಇತ್ತು.




ಈಗಿನ ಮಕ್ಕಳಿಗಿರುವಂತೆ ನಮಗೆ ಓದಿನ ಹೊರೆ ಜಾಸ್ತಿ ಇರಲಿಲ್ಲ, ಬೇಸಿಗೆಗೆಂದು ರಜಾದಿನಗಳಲ್ಲಿ ಅಜ್ಜಿ-ಊರಿಗೆ ಹೋಗಿದ್ದ ನಮ್ಮ ಸ್ನೇಹಿತರೆಲ್ಲಾ ವಾಪಾಸ್ ಊರಿಗೆ ಬರುತ್ತಿದ್ದರು. ಎಲ್ಲರೂ ಸ್ಕೂಲಲ್ಲಿ  ಸೇರಿದ ಮೊದಲ ದಿನ ಶಾಲೆ ಒಳಗೆ ಮತ್ತು ಹೊರಗೆ ಬರೀ ಮಾತು, ಕಿರುಚಾಟವೇ ತುಂಬಿರ್ತಾ ಇತ್ತು. ಯಾರ್ಯಾರು ಯಾವ್ಯಾವ ಊರಿಗೆ ಹೋಗಿದ್ರು, ಅಲ್ಲಿ ಏನೇನು ಆಟ ಆಡ್ತಿದ್ರು, ಏನೇನು ಗಾಯ ಮಾಡ್ಕೊಂಡಿದ್ರು, ಅವ್ರ ಅಜ್ಜಿ-ಅಜ್ಜ ಏನೇನು ಕಥೆಗಳನ್ನ ಹೇಳುತಿದ್ರು, ಹೀಗೆ ಬರೀ ಮಾತುಗಳು. ಜೊತೆಗೆ ಪಟ್ಯಪುಸ್ತಕ, ನೋಟ್‌ಬುಕ್ ಕೊಂಡುಕೊಳ್ಳೋದು, ಇಲ್ಲವೇ ನಮ್ಮ ಸೀನಿಯರ್‌ಗಳ ಬುಕ್ಸ್‌ನ್ನೇ ಅರ್ಧ ರೇಟ್‌ಗೆ ಕೊಂಡುಕೊಳ್ಳೋದು,  ಹರಿದ ಬುಕ್ಸ್‌ಗೆ ಬೈಂಡ್ ಮಾಡಿಕೊಳ್ಳೋದು. ಕಾಕಿ ಬೈಂಡ್, ನ್ಯೂಸ್ ಪೇಪರ್ ಬೈಂಡ್ ,ಕ್ಯಾಲೆಂಡರ್ ಬೈಂಡ್, ಹೀರೋ-ಹೀರೋಯಿನ್-ಕವಿಗಳು-ಕ್ರಿಕೆಟರ್ಸ್-ಹೂ-ಪ್ರಾಣಿಗಳ ಚಿತ್ರ ಇರೋ ಒಳ್ಳೊಳ್ಳೆ ಮ್ಯಾಗಜಿನ್ ಬೈಂಡ್, ಹೀಗೇ ಒಬ್ಬೊಬ್ಬರೂ ಒಂದೊಂದು ರೀತಿಯ ಬೈಂಡ್ ಹಾಕೊಕೊಳ್ತಾ ಇದ್ವಿ. ಇದಕ್ಕೆ ನಾವು ಆಗ “ರೊಟ್ಟು ಹಾಕೊದು” ಅಂತ ಅಚ್ಚಗನ್ನಡದಲ್ಲಿ ಅಂತ ಇದ್ವಿ.  ಇವೆಲ್ಲ ಕೆಲಸಗಳಿಂದ ನಮ್ಮ ಜೂನ್ ತಿಂಗಳಂತೂ ತುಂಬಾ ಬ್ಯುಸಿ ಆಗಿರ್ತ ಇತ್ತು. 

ನಮ್ಮ ಶಾಲೆ  ಆರಂಭವಾಗುತ್ತಿದ್ದುದು ನೀಲಿ-ಬಿಳಿ ಯುನಿಫಾರ್ಮ್ ಹಾಕೊಂಡು ನಾವು ಹಾಡ್ತಾ ಇದ್ದ ರಾಷ್ಟ್ರ ಗೀತೆ ಮತ್ತು ನಾಡಗೀತೆಯಿಂದ. ಶಾಲೆ ಒಳಗೋದ್ಮೇಲೆ ಹಾಡ್ತಾ ಇದ್ದ ‘ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೂಸ್ತುತೆ’ ಪ್ರಾರ್ಥನೆ ನಮ್ಮಲ್ಲಿ ಎಷ್ಟು ರಕ್ತ ಗತವಾಗಿವೆ ಅಂದ್ರೆ ಈಗಲೂ ಆ ಪ್ರೇಯರ್ ಕೇಳಿದಾಗ ನಮ್ಮ ಕಿವಿ ಬೆಚ್ಚಗಾಗುತ್ತವೆ. ಪ್ರೇಯರ್ಗೆ ಲೇಟಾಗಿ ಬಂದು, ಸ್ಕೂಲ್ ಕಾಂಪೌಂಡ್ ಹಾರಿ ಬಂದೋವ್ರು ಒದೆ ತಿಂದು ಕ್ಲಾಸ್ ರೂಂನೊಳಗೆ ಬರುತ್ತಿದ್ದವರನ್ನ ಹೆಂಗಿದ್ದವು ಬಿಸಿ ಬಿಸಿ ಬೋಂಡ? ಅಂತ  ಚುಡಾಯಿಸುತಿದ್ದುದು ನಮಗೆ ಬಲು ಮಜವಾಗಿರುತ್ತಿತ್ತು.

ನಮ್ಮ ಶಾಲೆಯಲ್ಲಿ ಒಂದು ಗಣಪತಿ ವಿಗ್ರಹ ಇತ್ತು ಅದನ್ನ ಪ್ರತಿದಿನ ಪೂಜೆಮಾಡೋದು ಮತ್ತು ಪ್ರಸಾದಕ್ಕೆಂದು ತರುತ್ತಿದ್ದ ಬೆಲ್ಲ, ತೆಂಗಿನಕಾಯಿ, ಹಣ್ಣುಗಳನ್ನ  ಹಂಚಿಕೊಂಡು ತಿನ್ನೋದು ನಮ್ಮ ನಿತ್ಯದ ಕೆಲಸವಾಗಿತ್ತು. ಸ್ಕೂಲ್ ಪ್ರೇಯರ್ ಶುರುವಾಗೋಕು ಮುಂಚೆ ಈ ಪೂಜೆ ಮುಗಿಬೇಕು ಎಂದು ನಮ್ಮ PT ಮೇಸ್ಟ್ರು ನಿಯಮ ಜಾರಿಯಲ್ಲಿತ್ತು. ನನ್ನ ಬರವಣಿಗೆ  ದುಂಡಗಿದ್ದರಿಂದ ನಮ್ಮ  ಸ್ಕೂಲ್ ನೋಟೀಸ್ ಬೋರ್ಡ್ ನಲ್ಲಿ ಸುಭಾಷಿತ, ನುಡಿಮುತ್ತುಗಳು, ಆ ದಿನದ ವಿಶೇಷ, ಜನರಲ್ ನಾಲೆಜ್‌ಗೆ ಸಂಬಂಧಿಸಿದ ವಿಷಯಗಳನ್ನ ಬರೆಯಲು ನನಗೆ ವಹಿಸ್ತಾ ಇದ್ರು. ಆ ಟೈಮ್ ನಲ್ಲಿ ಇಡೀ ಸ್ಕೂಲ್ ಜವಾಬ್ದಾರಿಯೀ ನನ್ನ ತಲೆ ಮೇಲೆ ಇದಿಯೇನೋ ಅನ್ನೋ ಹಾಗೆ ಆಡ್ತಿದ್ದೆ. ಈಗೆಲ್ಲ ಅದನ್ನ ನೆನೆದರೆ ಎಷ್ಟು ಸಿಲ್ಲಿ ಯಾಗಿ ಆಡ್ತಿದ್ವಿ ಅಲ್ವಾ ಅನ್ನಿಸಿಬಿಡುತ್ತೆ.


೭ನೇ ತರಗತಿಯಲ್ಲಿದ್ದಾಗ - ಖೊ ಖೊ ಆಟದಲ್ಲಿ ಔಟ್ ಮಾಡೋ ಸಮಯದಲ್ಲಿ - ಹುಡುಗಿಯರ ಬೆನ್ನಿಗೆ ಜೋರಾಗಿ ಹುಡುಗರು ಹೊಡೆಯುತ್ತಿದ್ದರು ಅಂತ ಶುರುವಾದ ಜಗಳ ವಾರಗಟ್ಟಲೆ, ತಿಂಗಳುಗಟ್ಟಲೆ ಮುಂದುವರೆದು ನಮ್ಮ ೭ನೇ ತರಗತಿ ೩ ಭಾಗಗಳಾಗಿ ಒಡೆದು ಚೂರಾಗಿತ್ತು. ಒಂದು ಹುಡುಗಿಯರ ಗುಂಪು, ಒಂದು ಹುಡುಗರದು, ಇನ್ನೊಂದು ನ್ಯೂಟ್ರಲ್ ಆಗಿದ್ದೊಂದು ಗುಂಪು.  ಇದೇ ಸಮಯದಲ್ಲಿ ಬಂತು ನೋಡಿ ಸರ್ಕಾರದಿಂದ ಒಂದು ಸುದ್ದಿ! ೭ನೆಯ ತರಗತಿಗೂ  ಕೂಡ ಪಬ್ಲಿಕ್ ಪರೀಕ್ಷೆ  ಇರುತ್ತೆ ಅನ್ನೋ ಆದೇಶ!!.  ತೊಗೊಳಿ ಗಲಾಟೆ ಮಾಡಿದ ಹುಡುಗರ  ಗುಂಪು ಮತ್ತು ನುಟ್ರಲ್ ಗುಂಪು ಸೇರಿದವು. ನಮ್ಮ  ಹುಡುಗೀರ ಗುಂಪೂ ಕೂಡ ಅಲ್ಲಿ ಸೇರತೊಡಗಿತು. ನಮ್ಮ ಗುಂಪಿನಲ್ಲಿ ನಾನು ಮತ್ತು  ನನ್ನ ಮತ್ತೊಬ್ಬಳು ಫ್ರೆಂಡ್ ಮಾತ್ರ ಉಳಿದುಕೊಂಡ್ವಿ. ಪಬ್ಲಿಕ್ ಪರೀಕ್ಷೆ ಬರಲಿ ಬಿಡಲಿ ನಾವು ಮಾತ್ರ ಹೀಗೆ ಇರೋಣ ಅಂತ,  ಯಾಕಂದ್ರೆ ತಪ್ಪು ನಮ್ಮದಿರಲಿಲ್ಲಲ್ವಾ ಅದಕ್ಕೆ. ನಮ್ಮಿಬ್ಬರನ್ನ  ಬಿಟ್ಟು  ನಮ್ಮ ಇಡೀ ೭ ನೆ ತರಗತಿ ಒಂದು ಗುಂಪು ಆಗಿಹೋಯ್ತು. ಈ ವಿಷಯ ಸ್ಕೂಲ್ ಹೆಡ್‌ಮಾಸ್ಟರ್‌ವರೆಗೂ ಹೋಯ್ತು, ನಮ್ಮನ್ನೆಲ್ಲ   ಆಫೀಸ್ ರೂಂಗೆ  ಕರೆದು ಸಮಾಧಾನ ಮಾಡಿ, ಎಲ್ಲಾರಿಗೂ ನಿಂಬೆ ಹುಳಿ ಪೆಪ್ಪರ್ ಮೆಂಟ್, ಬಿಸ್ಕತ್ತು ಕೊಟ್ಟು, ಶೇಕ್ ಹ್ಯಾಂಡ್ ಮಾಡ್ಸಿ ಇನ್ನು ಮುಂದೆ ಈ ತರ ಜಗಳ ಆಡಬಾರದು ಅಂತ ಬುಧ್ಧಿ ಹೇಳಿ, ಯಾರ್ಯಾರು ‘ಟೂ’ ಬಿಡ್ತೀರೋ ಅವ್ರುನ್ನ ಫೇಲ್ ಮಾಡ್ತೀವಿ ಅಂತ ಹೆದರಿಸಿ ನಿಮ್ ಕ್ಲಾಸ್ ರೂಂ ಗೆ ಹೋಗಿ ಅಂದ್ರು. ಅವತ್ತಿಂದ ನಾವ್ಯಾರು ಜಗಳ ಆಡಲಿಲ್ಲ.

ನಮ್ಮ ಗುರುಗಳು ಹೇಳಿದ ಪುಸ್ತಕದ ಪಾಠ ನೆನಪಿದೆಯೋ ಇಲ್ಲವೋ? ಆದ್ರೆ ಅವರುಗಳು ಹೇಳಿಕೊಟ್ಟ ನಡೆ, ನುಡಿ, ವ್ಯಕ್ತಿತ್ವ, ಸಂಸ್ಕಾರಗಳು, ಶಿಸ್ತು ಈಗಲೂ ನಮ್ಮ ಜೀವನದಲ್ಲಿ ಇವೆ. ನಮ್ಮನ್ನು ಅವರ ಮಕ್ಕಳ ಸಮಾನವಾಗಿ ನೋಡುತ್ತಿದ್ದಂತಹ ಗುರುಗಳು ನಮ್ಮ ಗುರುಗಳು. ನಮ್ಮ ಹಿರಿಯರೇ ಹೇಳಿಲ್ಲವೇ  ” ಸದ್ಗುರು ದೊರೆವುದೆ ದುರ್ಲಭವು ದೊರೆತರೆ ಜನ್ಮವು ಪಾವನವು” ಅಂತ. ನಿಮ್ಮಗಳನ್ನು ಗುರುಗಳಾಗಿ ಪಡೆದ ನಾವುಗಳೇ ಪುಣ್ಯವಂತರು. ಇದು ನಮ್ಮ ಹಿಂದಿನ ಜನ್ಮದ ಪುಣ್ಯವೇ ಸರಿ. ನಮಗೆ ಶಾಲಾ ದಿನಗಳಲ್ಲಿ ಸಿಕ್ಕ ಎಲ್ಲಾ ಗುರುಗಳಿಗೂ ದೇವರು ಆಯಸ್ಸು, ಆರೋಗ್ಯ, ಐಶ್ವರ್ಯ  ಎಲ್ಲವನ್ನೂ  ಆ ದೇವರು ನಿಮಗೆ ಕೊಡಲಿ.

ನಮಗೆ  ಶಾಲಾ ದಿನಗಳಲ್ಲಿ ಹೆಚ್ಚು ಖುಷಿ ಕೊಟ್ಟ ದಿನಗಳು ಅಂದ್ರೆ ಶಾಲಾ ಹಬ್ಬಗಳು. ನಮ್ಮ ಶಿಕ್ಷಕರುಗಳು ನಮ್ಮನ್ನು ಸ್ಟೇಜ್ ಮೇಲೆ ಭಾಷಣ ಮಾಡಲು ಹೇಳುತ್ತಿದ್ದರು. ಅವರೇ ಭಾಷಣಗಳನ್ನು ಬರೆದೂ ಕೊಡುತ್ತಿದ್ರು. ಬಾಯಿಪಾಠ ಮಾಡಿಕೊಂಡು ಸ್ಟೇಜ್ ಮೇಲೆ ಹೇಳಿ ಅಂತ ಹೇಳುತಿದ್ರು. ಶಾಲೆಗಳಲ್ಲಿ ನಡೆಯುತಿದ್ದ ಆಶುಭಾಷಣ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪದ್ಯ ಕಂಟಪಾಠ, ಇಂತಹವುಗಳಲ್ಲಿ ನನ್ನ ಹೆಸರು ಯಾವಾಗಲು ಇರುತ್ತಿತ್ತು. ಶಾಲಾ ದಿನಗಳಲ್ಲಿ ನನಗೆ ಬಂದ ಪ್ರೈಸ್ಗಳು , ಸರ್ಟಿಫಿಕೇಟ್ಗಳು ,ಕಪ್ಗಳು, ನೋಡಿದಾಗ ಮಾರ್ಕ್ಸ್ ಕಾರ್ಡ್ ನೋಡಿದಕ್ಕಿಂತ ಹೆಚ್ಚು ಖುಷಿ ಯಾಗುತ್ತೆ.  ನನಗೆ ಬಹುಮಾನಗಳು ಬಂದಾಗ ನಮ್ಮ ಗುರುಗಳು  ಪಡೋ ಖುಷಿ ನೋಡಿ ನನ್ನ ಬಗ್ಗೆ ನನಗೆ ಹೆಮ್ಮೆ ಅನ್ನಿಸ್ತಿತ್ತು. ಇದಕ್ಕೆ ಇನ್ನೊಂದು  ಉದಾಹರಣೆ ಎಂದರೆ ನಾನು ಡಿಗ್ರಿ ಓದಲು ಬೆಂಗಳೂರಿಗೆ ಬಂದಿದ್ದೆ, ಹೀಗೆ ಈ ಟಿ ವೀ ಕನ್ನಡ ಚಾನೆಲ್ ತಂಡ ನಮ್ಮ ಮಹಾರಾಣಿ ಕಾಲೇಜ್ಗೆ ಬಂದು ನಮ್ಮ ಕಾಲೇಜ್ ನಲ್ಲಿ ಚರ್ಚಾ ಸ್ಪರ್ಧೆ ನಡೆಸಿ ೧೦  ಹುಡುಗಿಯರನ್ನ ಯುವಕರ ಚಾವಡಿ ಕಾರ್ಯಕ್ರಮದಲ್ಲಿ ಚರ್ಚಾಸ್ಪರ್ಧೆ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಅದ್ರಲ್ಲಿ ನಾನು ಒಬ್ಬಳಾಗಿದ್ದೆ. ಅದು ಟಿ.ವಿ.ಯಲ್ಲೂ  ಕೂಡ ಪ್ರಸಾರವಾಗಿತ್ತು. ನಾನು ರಜಕ್ಕೆಂದು ಊರಿಗೆ ಹೋದಾಗ ನಮ್ಮ ಪ್ರಾಥಮಿಕ ಶಾಲೆಯ ಸರ್‌ಗಳು ನಮ್ಮ ಮನೆಗೆ ಬಂದು ನನ್ನ ಚರ್ಚ್ಚಾ ಸ್ಪರ್ಧೆಯ ಶೋ ನೋಡಿದ್ವಿ, ನೀನು ಚೆನ್ನಾಗಿ ಮಾತಾಡ್ದೆ ಕಣಮ್ಮ ಅಂತ ಹೇಳಿದ್ರು, ಇನ್ನೊಬ್ರು ಸರ್ ಬಸ್ಟಾಪ್ ನಲ್ಲಿ ಸಿಕ್ಕಿದ್ರು ಟಿವಿನಲ್ಲಿ ನೀನು ಚರ್ಚೆ ಮಾಡಿದ್ದ   ಶೋ ನೋಡಿದೆ ಅಂತ ಹೇಳಿ, ಪಕ್ಕದಲ್ಲಿದ್ದ ಅವರ ಸಂಬಂಧಿಗಳಿಗೆ ನಮ್ಮ ಸ್ಟೂಡೆಂಟ್ ಕಣ್ರೀ, ಟಿವಿನಲ್ಲಿ  ಈ ಮಗೂದು ಚರ್ಚ್ಚಾ ಸ್ಪರ್ಧೆ ಬಂದಿತ್ತು. ಅದೇ ಅಪರ್ಣ ನಡೆಸಿ ಕೊಡ್ತಾರಲಾ  ‘ಯುವಕರ ಚಾವಡಿ’ ಅದ್ರಲ್ಲಿ ಅಂತ ನನ್ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು, ಆಗ ನನಗಾದ ಖುಷಿ ಆಸ್ಟಿಸ್ಟಲ್ಲ.

ಇನ್ನೊಂದು ಹೇಳೋದನ್ನ ಮರೆತಿದ್ದೆ. ಪ್ರತಿ ದಿನ ಮಧ್ಯಾನ್ನ ಸ್ಕೂಲ್ ಊಟದ ಸಮಯದಲ್ಲಿ ಗಾಡಿಗಳಲ್ಲಿ ಬರುತ್ತಿದ್ದ ಉಪ್ಪು ಖಾರ ಹಚ್ಚಿದ ಕಿತ್ತಲೆಹಣ್ಣು, ಪೇರಲಕಾಯಿ, ಮಾವಿನಕಾಯಿ, ಸೌತೆಕಾಯಿ ಮತ್ತು  ಕಲ್ಲOಗಡಿ ಹಣ್ಣು, ನೇರಲೆಹಣ್ಣುಗಳು, ಅಲ್ಲೇ ಹತ್ತಿರದಲ್ಲಿದ್ದ  ಪೆಟ್ಟಿಗೆ ಅಂಗಡಿಯ ಬಟಾಣಿ, ನಿಂಬೆಹುಳಿ, ಶುಂಟಿ, ಕಡ್ಡಿ  ಪೆಪ್ಪರ್ಮೆಂಟ್, ಕೆಂಪು ರಸಗುಲ್ಲ, ಆಲ್ಕೊವಾ, ಚಕ್ಕಲಿ, ಕೋಡುಬಳೆ, ಶೇಂಗಾ ಅಚ್ಚು, ಸಕ್ಕರೆ ಅಚ್ಚು, ಇನ್ನು ಮುಂತಾದ ತಿನಿಸುಗಳನ್ನ ತಿನ್ನೋ ಚಾಳಿ. ಪ್ರತಿದಿನ ಅಂಗಡಿ ತಿಂಡಿ ತಿನ್ನಲು ದುಡ್ಡು ಕೊಡುತ್ತಿರಲಿಲ್ಲ ಆದ್ರೆ ಪ್ರತಿ ಶನಿವಾರ ಮಾತ್ರ 1 ಇಲ್ಲ 2 ರೂಪಾಯಿ ಕೊಟ್ಟೆ ಕೊಡುತ್ತಿದ್ರು. ಯಾಕಂದ್ರೆ ಅವತ್ತು ಬೆಳಿಗ್ಗೆ 8 ಕ್ಕೆ ಸ್ಕೂಲ್ ನಲ್ಲಿರ ಬೇಕಿತ್ತು ಅಸ್ಟರಲ್ಲಿ ಮನೇಲಿ ಅಡುಗೆ ಆಗುತ್ತಿರಲಿಲ್ಲ. ಸೊ ನಮಗೆ ಶನಿವಾರ ಹಬ್ಬವಾಗಿರ್ತಾ ಇತ್ತು - ಅಂಗಡಿ ತಿಂಡಿ ತಿನ್ನೋಕೆ!.

ಸ್ವಾತಂತ್ರ ದಿನಾಚರಣೆ, ಗಾಂಧಿ ಜಯಂತಿ , ಗಣರಾಜ್ಯೋತ್ಸವ ಇನ್ನೂ ಹಲವು ನಾಡ ಹಬ್ಬಗಳು, ರಾಷ್ಟ್ರೀಯ ಹಬ್ಬಗಳು ಬಂದ್ವು ಅಂದ್ರೆ ಸಾಕು, ಸ್ಕೂಲ್ ತುಂಬಾ ನಾವೇ! ಸ್ಕೂಲ್ ಬುಕ್ ಮುಟ್ಟಿದರೆ ಕೇಳಿ?! ಕೆಲವೊಂದು ದೇಶ ಭಕ್ತಿ ಗೀತೆಗಳನ್ನ ರಾಗವಾಗಿ ಹೇಳೋದನ್ನ ಪ್ರಾಕ್ಟೀಸ್ ಮಾಡೋದು,  ಹಿಂದಿನ ದಿನ ಧ್ವಜ ಸ್ತಂಭದ ಸುತ್ತ ಸಗಣಿ ತಂದು ಸಾರಿಸಿ ಅಂದದ ರಂಗೂಲಿ ಬಿಡಿಸಿ ಅದಕ್ಕೆ ಬಣ್ಣ ತುಂಬೋದು, ಅಕ್ಕಿ, ಬೇಳೆಕಾಳುಗಳಿಂದ ಭಾರತ ಭೂಪಟ ಅಲಂಕಾರ ಮಾಡುತಿದ್ವಿ.  ಬಣ್ಣ ಬಣ್ಣದ ಪೇಪರ್ ಮತ್ತು ಹೂವುಗಳಿಂದ ಅಲಂಕಾರ ಮಾಡುತಿದ್ವಿ. ಅಲಂಕಾರ ಮುಗಿದು ಮನೆಗೆ ಹೋಗುತ್ತಿವಾಗ ದಾರಿಯಲ್ಲಿ ನಮ್ಮ ಮಾತು, ಛೆ! ನಾವು ಹೀಗೆ  ಅಲಂಕಾರ  ಮಾಡಿದ್ದನ್ನ ಗಾಂಧಿ ,ನೆಹರು, ಸುಭಾಶ್ ಚಂದ್ರ ಬೋಸ್, ಲಾಲ್-ಬಾಲ-ಪಾಲ್, ಕಸ್ತೂರಿ ಬಾ,  ಎಲ್ಲ   ಸ್ವತOತ್ರ  ಹೋರಾಟ ಗಾರರೆಲ್ಲಾ ನೋಡಿದ್ರೆ ಎಷ್ಟು ಖುಷಿ ಪಡ್ತಿದ್ರಲ್ಲ ಅಂತ ಬೇಜಾರು ಮಾಡ್ಕೊಂಡು, ಬ್ರಿಟಿಶ್ ನರು ಯಾಕಾದ್ರೂ ಬಂದಿದ್ರಪ್ಪ ನಮ್ ದೇಶಕ್ಕೆ, ಎಸ್ಟೋನ್ದು  ದೇಶ ಪ್ರೇಮಿಗಳನ್ನ ಸಾಯಿಸಿದರು, ನಮ್ಮ ದೇಶಾನ ಎಲ್ಲ ಕೊಳ್ಳೆ ಹೊಡ್ಕೊಂಡ್ ಹೋದ್ರು, ಗೋಡ್ಸೆ ಗೂ ಶಾಪಾ ಹಾಕುತ್ತಿದ್ವಿ. ಮನೆಗೆ ಹೋಗಿ ಊಟ ಮಾಡಿ ರಾತ್ರಿಯೆಲ್ಲ ಭಾಷಣ ಕಂಠ ಪಾಠ ಮಾಡಿದ್ದೂ ಮಾಡಿದ್ದು. ಅದೂ ಜೋರಾಗಿ ಮನೇಲಿ ಅಮ್ಮ ಅಪ್ಪ ಅಣ್ಣಂದ್ರು ‘ಏನ್ ನಿನ್ನ ಭಾಷಣಾ ಕೇಳೋಕೆ ಎಲ್ಲ ಬರೂದು ಅನ್ನಂಗೆ ಆಡ್ತಾಳೆ’ ಅಂತ ಬೈದದ್ದೂ ಇದೆ. ಓದೋ ಬುಕ್ ಓದು ಅಂದ್ರೆ, ಏನೇನೋ ಮಾಡ್ತದೆ ಈ ಹುಡುಗಿ ಅಂತ ಬೈಸಿಕೊಳ್ಳುತಿದ್ದೆ. ಪ್ರತಿದಿನ ಬೆಳಿಗ್ಗೆ ಏಳೋದರಲ್ಲಿ ನಾನು ಸೂರ್ಯ ವಂಶಸ್ತೆ ಆದ್ರೆ ಈ ಶಾಲಾ ಹಬ್ಬಗಳ ದಿನ ಮಾತ್ರ ಬೆಳಿಗ್ಗೆ 6 ಗಂಟೆಗೆ ಅಲಾರಂ ಇಟ್ಟುಕೊಂಡ ಎದ್ದು ರೆಡಿ ಆಗಿ ಹೋಗ್ತಿದ್ದೆ!.  


ಈಗಲೂ ಕೂಡ ನಮ್ಮೂರು ಆರ್.ನುಲೇನೂರಿಗೆ ಬಸ್ಸಲ್ಲಿ ಹೋಗುವಾಗ  ಬಸ್ಸಿನ ಕಿಟಕಿಯಲ್ಲಿ ನಮ್ಮ ಶಾಲೆ ಅದ್ರ ಎದಿರಿರೋ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ಅನ್ನೋ  ಬೋರ್ಡ್ ಕಡೆ ಕಣ್ಣು ಹೊರಳುತ್ತೆ.  ಆಗ ಎಷ್ಟು ಖುಷಿ ಆಗುತ್ತೆ ಅಂದ್ರೆ ಎಸ್ಟೋ ಬಾರಿ ಇದು ನಮ್ಮ ಸ್ಕೂಲ್ ನಾವು ಓದಿದ್ದು ಇಲ್ಲೇ ಅಂತ ನನ್ನ ಪಕ್ಕದಲ್ಲಿ ಕುಳಿತಿರು ಅಪರಿಚಿತರಿಗೆ ತೋರಿಸಿದ್ದೂ ಉಂಟು. ಈಗಲೂ ನನ್ನ ಆಪ್ತ ಗೆಳತಿಯರು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜೊತೆಯಲ್ಲಿ ಓದಿದವರು.  ಜೀವನ ಮುಂದುವರಿದಂತೆ ನಾವೆಲ್ಲರೂ ಬೇರೆ ಬೇರೆ ಊರು, ಕೇರಿ, ರಾಜ್ಯ , ದೇಶ, ಹೀಗೆ ಒಂದೊಂದು ದಿಕ್ಕಿನಲ್ಲಿ ಜೀವನ ನಡೆಸುತ್ತಿದ್ದರೂ ನಮ್ಮೂರ ಜಾತ್ರೆ, ಗೌರಿ ಹಬ್ಬ, ತೇರಹಬ್ಬ, ಇಂತಹ ಸಮಯಗಳಲ್ಲಿ ಕೆಲವರಾದ್ರೂ ಸಿಕ್ಕೆ ಸಿಕ್ಕುತ್ತಾರೆ. ಆಗಲೂ ನಮ್ಮ ಮಾತುಗಳಲ್ಲಿ ಸ್ಕೂಲ್ ಬಗ್ಗೆ ಒಂದಾದ್ರೂ ವಿಷಯ ಬಂದೆ ಬರುತ್ತೆ.

ಸ್ಕೂಲ್ ನೆನಪಾದಾಗಲೆಲ್ಲ ನನ್ನ ತಲೆಯಲ್ಲಿ ಬಾರೋ ಯೋಚನೆ!... ಒಂದು ಟೈಮ್ ಮಶಿನ್ ಸಿಗುತ್ತಾ .. ಸಿಕ್ರೆ ‘ಆ ದಿನಗಳಿಗೆ’ ನಮ್ಮನ್ನ ವಾಪಸ್ ಕರ್ಕೊಂಡು ಹೋಗುತ್ತಾ ಅಂತ!